‘ಕಂಬನಿ ಕುಯಿಲು’, ‘ರಕ್ತರಾತ್ರಿ’ ನಂತರ ಮುಂದುವರೆದ ದುರ್ಗದ ಮೂರನೇ ಕಾದಂಬರಿ ತಿರುಗು ಬಾಣ. ಕಂಬನಿ ಕುಯಿಲಿನ ರಾಜ್ಯಾಧಿಕಾರ ಸಂಭಾಷಣೆ, ರಕ್ತ ರಾತ್ರಿಯ ಬಲಿದಾನಗಳ ನಂತರ, ತಿರುಗುಬಾಣದಲ್ಲಿ ಮೋಸದ ಜಾಲದಲ್ಲಿ ಎಲ್ಲರನ್ನೂ ಅಂತ್ಯಗೈದ ಮುದ್ದಣ್ಣ ಮತ್ತು ಆತನ ತಮ್ಮಂದಿರನ್ನು ಕೊನೆಗಾಣಿಸುವ ಚಿತ್ರಣವೆ ತುಂಬಿದೆ. – ತ ರಾ ಸು ಅವರ ತಿರುಗು ಬಾಣ ಕಾದಂಬರಿಯ ಕುರಿತು ಲೇಖಕಿ ಅಮೃತ ಎಂ ಡಿ ಅವರು ಬರೆದ ಪುಸ್ತಕ ಪರಿಚಯ, ಮುಂದೆ ಓದಿ…
ಕೃತಿ : ತಿರುಗು ಬಾಣ
ಲೇಖಕರು: ತ ರಾ ಸು
ಬೆಲೆ : ೧೧೦
ಲಿಂಗಣ್ಣ ನಾಯಕನ ಘೋರ ಅಂತ್ಯ, ದುರ್ಗದ ಹಿತೈಷಿಗಳಾದ ಪರಶುರಾಮ, ಮತ್ತು ಭರಮಣ್ಣನವರ ಸೆರೆ, ಇದೆಲ್ಲವೂ ಸಹ ದುರ್ಗದಲ್ಲಿ ಹೊಸ ಚಿಂತೆ, ಭಯ, ಕೋಪ ಎಲ್ಲವನ್ನು ಹುಟ್ಟಿಸಿ ಬಿಡುತ್ತದೆ. ದುರ್ಗದ ಉಪ್ಪುಂಡ ಸೈನ್ಯದ ಸಹಾಯದಿಂದ ಒಂದಷ್ಟು ಅರಮನೆಯ ಮಾಹಿತಿಯನ್ನು ಗಿರಿಜೆಗೆ ಕೊಡುವಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತಾರೆ. ಕೇಡು ಬಗೆಯಲು ಸಾವಿರ ಜನರಿದ್ದರು ಕಾವಲಿಗೆ ನೂರು ಜನ, ಕೊನೆಗೆ ಒಬ್ಬರಾದರೂ ನಿಲ್ಲುತ್ತಾರೆ ಎಂಬ ಲೋಕೋಕ್ತಿ ಇಲ್ಲಿ ಕಾಣುತ್ತದೆ.
ಉಗ್ರವೀರ ಸ್ವಾಮಿಗಳನ್ನು ಹೆದರಿಸಿ, ಅವರಿಗೂ ನಾನು ಎಡವಿದೆ ಎಂಬ ಭಾವ ಬಲವಾಗಿ ಕಾಡುವಾಗ, ಪಾಪದ ಕೊಡ ತುಂಬಿ ನಿಂತಾಗ ಸಾವು ಸಮೀಪ ಬರುತ್ತದೆ. ದೀಪ ಆ ಮುನ್ನ ಜೋರಾಗಿ ಉರಿಯುತ್ತದೆ ಎಂದು ಭಾವಿಸಿ ತಮ್ಮ ಕಾರ್ಯದಲ್ಲಿ ಮಗ್ನ ಆಗುತ್ತಾರೆ. ಗಿರಿಜೆ, ಪರಶುರಾಮ, ಮತ್ತು ಭರಮಣ್ಣನಲ್ಲಿಯೂ ದ್ವೇಷ, ಪ್ರತೀಕಾರದ ಕಿಚ್ಚು ಹುಚ್ಚೆದ್ದು ಕುಣಿಯ ತೊಡಗುತ್ತದೆ.
ದಳವಾಯಿಗಳು ಅಧಿಕಾರಕ್ಕೆ ಬಂದರೆ ದುರ್ಗದ ಜನ ಒಪ್ಪುದಿಲ್ಲ ಎಂದು, ಮತ್ತಿಯ ವಂಶದ ಪ್ರಮುಖರನ್ನು ನಾಶಮಾಡಿ ಮತ್ತಿಯ ವಂಶದ ಸುಳಿಯನ್ನು ಹುಡುಕಿ ವಿಷಸಮುದ್ರದಲ್ಲಿನ ದೊಣ್ಣೆ ರಂಗಪ್ಪನಾಯಕನನ್ನು ಕರೆಸಿ ಆತನನ್ನು ತುಚ್ಚವಾಗಿ ನಡೆಸಿ ಕೊಳ್ಳುವ ಮುದ್ದಣ್ಣನ ಸರ್ವಾಧಿಕಾರ ಎಲ್ಲೆ ಮೀರಿ ಹೋಗುತ್ತದೆ. ಅಧಿಕಾರದ ಮೋಹ, ಪಟ್ಟದ ಆಸೆಗೆ ಎಲ್ಲರನ್ನೂ ದಂಡಿಸಿ ಎಲ್ಲವನ್ನು ತನ್ನ ತೆಕ್ಕೆಯಲ್ಲಿ ಇರಿಸಿ ಕೊಳ್ಳುವನು ಎಂದು ರಾಜ್ಯದ ಸರ್ವಾಧಿಕಾರಿ ಸಹ ಆಗಲಾರನು ಎಂಬ ಸಣ್ಣ ತಿಳಿವಳಿಕೆ ಕೂಡ ಮುದ್ದಣ್ಣನ ಕಿವಿಯನ್ನು ತಲುಪುದಿಲ್ಲ.

ಮುದ್ದಣ್ಣ ಸರ್ವಾಧಿಕಾರಿ ಆದರೂ ಆತನಲ್ಲಿ ಭಯ ಮನೆ ಮಾಡಿರುತ್ತದೆ, ಆದರೆ ಆತನ ತಮ್ಮಂದಿರಾದ ಚಿಕ್ಕಣ್ಣ, ಚುಕ್ಕಣ್ಣ, ರಾಯಣ್ಣನಿಗೆ ಯಾವ ಭಯವಿಲ್ಲದೆ ಕಾಮದ ಅಮಲಿನಲ್ಲಿ, ಎಣ್ಣೆಯ ಮತ್ತಿನಲ್ಲಿ ತೇಲಿ ನಲಿಯುತ್ತಿರುತ್ತಾರೆ.
ಇಡೀ ದುರ್ಗದ ಕೋಟೆಯ ಸುತ್ತ ಸರ್ಪಬಂಧಿ ಏರ್ಪಟ್ಟಿರುತ್ತದೆ. ಸಣ್ಣ ತಪ್ಪಿಗೂ ಪ್ರಾಣವನ್ನೆ ತೆಗೆಯುವಂತಹ ಮಟ್ಟಿಗೆ ಮುದ್ದಣ ತಲುಪುತ್ತಾನೆ. ದುರ್ಗದ ಸುತ್ತೆಲ್ಲ ಪ್ರಾಣ ಭಯ ಕಾಡುತ್ತಿರುತ್ತದೆ. ರಂಗಪ್ಪ ನಾಯಕನಿಗೆ ಪಟ್ಟಾಭಿಷೇಕ ಮಾಡಲು ಗೌಡರ ಸಭೆ ಸೇರಿಸಿದಾಗ, ಗೌಡರು ಸುತಾರಾಂ ಒಪ್ಪುದಿಲ್ಲ, ಆದ್ರೆ ಹಿಂದಿನ ಮೂರು ನಾಲ್ಕು ದಿನದಲ್ಲಿ ಗೌಡರು ಸಭೆ ಸೇರಿ, ಏನು ಹೇಗೆ ಮಾತಾಡಬೇಕು , ಹೇಗೆ ನಯವಾಗಿ ತಿರಸ್ಕರಿಸಬೇಕು ಎಂದು ಮಾತಾಡಿ ನಿರ್ಧಾರಕ್ಕೆ ಬರುತ್ತಾರೆ.
ಕಸ್ತೂರಿ ರಂಗಪ್ಪ ನಾಯಕನನ್ನು ಪಟ್ಟಕ್ಕೆ ಏರಿಸಿ ತಮ್ಮಿಷ್ಟದ ಆಡಳಿತ ನಡೆಸಲು ಅನುವಾಗುವಾಗ ಅಲ್ಲಲ್ಲಿ ಪ್ರತಿಭಟನೆ ಕಾಣದೆ ಹೋದರು ಭಿನ್ನಾಭಿಪ್ರಾಯಗಳು ಮೂಡುತ್ತವೆ.
ಪಟ್ಟಾಭಿ ಖರ್ಚಿಗೆ ಪಟ್ಟಣ ವರ್ತಕನನ್ನು ಹಣ ಕೇಳಿದಾಗ, ಆತನನ್ನು ಕೊಲ್ಲಿಸಿ ಅವನ ಮನೆಯ ಶೋಧಿಸಿ, ಊರ ಜನರ ಕೆಂಗಣ್ಣಿಗೆ ಮುದ್ದಣ್ಣ ಬಲಿಯಾಗುತ್ತಾನೆ.
ಅಲ್ಲಿಂದ ವರ್ತಕರ ದ್ವೇಷವನ್ನು ಕಟ್ಟಿಕೊಂಡನು..ಸುತ್ತೆಲ್ಲ ಜನವೆಲ್ಲ ಆತನ ವಿರುದ್ಧ ತಿರುಗಿ ಬೀಳಲು ಸಿದ್ಧರಾದರು. ಇದು ಸಾಲದು ಎಂಬಂತೆ, ಕಪ್ಪ ಕಾಣಿಕೆ ಕೊಡದ ಗೌಡರ ಮೇಲೆ ದಾಳಿ ಮಾಡಿ,ಸರ್ವ ನಾಶ ಮಾಡಲು ಹೊರಟನು.

ತಿರುಗು ಬಾಣ ಪುಸ್ತಕ ಕಾದಂಬರಿಕಾರ ತ ರಾ ಸು
ಇದರ ಹಿಂದೆ ಹಳ್ಳಿ ಹಳ್ಳಿಯಲ್ಲಿ ಗರಡಿಯ ಸಂಖ್ಯೆ ಏರ್ಪಡಿಸಿ, ಸಾಮು ಹಿಡಿಯುವ ಕೆಲಸ ಹೆಚ್ಚಿಸಿ, ಮುದ್ದಣ್ಣನ ವಿರುದ್ಧ ಜನರನ್ನು ಎತ್ತಕಟ್ಟಲು ಗಿರಿಜೆ ಶತಪಥ ತಿರುಗುತ್ತಾಳೆ. ಪರುಶರಾಮ ಮತ್ತು ಭರಮಣ್ಣನವರ ಸೆರೆಯಿಂದ ಬಿಡಿಸಿ, ಗುಪ್ತವಾಗಿ ಬಚ್ಚಿಟ್ಟರು , ತೆರೆ ಮರೆಯಲ್ಲಿ ಪರಶುರಾಮ, ಭರಮಣ್ಣ ಮತ್ತು ಸ್ವಾಮೀಜಿ ಗಿರಿಜೆಗೆ ಸಹಾಯ ಮಾಡುತ್ತಾ, ಮಾರ್ಗದರ್ಶನ ನೀಡುತ್ತಾರೆ.
ಇದೆಲ್ಲದರ ಫಲವಾಗಿ ಗೌಡರೆಲ್ಲ ಒಂದುಗೂಡಿ,ಕೆಲವೆಡೆ ಬಲಿದಾನ ನಡೆದರೆ, ಕೆಲವು ಕಡೆ ಮನವೊಲಿಸಿ ಸೈನಿಕರ ಮನವೊಲಿಸಿ ದುರ್ಗದ ಪರವಾಗಿಸಿ ಕೊಂಡರು. ಮುದ್ದಣ್ಣನ ವಿರುದ್ಧ ನಡೆದರೂ ಮುದ್ದಣ್ಣ ಖಾಸ ಬಲಗೈ ಬಂಟನಾದ ದಾಸಣ್ಣ ನಾಯಕರ ಸಹಾಯ ದುರ್ಗದ ಹಿತೈಷಿಗಳಿಗೆ ಆನೆ ಬಲ ತಂದಂತೆ ಆಯಿತು. ದಾಸಣ್ಣನ ಸಹಾಯದಿಂದ ದುರ್ಗದ ಕೋಟೆ ಸುತ್ತ ದುರ್ಗದ ಹಿತೈಷಿಗಳ ಕಾವಲು ಪಡೆ ಸಿದ್ಧವಾಯಿತು. ರಾಯಣ್ಣ ಚಿಕ್ಕಣ್ಣರ ಬಂಧನ, ಭರಮಣ್ಣ ದುರ್ಗಕ್ಕೆ ಬರುತ್ತಾನೆ ಎಂಬ ಸುದ್ದಿಯಲ್ಲಿ, ಮುದ್ದಣ್ಣ ಆತನನ್ನು ಮುಗಿಸಿ ಗದ್ದುಗೆ ಏರಲು ಸಿದ್ಧವಾಗಿರುವೆ ಎಂಬ ಹುಸಿ ನಂಬಿಕೆಯಲ್ಲಿ ಇರುವಾಗ, ಭರಮಣ್ಣ ದುರ್ಗದ ತಲುಪಿ ಆತನನ್ನು ಕೊಲ್ಲಲು ಮುದ್ದಣ್ಣ ಬರುವಾಗ ಭರಮಣ್ಣ ಸಿಡಿದಿದ್ದು , ಗಿರಿಜೆ ಭೀಕರವಾಗಿ ಮುದ್ದಣ್ಣ ಆತನ ತಮ್ಮಂದಿರರನ್ನು ಕೊಂದು ಅಂತಿಮ ಶವ ಸಂಸ್ಕಾರ ಸಹ ನೀಡದೆ ಹದ್ದು ಕಾಗೆಗಳ ಪಾಲಿಗೆ ಬಿಟ್ಟಿದ್ದು.
ಹೀಗೆ ದುಷ್ಟರ ಸಂಹಾರ ನಡೆದು , ಶಿಷ್ಟರ ಪಾಲಿಗೆ ದುರ್ಗದ ಸಿಂಹಾಸನ ಮುಡಿಪಿರಲಿ ಎಂದು ಹೇಳಿ, ಗಿರಿಜೆ ಸಮೇತ, ಸ್ವಾಮಿಗಳು ಸಹ ದುರ್ಗದಿಂದ ಮುಂದೆಡೆ ಹೆಜ್ಜೆ ಹಾಕುತ್ತಾರೆ. ಭರಮಣ್ಣ ಪರಶುರಾಮ ಮನಸ್ಸಿಲ್ಲದ ಮನಸ್ಸಿನಲ್ಲಿ ದುರ್ಗದ ಹಿತಕ್ಕಾಗಿ ಮುಂದಿನ ರಾಜ್ಯ ಭಾರದ ಕೈಂಕರ್ಯಕ್ಕೆ ಎದುರು ನೋಡುತ್ತಾ ನಿಲ್ಲುತ್ತಾರೆ.
ಮುಂದಿನ ಕಾದಂಬರಿಯ ಹೊತ್ತು ತರುವೆ.
- ಅಮೃತ ಎಂ ಡಿ, ಶಿಕ್ಷಕಿ, ಯುವ ಕವಯತ್ರಿ, ಲೇಖಕಿ
