ರಾಜೇಶ್ವರಿ ತೇಜಸ್ವಿಯವರಿಗೆ ಪತ್ರಕರ್ತ ,ಲೇಖಕರು ಆದ ಉಗಮ ಶ್ರೀನಿವಾಸ್ ಅವರಿಂದ ನುಡಿ ನಮನ. ಹೋಗಿಬನ್ನಿ ಮೇಡಂ …
ಕೋವಿಡ್ ಗೂ ಮುಂಚಿನ ದಿನಮಾನಗಳು. ಗೆಳೆಯರು, ಸಂಘಟಕರೂ ಆಗಿರುವ ಐವಾನ್ ಡಿಸಿಲ್ವಾ ಅವರು ಕೊಟ್ಟಿಗೆಹಾರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು.
ಅಂದು ಸಂಜೆ ಬೀಳುತ್ತಿದ್ದ ಸೋನೆ ಮಳೆಯಲ್ಲೇ ತೇಜಸ್ವಿಯವರ ಕರ್ವಾಲೋದಲ್ಲಿ ಹಾರುವ ಓತಿ ಬಗ್ಗೆ ಮಾತನಾಡುತ್ತಾ ಚಾರ್ಮಾಡಿ ಘಟ್ಟ ಇಳಿದು ಬಂದಿದ್ದೆವು. ಮರುದಿನ ಮಧ್ಯಾಹ್ನ ಮೂಡಿಗೆರೆ ಹ್ಯಾಂಡ್ ಪೋಸ್ಟ್ ನಲ್ಲಿರುವ ತೇಜಸ್ವಿ ಅವರ ಮನೆಯ ಮುಂದಿದ್ದ ದೊಡ್ಡ ಗೇಟನ್ನು ಸರಿಸಿ ಸುತ್ತಲೂ ಕಾಡು ಕವಿದ ದಾರಿಯನ್ನು ಸವೆಸಿ ಹೊಕ್ಕಿದ್ದಾಗ ಕಾಡ ಮಧ್ಯೆ ಇದ್ದ ಒಂಟಿ ಮನೆಯಲ್ಲಿ ನಗುತ್ತಲೇ ಬರಮಾಡಿಕೊಂಡವರು ರಾಜೇಶ್ವರಿಯವರು. ಸುಮಾರು ಎರಡು ಗಂಟೆಗಳಿಗೂ ಹೆಚ್ಚು ಕಾಲದ ಅವರ ಒಡನಾಟದಲ್ಲಿ ತೇಜಸ್ವಿ ಅವರ ಕೃತಿಗಳಲ್ಲಿ ಬರುವ ಪಾತ್ರಗಳ ಬಗ್ಗೆನೇ ಮಾತಾಡತೊಡಗಿದರು.

(ರಾಜೇಶ್ವರಿ ತೇಜಸ್ವಿಯವರು ಮತ್ತು ಪತ್ರಕರ್ತರು, ಲೇಖಕರಾದ ಉಗಮ ಶ್ರೀನಿವಾಸ್)
ಮಂದಣ್ಣ, ಪ್ಯಾರಾ, ಕೃಷ್ಣೆಗೌಡರು, ಮೂಡಿಗೆರೆಯ ಜೇನುಸೊಸೈಟಿ, ಕಿರಗೂರಿನ ಗಯ್ಯಾಳಿಗಳಲ್ಲಿ ಬರುವ ಹೆಣ್ಣು ಮಕ್ಕಳು ಹೀಗೆ ತೇಜಸ್ಚಿ ಬಗ್ಗೆ ಮ್ಯಾರಥಾನ್ ಮಾತು. ತೇಜಸ್ವಿ ಅವರು ಬರಿಯುತ್ತಿದ್ದ ಜಾಗ, ಲಂಕೇಶ್, ರಾಮದಾಸರು ಬಂದಾಗ ಉಳಿದುಕೊಳ್ಳುತ್ತಿದ್ದ ಕೊಠಡಿ, ತೇಜಸ್ವಿಯವರು ನಿರ್ಮಿಸಿದ್ದ ಕೆರೆ, ಅವರ ಮೀನು ಶಿಕಾರಿ ಎಲ್ಲವನ್ನೂ ಆ ಕಾಡ ಮಧ್ಯದ ಒಂಟಿಮನೆಯ ಕಾರಿಡಾರ್ ನಲ್ಲಿ ಹೇಳುತ್ತಲೇ ಇದ್ದರು. ತೇಜಸ್ವಿ ಅವರ ಬಗ್ಗೆ ಬರೆದ ಪುಸ್ತಕದ ಬಗ್ಗೆ, ತೇಜಸ್ವಿ ಅವರು ಬಳಸುತ್ತಿದ್ದ ಲೈಬ್ರರಿ ಹೀಗೆ ಎರಡು ಗಂಟೆಗಳ ಕಾಲ ಮಾತು ಮಾತು.
ಅವರ ಇಡೀ ಮನೆಯನ್ನು ನೋಡಿ #ತೇಜಸ್ವಿ ಅವರ ತೋಟದ ತುಂಬೆಲ್ಲ ಸುತ್ತಾಡಿ ಮನೆಗೆ ಬಂದಾಗ ಅವರೇ ಮಾಡಿಕೊಟ್ಟ ಅವಲಕ್ಕಿ ತಿಂದು ಹೊರಟಾಗ ಬೆನ್ನಿಗಿದ್ದದ್ದು ಕಾಡು, ತೇಜಸ್ವಿಯಂತ ಅಪರೂಪದ ಲೇಖಕ ಮತ್ತು ಕಾಡುಮನೆಯಲ್ಲಿ ಕ್ರಿಯಾಶೀಲರಾಗಿದ್ದ ರಾಜೇಶ್ವರಿ ಅವರು. ಹೋಗಿಬನ್ನಿ ಮೇಡಂ
- ಉಗಮ ಶ್ರೀನಿವಾಸ್ (ಪ್ರಧಾನ ವರದಿಗಾರ, ಕನ್ನಡಪ್ರಭ,ಲೇಖಕರು) ಶಿವಮೊಗ್ಗ
