ಭಾರತರತ್ನ ಪ್ರಶಸ್ತಿಗೆ ಪಾತ್ರರಾದ ಪಿ ವಿ ಎನ್ ನರಸಿಂಹ ರಾವ್

1991 ರಲ್ಲಿ ದಿವಾಳಿ ಅಂಚಿನಲ್ಲಿದ್ದ ಭಾರತವನ್ನು ಸಂಕಷ್ಟದಿಂದ ಪಾರು ಮಾಡಿ, ದೇಶವನ್ನು ಹೊಸ ಮನ್ವಂತರಕ್ಕೆ ಕೊಂಡೊಯ್ದ ಚಾಣಾಕ್ಷ ಪಿ.ವಿ. ನರಸಿಂಹ ರಾವ್ ಅವರಿಗೆ ಕೇಂದ್ರ ಸರ್ಕಾರ ಭಾರತರತ್ನ ಪ್ರಶಸ್ತಿ ಘೋಷಿಸಿದೆ. ಭಾರತದ ಆರ್ಥಿಕತೆಯು ಹೊಸ ರೂಪ ನೀಡಿದವರಿಗೆ ಭಾರತರತ್ನ ಪಿ ವಿ ಎನ್ ನರಸಿಂಹ ರಾವ್. ಅವರು ಡಾ. ಗುರುಪ್ರಸಾದ ರಾವ್ ಹವಲ್ದಾರ್ ಅವರ ಲೇಖನವನ್ನು ತಪ್ಪದೆ ಮುಂದೆ ಓದಿ… 

ಭಾರತವಿಂದು ಅತ್ಯಂತ ವೇಗವಾಗಿ ಮುನ್ನುಗ್ಗುತ್ತಿರುವ ಆರ್ಥಿಕತೆಯಾಗಿ ಗುರುತಿಸಿಕೊಂಡಿದ್ದರೆ, ನಿಸ್ಸಂಶಯವಾಗಿಯೇ ಅದಕ್ಕೆ ಮುಖ್ಯ ಕಾರಣ, ಈ ಹಿಂದೆ ಅಸ್ತಿತ್ವಕ್ಕೆ ಬಂದ ಆರ್ಥಿಕ ಉದಾರೀಕರಣ. 90ರ ದಶಕದಲ್ಲಿ ಅಂದಿನ ಪ್ರಧಾನಿ ನರಸಿಂಹರಾವ್‌ ಮತ್ತು ಹಣಕಾಸು ಸಚಿವರಾಗಿದ್ದ ಮನಮೋಹನ್‌ ಸಿಂಗ್‌ ರವರು ಅನಗತ್ಯ ಅಧಿಕಾರಶಾಹಿಯ ನಿಯಂತ್ರಣ ಮಾಡಿ, ದೇಶವನ್ನು ವಿಶ್ವ ಅರ್ಥವ್ಯವಸ್ಥೆಯೊಂದಿಗೆ ಬೆಸೆಯುವಂತೆ ಮಾಡಿ ಭಾರತದ ಅಭಿವೃದ್ಧಿ ಕಥೆಗೆ ಬುನಾದಿ ಹಾಕಿದರು.

ಪಿ.ರಂಗರಾವ್ ಅವರ ಪುತ್ರರಾದ ಪಿ.ವಿ.ನರಸಿಂಹ ರಾವ್ :

(ಪಾಮುಲಪರ್ತಿ ವೆಂಕಟ ನರಸಿಂಹ ರಾವ್)ಅವರು 1921ರ ಜೂನ್ 28ರಂದು ಈಗಿನ ತೆಲಂಗಾಣದ ಕರೀಂ ನಗರ ಜಿಲ್ಲೆಯ ವಂಗಾರಾ ಗ್ರಾಮದಲ್ಲಿ ಜನಿಸಿದರು. ಅವರ ತವರೂರು ಉತ್ತರ ಮತ್ತು ದಕ್ಷಿಣದ ಸೇತುವಿವಂತಿತ್ತು. ಗ್ರಾಮಸ್ಥರು ತೆಲುಗು, ಹಿಂದಿ, ಮರಾಠಿ, ಕನ್ನಡ, ಒರಿಯಾ ಭಾಷೆಗಳನ್ನು ಅರಿತಿದ್ದರು. ನಿಜಾಮರ ನಾಡಾಗಿದ್ದರಿಂದ ಉರ್ದುವಿನ ಪ್ರಭಾವ ಇತ್ತು. ನರಸಿಂಹರಾಯರು 15 ಭಾಷೆಗಳನ್ನು ಬಲ್ಲವರಾಗಿದ್ದರು. ಅವರು ಹೈದರಾಬಾದ್ನ ಓಸ್ಮಾನಿಯಾ ವಿಶ್ವವಿದ್ಯಾಲಯ, ಬಾಂಬೆ ವಿಶ್ವವಿದ್ಯಾಲಯ ಮತ್ತು ನಾಗ್ಪುರ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದಾರೆ. ಕಾಲೇಜು ದಿನಗಳಲ್ಲಿ ಅಂದಿನ ಅವಿಭಜಿತ ಆಂಧ್ರದಲ್ಲಿ ನಿಜಾಮರ ಕಾಲದ ಕಾಲೇಜಿನಲ್ಲಿ ವಂದೇಮಾತರಂಗೆ ನಿರ್ಬಂಧ ಹೇರದ್ದನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದರು. ಬಿಎಸ್ಸಿ, ಎಲ್ಎಲ್ಬಿ ಪದವಿ ಪಡೆದ ಪಿ.ವಿ.ನರಸಿಂಹ ರಾವ್ ಅವರಿಗೆ ಮೂವರು ಪುತ್ರರು ಮತ್ತು ಐವರು ಪುತ್ರಿಯರಿದ್ದಾರೆ. ಕೃಷಿ ಮತ್ತು ಓರ್ವ ವಕೀಲ ವೃತ್ತಿ ನಂತರ ರಾಜಕೀಯ ಪ್ರವೇಶಿಸಿ ಕೆಲವು ಮುಖ್ಯ ಖಾತೆಗಳನ್ನು ನಿರ್ವಹಿಸಿದರು.

ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣದ ಮೂಲಕ ನವ ಭಾರತಕ್ಕೆ ನಾಂದಿ ಹಾಡಿತು. ಪಿವಿ ನರಸಿಂಹ ರಾವ್ ಅವರು ಭಾರತದ ಪ್ರಧಾನಿಯಾದ ದಕ್ಷಿಣ ಭಾರತದ ಮೊದಲ ವ್ಯಕ್ತಿ. ಅವರು 1930ರ ದಶಕದ ಉತ್ತರಾರ್ಧದಲ್ಲಿ ಹೈದರಾಬಾದ್ನ ವಂದೇ ಮಾತರಂ ಚಳವಳಿಯಲ್ಲಿ ಭಾಗವಹಿಸಿದ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ವೃತ್ತಿಯಲ್ಲಿ ವಕೀಲರಾಗಿದ್ದರು.

ಸ್ವಾತಂತ್ರ್ಯ ಹೋರಾಟದ ವೇಳೆಯೇ ಕಾಂಗ್ರೆಸ್ ನಾಯಕರಿಗೆ ಆಪ್ತರಾಗಿದ್ದ ಪಿ.ವಿ.ನರಸಿಂಹ ರಾವ್ ಅವರು ಸ್ವಾತಂತ್ರ್ಯದ ನಂತರದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಿದರು. 1957ರ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿ ಆಂಧ್ರಪ್ರದೇಶ ವಿಧಾನಸಭೆ ಪ್ರವೇಶಿಸಿದ ಅವರು ಅಲ್ಲಿಂದ ಹಿಂತಿರುಗಿ ನೋಡಲಿಲ್ಲ. ಆಂಧ್ರಪ್ರದೇಶದ ಶಾಸಕರಾಗಿ, ಸಚಿವರಾಗಿ, ಹಲವು ಸುಧಾರಣೆಗಳಿಗೆ ನಾಂದಿ ಹಾಡಿದ ಅವರು, 1971 ರವರೆಗೆ ಅವರು ರಾಜ್ಯ ಸರ್ಕಾರದಲ್ಲಿ ಅನೇಕ ಸಚಿವ ಸ್ಥಾನಗಳನ್ನು ಪಡೆದರು. ಅವರು 1971 ರಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿಯಾದರು.

ಕ್ಷಿಪ್ರವಾಗಿ ಇಂದಿರಾ ಗಾಂಧಿ ಅವರ ಗಮನ ಸೆಳೆದರು. ಫಲವಾಗಿ ಅವರು ಲೋಕಸಭೆ ಪ್ರವೇಶಿಸುವ ಜತೆಗೆ ಇಂದಿರಾಗಾಂಧಿ ಅವರಿಂದ ನಿಷ್ಠಾವಂತ ರಾಜಕಾರಣಿ ಎಂಬ ಬಿರುದನ್ನು ಪಡೆದಿದ್ದರು. 1969 ರಲ್ಲಿ ಕಾಂಗ್ರೆಸ್ ಎರಡು ಭಾಗಗಳಾಗಿ ವಿಭಜನೆಯಾದಾಗ ಅವರು ಇಂದಿರಗಾಂಧಿ ಅವರನ್ನು ಬೆಂಬಲಿಸಿದರು.ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಅವರ ಸಂಪುಟದಲ್ಲಿ ಗೃಹ, ರಕ್ಷಣೆ, ವಿದೇಶಾಂಗ ಸೇರಿ ಹಲವು ಖಾತೆಗಳನ್ನು ನಿಭಾಯಿಸಿ ಸೈ ಎನಿಸಿಕೊಂಡರು.

ರಾಜಕೀಯ ವಿಷಯಗಳು ಮತ್ತು ಅದಕ್ಕೆ ಸಂಬಂಧಪಟ್ಟ ವಿಚಾರಗಳ ಬಗ್ಗೆ ಅವರು ಅಮೆರಿಕ ಮತ್ತು ಪಶ್ಚಿಮ ಜರ್ಮನಿಯ ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಗಳನ್ನು ನೀಡಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವರಾಗಿ 1974ರಲ್ಲಿ ಯು.ಕೆ, ಪಶ್ಚಿಮ ಜರ್ಮನಿ, ಸ್ವಿಟ್ಜರ್ಲೆಂಡ್, ಇಟಲಿ ಮತ್ತು ಈಜಿಪ್ಟ್ ನಲ್ಲಿ ವ್ಯಾಪಕ ಪ್ರವಾಸ ಕೈಗೊಂಡರು.
ವಿದೇಶಾಂಗ ವ್ಯವಹಾರಗಳ ಸಚಿವರಾಗಿದ್ದ ವೇಳೆ ರಾವ್, ಅಂತಾರಾಷ್ಟ್ರೀಯ ರಾಜತಾಂತ್ರಿಕತೆಯ ಕ್ಷೇತ್ರಕ್ಕೆ ತಮ್ಮ ವಿದ್ವಾಂಸ ಪ್ರತಿಭೆ ಹಿನ್ನೆಲೆ ಹಾಗೂ ಸಮೃದ್ಧ ರಾಜಕೀಯ ಮತ್ತು ಅಡಳಿತಾತ್ಮಕ ಅನುಭವಗಳನ್ನು ಯಶಸ್ವಿಯಾಗಿ ಸಂವಹನ ಮಾಡಿದರು. ತಾವು ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ 1980ರ ಜನವರಿಯಲ್ಲಿ ನವದೆಹಲಿಯಲ್ಲಿ ನಡೆದ ತೃತೀಯ ಯೂನಿಡೋ ಸಮಾವೇಶದ ಅಧ್ಯಕ್ಷತೆ ವಹಿಸಿದರು.

1980ರ ಮಾರ್ಚ್ ನಲ್ಲಿ ನ್ಯೂಯಾರ್ಕ್ ನಲ್ಲಿ ನಡೆದ ಗ್ರೂಪ್ ಆಫ್ 77ರ ಸಭೆಯ ಅಧ್ಯಕ್ಷತೆ ವಹಿಸಿದ್ದರು. 1981ರ ಫೆಬ್ರವರಿಯಲ್ಲಿ ನಡೆದ ಅಲಿಪ್ತ ರಾಷ್ಟ್ರಗಳ ವಿದೇಶಾಂಗ ಸಚಿವರ ಸಮಾವೇಶದಲ್ಲಿ ಅವರು ವಹಿಸಿದ ಪಾತ್ರ ಅಪಾರ ಮೆಚ್ಚುಗೆಗೆ ಪಾತ್ರವಾಯಿತು. ರಾವ್ ಅವರ ಅಂತಾರಾಷ್ಟ್ರೀಯ ಆರ್ಥಿಕ ವಿಸಯಗಳಲ್ಲಿ ಅವರು ತೋರಿದ ವೈಯಕ್ತಿಕ ಆಸಕ್ತಿಗಳಿಂದ 1981ರ ಮೇ ತಿಂಗಳಲ್ಲಿ ಕ್ಯಾರಕಾಸ್ ನಲ್ಲಿ ನಡೆದ ಇಸಿಡಿಸಿ ಕುರಿತ ಗ್ರೂಪ್ ಆಫ್ 77 ಸಮಾವೇಶದಲ್ಲಿ ಭಾರತೀಯ ನಿಯೋಗದ ನೇತೃತ್ವ ವಹಿಸಲು ನೆರವಾಯಿತು.

ಗೃಹ ಸಚಿವ, ರಕ್ಷಣಾ ಸಚಿವರಾಗಿ ಪಿವಿಎನ್ 1982 ಮತ್ತು 1983 ಭಾರತ ಮತ್ತು ಅದರ ವಿದೇಶಾಂಗ ನೀತಿಯಲ್ಲಿ ಯಶಸ್ವಿ ವರ್ಷ. ಕೊಲ್ಲಿ ಯುದ್ಧದ ನೆರಳಿನಲ್ಲಿ ಏಳನೇ ಶೃಂಗಸಭೆ ಆಯೋಜಿಸುವಂತೆ ಅಲಿಪ್ತ ರಾಷ್ಟ್ರಗಳ ಚಳವಳಿ ಭಾರತಕ್ಕೆ ಮನವಿ ಮಾಡಿತು. ಇದು ಭಾರತವು ಚಳವಳಿಯ ಅಧ್ಯಕ್ಷತೆ ವಹಿಸಲು ಹಾಗೂ ಶ್ರೀಮತಿ ಇಂದಿರಾ ಗಾಂಧಿ ಅವರು ಅದರ ಅಧ್ಯಕ್ಷರಾಗುವಂತೆ ಮಾಡಿತು.

1982ರಲ್ಲಿ ನವದೆಹಲಿ ಶೃಂಗಸಭೆ ಸಂದರ್ಭದಲ್ಲಿ ಅಲಿಪ್ತ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಗಳಿಗೆ ಪಿ.ವಿ.ನರಸಿಂಹರಾವ್ ಅಧ್ಯಕ್ಷತೆ ವಹಿಸಿದ್ದರು. ಅದೇ ವರ್ಷ ಇನ್ನೊಂದು ಶೃಂಗಸಭೆ ನಡೆಸುವಂತೆ ವಿಶ್ವಸಂಸ್ಥೆ ಸೂಚನೆ ಮೇರೆಗೆ ನಡೆದ ಸಮಾವೇಶದಲ್ಲೂ ಇವರು ಅಧ್ಯಕ್ಷರಾಗಿದ್ದು. ನ್ಯೂಯಾರ್ಕ್ ನಲ್ಲಿ ನಡೆದ ವಿಶ್ವ ವಿವಿಧ ರಾಷ್ಟ್ರಗಳ ಸರ್ಕಾರಗಳ ಮುಖ್ಯಸ್ಥ ಸಮಾವೇಶದಲ್ಲೂ ರಾವ್ ಪ್ರಮುಖ ಪಾತ್ರ ವಹಿಸಿದ್ದರು.

ರಾವ್ ಅವರು 1983ರ ನವೆಂಬರ್ ನಲ್ಲಿ ಪಶ್ಚಿಮ ಏಷ್ಯಾ ದೇಶಗಳಿಗೆ ಭೇಟಿ ನೀಡಿದ ವಿಶೇಷ ಅಲಿಪ್ತ ನಿಯೋಗದ ಅಧ್ಯಕ್ಷರೂ ಆಗಿದ್ದರು. ಪ್ಯಾಲೈಸ್ಟೀನ್ ವಿಮೋಚನಾ ಸಂಸ್ಥೆಯ ಬಿಕ್ಕಟ್ಟು ಪರಿಹಾರಕ್ಕಾಗಿ ಈ ನಿಯೋಗ ಶ್ರಮಿಸಿತು. ರಾವ್ ಅವರು ನವದೆಹಲಿಯಲ್ಲಿ ಕಾಮನ್ವೆಲ್ತ್ ರಾಷ್ಟ್ರಗಳ ಸರ್ಕಾರಗಳ ಮುಖ್ಯಸ್ಥರ ಹಾಗೂ ಸೈಪ್ರಸ್ ಕುರಿತ ಸಭೆಯಿಂದ ರಚಿತವಾದ ಕ್ರಿಯಾ ಸಮೂಹದಲ್ಲೂ ಸಕ್ರಿಯವಾಗಿ ತೊಡಗಿದ್ದರು.

ವಿದೇಶಾಂಗ ವ್ಯವಹಾರಗಳ ಸಚಿವರಾಗಿ ರಾವ್ ಅವರು ಯುಎಸ್ಎ, ಯುಎಸ್ಎಸ್ಆರ್, ಪಾಕಿಸ್ತಾನ, ಬಾಂಗ್ಲಾದೇಶ, ಇರಾನ್, ವಿಯೆಟ್ನಾಂ ಮತ್ತು ಗುಯಾನ ಸೇರಿದಂತೆ ಜಂಟಿ ಆಯೋಗಗಳ ಸದಸ್ಯ ದೇಶವನ್ನು ಭಾರತದ ಪರವಾಗಿ ಅಧ್ಯಕ್ಷತೆ ವಹಿಸಿದ್ದರು.

ನರಸಿಂಹ ರಾವ್ ಅವರು ಜುಲೈ 19, 1984ರಂದು ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿದರು. ನವೆಂಬರ್ 5, 1984ರಂದು ಯೋಜನಾ ಸಚಿವರ ಹೆಚ್ಚುವರಿ ಹೊಣೆಯೊಂದಿಗೆ ಅವರನ್ನು ಈ ಹುದ್ದೆಗೆ ಮರು ನೇಮಕ ಮಾಡಲಾಯಿತು. ಡಿಸೆಂಬರ್ 31, 1985 ರಿಂದ ಸೆಪ್ಟೆಂಬರ್ 25, 1985ರವರೆಗೆ ರಕ್ಷಣಾ ಸಚಿವರಾಗಿ ನೇಮಕಗೊಂಡರು. ಸೆಪ್ಟೆಂಬರ್ 25, 1985ರಂದು ಅವರು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾಗಿ ಅಧಿಕಾರ ವಹಿಸಿಕೊಂಡರು.

ಹತ್ತು ಹಲವು ಹುದ್ದೆ ನಿಭಾಯಿಸಿದ್ದ ಪಿವಿಎನ್ ಆಂಧ್ರಪ್ರದೇಶ ಸರ್ಕಾರದಲ್ಲಿ 1962-64ರವರೆಗೆ ಕಾನೂನು ಮತ್ತು ವಾರ್ತಾ ಸಚಿವರು; 1964-67ರವರೆಗೆ ಕಾನೂನು ಮತ್ತು ದತ್ತಿಗಳ ಸಚಿವರು;

1967 ರವರೆಗೆ ಆರೋಗ್ಯ ಮತ್ತು ಔಷಧಿ ಮತ್ತು 1968-71ರವರೆಗೆ ಶಿಕ್ಷಣ ಸಚಿವರಾಗಿದ್ದರು. 1971-73ರವರೆಗೆ ಅವರು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದರು;

1975-76ರವರೆಗೆ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ;1968-74ರವರೆಗೆ ಆಂಧ್ರ ಪ್ರದೇಶದ ತೆಲುಗು ಅಕಾಡೆಮಿ ಅಧ್ಯಕ್ಷ;

1972ರಿಂದ ಮದ್ರಾಸ್ನ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಉಪಾಧ್ಯಕ್ಷರಾಗಿದ್ದರು.1957-77ರವರೆಗೆ ಆಂಧ್ರ ಪ್ರದೇಶ ವಿಧಾನಸಭೆಯ ಸದಸ್ಯರಾಗಿದ್ದರು.1977-84ರವರೆಗೆ ಲೋಕಸಭಾ ಸದಸ್ಯರಾಗಿದ್ದರು ಹಾಗೂ 1984ರಲ್ಲಿ ಎಂಟನೆ ಲೋಕಸಭೆಗೆ ಚುನಾಯಿತರಾಗಿದ್ದರು.

1978-79ರಲ್ಲಿ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಅಧ್ಯಕ್ಷರಾಗಿ ಅವರು ಲಂಡನ್ ವಿಶ್ವವಿದ್ಯಾಲಯದ ಏಷ್ಯನ್ ಅಂಡ್ ಆಫ್ರಿಕನ್ ಸ್ಟಡೀಸ್ ನಿಂದ ಆಯೋಜಿಸಲಾಗಿದ್ದ ದಕ್ಷಿಣ ಏಷ್ಯಾ ಸಮಾವೇಶವೊಂದರಲ್ಲಿ ಭಾಗವಹಿಸಿದ್ದರು.

ರಾವ್ ಅವರು ಆಂಧ್ರಪ್ರದೇಶ ಕೇಂದ್ರದ ಭಾರತೀಯ ವಿದ್ಯಾ ಭವನದ ಅಧ್ಯಕ್ಷರಾಗಿದ್ದರು. ಜನವರಿ 14, 1980ರಿಂದ ಜುಲೈ 18, 1984ರವರೆಗೆ ವಿದೇಶಾಂಗ ವ್ಯವಹಾರ ಸಚಿವರಾಗಿದ್ದರು. ಜುಲೈ 19, 1984ರಿಂದ ಡಿಸೆಂಬರ್ 31, 1984ರವರೆಗೆ ಗೃಹ ಸಚಿವರಾಗಿದ್ದರು.ಡಿಸೆಂಬರ್ 31, 1984ರಿಂದ ಸೆಪ್ಟೆಂಬರ್ 25ರವರೆಗೆ ರಕ್ಷಣಾ ಸಚಿವರಾಗಿದ್ದರು. ನಂತರ ಸೆಪ್ಟೆಂಬರ್ 25, 1985ರಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾಗಿ ಅಧಿಕಾರ ಸ್ವೀಕರಿಸಿದರು. ಕೇಂದ್ರ ಸಚಿವರಾಗಿ ಗೃಹ, ರಕ್ಷಣಾ ಮತ್ತು ವಿದೇಶಾಂಗ ವ್ಯವಹಾರಗಳ ಖಾತೆಗಳನ್ನು ನಿರ್ವಹಿಸಿದ್ದಾರೆ.

ಸತತ ಎಂಟು ಚುನಾವಣೆಯಲ್ಲಿ ಗೆದ್ದಿದ್ದ ಅವರಗಿು ತನ್ನ 69 ರ ಹರೆಯದಲ್ಲೂ ಯಾರಿಗೂ ತಲೆಬಾಗಲು ಸಿದ್ಧರಿರಲಿಲ್ಲ. 1991ರಲ್ಲಿ ಸ್ವತಃ ರಾಜಕೀಯದಿಂದ ನಿವೃತ್ತಿಯಾಗಲು , ಅವರು ನಿರ್ಧರಿಸಿದ್ದ ಸಂದರ್ಭದಲ್ಲಿ ಆಗ ನಡೆದ ಒಂದು ಘಟನೆ ಅವರ ಭವಿಷ್ಯವನ್ನು ಬದಲಾಯಿಸಿತು. 21 ಮೇ 1991 ರ ಘಟನೆ ಪಿ ನರಸಿಂಹ ರಾವ್ ಜೀವನದಲ್ಲಿ ಎಲ್ಲವನ್ನೂ ಬದಲಾಯಿಸಿತು. ತಮಿಳುನಾಡಿನಲ್ಲಿ ಆಗಿನ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆಯಾಯಿತು. ಈ ಶಾಕಿಂಗ್ ವಿಷಯ ಪಿವಿ ನರಸಿಂಹ ರಾವ್ ಅವರ ರಾಜಕೀಯವನ್ನು ಹೊಸ ತಿರುವಿನತ್ತ ಕೊಂಡೊಯ್ಯಿತು. ಮುಂದೆ ನಡೆದ ಲೋಕಸಭೆ ಚುನಾವಣೆಯಲ್ಲಿ ಪಕ್ಷವು 232 ಸ್ಥಾನಗಳೊಂದಿಗೆ ಮರಳಿತು ರಾಜಕೀಯ ಮೇಲಾಟದಲ್ಲಿ ಅತ್ಯಂತ ಅನುಭವಿ ನಾಯಕರಾಗಿದ್ದ ನರಸಿಂಹರಾವ್ ಅವರು ಪ್ರಧಾನಿಯಾದರು.

ನೆಹರೂ-ಗಾಂಧಿ ಕುಟುಂಬದ ಹೊರತಾಗಿ ಕಾಂಗ್ರೆಸ್ನ ಮೊದಲ ಪ್ರಧಾನಿಯೂ ಆಗಿದ್ದರು.ಅವರು ಭಾರತದ 9 ನೇ ಪ್ರಧಾನ ಮಂತ್ರಿಯಾದರು.  ಅಷ್ಟೇ ಅಲ್ಲದೆ ಈ ಹುದ್ದೆಗೆ ಏರಿದ ಆಂಧ್ರಪ್ರದೇಶದ ಮೊದಲ ವ್ಯಕ್ತಿ ಮತ್ತು ದಕ್ಷಿಣ ಭಾರತದಿಂದ ಬಂದ ಮೊದಲ ವ್ಯಕ್ತಿಯಾಗಿದ್ದರು.

ಪ್ರಧಾನಿಯಾಗಿ ದಿಟ್ಟ ಹೆಜ್ಜೆ…

ಅವರು 1991 ಮತ್ತು 1996 ರ ನಡುವೆ ದೇಶವನ್ನು ಆಳಿದ ಅವರು ಪ್ರಧಾನಿಯಾಗಿ ಹಲವಾರು ಸಂಪ್ರದಾಯಗಳನ್ನು ಮುರಿದರು. ಅವರು ಅರ್ಥಶಾಸ್ತ್ರಜ್ಞ ಮನಮೋಹನ್ ಸಿಂಗ್ ಅವರನ್ನು ತಮ್ಮ ಹಣಕಾಸು ಮಂತ್ರಿಯಾಗಿ ನೇಮಿಸಿಕೊಂಡರು.

ಈ ಸಂದರ್ಭದಲ್ಲಿ 1990ರ ಕೊಲ್ಲಿ ಯುದ್ಧದ ಪರಿಣಾಮ ತೈಲ ದರ ಮೂರು ಪಟ್ಟು ಜಿಗಿದಿತ್ತು. ಇದೂ ಡಾಲರ್ ಸಂಗ್ರಹವನ್ನು ಬರಿದಾಗಿಸಲು ಕೊಡುಗೆ ನೀಡಿತ್ತು. ಮಧ್ಯಪ್ರಾಚ್ಯದಿಂದ ಭಾರತಕ್ಕೆ ನಮ್ಮವರು ಕಳಿಸುತ್ತಿದ್ದ ಹಣ ಕೂಡ ಇಳಿಕೆಯಾಗಿತ್ತು.

ದಿಲ್ಲಿಯ ರಾಜಕೀಯ ಅಸ್ಥಿರತೆ ಕಂಡು ಅಂಜಿದ್ದ ಅನಿವಾಸಿ ಭಾರತೀಯರೂ 1991 ಏಪ್ರಿಲ್- ಜೂನ್ ಅವಧಿಯಲ್ಲಿ 900 ದಶಲಕ್ಷ ಡಾಲರ್ ಠೇವಣಿಗಳನ್ನು ಹಿಂತೆಗೆದುಕೊಂಡಿದ್ದರು.
ಆರ್ಥಿಕ ಬಿಕ್ಕಟ್ಟು. ಸರಕಾರಿ ಸ್ವಾಮ್ಯದ ಉದ್ದಿಮೆಗಳು ಭ್ರಷ್ಟಾಚಾರ, ಅದಕ್ಷತೆಯಿಂದ ನಷ್ಟದ ಗೂಡಾಗಿದ್ದವು. ಖಾಸಗಿ ವಲಯದ ಉದ್ದಿಮೆಗಳಿಗೆ ನೂರೆಂಟು ಅಂಕುಶಗಳಿದ್ದು, ಉಸಿರಾಡಲು ಪರದಾಡುವಂತಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಿಂದ ದೂರವಾಗಿ ಏಕಾಂಗಿಯಾಗಿತ್ತು ಭಾರತ. ಇದರ ಪರಿಣಾಮ ಅತ್ಯಲ್ಪ ಆರ್ಥಿಕ ಬೆಳವಣಿಗೆ, ಬಡತನದ ತಾಂಡವ, ಸಣ್ಣ ಮಧ್ಯಮ ವರ್ಗ, ಮುರಿದು ಬಿದ್ದಿದ್ದ ಮೂಲಸೌಕರ್ಯ, ಗ್ರಾಹಕರಿಗೆ ಸೀಮಿತ ಆಯ್ಕೆ ಸಾಮಾನ್ಯವಾಗಿತ್ತು. 1965ರಿಂದಲೇ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿತ್ತಾದರೂ, 1991ರ ವೇಳೆಗೆ ಅನೂಹ್ಯ ಮಟ್ಟಕ್ಕೆ ಬಿಗಡಾಯಿಸಿತ್ತು. ಕೇವಲ ಎರಡೇ ವಾರಗಳ ಆಮದಿಗೆ ಮಾತ್ರ ಸಾಕಾಗುವಷ್ಟು ವಿದೇಶಿ ವಿನಿಮಯ ಸಂಗ್ರಹ ಉಳಿದಿತ್ತು!!! ಕನಿಷ್ಟಪಕ್ಷ ಮೂರು ತಿಂಗಳಿಗೆ ಬೇಕಾಗುವಷ್ಟಾದರೂ ಇರಬೇಕಿದ್ದ ಕಡೆ ಕೇವಲ ಎರಡೇ ವಾರಕ್ಕೆ ಮಿಗುವಷ್ಟಿತ್ತು..

ಭಾರತ ದಿವಾಳಿಯಾಗುವುದನ್ನು ತಪ್ಪಿಸಲು ಪ್ರಧಾನಿ ನರಸಿಂಹ ರಾವ್ 1991ರ ಆರಂಭದಲ್ಲಿ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯಿಂದ ಸಾಲ ಪಡೆದರು. ಭಾರತದ ಸಾಲ ಮರುಪಾವತಿ ಸಾಮರ್ಥ್ಯದ ಮೇಲೆ ಅನುಮಾನ ಹೊಂದಿದ್ದ ಐಎಂಎಫ್, ಚಿನ್ನವನ್ನು ಅಡಮಾನ ಇಡಲು ತಿಳಿಸಿತ್ತು.

ಹೀಗೆ ಚಿನ್ನ ಅಡವಿಟ್ಟು ಪಡೆದ ಸಾಲವೂ ಸಾಕಾಗಲಿಲ್ಲ. ಎರಡನೇ ಬಾರಿಗೆ ಸಾಲ ಕೇಳಿದಾಗ ಐಎಂಎಫ್ ಷರತ್ತು ವಿಧಿಸಿತು. ಆರ್ಥಿಕ ಸುಧಾರಣೆಯ ಕ್ರಮಗಳನ್ನು ಕೈಗೊಳ್ಳದಿದ್ದರೆ ಹೊಸ ಸಾಲ ಕೊಡುವುದಿಲ್ಲ ಎಂದಿತು. ಅದರ ಪ್ರಕಾರ ಆರ್ಥಿಕತೆ, ಉದ್ದಿಮೆಗಳ ಮೇಲೆ ಸರಕಾರದ ನಿಯಂತ್ರಣ ಸಡಿಲಗೊಳಿಸಬೇಕಿತ್ತು. ಆರ್ಥಿಕ ಉದಾರೀಕರಣ ನೀತಿಗಳ ಜಾರಿ ಅಗತ್ಯವಿತ್ತು. ಲೈಸೆನ್ಸ್ ರಾಜ್ ವ್ಯವಸ್ಥೆಯ ಲಾಬಿ ಪ್ರಬಲವಾಗಿ ಇಂತಹ ನಡೆಯನ್ನು ವಿರೋಧಿಸುತ್ತಿತ್ತು. ಆದರೆ ಈ ಎಲ್ಲ ಅಡತಡೆಗಳನ್ನು ದಾಟಿ, ಆರ್ಥಿಕ ಉದಾರೀಕರಣ ಪರಿಕಲ್ಪನೆಯ ಅವಶ್ಯಕತೆ ಯನ್ನು ಪಕ್ಷದ ಒಳ ಹೊರಗುಗಳಲ್ಲಿ, ಸರಕಾರದ ಉನ್ನತ ಮಟ್ಟದಲ್ಲಿ ಮನದಟ್ಟು ಮಾಡಿಸಿಕೊಟ್ಟು ಅನುಷ್ಠಾನ ಗೊಳಿಸಿದವರು.

ಅವರು ಭಾರತದ ಮಾರುಕಟ್ಟೆಗಳನ್ನು ವಿದೇಶಿ ಹೂಡಿಕೆಗೆ ತೆರೆದಿಟ್ಟರು, ಬಂಡವಾಳ ಮಾರುಕಟ್ಟೆಗಳು ಮತ್ತು ವ್ಯಾಪಾರ ಆಡಳಿತವನ್ನು ಸುಧಾರಿಸಿದರು ಮತ್ತು ದೇಶೀಯ ವ್ಯವಹಾರವನ್ನು ನಿಯಂತ್ರಿಸಿದರು. ಅವರ ಆರ್ಥಿಕ ಸುಧಾರಣೆಗಳು 1991 ರ ಆರ್ಥಿಕ ಬಿಕ್ಕಟ್ಟನ್ನು ತಪ್ಪಿಸುವ ಗುರಿಯನ್ನು ಹೊಂದಿದ್ದವು. ಅವರ ಅವಧಿಯಲ್ಲಿ, ಭಾರತದಲ್ಲಿ ಒಟ್ಟು ವಿದೇಶಿ ಹೂಡಿಕೆ (ವಿದೇಶಿ ನೇರ ಹೂಡಿಕೆ, ಬಂಡವಾಳ ಹೂಡಿಕೆ ಮತ್ತು ಅಂತರರಾಷ್ಟ್ರೀಯ ಬಂಡವಾಳ ಮಾರುಕಟ್ಟೆಗಳಲ್ಲಿ ಸಂಗ್ರಹಿಸಿದ ಹೂಡಿಕೆ ಸೇರಿದಂತೆ) 1991-92ರಲ್ಲಿ US $ 132 ದಶಲಕ್ಷದಿಂದ 1995-96ರಲ್ಲಿ 3 5.3 ಶತಕೋಟಿಗೆ ಏರಿತು.

  • ಪಿ.ವಿ.ನರಸಿಂಹ ರಾವ್ ಲುಕ್ ಈಸ್ಟ್ ವಿದೇಶಾಂಗ ನೀತಿಯನ್ನು ಪ್ರಾರಂಭಿಸಿದರು, ಇದು ಭಾರತವನ್ನು ಆಸಿಯಾನ್ ಸದಸ್ಯ ರಾಷ್ಟ್ರಗಳಿಗೆ ಹತ್ತಿರ ತಂದಿತು. ಇದು ಆಗ್ನೇಯ ಏಷ್ಯಾದೊಂದಿಗೆ ಭಾರತದ ಆರ್ಥಿಕ ಸಂವಹನವನ್ನು ಹೆಚ್ಚಿಸಲು ಕಾರಣವಾಯಿತು ಮತ್ತು ಈ ಪ್ರದೇಶದ ಹಲವಾರು ದೇಶಗಳೊಂದಿಗೆ ಪ್ರಮುಖ ಕಾರ್ಯತಂತ್ರ ಮತ್ತು ರಕ್ಷಣಾ ಸಂಪರ್ಕವನ್ನು ರೂಪಿಸಿತು.
  • ಅವರು ರಾಷ್ಟ್ರೀಯ ಪರಮಾಣು ಭದ್ರತೆ ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳ ಕಾರ್ಯಕ್ರಮಕ್ಕೆ ಶಕ್ತಿ ತುಂಬಿದರು, ಇದು ಅಂತಿಮವಾಗಿ 1998 ರ ಪೋಖ್ರಾನ್ ಪರಮಾಣು ಪರೀಕ್ಷೆಗಳಿಗೆ ಕಾರಣವಾಯಿತು. ಅವರು ಮಿಲಿಟರಿ ಖರ್ಚುಗಳನ್ನು ಹೆಚ್ಚಿಸಿದ್ದರು ಮತ್ತು ಉದಯೋನ್ಮುಖ ಭಯೋತ್ಪಾದನೆ ಮತ್ತು ದಂಗೆಗಳ ವಿರುದ್ಧ ಪಾಕಿಸ್ತಾನ ಮತ್ತು ಚೀನಾದ ಪರಮಾಣು ವಿಭವಗಳ ವಿರುದ್ಧ ಹೋರಾಡಲು ಭಾರತೀಯ ಸೈನ್ಯವನ್ನು ಸಿದ್ಧಪಡಿಸಿದ್ದರು. ಅವರ ಅವಧಿಯಲ್ಲಿಯೇ ಭಾರತದ ಪಂಜಾಬ್ ರಾಜ್ಯದಲ್ಲಿ ಭಯೋತ್ಪಾದನೆ ಅಂತಿಮವಾಗಿ ಸೋಲಿಸಲ್ಪಟ್ಟಿತು.
  • 1991ರಿಂದ ಅಸ್ತಿತ್ವದಲ್ಲಿರುವ ಆರ್ಥಿಕ ಉದಾರೀಕರಣ, ಭಾರತದ ಮಹಾನಗರಿಗಳ ಮೇಲೆ ಬಹಳಷ್ಟು ಪ್ರಭಾವ ಬೀರಿದೆ. ದೇಶದ ವಿತ್ತ ರಾಜಧಾನಿ ಎಂದು ಕರೆಸಿಕೊಳ್ಳುವ ಮುಂಬೈನಲ್ಲಿ, ಈಗ ಬ್ಯುಸಿನೆಸ್ ನಡೆಸುತ್ತಿರುವ ಬಹುತೇಕ ವಿದೇಶಿ ಕಂಪನಿಗಳು 1991ರ ನಂತರವೇ ಅಲ್ಲಿ ಜಾಗ ಗಿಟ್ಟಿಸಿಕೊಂಡವು. ಇನ್ನು ನಮ್ಮ ಬೆಂಗಳೂರಿನ ಅಭಿವೃದ್ಧಿಯಲ್ಲೂ ಉದಾರೀಕರಣ ಮತ್ತು ಜಾಗತೀಕರಣದ ಬೃಹತ್ ಪಾತ್ರವಿದೆ.
  • ಟಿಸಿಎಸ್, ವಿಪ್ರೋ, ಇನ್ಫೋಸಿಸ್, ಕಾಗ್ನಿಜೆಂಟ್ ಮತ್ತು ಎಚ್ಸಿಎಲ್ನಂಥ ಭಾರತದ ಐಟಿ ಉದ್ಯಮಗಳು ಬೆಳೆದು ನಿಲ್ಲುವಲ್ಲಿ ಉದಾರೀಕರಣದ ಪಾಲೂ ಇದೆ. ಇವುಗಳಷ್ಟೇ ಅಲ್ಲದೇ ಸಿಪ್ಲಾ, ರಾರ‍ಯಬ್ಯಾಕ್ಸಿ, ಬಯೋಕಾನ್, ಡಾ. ರೆಡ್ಡೀಸ್ನಂಥ ಕಂಪನಿಗಳೂ ಬಹುರಾಷ್ಟ್ರೀಯವಾಗಲು ಸಹಕಾರಿಯಾಯಿತು.
  • ಇನ್ನೂ ಆಹಾರ ಮಾರುಕಟ್ಟೆಯಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಆಗಮನಕ್ಕೂ ಇದು ಕಾರಣವಾಯಿತು. ಮೆಕ್ಡೊಮಾಲ್ಡ್ಸ್, ಡಾಮಿನೋಸ್, ಸಬ್ವೇಯಂಥ ಬಹುರಾಷ್ಟ್ರೀಯ ಫಾಸ್ಟ್ ಫುಡ್ ಮಳಿಗೆಗಳು ಭಾರತದ ಒಳಗೆ ಹೊಕ್ಕದ್ದು ಉದಾರೀಕರಣದ ನಂತರವೇ.

ಆರ್ಥಿಕ ಸುಧಾರಣೆ ಜತೆಗೆ ನರಸಿಂಹ ರಾವ್‌ ಅವರು ಪಂಜಾಬ್‌ ಬಂಡುಕೋರರು, ಕಾಶ್ಮೀರದಲ್ಲಿ ಉಗ್ರರನ್ನು ನಿಗ್ರಹಿಸಲು ಕ್ರಮ ತೆಗೆದುಕೊಂಡರು. ರಷ್ಯಾ ಜತೆಗಿನ ಸಂಬಂಧವನ್ನು ವೃದ್ಧಿಸಿಕೊಂಡು ದೇಶದ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಿದರು. ಮೊದಲ ಅಣ್ವಸ್ತ್ರ ಪರೀಕ್ಷೆಗೂ ಭಾರತವನ್ನು ಸಜ್ಜುಗೊಳಿಸಿದರು.

ಪಿ.ವಿ ನರಸಿಂಹ ರಾವ್ ಕೇವಲ ಹಿಂದಿಯೇತರ ಭಾಷಾ ಪ್ರದೇಶದಿಂದ ಬಂದಂತಹ ಪ್ರಧಾನ ಮಂತ್ರಿ ಅಷ್ಟೇ ಅಲ್ಲ , ಅವರು ಎಂಟು ಭಾರತೀಯ ಭಾಷೆಗಳನ್ನೂ ಕರಗತ ಮಾಡಿಕೊಂಡಿದ್ದರು. ತೆಲುಗು ಅವರ ಮಾತೃಭಾಷೆ ಮತ್ತು ಅವರು ಕನ್ನಡ ಮತ್ತು ತಮಿಳು ಭಾಷೆಯಲ್ಲೂ ನಿರರ್ಗಳವಾಗಿದ್ದರು. ಇವುಗಳ ಜೊತೆಗೆ, ಮರಾಠಿ, ಹಿಂದಿ, ಒರಿಯಾ, ಉರ್ದು, ಬಂಗಾಳಿ, ಗುಜರಾತಿ ಮತ್ತು ಶಾಸ್ತ್ರೀಯ ಭಾಷೆಯ ಸಂಸ್ಕೃತದ ಮೇಲೂ ರಾವ್ಗೆ ಅತ್ಯುತ್ತಮವಾದ ಜ್ಞಾನ ಇತ್ತು. ಇವುಗಳಷ್ಟೇ ಅಲ್ಲ, ಇಂಗ್ಲಿಷ್, ಫ್ರೆಂಚ್, ಅರೇಬಿಕ್, ಸ್ಪ್ಯಾನಿಷ್, ಜರ್ಮನ್, ಗ್ರೀಕ್, ಲ್ಯಾಟಿನ್ ಮತ್ತು ಪರ್ಷಿಯನ್ ಸೇರಿದಂತೆ ಎಂಟು ವಿದೇಶಿ ಭಾಷೆಗಳನ್ನೂ ಅವರು ಮಾತನಾಡಬಲ್ಲರು.

ಹಿಂದಿಯಲ್ಲಿ ಸಾಹಿತ್ಯ ರತ್ನ ಶಿಕ್ಷಣ ಪಡೆದಿದ್ದ ರಾವ್ ಅವರು ಸ್ಪ್ಯಾನಿಷ್‌ ಸೇರಿದಂತೆ ಬಹು ಭಾಷೆಯಲ್ಲಿ ಅವರು ಪ್ರಭುತ್ವ ಪಡೆದಿದ್ದರು. ರಾವ್ ಆತ್ಮಕಥನ ಇನ್ ಸೈಡರ್ ಕೃತಿ ಬಿಡುಗಡೆ ಮಾಡಿದ್ದು ಅಟಲ್ ಬಿಹಾರಿ ವಾಜಪೇಯಿ ಎಂಬುದು ವಿಶೇಷ.

ಅನೇಕ ಕ್ಷೇತ್ರಗಳಲ್ಲಿ ಅಪಾರ ಆಸಕ್ತಿ ಹೊಂದಿದ ವ್ಯಕ್ತಿಯಾಗಿದ್ದರು. ಸಂಗೀತ, ಸಿನಿಮಾ ಮತ್ತು ರಂಗಭೂಮಿಯನ್ನು ಬಹುವಾಗಿ ಇಷ್ಟಪಡುತ್ತಿದ್ದರು. ಭಾರತೀಯ ತತ್ತ್ವಶಾಸ್ತ್ರ ಮತ್ತು ಸಂಸ್ಕೃತಿಯಲ್ಲಿ ವಿಶೇಷ ಒಲವು ಹೊಂದಿದ್ದರು. ಕಾಲ್ಪನಿಕ ವಿಜ್ಞಾನ ಹಾಗೂ ರಾಜಕೀಯ ವಿಶ್ಲೇಷಣೆಗಳನ್ನು ಬರೆಯುತ್ತಿದ್ದರು. ಹಲವು ಭಾಷೆಗಳನ್ನು ತಿಳಿದಿದ್ದ ಬಹು ಭಾಷಾ ಪಂಡಿತರಾಗಿದ್ದರು. ತೆಲುಗು ಮತ್ತು ಹಿಂದಿಗಳಲ್ಲಿ ಕವನಗಳನ್ನು ಬರೆಯುತ್ತಿದ್ದ ಅವರಿಗೆ ಸಾಹಿತ್ಯದಲ್ಲಿ ಹೆಚ್ಚಿನ ಆಸಕ್ತಿ ಇತ್ತು.

ಜ್ಞಾನಪೀಠದಿಂದ ಪ್ರಕಟಗೊಂಡ ದಿವಂಗತ ವಿಶ್ವನಾಥ ಸತ್ಯನಾರಾಯಣ ಅವರು ಪ್ರಸಿದ್ದ ‘ವೆಯಿ ಪಡಗಳು’ ತೆಲುಗು ಕಾದಂಬರಿಯನ್ನು ಹಿಂದಿಯಲ್ಲಿ ‘ಸಹಸ್ರಫನ್’ ಹೆಸರಿನಲ್ಲಿ ಪ್ರಕಟಿಸಿದರು ; ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಕಟಿಸಿದ ದಿವಂಗತ ಶ್ರೀ ಹರಿ ನಾರಾಯಣ ಅಪ್ಟೆ ಅವರ ಪ್ರಸಿದ್ದ ಮರಾಠಿ ಕಾದಂಬರಿಯನ್ನು ‘ಪನ್ ಲಕ್ಷತ್ ಕೊನ್ ಘೇಟೊ’ವನ್ನು ತೆಲುಗಿನಲ್ಲಿ ‘ಅಬಾಲ ಜೀವಿತಂ’ ಹೆಸರಿನಲ್ಲಿ ಭಾಷಾಂತರಿಸಿದರು. ಅವರು ಇತರ ಜನಪ್ರಿಯ ಕಾದಂಬರಿಗಳು ಮತ್ತು ಶ್ರೇಷ್ಠ ಕೃತಿಗಳನ್ನು ಮರಾಠಿಯಿಂದ ತೆಲುಗಿಗೆ ಹಾಗೂ ತೆಲುಗಿನಿಂದ ಹಿಂದಿಗೆ ಭಾಷಾಂತರ ಮಾಡಿದ್ದಾರೆ. ಅವರ ಅನೇಕ ಲೇಖನಗಳು ಬಹುಶ: ಅವರ ಒಂದು ಕಾವ್ಯನಾಮದ ಮೂಲಕ ವಿವಿಧ ನಿಯತಕಾಲಿಕಗಳಲ್ಲಿ ಪ್ರಕಟವಾಗಿದೆ.

ಪ್ರಧಾನಿ ಪಿವಿಎನ್ ಕಾಲದಲ್ಲೇ ವಿವಾದಾತ್ಮಕ ಬಾಬ್ರಿ ಮಸೀದಿ ನೆಲಸಮವಾಯಿತು. ಹಗರಣ, ಕರಾಳ ಘಟನೆಗಳಿಗೆ ಸಾಕ್ಷಿಯಾದರು,ಸ್ವತಃ ಪಿವಿಎನ್ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾದವು. ಕೆಲವು ಪ್ರಕರಣಗಳಲ್ಲಿ ಖುಲಾಸೆಗೊಂಡರು. ಜೆಎಂಎಂ ಸಂಸದರ ಲಂಚಗುಳಿತನ ಮತ್ತು ಲಖ್ಖುಭಾಯಿ ವಂಚನೆ ಪ್ರಕರಣ, ಸೆಂಟ್ಕಿಟ್ಸ್ ಪೋರ್ಜರಿ ಹಗರಣ, ಹವಾಲಾ ಹಗರಣ ಹೀಗೆ ಹಲವು ಸಂಕಟಗಳ ನಡುವೆ ಸರ್ಕಾರ ನಿಭಾಯಿಸಿದರು. ನರಸಿಂಹ ರಾವ್ ಅವರು 2004ರ ಡಿಸೆಂಬರ್ 23ರಂದು ನಿಧನರಾದರು. ಅವರ ನಿವೃತ್ತಿ ಬದುಕು ಮತ್ತು ಕೊನೆಗಾಲದಲ್ಲಿ ಅವರ ಪಕ್ಷ ನಿರ್ಲಕ್ಷಿಸಿತು .

ದಿಲ್ಲಿಯಲ್ಲಿ ‘ಪಿವಿಎನ್’ ಸ್ಮಾರಕ :

2014 ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಎನ್ ಡಿಎ ಸರಕಾರ, ಮಾಜಿ ಪ್ರಧಾನಿ ನರಸಿಂಹ ರಾವ್ ಅವರ ಸ್ಮಾರಕವನ್ನು ದಿಲ್ಲಿಯಲ್ಲಿ ನಿರ್ಮಿಸಿತು. ಆಗ ನಗರಾಭಿವೃದ್ಧಿ ಸಚಿವರಾಗಿದ್ದ ವೆಂಕಯ್ಯನಾಯ್ಡು ಖುದ್ದಾಗಿ ಸ್ಮಾರಕ ನಿರ್ಮಾಣದ ಮೇಲುಸ್ತುವಾರಿ ವಹಿಸಿಕೊಂಡಿದ್ದರು.

ಖಾಸಗಿಕರಣ, ಆಧುನಿಕರಣ, ಉದಾರೀಕರಣಕ್ಕೆ ನಾಂದಿ ಹಾಡಿ,ಭಾರತದ ಆರ್ಥಿಕತೆಯು ಹೊಸ ರೂಪ ನೀಡಿದ ಪಿ.ವಿ.ನರಸಿಂಹ ರಾವ್‌ ಅವರಿಗೆ ಕೇಂದ್ರ ಸರ್ಕಾರ ಭಾರತರತ್ನ ಘೋಷಿಸಿದ್ದು ಅವರ ಆಡಳಿತವನ್ನು ಇಷ್ಟಪಡುವರಿಗೆ ಖುಷಿ ತಂದಿದೆ.


  • ಡಾ.ಗುರುಪ್ರಸಾದ ರಾವ್ ಹವಲ್ದಾರ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW