೧೯೪೭ ಆಗಸ್ಟ್ ೧೫ ರಂದು ಮೊದಲ ರಾಷ್ಟ್ರಧ್ವಜಾರೋಹಣ ನಡೆದದ್ದು ದೆಹಲಿಯ ಕೆಂಪುಕೋಟೆಯ ಮೇಲೆ. ಆ ನಂತರ ಕೆಂಪು ಕೋಟೆಯ ಮೇಲೆ ದಾಳಿಗಳು ನಡೆದಿಲ್ಲವಾದರೂ ಈ ಕೋಟೆಯ ಇತಿಹಾಸ ಮಾತ್ರ ರೋಚಕವಾಗಿಯೇ ಇದೆ.
ತನ್ನ ರಾಜಧಾನಿಯನ್ನು ದೆಹಲಿಗೆ ಸ್ಥಳಾಂತರಿಸಲು ನಿರ್ಧರಿಸಿದೆ ಮೊಘಲ್ ದೊರೆ ಶಾಜಹಾನನು ೧೬೩೯-೪೮ರ ಅವಧಿಯಲ್ಲಿ ಈ ಕೋಟೆಯನ್ನು ನಿರ್ಮಿಸಿದ್ದನು. ಭವ್ಯ ಅರಮನೆ, ಚಿನ್ನಾಭರಣ, ಕಲಾಕೃತಿ ಮುಂತಾದ ವೈಭವಗಳಿಂದ ಅದು ಕೂಡಿತ್ತು. ಸುಮಾರು ಎರಡು ಶತಮಾನಗಳಿಗೂ ಹೆಚ್ಚಿನ ಅವಧಿಗೆ ಇದು ಮೊಘಲರ ಆಳ್ವಿಕೆಯಲ್ಲೇ ಇತ್ತು.
೧೭೪೭ ರಲ್ಲಿ ದೆಹಲಿ ಮೇಲೆ ಇರಾನಿನ ನಾದಿರ್ ಶಾ ದಾಳಿ ನಡೆಸಿ, ಕೋಟೆಯನ್ನು ವಶಪಡಿಸಿಕೊಂಡ. ಅಲ್ಲಿನ ಅತ್ಯಂತ ದುಬಾರಿ ವಸ್ತುಗಳೊಂದಿಗೆ ಆತ ಇರಾನಿಗೆ ಮರಳಿದ್ದ. ಅನಂತರ ಮರಾಠರು ದೆಹಲಿಯ ಮೇಲೆ ದಾಳಿ ಮಾಡಿದರು. ಕೋಟೆ ಕೆಲವು ವರ್ಷಗಳ ಕಾಲ ಅವರ ವಶದಲ್ಲಿತ್ತು. ಅಲ್ಲಿನ ಕೆಲವು ಅಮೂಲ್ಯ ವಸ್ತುಗಳನ್ನು ಮರಾಠರೂ ನಾಶಪಡಿಸಿದ್ದರು. ಸ್ವಲ್ಪ ಕಾಲ ಸಿಖ್ಖರು ಕೋಟೆಯ ಮೇಲೆ ಹಿಡಿತ ಸಾಧಿಸಿದರು. ೧೮೦೩ ರಲ್ಲಿ ಆಂಗ್ಲರು ಮರಾಠರ ನಡುವೆ

ಫೋಟೋ ಕೃಪೆ : paidalyatri
ನಡೆದ ಎರಡನೇ ಕಾಳಗದ ಬಳಿಕ ಕೋಟೆಯ ಮೇಲೆ ಬ್ರಿಟಿಷರ ಹಿಡಿತ ಬಲವಾಯಿತು.
೧೮೫೭ ರಲ್ಲಿ ಬ್ರಿಟಿಷರ ವಿರುದ್ಧ ನಡೆದ ದಂಗೆಯ ಸಂದರ್ಭದಲ್ಲಿ ಕೋಟೆಗೆ ಇನ್ನಷ್ಟು ಹಾನಿಯಾಯಿತು. ದಂಗೆ ವಿಫಲವಾದ ನಂತರ, ಎರಡನೇ ಬಹದ್ದೂರ್ ಶಾ ಕೋಟೆಯನ್ನು ತೊರೆದು ಪರಾರಿಯಾಗುವ ಪ್ರಯತ್ನ ನಡೆಸಿದ. ಬ್ರಿಟಿಷ್ ಪಡೆಗಳು ಆತನನ್ನು ಬಂಧಿಸಿದವು. ೧೮೫೮ ರಲ್ಲಿ ವಿಚಾರಣೆ ನಡೆದು, ಅದೇ ವರ್ಷ ಆತನನ್ನು ರಂಗೂನಿಗೆ ಗಡಿಪಾರು ಮಾಡಲಾಯಿತು. ಕೋಟೆಯ ಹಿಡಿತ ಸಂಪೂರ್ಣ ಬ್ರಿಟಿಷರ ಕೈಗೆ ಲಭಿಸಿತು. ಬ್ರಿಟಿಷರು ಕೋಟೆಯ ಅರಮನೆಯಿಂದ ಬೆಲೆಬಾಳುವ ವಸ್ತುಗಳನ್ನು ಲೂಟಿ ಮಾಡಲು ಅನುಮತಿ ನೀಡಿದರು. ಎಲ್ಲಾ ಪೀಠೋಪಕರಣಗಳನ್ನು ತೆಗೆದುಹಾಕಲಾಯಿತು ಅಥವಾ ನಾಶಪಡಿಸಲಾಯಿತು. ದುಬಾರಿ ವಸ್ತುಗಳನ್ನು ಲೂಟಿ ಮಾಡಿ ಮಾರಾಟ ಮಾಡಲಾಯಿತು.
ಭಾರತಕ್ಕೆ ಸ್ವಾತಂತ್ರ್ಯ ಲಭಿಸುವವರೆಗೂ ಬ್ರಿಟಿಷರು ಅಲ್ಲಿನ ಸಂಪತ್ತನ್ನು ಲೂಟಿ ಮಾಡುತ್ತಾ, ಅರಮನೆಯನ್ನು ಕೆಡವುವ ಮತ್ತು ನವೀಕರಿಸುವ ಕೆಲಸವನ್ನು ಮಾಡುತ್ತಲೇ ಇದ್ದರು. ಸ್ವಾತಂತ್ರ್ಯಾನಂತರ ಮೊದಲ ಧ್ವಜಾರೋಹಣವನ್ನು ಇಲ್ಲಿಯೇ ನಡೆಸುವ ಮೂಲಕ ಭಾರತ ಸರ್ಕಾರವು ಕೆಂಪು ಕೋಟೆಯನ್ನು ತನ್ನ ವಶಕ್ಕೆ ತೆಗೆದುಕೊಂಡಿತು.
೨೦೦೦ ನೇ ಸಾಲಿನಲ್ಲಿ ಕೆಂಪು ಕೋಟೆಯನ್ನು ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಿತು.
ಭಾರತದ ಸಾರ್ವಭೌಮತ್ವದ ಪ್ರತೀಕದಂತಿರುವ ಈ ಕೋಟೆಯನ್ನು ಸರ್ಕಾರವು ಜತನದಿಂದ ಕಾಪಾಡುತ್ತಾ ಬಂದಿದೆ. ಆದರೆ ೨೦೦೦ ನೇ ಸಾಲಿನ ಡಿಸೆಂಬರ್ ೨೨ ರಂದು ಧ್ವನಿ ಬೆಳಕಿನ ಪ್ರದರ್ಶನ ನೋಡಲು ಬರುವ ಪ್ರೇಕ್ಷಕರಂತೆ ಕೋಟೆಯೊಳಗೆ ನುಸುಳಿದ್ದ ಲಷ್ಕರ್ ಎ ತೋಯ್ಬಾ ಸಂಘಟನೆಯ ಉಗ್ರರು ಕೋಟೆಯೊಳಗೆ ದಾಳಿ ನಡೆಸಿದ್ದರಿಂದ ಇಬ್ಬರು ಯೋಧರು ಹಾಗೂ ಒಬ್ಬ ನಾಗರಿಕ ಮೃತಪಟ್ಟಿದ್ದರು. ೨೦೧೯ ರಲ್ಲಿ ಸಿಎಎ ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಯುತ್ತಿದ್ದಾಗ ಕೆಂಪು ಕೋಟೆಯ ಸುತ್ತ ೧೪೪ ನೇ ಸೆಕ್ಷನ್ ಅಡಿ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಕೋಟೆಯನ್ನು ಪ್ರವೇಶಿಸಲು ಮುಂದಾದ ಕೆಲವು ಪ್ರತಿಭಟನಾಕಾರರನ್ನು ಬಂಧಿಸಿದ್ದರು.
- ಶಿವಕುಮಾರ್ ಬಾಣಾವರ (ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಕೆಪಿಸಿಲ್ )
