ವರ್ತಮಾನದ ತಲ್ಲಣ, ಸ್ತ್ರೀ ಸಂವೇದನೆಯ ಪ್ರತಿಧ್ವನಿ (ಭಾಗ೩)

ಸಮಾಜದಲ್ಲಿ ಹೆಣ್ಣು ಮತ್ತು ಹೆಣ್ಣಿನ ಸುತ್ತ ಇರುವ ವ್ಯವಸ್ಥೆಯನ್ನು, ಅಲ್ಲಿರುವ ಕಟ್ಟುಪಡುಗಳು, ಟೀಕೆಗಳು ಹಾಗೂ ತಾವು ಅವುಗಳನ್ನು ಮೀರಿ ಬದುಕು ಕಟ್ಟಿಕೊಂಡ ಬಗೆಯನ್ನು ತಮ್ಮದೇ ಆದ ದನಿಯಲಿ ಮಹಿಳೆಯರು ಅವಲೋಕಿಸಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದನ್ನು ರೇಷ್ಮಾ ಗುಳೇದಗುಡ್ಡಕರ್ ಅವರು ತಮ್ಮ ಲೇಖನಿಯಲ್ಲಿ ಹೆಣ್ಣಿನ ಧ್ವನಿಯನ್ನು ಓದುಗರ ಮುಂದಿಟ್ಟಿದ್ದಾರೆ, ತಪ್ಪದೆ ಮುಂದೆ ಓದಿ…

  • ಧ್ವನಿ : ಮಹಾದೇವಿ ಅಂಕಲಗಿಮಠ, ಸಾಮಾಜಿಕ ಕಾರ್ಯಕರ್ತೆ, ಬೆಳಗಾವಿ

ಹೆಣ್ಣು ಬದುಕಿನ ತಲ್ಲಣಗಳು ಒಂದೆರಡಲ್ಲ. ಹೆಣ್ಣು ಬದುಕಿನ ಕಣ್ಣು ಎಂದು ಹೇಳುತ್ತಲೇ ನಮ್ಮ ಕಣ್ಣಿಗೆ ನೋವು ನೀಡುತ್ತಾರೆ. ಭಾವನೆಗಳಿಗೆ ಬೇಲಿಗಳನ್ನು ಹಾಕುತ್ತಾರೆ. ಇವುಗಳನ್ನೆಲ್ಲವನ್ನು ದಾಟಿಕೊಂಡು ಸ್ವಾವಲಂಬನೆಯಿಂದ ಬದುಕನ್ನು ಕಟ್ಟಿಕೊಳ್ಳುವುದು ಸುಲಭವಲ್ಲ. ಹೆಜ್ಜೆ ಹೆಜ್ಜೆಗೂ ಅಲ್ಲಿ ಸವಾಲುಗಳು?!. ಇವೆಲ್ಲ ಮೆಟ್ಟಿ ಬಂದರೂ ಅವಳನ್ನು ಒಂದು ಚೌಕಟ್ಟಿನಲ್ಲಿ ಬಂಧಿಸಲು ಸಮಾಜ ಸದಾ ಪ್ರಯತ್ನಿಸುತ್ತದೆ!?. ಪ್ರಜ್ಞಾವಂತ ಮನೋಭಾವನೆ ಇಲ್ಲದೆ ಟೀಕಿಸಿ, ಆಡಿಕೊಳ್ಳುವುದರಿಂದ ಸಮಾಜಕ್ಕಾಗಲಿ ಅಥವಾ ಜನಪ್ರತಿನಿಧಿಗಳಿಗಾಗಲಿ ಏನು ಬದಲಾವಣೆ ಕಾಣುತ್ತಾರೆ?.

ಅಂತರಾಷ್ಟ್ರೀಯ ಮಹಿಳಾ ದಿನದಂದೇ ಸಂಸದರಿಗೆ ಎಲ್ಲಿ ಹೇಗೆ? ಏನನ್ನು ಪ್ರಶ್ನೆ ಮಾಡಬೇಕು ಎಂಬ ಕನಿಷ್ಠ ಜ್ಞಾನವು ಇಲ್ಲ ವರ್ತಿಸುವ ಸಂಸದರು ? ಇಂತವರಿಂದ ನಾವು ಯಾವ ಸೇವೆ ನಿರೀಕ್ಷೆ ಮಾಡಬೇಕು? ಇವರು ಸಂಸದರು ಹೇಗೆ ಆಗುತ್ತಾರೆ?

ಇಷ್ಟೆಲ್ಲಾ ನಡೆದರು ಅವರ ಮೇಲೆ ಕ್ರಮವಿಲ್ಲ. ಹಾಗೂ ಕನಿಷ್ಠ ಪಕ್ಷ  ಕ್ಷಮೆಯನ್ನು ಕೇಳಿಲ್ಲ. ಇದು ನಿರ್ಲಕ್ಷವೇ? ಅಥವಾ ಪುರುಷ ಪ್ರಧಾನ ವ್ಯವಸ್ಥೆಯ ಪ್ರತಿನಿಧಿತ್ವವೇ? ಅಥವಾ ಕಾನೂನು ಸುವ್ಯವಸ್ಥೆ ನೇಪಥ್ಯಕ್ಕೆ ಸರಿದಿರುವುದಕ್ಕೆ ಹಿಡಿದ ಕೈಗನ್ನಡಿಯೇ?. ಹೆಣ್ಣು ಮನೆ ಕೆಲಸ ಮಾಡಲು ಬೇಕು, ಆಫೀಸ್ ಕೆಲಸ ಮಾಡಲು ಬೇಕು ಕೊನೆಗೆ ಮತದಾನ ಮಾಡಲು ಬೇಕೇ ಬೇಕು. ಆದರೆ ಅವಳಿಗೆ ರಕ್ಷಣೆ, ಭದ್ರತೆ, ಸಾಮಾಜಿಕ ಸ್ಥಾನಮಾನ ಬೇಡ ಎಂಬ ಧೋರಣೆ ಎಷ್ಟು ಸರಿ?

ಹೆಣ್ಣು ಮಕ್ಕಳನ್ನು ವೈಯಕ್ತಿಕವಾಗಿ ಪ್ರಶ್ನಿಸುವವರಿಗೆ :

*ತಮ್ಮ ಕ್ಷೇತ್ರಗಳಲ್ಲಿ ಹೆಣ್ಣುಮಕ್ಕಳ ಸ್ಥಿತಿಗತಿಗಳು ಹೇಗಿದೆ? ಯಾವ ಸುಧಾರಣೆಯಾಗಿದೆ?
*ಎಷ್ಟು ಶಾಲೆಗಳು ಕಾಲೇಜುಗಳಲ್ಲಿ ಹೆಣ್ಣು ಮಕ್ಕಳು ಹಾಜರಿದ್ದಾರೆ?
* ಪುಟ್ಟ ಮಕ್ಕಳು ಮತ್ತು ಗರ್ಭಿಣಿಯರ ಆರೋಗ್ಯ ಅವರ ಪೌಷ್ಟಿಕ ಮಟ್ಟ ಕುರಿತು ಮಾಹಿತಿ ಇದೆಯೇ?
*ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಣ್ಣು ಮಕ್ಕಳಿಗೆ ಯಾವ ರೀತಿಯಾದ ಸೌಲಭ್ಯವಿದೆ?
* ಸರ್ಕಾರಿ ಕಚೇರಿಯಲ್ಲಾಗಲಿ ಖಾಸಗಿ ಸಂಸ್ಥೆಗಳ್ಳಾಗಲಿ ಮಹಿಳೆಯರಿಗೆ ಸೂಕ್ತ ಮೂಲ ಸೌಕರ್ಯ ನೀಡಿರುವ ಬಗ್ಗೆ ಮಾಹಿತಿ ಇದೆಯಾ?
* ಅಲ್ಲಿ ನಡೆಯುವ ದೌರ್ಜನ್ಯ, ಹಿಂಸೆಗೆ ಮಹಿಳೆಗೆ ಯಾವ ನಾಯಕರಾಗಲಿ, ಜನಪ್ರತಿನಿದಿನಗಳಾಗಲಿ ಗಮನ ಹರಿಸಿದ್ದಾರಾ?

ಇನ್ನೂ ಕೇಳಲು ಹಲವಾರು ಪ್ರಶೆಗಳು ಇವೆ :
ಮಾಡಲು ಬೇಕಾದಷ್ಟು ಕೆಲಸಗಳಿವೆ ಅವುಗಳನ್ನೆಲ್ಲ ನಿರ್ಲಕ್ಷಿಸಿ ಕ್ಷುಲ್ಲಕ ಪ್ರಶ್ನೆ ಮಾಡಿಕೊಂಡು ಓಡಾಡುವ ಎಲ್ಲಾ ಜನಪ್ರತಿನಿಧಿಗಳು, ಸಂಸದರದರೂ ಮೊದಲು ತಮ್ಮ ಕಾರ್ಯ ವೈಖರಿಯನ್ನು ಪ್ರಶ್ನಿಸಿಕೊಂಡು ಕ್ಷೇತ್ರದ ಜನತೆಗೆ ಉತ್ತರಿಸಲಿ.

ಭಾರತಕ್ಕೆ ಸ್ವಾತಂತ್ರ ಬಂದು 75 ವರ್ಷಗಳ ಅಮೃತ ಮಹೋತ್ಸವವನ್ನು ಆಚರಿಸಿಕೊಂಡರು, ಇನ್ನೂ ಮೂಲ ಸೌಕರ್ಯಗಳಾಗಲಿ ಹಾಗೂ ಸೂಕ್ತ ಸಾರಿಗೆ ವ್ಯವಸ್ಥೆ ಪಡೆಯಲು ಆಗದೆ ಜನ ಸಮುದಾಯ ನಿತ್ಯವು ಪರಿತಪಿಸುತ್ತಿದೆ. ಮತ್ತೊಂದೆಡೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಈ ಬಗ್ಗೆ ಚರ್ಚೆ ಮಾಡಲು ಯಾರಿಗೂ ಸಮಯವಿಲ್ಲ. ಆದರೆ ಹೆಣ್ಣನ್ನು ಅವಳ ಸ್ವಾಭಿಮಾನವನ್ನು ಪ್ರಶ್ನಿಸಲು ಸಮಯವಿದೆ..!?

ಇಂಥ ಜನಪ್ರತಿನಿಧಿಗಳಿಂದ ನಮ್ಮ ದೇಶದ ಉದ್ಧಾರ ಸಾಧ್ಯವೇ? ಎಂಬುದನ್ನು ಜನತೆ ತೀರ್ಮಾನ ಮಾಡಲಿ. ಹೆಣ್ಣು ಬದುಕಿನ ಪ್ರಶ್ನೆಗಳಿಗೆ ಮೊದಲು ಉತ್ತರಿಸಲಿ.

****

  • ಧ್ವನಿ : ಕಾವ್ಯಾದೇವರಾಜ್,  ಬೆಂಗಳೂರು

ಮಹಿಳಾ ದಿನದಂದು ಹೆಣ್ಣನ್ನು ಹೊಗಳಿ ಸಂಭ್ರಮಿಸುತ್ತಾರೆ. ಅವಳು super women ಎಂದು ಕರೆದು ಗುಣಗಾನ ಮಾಡುತ್ತಾರೆ. ಇರಲಿ, ಆದರೆ ಈ super women, ಕ್ಷಮೆಯಾ ಧರಿತ್ರಿ ಎಂಬ ಹಣೆ ಪಟ್ಟಿಯನ್ನು ಹೊತ್ತು ಕೊಂಡವರ ಒಡಲ ದುಗುಡಗಳು, ಸಮಸ್ಯೆಗಳು ಏನೆಂಬುದನ್ನು ಅರಿಯಲು ಯಾರೋ ಪ್ರಯತ್ನ ಮಾಡುವದಿಲ್ಲ.

ಅವರು ಉದ್ಯೋಗಿಯಾಗಿದ್ದರು ಸರಿ ಅಥವಾ ಗೃಹಿಣಿಯಾದರೂ ಸರಿ, ಬೆಳಿಗ್ಗೆಯಿಂದಲೇ ಆರಂಭವಾದ ಅವಳ ಕೆಲಸಗಳು ಮುಗಿಯುವುದೇ ಇಲ್ಲ. ಉದ್ಯೋಗ ಮುಗಿಸಿ ಮನೆಗೆ ಬಂದಾಗ ಕೆಲಸದ ರಾಶಿ ಕೈ ಬಿಸಿ ಕರೆಯುತ್ತಿರುತ್ತದೆ. ಇನ್ನೆಲ್ಲಿಯ ವಿರಾಮ?. ವಿರಾಮ ಎಂಬುದು ಅವಳೇ ಪಡೆದುಕೊಳ್ಳಬೇಕಷ್ಟೆ. ಇವುಗಳನ್ನು ಮೀರಿ ಸಾಧಿಸಲು ಹೊರಟಾಗ ಕನಿಷ್ಠ ನಮಗೆ ಅವಳ ಹೊಗಳದಿದ್ದರೂ ಬೇಡ. ಅವಳ ಪಾಡಿಗೆ ಅವಳನ್ನು ಬಿಟ್ಟರೆ ಸಾಕಾಗಿರುತ್ತದೆ.

ಅದ್ರಲ್ಲೂ single mother ಎಂದರೆ ಅವಳಿಗೆ ಯಾರ ಬೆಂಬಲವು ಇರುವದಿಲ್ಲ. ಕುಟುಂಬ , ಸಮಾಜ ಎಲ್ಲವು ಸಂಘಟಿತರಾಗಿ ಅವಳನ್ನು ಪ್ರಶ್ನಿಸುತ್ತಾರೆ. ಅವಳನ್ನು ಗಂಡುಬೀರಿ, ಘಟವಾಣಿ ಎಂದು ಜರಿಯುತ್ತಾರೆ. ಹೆಜ್ಜೆ ಹೆಜ್ಜೆಗೂ ರುಜುವಾತು ಕೇಳುತ್ತಾರೆ. ಆದರೆ ಈ ನಿಯಮಗಳು ಗಂಡಿಗೆ ಇಲ್ಲ. ಆತ ಸಂಪೂರ್ಣ ಸ್ವತಂತ್ರ….! ಹೆಂಡತಿ, ಮಕ್ಕಳು ಇದ್ದರು, ಇಲ್ಲದಿದ್ದರೂ ಆತ ಸರ್ವ ಸ್ವತಂತ್ರನಾಗಿ ಬದುಕಲು ಸಮಾಜ ಯಾವ ಅಡ್ಡಿ ಮಾಡುವುದಿಲ್ಲ.

ಹೆಣ್ಣಿಗೆ ಮಾತ್ರ ಮಕ್ಕಳಿಗಾಗಿ ಅಥವಾ ತಂದೆ ತಾಯಿಯ ಮರ್ಯಾದೆಯ ಸಲುವಾಗಿ ಆದರೂ ಗಂಡನ ಜೊತೆ ಒಗ್ಗಿಕೊಂಡು ಬಾಳಲಾಗಲಿಲ್ಲವೇ? ಎಂದು ಪ್ರಶ್ನಿಸುವುದನ್ನು ಮಾತ್ರ ಮರೆಯುವುದಿಲ್ಲ.

ಹೆಣ್ಣು ಮಕ್ಕಳು ಎಲ್ಲವನ್ನು ಸಹಿಸಿಕೊಂಡು ಹೋಗಬೇಕು ಎಂಬ ಬೋಧನೆ ಹಾಗೂ ಹೆಣ್ಣು ಮಕ್ಕಳು ಯಾವಾಗಲೂ ತಗ್ಗಿ- ಬಗ್ಗಿ ಬಾಳಬೇಕು ಎಂಬ ಉಚಿತ ಸಲಹೆ ಎಲ್ಲಾ ದಿಕ್ಕಿನಿಂದ ಅವಳಿಗೆ ಬುದ್ಧಿ ಬಂದಾಗಲಿಂದಲೂ ಕೇಳುತ್ತಲೇ ಇರುತ್ತಾಳೆ.

ಇವೇಲ್ಲ ಬದಿಸರಿಸಿ ಶಿಕ್ಷಣ, ಉದ್ಯೋಗ ಎಂಬ ಮಾರ್ಗಗಳ ಮೂಲಕ ಮಕ್ಕಳ ಜವಾಬ್ದಾರಿಯನ್ನು ಅವಳು ನಿಭಾಯಿಸಿ ತನ್ನು ತಾನು ಕಂಡುಕೊಂಡರೇ ಸಹ ಅವಳಿಗೆ ಒಂಟಿ, ಪರಿತ್ಯಕ್ತೆ, ಎಂಬುದನ್ನು ಮೊದಲು ಮಾಡಿ ಮಾತನಾಡುತ್ತಾರೆ. ಅವಳು ಸಾಮಾನ್ಯ ಹೆಣ್ಣಾದರೆ ಸರಿಯೇ, ಚಿತ್ರ ನಟಿ ಯಾದರೂ ಸರಿಯೇ ಹಾಗೂ ದೊಡ್ಡ ಹುದ್ದೆಯೆಲ್ಲಿದ್ದರು ಈ ಮಾತುಗಳಿಗೆ ಬಾಣ ಅವಳು ತಪ್ಪಿಸಿಕೊಳ್ಳಲು ಈ ಆಧುನಿಕ ಯುಗದಲ್ಲೂ ಸಾಧ್ಯವಿಲ್ಲ.

ಇಂತಹ ಸಂಕಷ್ಟದಲ್ಲಿರುವ ಎಷ್ಟು ಹೆಣ್ಣು ಸ್ವಾವಲಂಬನೆಯಾಗಿ ಬದುಕನ್ನು ಕಟ್ಟಿಕೊಂಡು ಸಾಗಿಸುತ್ತಿರುವ ಇವರುಗಳೇ ನನ್ನ ಬದುಕಿಗೆ ನಿಜವಾದ ಸ್ಫೂರ್ತಿ. ನನ್ನ ಸಾಧನೆ ಏನು ಅಲ್ಲ ಅವರುಗಳು ಮುಂದೆ ಎಂದು ಸದಾ ಅನಿಸುತ್ತದೆ. ಇನ್ನೂ ಹೆಣ್ಣು ಸ್ಥಾನಮಾನ ಕುಟುಂಬದಲ್ಲಿ ಆಗಲಿ ರಾಜಕೀಯದಲ್ಲಾಗಲಿ ಒಂದು ಅವಳ ಹಕ್ಕುಗಳನ್ನು ನಮ್ಮ ಸಮಾಜ ಅಂದುಕೊಂಡಿರುವಷ್ಟು ಸ್ವಭಾವಿಕವಾಗಿ ಪಡೆಯಲು ಆಗುತ್ತಿಲ್ಲ. ಮಹಿಳೆಯರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ, ಯುವತಿಯರ ಸಂಖ್ಯೆಯು ಹೆಚ್ಚಾದ್ರೂ ರಾಜಕೀಯ ಮೀಸಲಾತಿ ಇಂದಿಗೂ ಕೇವಲ 33%. ನೀಡಬೇಕು ಬೇಕು ಎಂಬುದು ಎಷ್ಟು ಸರಿ?.

ಇನ್ನಾದರೂ ಮಹಿಳಾ ದಿನಾಚರಣೆ ಎಂಬುದು ತೋರಿಕೆಗೆ ಮತ್ತು ಆ ದಿನಕ್ಕೆ ಮಾತ್ರ ಸೀಮಿತವಾಗದೆ, ಕುಟುಂಬ ಮತ್ತು ಸಮಾಜದ ಪ್ರತಿಯೊಬ್ಬ ಹೆಣ್ಣು ಮಗುವಿಗೂ ಇರುವ ಅವಳದೇ ಆದ ಕನಸುಗಳಿಗೆ ರೆಕ್ಕೆ ಕಟ್ಟಿ ಹಾರಲು ಅವಳನ್ನು ಬಿಡುವಂತಾಗಲಿ.

ಇದರಿಂದ ಮತ್ತಷ್ಟು ಕಲ್ಪನಾ ಚಾವ್ಲಾ, ಸುಧಾ ಮೂರ್ತಿ, ಪಿ.ಟಿ ಉಷಾ ಇಂತಹ ಎಷ್ಟೋ ಮಹಿಳಾ ಸಾಧಕರಿರುವ ಪಟ್ಟಿಗೆ ಸೇರಲು ಮಹಿಳೆಯರು ಮುಂಚೂಣಿಯಲ್ಲಿ ಸೂಕ್ತ ಬೆಂಬಲಕ್ಕಾಗಿ ಕಾಯುತ್ತಿರುವ ಮಹಿಳೆಯರು ಪ್ರತಿದಿನ ಉದಯಿಸಲಿ.

ಸಾಮಾಜಿಕ ಕಟ್ಟುಪಾಡುಗಳಿಂದ ಮುಕ್ತವಾಗಿ, ಮೌಢ್ಯ ಆಚರಣೆಗಳಿಂದ ದೂರವಾಗಿ, ಭಾವನಾತ್ಮಕ ಸ್ವಾತಂತ್ರ ಪಡೆದ ದಿನ ನಮಗೆ ನಿಜವಾದ ಅರ್ಥಪೂರ್ಣ ಮಹಿಳಾ ದಿನವಾಗುತ್ತದೆ. ಇಂದು ನನ್ನಂತಹ ಎಷ್ಟೋ ಹೆಣ್ಣುಮಕ್ಕಳು ಭಾವಿಸುತ್ತಿದ್ದಾರೆ, ಆ ದಿನ ಆದಷ್ಟು ಬೇಗ ಬರುವಂತಾಗಲಿ.


  • ಬರಹ : ರೇಶ್ಮಾ ಗುಳೇದಗುಡ್ಡಾಕರ್
1 1 vote
Article Rating

Leave a Reply

0 Comments
Inline Feedbacks
View all comments
All Articles
Menu
About
Send Articles
Search
×
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW