ತೊ.ನಂಜುಂಡಸ್ವಾಮಿ ನೆನಪಿನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಇಂದು ಸಂಜೆ ಕಲಾಗ್ರಾಮದಲ್ಲಿ ಯಶಸ್ವಿಯಾಗಿ ನಡೆಯಿತು. ನಾಟಕ,ಕಥೆ ಮತ್ತು ಕಾದಂಬರಿಕಾರ ಶ್ರೀ. ಹೂಲಿ ಶೇಖರ್ ಅವರು 2024 ರ ಗೌರವ ಸನ್ಮಾನಕ್ಕೆ ಭಾಜನರಾದರು.ಕಾರ್ಯಕ್ರಮದ ವಿವರ ತಪ್ಪದೆ ಮುಂದೆ ಓದಿ…
ಸಾಣೆಹಳ್ಳಿ ಹಳ್ಳಿ ಶ್ರೀ ಮಠದ ಪಟ್ಟದ ಅಧ್ಯಕ್ಷರು, ಶ್ರೀ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಡಾ. ಸಿ ಎನ್ ಮಂಜುನಾಥ್, ನಿಕಟಪೂರ್ವ ನಿರ್ದೇಶಕರು, ಜಯದೇವ ಹೃದ್ರೋಗ ಸಂಸ್ಥೆ, ಶ್ರೀ ಶ್ರೀನಿವಾಸ ಜಿ ಕಪ್ಪಣ್ಣ ಹಿರಿಯ ರಂಗ ಸಂಘಟಕರು, ಶ್ರೀ. ಬಿ.ಸುರೇಶ, ರಂಗಭೂಮಿ ಮತ್ತು ಚಲನಚಿತ್ರ ನಿರ್ದೇಶಕ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಪ್ರಶಸ್ತಿಗಳನ್ನು ನೀಡುವಾಗ ಅವರ ಸಾಧನೆಗಳನ್ನು ಮಾತ್ರ ಗುರುತಿಸಿ ಪ್ರಶಸ್ತಿ ನೀಡಬೇಕು. ಶಿಫಾರಸ್ಸು, ಜಾತಿ, ಒತ್ತಡಗಳು ಮುಂತಾದವುಗಳು ಪ್ರಶಸ್ತಿ ಪುರಸ್ಕೃತರ ಆಯ್ಕೆಗೆ ಮಾನದಂಡ ಆಗಬಾರದು. ಅಂತಹ ಒಂದು ಉತ್ತಮ ಆಯ್ಕೆ ತೊ.ನಂಜುಂಡಸ್ವಾಮಿ ಗೆಳೆಯರ ಬಳಗದ ಕಡೆಯಿಂದ ಶ್ರೀ. ಹೂಲಿ ಶೇಖರ್ ಅವರಿಗೆ ಆಗಿದೆ. ಈ ಆಯ್ಕೆಗೆ ತೊ.ನಂ.ಗೆಳೆಯರ ಬಳಗಕ್ಕೆ ಮತ್ತು ಹೂಲಿ ಶೇಖರ್ ಅವರಿಗೆ ಅಭಿನಂದನೆಗಳು ಎನ್ನುವ ಮಾತುಗಳನ್ನು ಸಾಣೆಹಳ್ಳಿ ಸ್ವಾಮೀಜಿಗಳು ಹೇಳಿದರು. ಮುಂದುವರಿದು, ತೊ.ನಂಜುಂಡಸ್ವಾಮಿ ಅವರು ರಾಜ್ಯವ್ಯಾಪಿ ನಡೆಸಿದ ಸಾಂಸ್ಕೃತಿಕ ಚಟುವಟಿಕೆಗಳು, ಶ್ರೀ. ಸಿ ಜಿ ಕೃಷ್ಣಸ್ವಾಮಿ ಅವರ ಜೊತೆಯಲ್ಲಿ ಸಾಣೆಹಳ್ಳಿಯಲ್ಲಿ ತೊ.ನಂ. ಅವರು ನಡೆಸಿದ ರಂಗ ಚಟುವಟಿಕೆಗಳು ಮತ್ತು ಅತ್ಯಂತ ಮಾನವೀಯ ಮೌಲ್ಯಗಳನ್ನು ಹೊಂದಿದ್ದ ತೊನಂ ಅವರನ್ನು ಮನಸಾರ ನೆನೆದು ಗೌರವಿಸಿದರು.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ತೊನಂ ಅವರು ಕಾರ್ಯ ನಿರ್ವಹಿಸುತ್ತಿದ್ದ ದಿನಗಳಲ್ಲಿ ಅವರ ಸಾಂಸ್ಕೃತಿಕ ಚಟುವಟಿಕೆಗಳನ್ನು ನೆನಪಿಸಿಕೊಂಡ ಡಾ. ಸಿ ಎನ್.ಮಂಜುನಾಥ್ ಅವರು,
ಕೊರೊನಾ ಕಾಲದಲ್ಲಿ ತೊನಂ ಅವರ ಅಗಲಿಕೆ ನಿಜಕ್ಕೂ ತುಂಬಲಾರದ ನಷ್ಟವೆಂದು ಹೇಳಿದರು.
ಹಿರಿಯ ರಂಗಸಂಘಟಕ ಶ್ರೀ ನಿವಾಸ್ ಜಿ ಕಪ್ಪಣ್ಣ ಮತ್ತು ಬಿ ಸುರೇಶ ಅವರುಗಳು ಹೂಲಿ ಶೇಖರ್ ಅವರ ಬಗ್ಗೆ ಮಾತನಾಡಿದರು. ತಮಗೆ ನೀಡಿದ ಗೌರವ ಸನ್ಮಾನಕ್ಕೆ ಹೂಲಿ ಶೇಖರ್ ಅವರು ತೊನಂ ಬಳಗಕ್ಕೆ ಧನ್ಯವಾದಗಳನ್ನು ತಿಳಿಸಿದರು.
ವೇದಿಕೆ ಕಾರ್ಯಕ್ರಮದ ನಂತರದಲ್ಲಿ ನಟನ ಮೈಸೂರು ರೆಪರ್ಟರಿ ಅಭಜನಯಿಸಿದ ಕಣಿವೆಯ ಹಾಡು ನಾಟಕ ತುಂಬಿದ ಪ್ರೇಕ್ಷಾಗೃಹಕ್ಕೆ ಪ್ರದರ್ಶನಗೊಂಡಿತು. ಅತ್ಯಂತ ಮಧುರ ಕ್ಷಣಗಳ, ಭಾವನಾತ್ಮಕ ನಾಟಕ, ಎಲ್ಲ ಪ್ರೇಕ್ಷಕರ ಮನಸ್ಸನ್ನು ಗೆದ್ದಿತು. ಪ್ರಯೋಗದ ಕಲಾವಿದರಾದ ಮೇಘ ಸಮೀರ ಮತ್ತು ದಿಶಾ ರಮೇಶ್ ಹಾಗೂ ನಿರ್ದೇಶಕ ಶ್ರೀಪಾದ ಭಟ್ ನಿಜಕ್ಕೂ ಅಭಿನಂದನಾರ್ಹರು.

ಕಾರ್ಯಕ್ರಮದ ಯಶಸ್ಸಿಗೆ ಸಂಪೂರ್ಣ ಸಹಾಯ- ಸಹಕಾರ ನೀಡಿದ ತೊ.ನಂಜುಂಡಸ್ವಾಮಿ ಗೆಳೆಯರ ಬಳಗದ ಎಲ್ಲ ಗೆಳೆಯರಿಗೂ, ತೊ.ನಂಜುಂಡಸ್ವಾಮಿ ಕುಟುಂಬ ವರ್ಗದವರಿಗೂ ಹೃದಯ ಪೂರ್ವಕ ಧನ್ಯವಾದಗಳು.
- ಗುಂಡಣ್ಣ ಚಿಕ್ಕಮಗಳೂರು
