ಗಿರೀಶ್ ಕಾರ್ನಾಡರ ‘ಯಯಾತಿ’ ನಾಟಕದಲ್ಲಿ ಚಿತ್ರಲೇಖೆ ಪಾತ್ರ ಮಾಡುವ ಕಲಾವಿದೆಯ ಹುಡುಕಾಟ ನಡೆದಿತ್ತು, ಕಲಾವಿದೆ ಸಿಕ್ಕರೇ? ಅಥವಾ ಇಲ್ಲವೇ? ರಂಗಭೂಮಿಯ ರೋಚಕ ಕತೆಯನ್ನು ರಂಗಭೂಮಿ ನಿರ್ದೇಶಕ, ಸಂಘಟನಾಕಾರರು ಆದ ಸ್ವಾಮಿ ಮಹಾಮನೆ ಅವರ ‘ರಂಗದೊಳಗಿನ ಹೀಗೊಂದು ಕಥನ’ ದ ಮೂಲಕ ಓದುಗರೊಂದಿಗೆ ತಮ್ಮ ಅನುಭವವನ್ನು ಹಂಚಿಕೊಳ್ಳಲಿದ್ದಾರೆ, ತಪ್ಪದೆ ಮುಂದೆ ಓದಿ…
ಅವಳು ನನ್ನ ಬಳಿ ಬಂದು ಐದಾರು ವರ್ಷಗಳು ಆಗಿರಬೇಕು. ನಾನಾಗ ಗಿರೀಶ್ ಕಾರ್ನಾಡರ ಯಯಾತಿ ನಾಟಕವನ್ನು ನನ್ನ ತಂಡಕ್ಕೆ ಮಾಡಿಸುತ್ತಿದ್ದೆ..
ರವೀಂದ್ರ ಕಲಾಕ್ಷೇತ್ರದ ಶೆಡ್ಡಿನಲ್ಲಿ ರಿಹರ್ಸಲ್ ನಡೆಯುತ್ತಿತ್ತು. ಪುರುವಿನ ಹೆಂಡತಿ ಚಿತ್ರಲೇಖೆಯ ಪಾತ್ರಕ್ಕೆ ಹೊಸ ಪ್ರತಿಭೆಯ ಹುಡುಕಾಟದಲ್ಲಿದ್ದೆ ನಾನು.ಸುಂದರವಾದ ಚಂದದ ಹುಡುಗಿ ಬೇಕಾಗಿತ್ತು. ಮೂರ್ನಾಲ್ಕು ಹುಡುಗಿಯರು ಬಂದ್ರು.. ರೀಡಿಂಗ್ ತಗೊಂಡ್ರು.. ಆದರೆ ನನಗೆ ಯಾಕೋ ಸಮಾಧಾನವಾಗಲಿಲ್ಲ. ನಾನು ಅವರ್ಯಾರಲ್ಲೂ ಚಿತ್ರಲೇಖೆಯನ್ನು ಕಾಣಕ್ಕಾಗಲಿಲ್ಲ .
ಯಯಾತಿಯ ಪಾತ್ರಗಳೆಲ್ಲವೂ ಸಮತೂಕದ ಪಾತ್ರಗಳು. And also powerful ಕ್ಯಾರೆಕ್ಟರ್ಸ್…ಕಾರ್ನಾಡರು ಹಾಗೆ ನಾಟಕವನ್ನು ಕಟ್ಕೊಟ್ಟಿದ್ದಾರೆ.
ದೇವಯಾನಿ..ಶರ್ಮಿಷ್ಠೆ..ಯಯಾತಿ…ಪುರು..ದಾಸಿ..ಈ ಎಲ್ಲಾ ಪಾತ್ರಗಳೂ ಬಹಳ ಗಟ್ಟಿಯಾದ ಪಾತ್ರಗಳು..ಇಂತಹ ಪಾತ್ರಗಳನ್ನು ನಿರ್ವಹಿಸಲು ತುಂಬಾ ನುರಿತ..ನಟನೆಯಲ್ಲಿ ಅನುಭವವಿರುವ ಪ್ರತಿಭಾವಂತ ಕಲಾವಿದರು ಬೇಕಾಗುತ್ತದೆ..ಅದರಂತೆ ಚಿತ್ರಲೇಖೆಯ ಪಾತ್ರವೂ ಸಹ..ಬಹಳ ಬಹಳ ಕ್ಲಿಸ್ಟವಾದ ಪಾತ್ರ..

ಚೆಲುವು ಅರಳಿನಿಂತ..ಯೌವನ ತುಂಬಿದ ಕೋಮಲೆಯೂ..ಪ್ರಬುದ್ದೆಯೂ ಆದವಳು ಚಿತ್ರಲೇಖೆ ..ತನ್ನಪ್ಪ ಯಯಾತಿಗೆ ತನ್ನ ಯೌವನವನ್ನು ..ತನ್ನೆಲ್ಲ ಸರ್ವಸ್ವವನ್ನೂ ಧಾರೆ ಎರೆದುಕೊಟ್ಟ ಪುರುವಿನ ಹೆಂಡತಿ ಚಿತ್ರಲೇಖೆ..ಕಾಮನೆಗಳು ಅಲೆಅಲೆಗಳಾಗಿ ತೆರೆತೆರೆಗಳಾಗಿ ಅಪ್ಪಳಿಸುವ ವಯಸ್ಸು..ತುಂಬ ತುಮಲಗಳಿಂದ ಕೂಡಿದ ಪಾತ್ರ..ತನ್ನ ಒಡಲಾಳದ ಕುದಿಯನ್ನು…ಭುಗಿಲೇಳುವ ಬೆಂಕಿಯನ್ನು ಬಹಳ ಸಂಮಯಮದಿಂದಲೇ..ತಣ್ಣನೆಯ ಹಿಮದಂತೆ..ಮನಕೊರೆಯುವ ರಾಗದಂತೆ.. ಬೆಂಕೆಯುಗುಳುವ ಮುನ್ನಿನ ಜ್ವಾಲಾಮುಖಿಯಂತೆ ಅಭಿನಯಿಸುವ…ಚಿತ್ರಲೇಖೆಯನ್ನು ತೆರೆದಿಡುವ ನಟಿ ನನಗೆ ಬೇಕಾಗಿತ್ತು..
ಅಂತಹ ಕಲಾವಿದೆಯ ತಪಸ್ಸಿನಲ್ಲಿದ್ದೆ ನಾನು..
ಮೇಕಪ್ ಶೆಂಕರಪ್ಪ ಒಂದು ಹುಡುಗಿಯನ್ನು ನನ್ನ ಬಳಿ ಕರ್ಕೊಂಡು ಬಂದಿದ್ರು.
ಆಗ ನನ್ನ ಬಳಿಗೆ ಬಂದವಳು ಇವಳು..
ಮುಂದುವರಿಯುವುದು….
- ಸ್ವಾಮಿ ಮಹಾಮನೆ
