ಗ್ರಾಮೀಣ ಪ್ರದೇಶದ ಭತ್ತ ಬೆಳೆಯುವವರೂ ಕಡಿಮೆಯಾದಂತೆ ಅಕ್ಕಿ ಗಿರಣಿಗಳು ಬಾಗಿಲು ಮುಚ್ಚಿದವು. ಈ ಉದ್ಯಮದಲ್ಲಿ ಮೂರು ತಲೆಮಾರಿನ ಅನುಭವ ಹೊಂದಿರುವ ಅರುಣ ಪ್ರಸಾದ್ ಅವರು ರೈಸ್ ಮಿಲ್ ಕಣ್ಮರೆಯಾದ ಬಗ್ಗೆ ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಓದಿ…
ಆಗೆಲ್ಲ ರೈಸ್ ಮಿಲ್ ಮಾಡುವುದು ಸುಲಭವಲ್ಲ 10 ಕಿ ಮಿ ವ್ಯಾಪ್ತಿಯಲ್ಲಿ ಒಂದು ರೈಸ್ ಮಿಲ್ ಇದ್ದರೆ ಇನ್ನೊ೦ದು ಕೊಡುವ ಹಾಗಿರಲಿಲ್ಲ. ನಿರ್ದಿಷ್ಟ ಎಕರೆ ಪ್ರದೇಶಕ್ಕೆ ಮಾತ್ರ ಮತ್ತು ಸ್ಥಳಿಯ APMC ನಿರಾಕ್ಷೇಪಣ ಪತ್ರ APMC ಅದರ ಸಭೆಯಲ್ಲಿ ತೀಮಾ೯ನಿಸಿ ನೀಡಿದ ನಂತರ ತಹಸೀಲ್ದಾರ್, ಎಸಿಯವರಿಂದ ಕಡತ ಜಿಲ್ಲಾಧಿಕಾರಿಗೆ ಅಲ್ಲಿ ಅವರು ಶಿಪಾರಸ್ಸು ಮಾಡಿ ಬೆಂಗಳೂರಿಗೆ ಕಳಿಸಿ ಅಲ್ಲಿ ಸಂಬಂಧ ಪಟ್ಟ ಆಹಾರ ಇಲಾಖೆ ಲೈಸೆನ್ಸ್ ನೀಡುತ್ತಿತ್ತು. ಆಗ ಈ ಪರಿ ಲಂಚ ಇರಲಿಲ್ಲ. ಕಾನೂನು ಪಾಲಿಸುತ್ತಿದ್ದರು. ಈಗ ಈ ರೀತಿ ಲೈಸೆನ್ಸ್ ಬೇಕಾಗಿಲ್ಲ, ಯಾರೂ ಅಕ್ಕಿ ಗಿರಣಿ ಪ್ರಾರಂಭಿಸಬಹುದು.
1910 ರಲ್ಲಿ ನಮ್ಮ ಅಜ್ಜಿ ಜನರನ್ನು ಇಟ್ಟುಕೊಂಡು ಒನಕೆಯಲ್ಲಿ ಭತ್ತ ಕುಟ್ಟಿಸಿ, ಕೇರಿಸಿ, ಸಾಣಿಸಿ ಸ್ಥಳಿಯರಿಗೆ ಅಕ್ಕಿ ಮಾಡಿಕೊಡುತ್ತಿದ್ದರಂತೆ, ನಮ್ಮ ತಂದೆ ಮಹಾರಾಷ್ಟ್ರದ ಥಾನ ಜಿಲ್ಲೆಯಿಂದ ಮಿನಿ ಅಕ್ಕಿ ಗಿರಣಿ ( ಶೆಲ್ಲರ್ & ಪಾಲಿಶರ್ ) ತರಿಸಿದ್ದರು. ನಂತರ ಇದಕ್ಕೆ ನಮ್ಮ ತಂದೆ ಗೆಳೆಯರಾದ ರೈಸ್ ಮಿಲ್ ಮೆಕಾನಿಕ್ ಹಮೀದ್ ಸಾಬರು (ನಂತರ ಅವರು ಆನ೦ದಪುರದ ಸುಬ್ಬಣ್ಣ ನಾಯಕರ ರೈತ ಬಂದು ಅಕ್ಕಿ ಮತ್ತು ಅವಲಕ್ಕಿ ಗಿರಣಿಯಲ್ಲಿ ಅನೇಕ ಹೊಸ ಯಂತ್ರ ಮಾಡಿದರು) ಭತ್ತದ ನೆಲ್ಲು ಬೇರೆ ಮಾಡುವ, ನುಚ್ಚು ಸಾಣಿಸುವ ವ್ಯವಸ್ಥೆ ಮಾಡಿದ್ದರು. ಆಗ ನಮ್ಮ ಭಾಗದಲ್ಲಿ 5 kg ಭತ್ತ ತಂದು ಅಕ್ಕಿ ಮಾಡಿಕೊಂಡುವ ಅನುಕೂಲ ಈ ನಮ್ಮ ಅಕ್ಕಿ ಗಿರಣಿ 1975 ರಿಂದ 1985 ರ ತನಕ ಕಾರ್ಯ ನಿವ೯ಹಿಸಿತು.
ನಂತರ ಹಾನಗಲ್ ನಿಂದ Godke ಕಂಪನಿಯ ಸೆಕೆಂಡ್ ಹ್ಯಾಂಡ್ ರೈಸ್ ಮಿಲ್ ಖರೀದಿ ಮಾಡಿ ತಂದಿದ್ದೆ. ಆದರೆ ಆ ಸಮಯದಲ್ಲಿ ಬಿನ್ನಿ ಅಕ್ಕಿ ಗಿರಣಿಯ ಬೇಡಿಕೆ ರೈತರಲ್ಲಿದ್ದರಿಂದ ಮಿನಿ ಬಿನ್ನಿ ಮಿಲ್ ಹೊಸದು ಅಳವಡಿಸಿದೆ. 1990 ರಲ್ಲಿ ಅದನ್ನು ತೆಗೆದು ದಾಂಡೇಕರ್ No 6 ದೊಡ್ಡ ಅಕ್ಕಿ ಗಿರಣಿ ಹಾಕಿದೆ 1998 ರವರೆಗೆ ನಡೆಸಿದ್ದೆ.
ನಾನು, ನಮ್ಮಣ್ಣ ಸ್ವತಃ ಡ್ರೈವರ್, ಮೆಕಾನಿಕ್, ಹಮಾಲಿ ಎಲ್ಲಾ ಕೆಲಸ ಕಲಿತೆವು. ಕಾರಣ ಕೆಲಸಗಾರರು ಅಸಹಕಾರದಿಂದ. ಇದೆಲ್ಲ ಪತ್ರಕರ್ತರಾದ ರಾಘವೇಂದ್ರ ಶಮಾ೯ ತಾಳಗುಪ್ಪದ ರೈಸ್ ಮಿಲ್ ಮೆಕ್ಯಾನಿಕ್ ಲಕ್ಷ್ಮಿನಾರಾಯಣರ ಬಗ್ಗೆ ಬರೆದ ಲೇಖನ ಓದಿದಾಗ ಬೆಳ್ಳಂಬೆಳಗ್ಗೆ ನಮ್ಮ ಕುಟುಂಬದ ಅಕ್ಕಿ ಉದ್ಯಮದ ತಲೆಮಾರು ಬಗ್ಗೆ ತಿರುಗಿ ನೋಡುವಂತಾಯಿತು.
ಅಕ್ಕಿ ಗಿರಣಿಗಳಲ್ಲಿ ಎರಡು ವಿಧಧ ವ್ಯವಹಾರವಿದೆ. ಸ್ವತಃ ಅಕ್ಕಿ ತಯಾರಿಸಿ ಮಾರಾಟ ಮಾಡುವವರ ವ್ಯವಹಾರ. ಇನ್ನೊಂದು ರೈತರು ತರುವ ಭತ್ತ ಅಕ್ಕಿ ಮಾಡಿಕೊಡುವ ಜಾಬ್ ವರ್ಕ್.
ಆ ಕಾಲದಲ್ಲಿ ಕೃಷಿ ಕಾರ್ಮಿಕರಿಗೆ ಒಂದು ಸೇರು ಅಕ್ಕಿ ಕಡ್ಡಾಯವಾಗಿ ಕೊಟ್ಟು ಅದರ ಮೇಲೆ ಇಂತಿಷ್ಟು ಹಣ ಅಂತ ಕೂಲಿ ಪಡೆಯುತ್ತಿದ್ದರು. ಆದ್ದರಿಂದ ಜಮೀನು ತೋಟದ ಮಾಲೀಕರು ಕೃಷಿ ಕಾರ್ಮಿಕರಿಗಾಗಿ ಅಕ್ಕಿ ಮಾಡಿಸಲೇ ಬೇಕಾಗಿತ್ತು ಮತ್ತು ಇದಕ್ಕಾಗಿ ಭತ್ತ ಬೆಳೆಯಲೇ ಬೇಕಾಗಿತ್ತು.
ನಂತರದ ದಿನದಲ್ಲಿ ನೀರಾವರಿ ಪ್ರದೇಶದಲ್ಲಿ ಸೋನಾ ಮಸ್ಸೂರಿ ತಳಿ ಮಾಡಿದ ಕಮಾಲು ಇಡೀ ರಾಜ್ಯದ ಚಿತ್ರಣ ಬದಲಿಸಿತು. ಅತಿ ಹೆಚ್ಚು ಗೊಬ್ಬರ ಕೀಟ ನಾಶಕ ಬಳಕೆ ಮತ್ತು ಯಥೇಚ್ಚ ನೀರು, ಅತಿ ಹೆಚ್ಚು ಇಳುವರಿ, ಎರೆಡು ಬೆಳೆಗಳು ಈ ಭಾಗದಲ್ಲಿ ಭತ್ತದ ಉತ್ಪಾದನೆ ಹೆಚ್ಚಿಸಿತು, ಈ ಭತ್ತದಿಂದ ಅತಿ ಹೆಚ್ಚು ಪಾಲೀಶ್ ಮಾಡಿದ ಅಕ್ಕಿ ( ಸ್ಟೀಮ್) ಯಿಂದ ತಯಾರಾಗುವ ಅಕ್ಕಿ ಮಲ್ಲಿಗೆಯಂತೆ ಬಿಳುಪು ಮತ್ತು ಬಿಡಿಬಿಡಿಯಾಗಿ ಅನ್ನದ ತಟ್ಟೆಗೆ ಹೊಸ ಮೆರಗು ನೀಡಿದ್ದರಿಂದ ಕೂಲಿ ಕಾರ್ಮಿಕರು ಜಮೀನ್ದಾರರು ನೀಡುತ್ತಿದ್ದ. ಕಡಿಮೆ ಪಾಲೀಶಿನ (ಬುಲ್ಡಾಗ್ ) ಅಕ್ಕಿ ಬೇಡ ಅನ್ನಲು ಪ್ರಾರಂಭಿಸಿದರು, ಆಕಾಲದಲ್ಲಿ ಕಡಿಮೆ ಪಾಲಿಶಿನ ಅಕ್ಕಿ ಜನ ಬಳಸುತ್ತಿದ್ದರು ಮತ್ತು ಕಡಿಮೆ ಪಾಲೀಶ್ ಅಕ್ಕಿ 100 ಕೇಜಿ ಭತ್ತಕ್ಕೆ 70 ರಿಂದ 72 ಕೇಜಿ ಅಕ್ಕಿ ಬರುತ್ತಿತ್ತು, ಪಾಲೀಶ್ ಹೆಚ್ಚು ಮಾಡಿದರೆ 60 ರಿಂದ 67 ಕೆಜಿ ಅಕ್ಕಿ (ಉಳಿದದ್ದು ತೌಡು) ಬರುತ್ತದೆ, ಕೆಲ ದುರಾಶೆಯ ಭೂ ಮಾಲೀಕರು ಸ್ವಲ್ಪವೂ ಪಾಲೀಶೇ ಇಲ್ಲದ ಅಕ್ಕಿ ಕೂಲಿ ಕಾಮಿ೯ಕರಿಗೆ ನೀಡುವ ಉದಾಹರಣೆಯೂ ಇತ್ತು.
ಈ ರೀತಿ ನಿತ್ಯ ಅಕ್ಕಿ ನಿರಾಕರಿಸಿ ಕೂಲಿ ಪೂರ್ಣ ಹಣ ರೂಪದಲ್ಲಿ ಪಡೆದು ಅಂಗಡಿಗಳಿಂದ ಅಕ್ಕಿ ಖರೀದಿಸಿ ತರುವ ಬದಲಾವಣೆಯಿಂದ ಭತ್ತ ಬೆಳೆಯಲೇ ಬೇಕಾದ ಅನಿವಾರ್ಯತೆ ಇಲ್ಲವಾಗಿ ಭತ್ತದ ಗದ್ದೆ ತೋಟವಾಯಿತು, ಅಕ್ಕಿ ಗಿರಣಿಗಳು ಖಾಲಿ ಹೊಡೆಯಿತು ನಂತರದಲ್ಲಿ ಭತ್ತ ಬೆಳೆಯುವ ಸಣ್ಣ ರೈತರು ಭತ್ತ ಮಾರಾಟ ಮಾಡಿ ಅಂಗಡಿಯಿಂದ ಪಾಲೀಶ್ ಅಕ್ಕಿ ಖರೀದಿಸಲು ಪ್ರಾರಂಭಿಸಿದರು. ಅಕ್ಕಿ ಮಾಡಿಸಿದರೆ ಅದರ ಉಪ ಉತ್ಪನ್ನ ನುಚ್ಚು – ನೆಲ್ಲು – ತೌಡು ಮನೆಯ ಪಶು ಸಂಗೋಪನೆಗೆ, ಕುರಿ ಕೋಳಿಗೆ ನೀಡುತ್ತಿದ್ದರು. ಮೈಕ್ರೋ ಕುಟುಂಬ ವ್ಯವಸ್ಥೆಯಲ್ಲಿ ಮನೆ ಬಾಗಿಲಿಗೆ ಡೈರಿ ಹಾಲು, ಪ್ರತಿ ಹಳ್ಳಿಯಲ್ಲಿ ಚಿಕನ್ ಸ್ಟಾಲ್ ಬಂದಿದ್ದರಿಂದ ಈ ಉಪ ಉತ್ಪನ್ನ ವಿಲೇವಾರಿ ಕಷ್ಟ ಸಾಧ್ಯವಾದ್ದರಿಂದ ಗಂಗಾವತಿಯ ಅಕ್ಕಿಗೆ ಬೇಡಿಕೆ ಬಂತು.
ಹಾಗಾಗಿ ಗ್ರಾಮೀಣ ಪ್ರದೇಶದ ಅಕ್ಕಿ ಗಿರಣಿಗಳು ಬಾಗಿಲು ಹಾಕಬೇಕಾಯಿತು ಇದು ನನ್ನ ಸ್ವಂತ ಅನುಭವ, ಇದೇ ರೀತಿ ಮಲೆನಾಡಿನ ಭತ್ತದ ತಳಿಗಳ ಕಾರಣದಿಂದ ಈ ಭತ್ತದ ಅಕ್ಕಿಗೆ ಬೇಡಿಕೆ ಇಲ್ಲದ್ದರಿಂದ ವ್ಯಾಪಾರಸ್ಥರು ಅಕ್ಕಿ ಗಿರಣಿ ಮುಚ್ಚಿದರು.
ಈಗ ಪುನಃ ಕಡಿಮೆ ಪಾಲೀಶ್ ನ ಅಕ್ಕಿ, ದೇಶಿ ತಳಿಗಳಿಗೆ ಕ್ರಮೇಣ ಬೇಡಿಕೆ ಬರುತ್ತಿದೆ, ನಾಟಿ ಕೋಳಿ ಸಾಕಾಣಿಕೆ ಮತ್ತು ದೇಶಿ ಪಶು ಸಂಗೋಪನೆಗಳು ಆರೋಗ್ಯ ದೃಷ್ಟಿಯಿಂದ ಹೆಚ್ಚಾಗುತ್ತಿದೆ ಅದಕ್ಕೆ ತಕ್ಕ ಹಾಗೆ ಅತಿ ಸಣ್ಣ ಡೊಮೆಸ್ಟಿಕ್ ಅಕ್ಕಿ ಗಿರಣಿ, ಹಿಟ್ಟಿನ ಗಿರಣಿಗಳು ಮಾರುಕಟ್ಟೆಯಲ್ಲಿರುವುದರಿಂದ ಕೇವಲ 80 ವರ್ಷದಲ್ಲಿ ಉತ್ತುಂಗ ಸ್ಥಿತಿಯನ್ನು ತಲುಪಿದ್ದ ಅಕ್ಕಿ ಗಿರಣಿ ಜಮಾನ ಮುಗಿದು ಹೋಯಿತು.
ನಿತ್ಯ ಬೆಳಗಿನಿಂದ ಸಂಜೆಯವರೆಗೆ ಆನಂದಪುರಂ ಹೋಬಳಿ, ಪಕ್ಕದ ಹೊಸನಗರ ತಾಲ್ಲೂಕಿನ ನವಟೂರು, ಹಾಲಗುಡ್ಡೆ, ಮಾದಾಪುರ, ಬಟ್ಟೆ ಮಲ್ಲಪ್ಪ, ಹರತಾಳು, ಶಿವಮೊಗ್ಗ ತಾಲ್ಲೂಕಿನ ತುಪ್ಪೂರು, ಚೋಡನಹಳ್ಳ ಮತ್ತಿತರ ಹಳ್ಳಿ ರೈತರ ಒಡನಾಟದಲ್ಲಿ ಕಳೆಯುತ್ತಿದ್ದ ಕಾಲ, ಅವರ ಅರ್ಜಿ, ಕ್ರಯ ಪತ್ರ, ಹಿಸ್ಸೆ ಪತ್ರ, ರಾಜಿ ಪತ್ರ ಉಚಿತವಾಗಿ ಬರೆಯುವ ಕೆಲಸಗಳಿಂದ ಅವರೆಲ್ಲರ ಕುಟುಂಬ ಅಕ್ಕಿ ಗಿರಣಿಯ ಗ್ರಾಹಕ ಮಾತ್ರ ಅಲ್ಲದ ಆಪ್ತ ಸಂಬಂದವಾಗಿತ್ತು
ಇದೆಲ್ಲ ಈಗ ನೆನಪು, 1998 ರಲ್ಲಿ ನಾನು ಅಕ್ಕಿ ಗಿರಣಿ ವ್ಯವಹಾರ ತ್ಯಜಿಸಿ ಹೊಟ್ಟೆಪಾಡಿಗಾಗಿ ಬೇರೆ ಉದ್ಯೋಗಕ್ಕೆ ಡಿವೀಯೇಷನ್ ತೆಗೆದುಕೊಂಡೆ, ಅನೇಕ ರೈಸ್ ಮಿಲ್ ಗಳು ಈ ರೀತಿ ಬಾಗಿಲು ಮುಚ್ಚಿದವು.
- ಅರುಣ ಪ್ರಸಾದ್