‘ಶ್ವೇತ ಮಹಲ್’ ಕಾದಂಬರಿ ಪರಿಚಯ –  ರೇಶ್ಮಾಗುಳೇದಗುಡ್ಡಕರ್

ಹಿರಿಯ ಲೇಖಕಿ ವೈ ಕೆ ಸಂಧ್ಯಾ ಶರ್ಮ ಅವರ ‘ಶ್ವೇತ ಮಹಲ್’ ಕಾದಂಬರಿ ಸಾಮಾಜಿಕ ನಿಗೂಢ ಕಾದಂಬರಿಯಾಗಿದ್ದು ಅದರ ಕುರಿತು ರೇಶ್ಮಾಗುಳೇದಗುಡ್ಡಕರ್ ಅವರು ಬರೆದಿರುವ ಪುಸ್ತಕ ಪರಿಚಯವನ್ನು ತಪ್ಪದೆ ಮುಂದೆ ಓದಿ…

ಕೃತಿ: ಶ್ವೇತ ಮಹಲ್ (ಕಾದಂಬರಿ )
ಲೇಖಕರು: ವೈ. ಕೆ. ಸಂಧ್ಯಾ ಶರ್ಮ
ಪ್ರಕಾಶಕರು: ವ್ಯಾಸ ಪಬ್ಲಿಕೇಶನ್ಸ್, ಬೆಂಗಳೂರು
ಬೆಲೆ:₹ 163/

ಹಿರಿಯ ಲೇಖಕಿ ವೈ ಕೆ ಸಂಧ್ಯಾ ಶರ್ಮ ಅವರ ‘ಶ್ವೇತ ಮಹಲ್’ ಕಾದಂಬರಿ ಸಾಮಾಜಿಕ ನಿಗೂಢ ಕಾದಂಬರಿಯಾಗಿದೆ. ಕಾದಂಬರಿಯ ಆರಂಭದಲ್ಲಿ ಹರೆಯದ ಇಬ್ಬರು ಯುವತಿಯರು ಬದುಕಿನ ಅದ ಅನಿರೀಕ್ಷಿತ ದಾಳಿಗೆ ತತ್ತರಿಸಿದರು, ನೋವನ್ನು ನುಂಗಿಕೊಂಡು ತಮ್ಮ ತಮ್ಮ ಹಾದಿಯಲ್ಲಿ ಸಾಗುವ ತೀರ್ಮಾನವನ್ನು ಮಾಡುತ್ತಾರೆ. ಸಬಲರಾದ ಯುವ ಪಾತ್ರವನ್ನು ಸೃಷ್ಟಿಸುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ.

ಹೇಮಾ, ಸುಗಂಧಿಯಿಂದ ಆರಂಭವಾದ ಕಾದಂಬರಿ ಹಂತ ಹಂತವಾಗಿ ಬೃಹದಾಕಾರವಾಗಿ ಬೆಳೆಯುತ್ತಾ ಹೋಗುತ್ತದೆ. ಶ್ವೇತ ಮಹಲ್ ಎಂಬ ಮನೆಯ ಸುತ್ತಲಿನ ಪರಿಸರಕ್ಕೆ
ಭೂಗರ್ಭಶಾಸ್ತ್ರ ದಲ್ಲಿ ಸ್ನಾತಕೋತ್ತರ ಪದವೀಧರೆ ಯಾಗಿದ್ದು ಹೆಚ್ಚಿನ ಸಂಶೋಧನೆಗಾಗಿ ಬಂದ ಹೇಮಾ ನಿಗೂಢವಾಗಿ ಕಣ್ಮರೆಯಾಗುತ್ತಾಳೆ. ಅಲ್ಲಿವರೆಗೂ ಓದುವರಿಗೂ ಶ್ವೇತಾ ಮಹಲ್ ಹೇಮಾಳ ಪತ್ರದ ಮೂಲಕವೇ ಪರಿಚಯವಾಗಿರುತ್ತದೆ.

ಅಕ್ಕನ ನಿಗೂಢ ಕಣ್ಮರೆಯಿಂದ ಸುಗಂಧಿ ಕಂಗೆಟ್ಟರು ಧೃತಿಗೆಡದೆ ಛಲದಿಂದ ಅವಳನ್ನು ಪತ್ತೆಮಾಡಲು ಅಕ್ಕ ನ ಜಾಡ ಹಿಡಿದು ವರದಪುರ ಮತ್ತು ಕಾಡುಮಲೆ ದುರ್ಗಾ ದತ್ತ ಪ್ರಯಾಣ ಬೆಳೆಸುತ್ತಾಳೆ. ಆಗ ಪರಿಚಯವಾಗುವ ವರದಾಪುರದ ಸೌಂದರ್ಯ ಓದುಗನ ಮನಸ್ಸನ್ನು ತಂಪಿಡುತ್ತವೆ. ತದನಂತರ ರಭಸದಿಂದ ಸಾಗುವ ಕಾದಂಬರಿಯಲ್ಲಿ ಕುಮುದಾ ಬಾಯಿ,ಭಗೀರಥಮ್ಮ ಹನುಮಕ್ಕ, ಆಶಾ,ಸಿಂಧು ಎಂಬ ಸ್ತ್ರೀ ಪಾತ್ರಗಳು, ಮತ್ತು ಪ್ರದೀಪ,ದೇಸಾಯಿ ಎಂಬ ಬಗೆಬಗೆಯ ಪಾತ್ರಗಳು ಬರುತ್ತವೆ ಈ ಎಲ್ಲ ಪಾತ್ರಗಳನ್ನು ಅವುಗಳ ಗುಣವಿಶೇಷತೆಯೊಂದಿಗೆ ಸೃಷ್ಟಿಸುವಲ್ಲಿ ಲೇಖಕಿಯವರ ಅಪಾರ ಬದುಕಿನ ಅನುಭವ ಕಾದಂಬರಿಯಲ್ಲಿ ದಟ್ಟವಾಗಿ ಕಾಣಸಿಗುತ್ತದೆ.

ಕಾದಂಬರಿ ಮುಕ್ಕಾಲು ಭಾಗ ಮುಗಿದಿದ್ದರೂ ಸಹ ಹೇಮಳ ಸುಳಿವು ಕಾಣುವುದಿಲ್ಲ ಅವಳನ್ನು ಹುಡುಕಿಕೊಂಡು ಬಂದ ಸುಗಂಧಿಯ ಉತ್ಸಾಹವು ಕುಂದಿರುವುದಿಲ್ಲ, ಕಣ್ಣುಗಳು ದುರ್ಬ್ಬಿನ್ನುಗಳಾಗಿವೆ, ಮೈಯೆಲ್ಲಾ ಕಿವಿಯಾಗಿವೆ, ತಲೆ ಜೇನುಗೂಡಾಗಿತ್ತು ಎಂಬೆಲ್ಲ ವಾಕ್ಯಗಳು ಕುತೂಹಲವನ್ನು ಹಾಗೂ ಓದಿನ ಸೊಗಸನ್ನು ಹೆಚ್ಚಿಸಿ ಓದುಗರನ್ನು ಕಾತರದಿಂದ ಕಾದಿಡುತ್ತದೆ.

ಕಾದಂಬರಿ ಹಲವಾರು ತಿರುವುಗಳನ್ನು ಕಾಣುತ್ತದೆ.ಸೆಳೆತ, ಪ್ರೀತಿ,ಮೋಹ, ಲಾಲಸೆ, ದುರಾಸೆ, ಕಪಟ ಮೋಸ,ವಂಚನೆ ನಿಧಾನವಾಗಿ ಸುರುಳಿಯಂತೆ ಬಿಚ್ಚಿಕೊಂಡು ಯಾವ ಸುಳಿವು ನೀಡದಂತೆ ಸಾಗುತ್ತದೆ, ಇವೆಲ್ಲವುಗಳ ನಡುವೆಯೂ ಸುಗಂಧಿ ಯಾವುದಕ್ಕೂ ವಿಚಲಿತಳಾಗದೆ, ಎಂತಹ ಆತಂಕಕ್ಕೂ ಎದೆಗುಂದದೆ ತನ್ನ ಸ್ಫೂರ್ತಿಯ ಕಳೆದುಕೊಳ್ಳದೆ ಅಕ್ಕನ ಹುಡುಕುವ ಪ್ರಯತ್ನ ಮುಂದುವರಿಸುತ್ತಾಳೆ ತನ್ನ ವೀಣಾವಾದನದ ಸಂಗತ್ಯದೊಂದಿಗೆ. ಈ ಆಶಾವಾದಿಯಾದ ಪಾತ್ರ ಓದುಗರನ್ನು ಸೆಳೆಯುತ್ತದೆ.

ಶ್ವೇತ ಮಹಲ್ ಲೇಖಕಿ ವೈ. ಕೆ. ಸಂಧ್ಯಾ ಶರ್ಮ

ಪ್ರದೀಪ್, ದೇಸಾಯಿ, ಇವರುಗಳ ಮೇಲೆ ಕರೀನೆರಳು ಬಂದರೂ ಮತ್ತು ಶ್ವೇತ ಮಹಲ್ ಹೊರನೋಟಕ್ಕೆ ಮನಮೋಹಕವಾಗಿ ಕಂಡರು ತನ್ನೊಳಗೆ ಭೀಕರ ಗಾಢಅಂಧಕಾರವನ್ನು ತುಂಬಿಕೊಂಡಿರುತ್ತದೆ. ಕಾಣುವುದೆಲ್ಲ ಸತ್ಯ ಅಲ್ಲ ಎಂಬುದು ಲೇಖಕಿ ಮಾರ್ಮಿಕವಾಗಿ ಹೇಳಿದ್ದಾರೆ. ಕಾದಂಬರಿ ರಭಸವಾಗಿ ಹರಿದು ತೆರವಾಗಿ ಹರಡಿಕೊಂಡು ದಿಗ್ಗನೆ ಮುಕ್ತಾಯವಾದಂತೆ ಗೋಚರವಾಗುತ್ತದೆ.

ಗುಣ ಅರಿಯಲು ರೂಪ ಎಂದಿಗೂ ಮಾನದಂಡವಲ್ಲ ಎಂಬುದು,ಅಸ್ತಿ-ಅಂತಸ್ತುಗಳ ಮೋಹ ದುರಂತ ಅಂತ್ಯಕ್ಕೆ ಕಾರಣ ವಾಗುತ್ತವೆ ಎಂಬ ಐಹಿತ್ಯ ಸುದೀಪ್, ಪ್ರದೀಪ್, ದೇಸಾಯಿ, ಆಶಾಳ ಪಾತ್ರಗಳು ಮನೋಜ್ಞವಾಗಿ ಚಿತ್ರೀಸಿವೆ.


  •  ರೇಶ್ಮಾಗುಳೇದಗುಡ್ಡಕರ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading