ಬೀದಿಗೆ ಬಿಡುವ ಬದಲು ಹೆಣ್ಣು ನಾಯಿಗೆ ಶಸ್ತ್ರಚಿಕಿತ್ಸೆ ಮಾಡಿಸಿ, ಆಗ ಎಷ್ಟೋ ನಾಯಿ ಮರಿಗಳನ್ನು ಕಾಪಾಡಿದಂತಾಗುವುದು ಎನ್ನುವ ಮಾನವೀಯ ಸಂದೇಶವನ್ನು ಡಾ. ಯುವರಾಜ್ ಹೆಗಡೆ ಅವರು ನೀಡಿದ್ದಾರೆ. ಇದಕ್ಕೆ ಎಲ್ಲರೂ ಕೈ ಜೋಡಿಸೋಣ. ಮೂಕಜೀವಿಯನ್ನು ಕಾಪಾಡೋಣ…
ಮರಿಗಳನ್ನು ಬೀದಿಯಲ್ಲಿ ಎಸೆಯುವ ಸಂಸ್ಕೃತಿ ನಮ್ಮದಾಗಬಾರದು.
ಬೀದಿಯಲ್ಲಿ ಮೂರು ನಾಯಿಮರಿಗಳನ್ನು ಬಿಟ್ಟು ಹೋಗಿರುವ ದೃಶ್ಯವನ್ನು ಇಂದು ಚಿಕಿತ್ಸೆಗೆಂದು ಹೋಗುವಾಗ ಕಂಡೆ. ಇಂತಹ ದೃಶ್ಯಗಳು ಸಾಮಾನ್ಯವೇ ಆದರೂ ನನಗೆ ಅನಿಸಿದ್ದು, ಈ ರೀತಿ ಅವುಗಳನ್ನು ಅನಾಥವಾಗಿ ಎಸೆದು ಹೋಗುವ ಸಂಸ್ಕೃತಿ ನಮ್ಮದಾಗಬಾರದು.

ಹೀಗೆ ಬಿಟ್ಟ ಕೆಲವು ಮರಿಗಳು ವಾಹನಕ್ಕೆಸಿಲುಕಿಯೋ , ಹಸಿವಿನಿಂದಲೋ, ರೋಗದಿಂದ ಅಥವಾ ಬೇರೆ ನಾಯಿಗಳ ದಾಳಿಯಿಂದ ಮರಣ ಹೊಂದಿದರೆ ಬದುಕುಳಿದವು ಬೀದಿ ನಾಯಿಗಳಾಗಿ ಸಾರ್ವಜನಿಕರಿಗೆ ತೊಂದರೆ ಕೊಡಲಾರಂಬಿಸುತ್ತವೆ. ಪ್ರಾಣಿ ಜನ್ಯ ರೋಗಗಳಾದ ರೇಬಿಸ್, ಲೆಪ್ಟೋಸ್ಪೈರಾ (ಇಲಿ ಜ್ವರ) , ಲಾಡಿ ಹುಳುಬಾದೆಯನ್ನು ಮನುಷ್ಯರಿಗೆ ಮತ್ತು ಜಾನುವಾರುಗಳಿಗೆ ಹಬ್ಬಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅಷ್ಟೆ ಅಲ್ಲ, ಅನೇಕ ಬಾರಿ ಮಕ್ಕಳ ಮೇಲೆ ದಾಳಿ ಮಾಡಿ ಸಾವಿಗೂ ಕಾರಣವಾಗಿರುವ ಉದಾಹರಣೆಗಳು ಸಹ ಇವೆ.

ಇದಕ್ಕೆಲ್ಲಾ ಪರಿಹಾರವೆಂದರೆ ನಿಮ್ಮ ಹತ್ತಿರದ ಪಶುವೈದ್ಯರ ಬಳಿ ಹೆಣ್ಣು ನಾಯಿಗಳಿಗೆ #ಸಂತಾನ_ಹರಣ_ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಿ. ಇದಕ್ಕೆ ತಗಲಬಹುದಾದ ಕನಿಷ್ಟ ಖರ್ಚನ್ನು ನೀವು ಬರಿಸಬೇಕಾದೀತು . ಸಾಮಾನ್ಯವಾಗಿ ನನ್ನ ಅನುಭವದಲ್ಲಿ ಹೇಳುವುದಾದರೆ ಹೆಣ್ಣು ನಾಯಿಗಳಿಗೆ ಸ್ವಲ್ಪ ನಿಯತ್ತು ಜಾಸ್ತಿ ಹಾಗೂ ಮನೆಗಾವಲಿನ ಜವಾಬ್ದಾರಿಯನ್ನು ಚೆನ್ನಾಗಿ ನಿರ್ವಹಿಸುತ್ತವೆ. ಆದರೆ ಒಂದೇ ಸಮಸ್ಯೆ ಎಂದರೆ, ಅವುಗಳು ವರ್ಷಕ್ಕೆ ಎರಡು ಭಾರಿ ಮರಿ ಹಾಕಿದಾಗ ಅವುಗಳನ್ನು ಸಾಗ ಹಾಕುವ ಕೆಲಸ.
ಒಮ್ಮೆ ಸಂತಾನ ಹರಣ #ಶಸ್ತ್ರಚಿಕಿತ್ಸೆಗೆ ಒಳಪಡಿಸಿದಲ್ಲಿ ಈ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ದೊರೆಯಲಿದೆಯಲ್ಲದೆ ನಿಮಗೂ ನೆಮ್ಮದಿ, ಸಾರ್ವಜನಿಕರಿಗೂ ಸಮಸ್ಯೆ ಆಗದಂತೆ ತಡೆಯಬಹುದು.
- ಡಾ. ಯುವರಾಜ್ ಹೆಗಡೆ (ಪಶುವೈದ್ಯರು,ವೈದಕೀಯ ಬರಹಗಾರರು) ತೀರ್ಥಹಳ್ಳಿ
