ತೊಟ್ಟಿಲು ತೋಗುವ ಕೈ ದೇಶವನ್ನು ಆಳಬಹುದು ಎನ್ನುವ ಮಾತು ಇದೆ. ಆದರೆ ಇಲ್ಲೊಂದು ಮಹಿಳಾ ಕ್ಲಬ್ ಚೈನ್ವರ್ಕ್ ಮೂಲಕ ಮಹಿಳಾ ಸಬಲೀಕರಣದ ಮೂಲಕ ಬಹು ದೊಡ್ಡ ಸಾಧನೆ ಮಾಡುತ್ತಿದೆ ಅದೇ ಬಾಗಲಕೋಟೆ ಜಿಲ್ಲೆಯ ಮುದೋಳ ಪಟ್ಟಣದ ಸ್ನೇಹಲೋಕ ಲೇಡಿಸ್ ಕ್ಲಬ್. – ಟಿ.ಶಿವಕುಮಾರ್, ಮುಂದೆ ಓದಿ…
2010 ರಲ್ಲಿ ಆರಂಭಗೊಂಡ ಈ ಕ್ಲಬ್ ಇಲ್ಲಿಯವರೆಗೆ ಐದು ಸಾವಿರಕ್ಕೂ ಹೆಚ್ಚು ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮತ್ತು ಶ್ರಮಜೀವಿಗಳನ್ನಾಗಿ ಮಾಡಿದೆ ಇಷ್ಟೇ ಅಲ್ಲಾ ಇದರೊಂದಿಗೆ ಇನ್ನು ಅನೇಕ ಮಹಿಳೆಯರನ್ನು ಬೆಳೆಸುತ್ತಿದೆ. ಸರ್ಕಾರದ ಯಾವುದೇ ಅನುದಾನ ಸಹಾಯವಿಲ್ಲದೇ ಈ ಕ್ಲಬ್ ಕಾರ್ಯ ಮಾಡುತ್ತಿದೆ ಇದಕ್ಕೆಲ್ಲ ದೊಡ್ಡ ಶಕ್ತಿಯಾಗಿ ನಿಂತಿರುವವರು ಖುದ್ಧು ತಾನೇ ಶೋಷಣೆಗೆ ಒಳಗಾಗಿ ಅದೆಲ್ಲವನ್ನೂ ಸವಾಲಾಗಿ ತೆಗೆದುಕೊಂಡು. ಏಕಾಂಗಿ ಹೋರಾಟ ಮಾಡುತ್ತಿರುವ ಛಲಗಾರ್ತಿ ಸ್ನೇಹಾ ಹಿರೇಮಠ ಎಂಬ ಮಹಿಳೆ.
ಬಾಲ್ಯದಿಂದಲೂ ಕಷ್ಟಗಳಲ್ಲಿಯೇ ಬೆಳೆದಿರುವ ಸ್ನೇಹಾ ಮದುವೆ ನಂತರ ಹೊಲಿಗೆ ಕಲಿತರು. ಬಳಿಕ ಬಟ್ಟೆಗಳನ್ನು ಹೊಲಿಯುತ್ತ ತಾವೇ ಇತರರಿಗೆ ಹೊಲಿಗೆ ಕಲಿಸಲು ಆರಂಭಿಸಿದರು ಆದರೆ ಇವರಲ್ಲಿ ತರಬೇತಿಗೆ ಬರುತ್ತಿದ್ದ ಕೆಲ ಮಹಿಳೆಯರು ತುಂಬಾ ಬಡವರಿದ್ದರು ಶುಲ್ಕವನ್ನು ತುಂಬಲು ಆಗುತ್ತಿರಲಿಲ್ಲ. ಅಂತವರಿಂದ ಶುಲ್ಕವನ್ನು ಪಡೆಯದೇ ಹೀಗಾಗಿ ಇಂತಹ ಸಂಕಷ್ಟದಲ್ಲಿರುವ ಮಹಿಳೆಯರು ಹೊರಗಡೆ ಕೂಲಿ ಕೆಲಸಕ್ಕೆ ಹೋಗಿ ಶೋಷಣೆಗೆ ಒಳಗಾಗುವುದನ್ನು ತಡೆಯಬೇಕು ಎಂದು ಚಿಂತಿಸಿದಾಗ ಸ್ನೇಹಲೋಕ ಲೇಡಿಸ್ ಕ್ಲಬ್ ಎಂಬ ಪರಿಕಲ್ಪನೆ ಮೂಡಿತು. ಈ ಕ್ಲಬ್ನ ಕಾರ್ಯದಿಂದ ಇಂದು ಮುದೋಳದಲ್ಲಿ ಅನೇಕ ಹೋಲಿಗೆ ತರಬೇತಿ ಕೇಂದ್ರಗಳು ನಡೆಯುತ್ತಿವೆ. ಇನ್ನು ಅನೇಕರು ಮುದೋಳದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸ್ವ ಉದ್ಯೋಗ ತರಬೇತಿ ನೀಡುತ್ತಿದ್ದಾರೆ. ಬಡವರ ಮನೆ ಹೆಣ್ಣು ಮಕ್ಕಳಿಗಾಗಿ ಉಚಿತವಾಗಿ ಕಸೂತಿ, ಕ್ಯಾಂಡಲ್ ತಯಾರಿಕೆ, ಹ್ಯಾಂಡ್ ಪರ್ಸ, ಗೊಂಬೆ ತಯಾರಿಕೆ, ಮುತ್ತಿನ ಅಲಂಕಾರ, ಮೆಹಂದಿ, ಬ್ಯೂಟಿಷಿಯನ್ ಸೇರಿದಂತೆ ಅನೇಕ ಸ್ವ ಉದ್ಯೋಗ ತರಬೇತಿ ನೀಡುತ್ತಾರೆ.
ಸ್ನೇಹಾ ಅವರು ಓದಿದ್ದು 8 ನೇ ತರಗತಿ ಜೀವನದಲ್ಲಿ ಬಂದ ಕಷ್ಠಗಳಿಗೆ ಹೆದರಿ ಆತ್ಮಹತ್ಯೆಗೆ ಯತ್ನಿಸಿ ಪುನರ್ಜನ್ಮ ಪಡೆದು ಅಲ್ಲಲ್ಲಿ ಕೆಲಸವನ್ನು ಮಾಡಿ ಸ್ನೇಹಿತರಿಂದ ಸಾಲ ಪಡೆದು ಪುಟ್ಟ ಅಂಗಡಿಯನ್ನು ಇಟ್ಟುಕೊಂಡು ಜೀವನದಲ್ಲಿ ಮೇಲೆ ಬಂದವರು. ಜೀವನದ ಜಂಜಾಟದ ಮಧ್ಯೆಯು ಬಾಹ್ಯವಾಗಿ ಎಸ್ ಎಸ್ ಎಲ್ ಸಿ ಪಾಸು ಮಾಡಿಕೊಂಡು ಎನ್ ಟಿ ಸಿ ಕೋರ್ಸ್ ಮುಗಿಸಿದ ಪರಿಣಾಮವಾಗಿಯೇ ಇಂದು ಸಾವಿರಾರು ಮಹಿಳೆಯರಿಗೆ ಸ್ವ ಉದ್ಯೋಗದ ದಾರಿ ತೋರಿಸಿದ್ದಾರೆ.
ಬಾಲ್ಯವಿವಾಹ ತಡೆ ಜಾಗೃತಿಗಾಗಿ ಮನೆ ಮನೆಗೆ ಭೇಟಿ ನೀಡುತ್ತಾರೆ, ರಕ್ತದಾನ ಶಿಬಿರಗಳನ್ನೂ ನಡೆಸುತ್ತಾರೆ, ಪ್ರಕೃತಿ ವಿಕೋಪಗಳು ಸಂಭವಿಸಿದಾಗ ತಮ್ಮ ದುಡಿಮೆ ಸ್ವಲ್ಪ ಹಣವನ್ನು ಸಂಗ್ರಹಿಸಿ ಸಂತ್ರಸ್ತರ ಪರಿಹಾರ ನಿಧಿಗೆ ನೀಡುತ್ತಾ ಬಂದಿದ್ದಾರೆ. ಮುದೋಳದಲ್ಲಿ ಯಾವುದೇ ಸಭೆ-ಸಮಾರಂಭ ಅಥವಾ ಮದುವೆಗಳಲ್ಲಿ ಊಟ ಮತ್ತು ಉಪಹಾರ ಉಳಿದರೆ ನೇರವಾಗಿ ಸ್ನೇಹಲೋಕ ಲೇಡಿಸ್ ಕ್ಲಬ್ನ ನಂಬರ್ ಗೆ ಕರೆ ಹೋಗುತ್ತದೆ. ಆಹಾರ ಭದ್ರತೆ ಕಾಯಿದೆ ಇನ್ನೂ ನಮ್ಮಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ಬಂದಿಲ್ಲ ಆದರೆ ಮುದೋಳದಂತಹ ಸಣ್ಣ ಪಟ್ಟಣದಲ್ಲಿ ಮಾತ್ರ ಅಚ್ಚುಕಟ್ಟಾಗಿ ನಡೆಯುತ್ತಿದೆ. ಈ ಕ್ಲಬ್ ಮದುವೆ ಹಾಗೂ ಮತ್ತಿತರ ಸಮಾರಂಭಗಳಲ್ಲಿ ಉಳಿಯುವ ಅಡುಗೆಯನ್ನು ಸಂಗ್ರಹಿಸಿ ಸ್ಲಂ ನಿವಾಸಿಗಳಿಗೆ ಹಾಗೂ ಕೂಲಿ ಕಾರ್ಮಿಕರಿಗೆ ವಿತರಿಸುತ್ತಾರೆ. ಇದಕ್ಕಾಗಿಯೇ ಭಿತ್ತಿ ಪತ್ರಗಳ ಮೂಲಕ ಪ್ರಚಾರ ಮಾಡಿದ್ದಾರೆ.
ಮುದೋಳದಲ್ಲಿರುವ ಮದುವೆ ಮಂಟಪಗಳ ಪ್ರತಿಯೊಂದು ಭೋಜನಾಲಯದಲ್ಲಿಯೂ ಆಹಾರ ಉಳಿದರೆ ಈ ಸಂಖ್ಯೆಗೆ ಕರೆ ಮಾಡಿ ಎಂದು ಫಲಕ ಹಾಕಿದ್ದಾರೆ. ಕ್ಲಬ್ನ ಎಲ್ಲ ಸದಸ್ಯರು ಸೇರಿಕೊಂಡು ಪಟ್ಟಣದ ಬೀದಿಗಳನ್ನು ತಿಂಗಳಿಗೊಂದು ಬಾರಿ ಸ್ವಚ್ಚತೆಗೊಳಿಸುತ್ತಾರೆ. ಕ್ಲಬ್ ಆರಂಬಿಸಿದ್ದು ಸ್ನೇಹಾ ಆದರೂ ಯಾವತ್ತೂ ಇವರು ಸಂಸ್ಥಾಪಕಿ ಎಂದುಕೊಂಡಿಲ್ಲ ಈ ಕ್ಲಬ್ನಲ್ಲಿ ಯಾವೋಬ್ಬ ಪದಾಧಿಕಾರಿಯೂ ಇಲ್ಲ. ಇಲ್ಲಿ ಎಲ್ಲರೂ ಸಮಾನರೂ. ಇವರ ಇಂಥ ಒಂದು ಸಮಾಜಿಕ ಕಾರ್ಯಕ್ಕೆ ಹ್ಯಾಟ್ಸ ಆಫ್ ಇರಲಿ.
- ಟಿ.ಶಿವಕುಮಾರ್ – ಲೇಖಕರು ಮೂಲತಃ ದಾವಣಗೇರೆ ಜಿಲ್ಲೆ ಹರಿಹರ ತಾಲೂಕಿನ ಗಡಿ ಗ್ರಾಮ ಹಾಲಿವಾಣ. ಪ್ರಸ್ತುತ ಹಾವೇರಿ ಜಿಲ್ಲೆ ಹಾನಗಲ್ಲ ತಾಲೂಕಿನ ಲಕ್ಷ್ಮೀಪುರ ಗೊಲ್ಲರ ಬಿಡಾರ ಸ.ಕಿ. ಪ್ರಾ ಶಾಲೆಯಲ್ಲಿ ಸಹ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು. ಚಿಕ್ಕದಿಂನಿಂದಲೇ ಬರೆಯುವ ಗೀಳನ್ನು ಹಚ್ಚಿಕೊಂಡು ಈಗ ಅನೇಕ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಿದ್ದಾರೆ. ಲಕ್ಷ್ಮೀಪುರ ಬಿಡಾರ, ತಾ. ಹಾನಗಲ್ಲ ಜಿ. ಹಾವೇರಿ.
