ಸಂಬಂಧಗಳನ್ನು ಬಗೆದು ನೋಡಿದರೆ ಒಳಗೆಲ್ಲ ಟೊಳ್ಳು… ಸಂಬಂಧಗಳ ಕುರಿತು ಡಾ. ಲಕ್ಷ್ಮಣ ಕೌಂಟೆ ಅವರು ಬರೆದ ಸುಂದರ ಕವನ, ಮುಂದೆ ಓದಿ…
ಹೌದಲ್ಲವೆ..!!
ಎಲ್ಲ ಸಂಬಂಧಗಳು
ತೋರಿಕೆಗಷ್ಟೇ!!
ಬಗೆದು ನೋಡಿದರೆ
ಒಳಗೆಲ್ಲ ಟೊಳ್ಳು..
ಅವರಾದರೂ
ಏನು ಮಾಡಿಯಾರು
ಲೋಕದ ವರ್ತನೆಯೇ
ಹಾಗಾಗಿದೆಯಲ್ಲ ಈಗ..!!
ಮಾನ ಮಾಪನಕ್ಕೆ
ಸಜ್ಜನಿಕೆ ಪ್ರೀತಿ ಪ್ರೇಮಗಳು
ಅಳತೆಗೋಲಲ್ಲ ಈ ಕಾಲದಲ್ಲಿ
ಹಣವೊಂದೇ ಮಾನದಂಡ..
ಕಾಸು ಬೇಕು ಎಂದರೆ
ಎಲ್ಲ ವ್ಯವಹಾರಗಳಲ್ಲೂ
ಲೆಕ್ಕಾಚಾರ ಚೌಕಾಸಿ ಇದ್ದದ್ದೇ..
ಸಂಬಂಧಗಳನ್ನು
ತೋರಿಕೆಗೇ ನಿಭಾಯಿಸುವವರು ಬಹಳ
ಎಲ್ಲೋ ಸಿಗುತ್ತಾರೆ
ಸಾವಿರಕ್ಕಾದರೂ ಒಬ್ಬರು
ಮನಸಾರೆ ಪ್ರೀತಿಸುವವರು
ಆಗಾಗ ಸ್ಮರಿಸುತ್ತಲೇ ಇರುವವರು
ಅವರ ನೋಡಿಯಾದರೂ
ಬದುಕುವುದು ಬೇಕಲ್ಲ…
ಸಾವು ಬಂದಾಗ ಹೋಗುವುದಂತೂ
ಇದ್ದೇ ಇದೆಯಲ್ಲ
ಮರಣದ ನಂತರ
ಜನಕ್ಕಾಗಿಯಾದರೂ ಅವರು
ಮಾಡಿಕೊಳ್ಳಲಿ ತಿಥಿ-ಮತಿ..
ಸುಮ್ಮನಿದ್ದು ಬಿಡುವುದು
ನಮ್ಮಷ್ಟಕ್ಕೆ ನಾವು
ನಮಗೆ ಬೇಕಾದವರ ಸ್ಮರಿಸುತ್ತ
- ಡಾ. ಲಕ್ಷ್ಮಣ ಕೌಂಟೆ (ಕವಿ, ಲೇಖಕರು, ಉಪನ್ಯಾಸಕರು) ಕಲಬುರಗಿ.
