ಮಧ್ಯಪ್ರದೇಶದ ಮಹೇಶ್ವರ ಪಟ್ಟಣದಲ್ಲಿನ ಮಹೇಶ್ವರ ಘಾಟ್’ನಲ್ಲಿ ಪ್ರತಿನಿತ್ಯ ಸಾವಿರ ಮಣ್ಣಿನ ಲಿಂಗಗಳ ಪೂಜೆ ನೆರವೇರುತ್ತದೆ. ಮಹೇಶ್ವರ ಘಾಟ್ ಕುರಿತು ಡಾ.ಪ್ರಕಾಶ ಬಾರ್ಕಿಯವರು ಬರೆದ ಮಹತ್ವಪೂರ್ಣ ಲೇಖನ ಓದುಗರ ಮುಂದಿದೆ. ತಪ್ಪದೆ ಓದಿ…
ಹೌದು..!! ಇಂತಹದೊಂದು ಪವಿತ್ರ ಆಚರಣೆ ಇರುವುದು ನರ್ಮದೆಯ ದಡದ ಪ್ರದೇಶವೊಂದರಲ್ಲಿ.
ಭಾರತದ ಎಲ್ಲ ಪವಿತ್ರ ನದಿಗಳಲ್ಲಿ ನರ್ಮದಾ ನದಿಯು ಅತಿ ಪ್ರಮುಖವಾದದ್ದು ಎಂಬ ನಂಬಿಕೆ ಇದೆ. ಗಂಗಾ ನದಿಗೆ ತಾನು ಅಶುದ್ಧಳಾಗಿದ್ದೇನೆ ಎಂದು ಎನಿಸಿದಾಗ, ಅದು ಕಪ್ಪು ಆಕಳ ರೂಪವನ್ನು ಹೊಂದಿ ರಾತ್ರಿಯ ಸಮಯದಲ್ಲಿ ನರ್ಮದಾ ನದಿಗೆ ಬಂದು ಸ್ನಾನ ಮಾಡಿ ಶುದ್ಧಳಾಗುತ್ತಾಳೆ ಎಂಬ ನಂಬಿಕೆ ಗಹನವಾಗಿದೆ. ಅಂತಹ ಪರಮ ಪುಣ್ಯ ಮಾತೆಯ ದಂಡೆಯಲ್ಲಿನ ಮಹೇಶ್ವರ ಪಟ್ಟಣದಲ್ಲಿನ (ಮಧ್ಯಪ್ರದೇಶ), ಮಹೇಶ್ವರ ಘಾಟ್’ನಲ್ಲಿ ನಿತ್ಯ ಸಾವಿರ ಮಣ್ಣಿನ ಲಿಂಗಗಳ ಪೂಜೆ ನೆರವೇರುತ್ತೆ.

“ಮಹೇಶ್ವರ್ ಘಾಟ್” ನ ಪುರಾತನ ಹೆಸರೇ “ಮಾಹಿಷ್ಮತಿ”.
ಬಾಹುಬಲಿ ಸಿನಿಮಾದಲ್ಲಿ ಬಳಸಿರುವ ಮಾಹಿಷ್ಮತಿ ಹೆಸರೂ ಇದೆ, ಮುಂದೆ ಮಾಹಿಷ್ಮತಿ ಪದ ಜನಬಳಕೆಯಿಂದ ಮಹೇಶ್ವರ್ ಆಗಿದೆ ಅನ್ನುತ್ತೆ ಇತಿಹಾಸ. ಇತಿಹಾಸವೇನೇ ಇರಲಿ ಒಮ್ಮೆ ನೋಡಲೇಬೇಕಾದ ಸ್ಥಳ ಮಹೇಶ್ವರ್ ಘಾಟ್.
ಮಹೇಶ್ವರ ಘಾಟ್”ನ ನಿರ್ಮಾಣದ ಹಿಂದಿನ ಚೇತನ ಅಹಲ್ಯಾಬಾಯಿ ಹೋಳ್ಕರ್.

ಚಿಕ್ಕ ವಯಸ್ಸಿನಲ್ಲೇ ಹೋಳ್ಕರ್ ಮನೆತನದ ಸೊಸೆಯಾಗುವ ಈಕೆ ಗಂಡನನ್ನೂ ,ಮಾವನನ್ನೂ, ಮಗನನ್ನೂ ಕೆಲವು ದಿನಗಳ ಅಂತರದಲ್ಲೇ ಕಳೆದುಕೊಂಡು ಸಾಮ್ರಾಜ್ಯದ ಚುಕ್ಕಾಣಿ ಹಿಡಿಯ ಬೇಕಾಗುತ್ತದೆ. ರಾಜಧಾನಿಯಾಗಿದ್ದ ಇಂದೋರ್ ಅನ್ನು ಸುರಕ್ಷಿತವಲ್ಲ ಎಂದು ಭಾವಿಸಿ ನರ್ಮದಾ ತೀರದ ಮಹೇಶ್ವರ್ ಗೆ ಬಂದು ಅಲ್ಲಿ ತನ್ನ ವಾಸಕ್ಕೆ ಭವನ , ಮಹೇಶ್ವರ್ ಘಾಟ್ ಹಲವಾರು ದೇವಾಲಯಗಳನ್ನು ಕಟ್ಟಿಸಿದಳು. ಅಷ್ಟೇ ಅಲ್ಲದೆ ತಾನೇ ನಿರ್ಮಿಸಿದ ಈಶ್ವರನ ದೇಗುಲದಲ್ಲಿ ಆಕೆ ಪ್ರಾರಂಭಿಸಿದ ಲಿಂಗಾರ್ಚನ ಪೂಜೆ ವಿಶೇಷವಾಗಿದೆ. ಆಗಿನ ಕಾಲಕ್ಕೆ ಮಹೇಶ್ವರದಲ್ಲಿ 1.10 ಲಕ್ಷ ಜನರಿದ್ದರಂತೆ ಪ್ರತಿದಿನ 111 ಅರ್ಚಕರು ಪ್ರತಿಯೊಬ್ಬರೂ 1000 ಲಿಂಗಗಳನ್ನು ಹೊಲದ ಮಣ್ಣಿನಿಂದ ಮಾಡಿ ಪೂಜಿಸುತ್ತಿದ್ದರಂತೆ ಅದೂ ಬೆಳಿಗ್ಗೆ 8.30 ರಿಂದ 9.30 ರ ಒಳಗೆ ಆಶ್ಚರ್ಯವೆಂದರೆ ಈಗಲೂ ಈ ಪೂಜೆ ನಡೆದುಕೊಂಡು ಬಂದಿದೆ. ಪ್ರತಿದಿನ 11 ಅರ್ಚಕರು ಪ್ರತಿಯೊಬ್ಬರೂ 1000 ಲಿಂಗಗಳನ್ನು ಮಾಡಿ ಪೂಜಿಸುತ್ತಾರೆ. ಅಹಲ್ಯಾಬಾಯಿ ಹೋಳ್ಕರ್ ಇದೇ ತರಹ ನೂರಾರು ಘಾಟ್ ಗಳು ಸಾವಿರಾರು ದೇವಾಲಯಗಳು ನಿರ್ಮಿಸಿದ್ದಾರೆ.

ವ್ಯಾಪಾರ ಅಭಿವೃದ್ಧಿಗೆ ರಸ್ತೆಗಳು ಮುಖ್ಯ ಎಂದು ಅರಿತಿದ್ದ ಅಹಲ್ಯಾಬಾಯಿ ಮಹೇಶ್ವರ ತಲುಪುವ ಎಲ್ಲಾ ರಸ್ತೆಗಳನ್ನೂ ಉತ್ತಮವಾಗಿ ನಿರ್ಮಿಸಿದ್ದಳು. ಸ್ತ್ರೀ ಸ್ವಾತಂತ್ರ್ಯ ಕ್ಕೂ ಅವರ ಕೊಡುಗೆ ದೊಡ್ಡದು. ಇಲ್ಲಿನ ಮಹೇಶ್ವರಿ ಸೀರೆಗಳು ಬಹಳ ಪ್ರಸಿದ್ಧಿ ಈ ಸೀರೆಗಳು ನೇಯುವ ನೇಕಾರರನ್ನು ಆಗಿನ ಕಾಲಕ್ಕೇ ಆಕೆ ಹೈದರಾಬಾದ್ ನಿಂದ ಕರೆಸಿಕೊಂಡಿದ್ದಳು. ಆ ಉದ್ಯಮ ಈಗಲೂ ನಡೆಯುತ್ತಿದೆ. 1767ರಿಂದ 1795 ರವರೆಗೂ ಹೋಳ್ಕರ್ ರಾಜ್ಯವನ್ನು ವ್ಯವಸ್ಥಿತವಾಗಿ ಆಳಿದ ಈಕೆಯ ಕೆಲಸಗಳು ನೂರಾರು.

ಮಹೇಶ್ವರ್ ಘಾಟ್, ಸುತ್ತಲೂ ಹಸಿರು, ವಿಸ್ತಾರವಾದ ನರ್ಮದಾ ನದಿ, ದೋಣಿಯಾನ , ಆಗಾಗ ನಡೆಯುವ ಸಿನಿಮಾ ಶೂಟಿಂಗ್ ಗಳು, ಧಾರ್ಮಿಕ ಆಚರಣೆಗಳು ನಮ್ಮ ಮನಸ್ಸನ್ನು ಮಂತ್ರಮುಗ್ಧಗೊಳಿಸುತ್ತವೆ.
- ಡಾ. ಪ್ರಕಾಶ ಬಾರ್ಕಿ (ವೈದಕೀಯ ಬರಹಗಾರರು, ಆಯುರ್ವೇದ ವೈದ್ಯರು) , ಕಾಗಿನೆಲೆ
