ಪುರುಶೋತ್ತಮ ಬಿಳಿಮಲೆ ಅವರ ಆತ್ಮಕಥನ “ಕಾಗೆ ಮುಟ್ಟಿದ ನೀರು” ಕೃತಿಯ ಪರಿಚಯವನ್ನು ಲೇಖಕರಾದ ಬಾಣಾವರ ಶಿವಕುಮಾರ್ ಅವರು ಓದುಗರಿಗೆ ಮಾಡಿದ್ದಾರೆ. ಮುಂದೆ ಓದಿ…
ಪುರುಶೋತ್ತಮ ಬಿಳಿಮಲೆ ಅವರ ಆತ್ಮಕಥನ “ಕಾಗೆ ಮುಟ್ಟಿದ ನೀರು” ಕೃತಿ ತನ್ನ ಸಾಂಸ್ಕೃತಿಕ ವಿವರಗಳಿಂದ ಗಟ್ಟಿಯಾಗಿದೆ. ಇದೊಂದು ಕನ್ನಡದ ಅಸ್ಮಿತೆಯ, ಕನ್ನಡದ ಪರಿಚಾರಕನ ಆತ್ಮಕಥೆಯೂ ಆಗಿದೆ. ಕನ್ನಡದಲ್ಲಿ ವೈವಿಧ್ಯಮಯ ಹಾಗೂ ಕುತೂಹಲಕಾರಿಯಾಗಿರುವ ೧೫೦ ಕ್ಕೂ ಹೆಚ್ಚು ಆತ್ಮಕಥೆಗಳು ಪ್ರಕಟವಾಗಿವೆ. ಈ ಪೈಕಿ “ಕಾಗೆ ಮುಟ್ಟಿದ ನೀರು” ಭಿನ್ನವಾದ ಆತ್ಮಕಥೆಯಾಗಿದೆ. ದಟ್ಟ ಕಾಡಿನ ನಡುವೆ ನಿರ್ಲಕ್ಷ್ಯಕ್ಕೆ ಒಳಗಾದ ವ್ಯಕ್ತಿಯೊಬ್ಬ ಹೇಗೆ ಎತ್ತರಕ್ಕೆ ಬೆಳೆಯಬಹುದು ಎನ್ನುವುದನ್ನು ಈ ಕಥನ ಚಾರಿತ್ರಿಕವಾದ ದಾಖಲೆಗಳನ್ನು ಒದಗಿಸುತ್ತದೆ.

ಫೋಟೋ ಕೃಪೆ : facebook
ಮನುಷ್ಯನೋರ್ವ ಯಾವ ಉತ್ಕಟ ಪ್ರಮಾಣದಲ್ಲಿ ಜೀವನೋತ್ಸಾಹ ಹೊಂದಿರಲು ಸಾಧ್ಯ ಎಂಬುದರ ಸಂಕೇತದಂತೆ “ಕಾಗೆ ಮುಟ್ಟಿದ ನೀರು” ಕೃತಿ ಕಾಣುತ್ತದೆ. ಹೀಗಾಗಿ ಲೇಖಕರ ಖಾಯಿಲೆಗಳ ಕುರಿತು ಕೃತಿಯಲ್ಲಿರುವ ವಿವರಗಳು ಕತೆಯಾಗುವ ಬದಲು ಸಾಧಕರ ಚರಿತ್ರೆಯಾಗಿ ಮಾರ್ಪಟ್ಟಿದೆ.
ಸುರಕ್ಷಿತ ವಲಯಕ್ಕೆ ಸೀಮಿತವಾಗದೆ ಪುರುಷೋತ್ತಮ ಬಿಳಿಮಲೆ ಅವರು ಜನಸಮುದಾಯದೊಂದಿಗೆ ಬೆಸೆದ ಕಾರಣ ಅವರೇ ವಿಶಿಷ್ಟವಾದುದ್ದನ್ನು ಸಾಧಿಸಲು ಸಾಧ್ಯವಾಯಿತು ಎಂಬುದಕ್ಕೆ ಅವರ ಆತ್ಮಕಥೆ ಹಲವು ಪುರಾವೆಗಳನ್ನು ಒದಗಿಸುತ್ತವೆ. ದೆಹಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ಮೂಲಕ, #ಕನ್ನಡ ಅಧ್ಯಯನ ಪೀಠದ ಮೂಲಕ ಕನ್ನಡದ ಸಮೃದ್ಧತೆಯನ್ನು ಹೊರ ಜಗತ್ತಿಗೆ ಬಿಳಿಮಲೆ ಅವರು ಪರಿಚಯಿಸಿದ ಬಗೆ ಕೂಡ ಕೃತಿಯಲ್ಲಿ ಗಮನಿಸಬೇಕಾದ ಅಂಶ.

ಫೋಟೋ ಕೃಪೆ : facebook
“ಕಾಗೆ ಮುಟ್ಟಿದ ನೀರು” ಕೃತಿಯನ್ನು ಓದಿದಾಗ ಪುರುಷೋತ್ತಮ ಬಿಳಿಮಲೆ ಓರ್ವ ಚಿಂತಕ ಮಾತ್ರವಲ್ಲದೆ ವಿದ್ವಾಂಸ, ಹೋರಾಟಗಾರ ಎಂಬ ಅಂಶ ಕೂಡ ದಟ್ಟವಾಗುತ್ತದೆ. ಕೃತಿಯಲ್ಲಿನ ಅವರ ಪ್ರವಾಸ ಕಥನದ ವಿವರಗಳನ್ನು ಕಡಿತಗೊಳಿಸಿದಂತೆ ಕಾಣುತ್ತಿದ್ದು ಅದನ್ನೇ ಪ್ರತ್ಯೇಕ ಕೃತಿಯಾಗಿ ರೂಪಿಸಬಹುದಿತ್ತು.
- ಬಾಣಾವರ ಶಿವಕುಮಾರ್ (ಲೇಖಕರು, ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಕೆಪಿಸಿಲ್ )
