‘ಕುರುಕ್ಷೇತ್ರದಲ್ಲಿ ಅಪಾರ ಸಾವು ನೋವುಗಳನ್ನು ಕಂಡ ಅರ್ಜುನನು ಕುಗ್ಗಿಹೋಗಿ ಕೃಷ್ಣನನ್ನು ಕುರಿತು,ಹೀಗೆ ಹೇಳುತ್ತಾನೆ’ – ಕಾರ್ತಿಕದಿತ್ಯ ಬೆಲಂಗೋಡು, ಮುಂದೆ ಓದಿ…
ಹೇ ಜನಾರ್ದನ…
ಈ ಅಧಿಕಾರ ದಾಹಿ ಜನರ ಹೃದಯಗಳು ದುರಾಸೆಯ ವಶವಾಗಿ, ಕುಲದ ಅಳಿವು, ಮಿತ್ರದ್ರೋಹ ಇದಾವುದರಲ್ಲೂ ಅವರಿಗೆ ದೋಷ ಕಾಣುತ್ತಿಲ್ಲ. ಆದರೆ ಜನಾರ್ಧನ! ಕುಲ ಕ್ಷಯವನ್ನು ಮಾಡುವುದು ಪಾಪವೆಂದು ತಿಳಿದ ನಾವು ಈ ಪಾಪಕಾರ್ಯವನ್ನು ಏಕೆ ಮಾಡಬೇಕು ? ಕೌರವರು ದುರಾಸೆಯ ವಶರಾಗಿ ಈ ಯುದ್ಧವೆಂಬ ಹಿಂಸಾಕಾರ್ಯಕ್ಕೆ ಸಿದ್ದರಾಗಿದ್ದಾರೆ. ಈ ರೀತಿಯ ಹಿಂಸೆಯು ಪಾಪವೆಂದು ತಿಳಿದೂ ಅದನ್ನು ನಾವು ಮಾಡಬೇಕೇಕೆ? ಈ ನರಮೇಧ ನನ್ನಿಂದಾಗದು ಎಂದು ದುಃಖಿಸುತ್ತಾನೆ.
ಅದಕ್ಕೆ ಪರಮಾತ್ಮನು, ಆತ್ಮರಕ್ಷಣೆ, ದೇಶ ರಕ್ಷಣೆ, ಧರ್ಮ ರಕ್ಷಣೆ, ಸಜ್ಜನರ ರಕ್ಷಣೆ ಇವೆಲ್ಲವೂ ಪ್ರತಿಯೊಬ್ಬರ ಆದ್ಯಕರ್ತವ್ಯ. ಇವೆಲ್ಲದರ ಭಾಗವಾಗಿ ನೀನು ಸರಿಯಾದುದನ್ನೇ ಮಾಡುತ್ತಿದ್ದೀಯ. ನೀನು ಮುನ್ನಡೆ, ನಾನು ಮುನ್ನಡೆಸುತ್ತೇನೆ ಎಂದು ಉಪದೇಶ ನೀಡುತ್ತಾನೆ. ಆದರೆ ರಷ್ಯಾ ನಡೆಸುತ್ತಿರುವ ಅನ್ಯಾಯದ ಯುದ್ಧ ಯಾವ ಮಾನವ ಕುಲದ ಒಳಿತಿಗೂ ಅಲ್ಲ. ಒಳಿತು ಮಾಡಲು ಯುದ್ದ ನಡೆಸುತ್ತಿರುವ ಪುಟಿನ್ ಕೃಷ್ಣಪರಮಾತ್ಮನೂ ಅಲ್ಲ.
ಪ್ರಸ್ತುತ ಸಾರ್ವಜನಿಕ ವಸತಿಗಳನ್ನು, ಆಸ್ಪತ್ರೆಗಳನ್ನು ಗುರಿಯಾಗಿಸಿ ಪುಟಿನ್ ನಡೆಸುತ್ತಿರುವ ಹೀನಾಯ ದಾಳಿಯು ಪೋಲೆಂಡಿನ ಮಕ್ಕಳನ್ನು ಗುರಿಯಾಗಿಸಿ ಕ್ರೌರ್ಯ ಮೆರೆದಿದ್ದ ಹಿಟ್ಲರ್ ನನ್ನು ನೆನಪಿಸುತ್ತಿದೆ. ಚೂರೂ ವ್ಯತ್ಯಾಸವಿಲ್ಲ.!
ಯುದ್ದ ನೀತಿಯನ್ನು ಪಾಲಿಸಲು ರಷ್ಯಾವು ಭಾರತವಲ್ಲ. ರಾಜಧರ್ಮವನ್ನು ಪಾಲಿಸಲು ಪುಟಿನ್ ವಾಜಪೇಯಿಯಲ್ಲ.
- ಕಾರ್ತಿಕದಿತ್ಯ ಬೆಲಂಗೋಡು
