ಪರಿಸರವಾದಿ ಚಿದಾನಂದ್ ಯುವ ಸಂಚಲನ ಅವರು ಪರಿಸರ ಪ್ರೇಮಿಗಳಿಗೆ ಪ್ರಕೃತಿಯ ಕುರಿತು ಒಂದಲ್ಲ ಒಂದು ವಿಷಯಗಳನ್ನು ತಿಳಿಸಿಕೊಡುತ್ತಲೇ ಇರುತ್ತಾರೆ, ಅವರ ಲೇಖನದ ಜೊತೆ ಛಾಯಾಚಿತ್ರ ಸೇರಿದಾಗ ಇನ್ನಷ್ಟು ಮೆರಗು ಕೊಡುತ್ತದೆ, ಮುಂದೆ ಓದಿ….
ಥೆರಿಯೊಫೋನಮ್ ಮಿನುಟಮ್ “Theriophonum minutum” ಕೆಲವೊಮ್ಮೆ ಕೆಲವು ಜಾಗಗಳನ್ನು ಇಲ್ಲಿ ಏನಿದೆ..? ಇಷ್ಟೇ ಬಿಡು, ಎಂದು ನಿರ್ಧರಿಸುವುದು ಎಷ್ಟೊಂದು ತಪ್ಪಾಗಿಬಿಡುತ್ತದೆ. ಮೇಲ್ನೋಟಕ್ಕೆ ಸಾಮಾನ್ಯ ಜಾಗದಂತೆ ಕಂಡರೂ ತನ್ನ ಒಡಲೊಳಗೆ ವಿಶೇಷಗಳನ್ನೇ ಅಡಗಿಸಿರುತ್ತದೆ. ಅದರಲ್ಲೂ ಕೆರೆಯ ಅಚ್ಚುಕಟ್ಟು ಪ್ರದೇಶಗಳಲ್ಲಿ ತುಂಬಾ ವಿಸ್ಮಯಗಳೇ ಕೂಡಿರುತ್ತದೆ, ಗಮನಿಸಬೇಕಾದದ್ದು ನಮ್ಮ ಕಣ್ಣುಗಳಿಗೆ ನಮ್ಮ ಬುದ್ಧಿಗೆ ಬಿಟ್ಟದ್ದು.

ಸಾಮಾನ್ಯವಾಗಿ ಕಂಡದ್ದನ್ನು ವಿಸ್ಮಯದಂತೆ ನೋಡುವ, ಒಂದೇ ಜಾಗದಲ್ಲಿ ಅನೇಕ ಬಾರಿ ಸಂಚರಿಸಿದರು ಪ್ರತಿ ಬಾರಿಯೂ ಹೊಸ ಜಾಗಕ್ಕೆ ಭೇಟಿ ನೀಡಿದಂತಹ ಮನಸ್ಥಿತಿಯನ್ನು ಜೀವಂತವಾಗಿಟ್ಟುಕೊಳ್ಳುವುದು ತುಂಬಾ ಮುಖ್ಯವಾಗಿ ಬಿಡುತ್ತದೆ. ಏಕೆಂದರೆ ಒಂದೊಂದು ಕಾಲಘಟ್ಟದಲ್ಲಿಯೂ ವಿಸ್ಮಯಗಳು ಜೀವತಾಳಿ ಕೆಲವೇ ದಿನಗಳಲ್ಲಿ ಕಣ್ಮರೆಯಾಗಿ ಬಿಡುತ್ತದೆ ಆ ಸಮಯಕ್ಕೆ ಅವನ್ನು ಗಮನಿಸದೇ ಇದ್ದರೆ ನಿಜವಾಗಿಯೂ ಒಂದು ಅದ್ಭುತ ಸೌಂದರ್ಯವನ್ನು ಅದರ ಹಿಂದಿರುವ ವಿಚಾರವನ್ನು ನಾವು ಕಾಣದೆ ಹೋದಂತೆ ಆಗುತ್ತದೆ. ಅಥವಾ ಅದಕ್ಕೆ ನಮ್ಮಿಂದಲೇ ಹಾನಿ ಸಂಭವಿಸುವ ಸಾಧ್ಯತೆ ಇರುತ್ತದೆ. ಹಾಗೆಂದು ನಾವು ಎಲ್ಲವನ್ನೂ ನೋಡಲೇಬೇಕೆಂದೇನಿಲ್ಲ, ಆದರೆ ಕಣ್ಣ ಮುಂದೆ ಇದ್ದು, ನಾವು ಅದನ್ನು ಗುರುತಿಸಲಾಗದೆ ಇದ್ದಲ್ಲಿ ನಿಜವಾಗಿಯೂ ನಷ್ಟವೇ.
ಭಾರತ ಮತ್ತು ಶ್ರೀಲಂಕಾದಲ್ಲಿ ಮಾತ್ರ ಕಂಡು ಬರುವ, ಹೂಬಿಡುವ ಸಸ್ಯಗಳ ಕುಲಕ್ಕೆ ಸೇರಿದ “ಅರೇಸಿ” ಕುಟುಂಬದ ” ಥೆರಿಯೊಫೋನಮ್ ಮಿನಟಮ್ ” ಎಂಬುದು ಈ ಸಸ್ಯದ ಹೆಸರಾಗಿದೆ. ಕೇರಳದ ಕೇರಳ ಅರಣ್ಯ ಸಂಶೋಧನಾ ಸಂಸ್ಥೆಯು ಹಾಗೂ ವಿವಿಧ ಸಂಸ್ಥೆಗಳು ಮತ್ತು ವಿಜ್ಞಾನಿಗಳು ಸೇರಿ ಅಪರೂಪದ ಹಾಗೂ ಅಳಿವಿನಂಚಿನಲ್ಲಿರುವ 589 ಸಸ್ಯಗಳ ಪಟ್ಟಿಯನ್ನು ತಯಾರಿಸಿದ್ದಾರೆ ಅದರಲ್ಲಿ ಈ ಇದೇ ಥೆರಿಯೊಫೋನಮ್ ಜಾತಿಗೆ ಸೇರಿದ ಥೆರಿಯೊಫೋನಮ್ ಶಿವಗಂಗನಮ್ (ರಾಮಾಮ್. ಮತ್ತು ಸೆಬಾಸ್ಟೈನ್) ಬೊಗ್ನರ್ ಎಂಬ ಈ ಸಸ್ಯವು 463 ನೇ ಸ್ಥಾನ ಪಡೆದಿದೆ.
ನಮ್ಮ ದೊಡ್ಡಬಳ್ಳಾಪುರದ ಕೈಗಾರಿಕಾ ಪ್ರದೇಶದಲ್ಲಿರುವ ಆಲೂರು ದುದ್ದನಹಳ್ಳಿಯ ಕೆರೆಯ ಆವರಣದಲ್ಲಿ ನಾನು ಅನೇಕ ಬಾರಿ ಸಂಚರಿಸಿದ್ದೇನೆ, ಹಾಗೂ ತುಂಬಾ ಸಮಯವನ್ನು ಕಳೆದಿದ್ದೇನೆ ಆದರೆ ಇಂದು ಪಂಚವಟಿ ವನ ದ ನಿರ್ಮಾಣದ ಕುರಿತು ತಯಾರಿ ಸಮಯದಲ್ಲಿ ವಿಶೇಷವಾಗಿ ಗಮನ ಸೆಳೆದು ಪುಷ್ಪವೂ ತನ್ನನ್ನು ಕಣ್ತುಂಬಿಕೊಳ್ಳುವ ಅವಕಾಶ ನೀಡಿತು. ಬೇಸರದ ಸಂಗತಿಗಳೇನೆಂದರೆ ಅರ್ಕಾವತಿ ನದಿ ಜಲಾನಯನ ಪಾತ್ರದಲ್ಲಿ ಬರುವ ಈ ಜಾಗವು ಹಸಿರು ವಲಯಕ್ಕೂ ಸಹ ಸೇರಿಕೊಳ್ಳುತ್ತದೆ ಆದರೂ ಇಂತಹ ಜಾಗಗಳಲ್ಲಿ ಕೈಗಾರಿಕೆಗಳನ್ನು ನಿರ್ಮಿಸಿ ಅಲ್ಲಿನ ಸೂಕ್ಷ್ಮ ವಲಯಗಳನ್ನೆಲ್ಲ ಹಾಳು ಮಾಡುವ ಹುನ್ನಾರಗಳು ಅಂದಿನಿಂದ ಇಂದಿನವರೆಗೂ ನಡೆಯುತ್ತಲೇ ಬಂದಿದೆ. ಇಂತಹ ಜೀವರಾಶಿಗಳನ್ನು ಮೊದಲು ಗುರುತಿಸಿ, ನಾಶ ಮಾಡದೇ ಅವುಗಳ ಜೊತೆಗೆ ಹೇಗೆ ಬದುಕಬೇಕೆಂಬುದನ್ನು ನಾವೆಲ್ಲರೂ ಯೋಚಿಸಬೇಕಿದೆ.
- ಕ್ಯಾಮೆರಾ ಹಿಂದಿನ ಕಣ್ಣು : ಚಿದಾನಂದ್ ಯುವ ಸಂಚಲನ (ಪರಿಸರವಾದಿಗಳು, ಲೇಖಕರು, ಛಾಯಾಗ್ರಾಹಕರು),ದೊಡ್ಡಬಳ್ಳಾಪುರ.
