ಯೋಗ ಮತ್ತು ನ್ಯಾಚುರೋಪಥಿ ಚಿಕಿತ್ಸೆಯಲ್ಲಿ ವಾಂತಿ ಮಾಡಿಸುವುದು ಒಂದು ಚಿಕಿತ್ಸೆಯಾಗಿದ್ದು, ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಆಕೃತಿಕನ್ನಡ ಓದುಗರಿಗೆ ಡಾ. ಸೌಮ್ಯ ಬಿದ್ಕಲ್ಕಟ್ಟೆ ಅವರು ನೀಡಿದ್ದಾರೆ. ಓದಿ ಅದರ ಲಾಭ ಪಡೆದುಕೊಳ್ಳಿ…
ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸಲು, ಎದೆಯಲ್ಲಿನ ಕಫದ ನಿವಾರಣೆಗೆ, ಶ್ವಾಸಕೋಶಗಳ ಬಲವರ್ಧನೆಗೆ ಮತ್ತು ಹಸಿವನ್ನು ಹೆಚ್ಚಿಸಲು ಯೋಗ ಮತ್ತು ನ್ಯಾಚುರೋಪಥಿ ಚಿಕಿತ್ಸೆಯಲ್ಲಿ ವಾಂತಿ ಮಾಡಿಸುವುದು ಒಂದು ಚಿಕಿತ್ಸೆಯಾಗಿದೆ. ಖಾಲಿ ಹೊಟ್ಟೆಯಲ್ಲಿ ನೀರನ್ನು ಕುಡಿಸಿ ಅಥವಾ ಆಹಾರ ಸೇವಿಸಿದ ನಾಲ್ಕು ತಾಸಿನ ನಂತರ ವಾಂತಿ ಮಾಡಿಸುವುದು ಸಹ ಚಿಕಿತ್ಸೆ.
ಹೌದು… ವಾಂತಿ ಮಾಡುವುದೂ ಒಂದು ಚಿಕಿತ್ಸಾ ಪದ್ಧತಿಯೇ. ಯೋಗ ಚಿಕಿತ್ಸೆಯಲ್ಲಿ ಅದನ್ನು “ವಮನ ಧೌತಿ” ಎಂದು ಕರೆಯುತ್ತಾರೆ. “ವಮನ” ಅಂದರೆ ವಾಂತಿ ಮಾಡುವುದು, “ಧೌತಿ” ಅಂದರೆ ಚಿಮ್ಮುವುದು. ಹಾಗಾಗಿ “ವಮನ ಧೌತಿ” ಅಂದರೆ ನೀರು ಚಿಮ್ಮಿದಂತೆ ವಾಂತಿ ಮಾಡುವುದು. ಯೋಗದ ಷಟ್ ಕ್ರಿಯೆಯಲ್ಲಿ ವಮಾನ ಧೌತಿಯು ಒಂದು. ಜೀರ್ಣಾಂಗ ವ್ಯೂಹ ಸ್ವಚ್ಚ ಮಾಡಲು ಬಳಸುವ ಪರಿಣಾಮಕಾರಿ ಕ್ರಿಯೆ.
ಇಲ್ಲಿ ಎರಡು ವಿಧಗಳು:
1) ಕುಂಜಲ ಕ್ರಿಯಾ:
ಖಾಲಿ ಹೊಟ್ಟೆಯಲ್ಲಿ ನೀರು ಕುಡಿಸಿ ವಾಂತಿ ಮಾಡಿಸುವ ಕ್ರಮ.

ಫೋಟೋ ಕೃಪೆ : bharatyogastudio
2) ವ್ಯಾಘ್ರ ಕ್ರಿಯಾ:
ಹುಲಿ ಆಹಾರ ತಿಂದು ೪ ಘಂಟೆಗಳ ನಂತರ ಹೊರಕಕ್ಕಿದಂತೆ ಊಟದ ನಂತರದ ಅಭ್ಯಾಸ.

ಫೋಟೋ ಕೃಪೆ : moonladyyoga
ವಾಂತಿ ಮಾಡುವುದು ಖಂಡಿತವಾಗಿಯೂ ಒಂದು ಚಿಕಿತ್ಸಾ ಕ್ರಮ. ಕೆಲವೊಮ್ಮೆ ನಾಯಿ, ಬೆಕ್ಕು ಹುಲ್ಲು ತಿಂದ ನಂತರ ಆಹಾರವನ್ನು ಕಕ್ಕುವುದನ್ನು ನೀವು ಗಮನಿಸಿರಬಹುದು.
ನಮಗೆ ಜ್ವರ ಇದ್ದಾಗ ಉಬ್ಬಳಿಸಿದಂತಾಗಿ ವಾಂತಿಮಾಡಿದಾಗ ಶರೀರದಲ್ಲಿ ಜೀರ್ಣವಾಗದೇ ಉಳಿದ ಆಹಾರ ಹೊರಬಂದು ತದನಂತರ ಜೀರ್ಣಕ್ರಿಯೆ ಉತ್ತಮವಾಗುದು.
ಮೈಗ್ರೇನ್ ತಲೆನೋವಿನಲ್ಲಿ ವಾಂತಿ ಮಾಡಿದ ನಂತರವೇ “ತಲೆ ನೋವು ಕಡಿಮೆ”ಯಾಗಿ ತೊಂದರೆ ನಿವಾರಣೆ ಆಗುವುದು.ಇದು ಪ್ರಕೃತಿ ನಿಯಮ, ವಮನ ಧೌತಿ ಚಿಕಿತ್ಸೆಯಲ್ಲದೆ ಮತ್ತೇನು.
ಇಲ್ಲಿ ವಿವರಿಸ ಹೊರಟಿದ್ದು “ಕುಂಜಲ ಕ್ರಿಯಾ” ಮುಂದೆ ಓದಿ.

ಫೋಟೋ ಕೃಪೆ : bharatyogastudio
ವಮನ ಧೌತಿ ಅಭ್ಯಾಸ ಕ್ರಮ ::
*) ಬೆಳಗ್ಗಿನ ಹೊತ್ತು ಖಾಲಿ ಹೊಟ್ಟೆಯಲ್ಲಿದ್ದಾಗ ಕನಿಷ್ಟ 6 ಲೋಟ ಅಥವಾ ಹೊಟ್ಟೆ ಹಿಡಿಸುವಷ್ಟು ಉಪ್ಪು ಹಾಕಿದ ಉಗುರು ಬೆಚ್ಚಗಿನ ನೀರನ್ನು ವೇಗವಾಗಿ ಕುಡಿಯಬೇಕು.
*) ನೀರು ಕುಡಿಯುವಾಗ ಅರ್ಧ ಕುಳಿತಿರಬೇಕು (ಅಂದರೆ ಮಲವಿಸರ್ಜನೆಗೆ ಕುಳಿತಂತೆ, ಆದರೆ ಒಂದು ಕಾಲು ಮಡಚಿದ್ದು ಇನ್ನೊಂದು ಮಡಚಿದ ಕಾಲಿನ ಮೊಣಕಾಲು ನೆಲಕ್ಕೆ ಊರಿರುವುದು)
*) ನೀರು ಕುಡಿಯುವಾಗ ಮಧ್ಯೆ ಮಧ್ಯೆ ವಿಶ್ರಾಂತಿ ಕೊಡದೇ ಒಂದೇ ವೇಗದಲ್ಲಿ, ಸರಾಗವಾಗಿ ಹೊಟ್ಟೆ ಪೂರ್ತಿ ನೀರು ಕುಡಿಯುವುದು.
*) ಹೊಟ್ಟೆ ಪೂರ್ತಿಯಾದ ಮೇಲೆ, ಎರಡೂ ಕಾಲುಗಳನ್ನು ಅಗಲಿಸಿ, ಸಾಕಷ್ಟು ಮುಂಭಾಗಕ್ಕೆ ಬಾಗಿ, ಕೈಯ ತೋರುಬೆರಳು, ಮಧ್ಯದ ಬೆರಳಿನನ್ನು ಸೇರಿಸಿ ಗಂಟಲಲ್ಲಿ ಇಳಿಸಿ, ಕಿರುನಾಲಿಗೆಯನ್ನು ಮೀಟಿದಾಗ ವಾಂತಿಯಲ್ಲಿ ನೀರು ಹೊರಚಿಮ್ಮುವುದು.
*) ಹೊಟ್ಟೆಯಲ್ಲಿನ ಉಪ್ಪು ಮಿಶ್ರಿತ ನೀರು ಸಂಪೂರ್ಣವಾಗಿ ಖಾಲಿಯಾಗುವ ತನಕ ಹೀಗೆ ವಾಂತಿ ಮಾಡಿ ನಂತರವೆ ಕೈ ಹೊರತೆಗೆಯಿರಿ.

ಫೋಟೋ ಕೃಪೆ : indigohealthclinic
#ಕೆಲವು_ಸೂಚನೆ:
- ವಮನ ಧೌತಿಯನ್ನು ಬೆಳಗಿನ ಸಮಯದಲ್ಲಿಯೇ ಮಾಡಬೇಕು.
- ಖಾಲಿ ಹೊಟ್ಟೆಯಲ್ಲಿರುವಾಗಲೇ ಉಪ್ಪು ನೀರು ಸೇವಿಸಬೇಕು.
- ವಾರಕ್ಕೆ ಒಂದು ಬಾರಿಯಾದರೂ ಮಾಡುವುದು ಆರೋಗ್ಯಕರ.
* ರಕ್ತದೊತ್ತಡದ ಸಮಸ್ಯೆ, ಹೃದಯ ಸಂಬಂಧೀ ಸಮಸ್ಯೆಯಿರುವವರು ಅಭ್ಯಾಸದ ಮೊದಲು ವೈದ್ಯರ ಸಲಹೆ ಪಡೆಯುವುದು ಅತೀ ಅವಶ್ಯ.
* ಲಕ್ವಾ, ಹೊಟ್ಟೆಯ ಹುಣ್ಣು, ಮಧುಮೇಹ ಜೊತೆಗಿನ ಕಣ್ಣಿನ ಸಮಸ್ಯೆಗಳು, ಗರ್ಭಿಣಿ ಸ್ತ್ರೀಯರು ಮತ್ತು ಹರ್ನಿಯಾ ಸಮಸ್ಯೆಯಿರುವವರು ವಮಾನ ಧೌತಿ ಕ್ರಿಯೆ ಮಾಡಬೇಡಿ.
ವೈದ್ಯರ ಸಲಹೆ ಅತೀ ಅವಶ್ಯಕ.
* ಕುಡಿದ ಉಪ್ಪು ನೀರು ಪೂರ್ತಿಯಾಗಿ ಖಾಲಿಯಾಗದಿದ್ದಲ್ಲಿ, ಸ್ವಲ್ಪ ಸಮಯದ ನಂತರ 2 ರಿಂದ 3 ಸಲ ಭೇದಿಯಾಗುವ ಸಾಧ್ಯತೆ ಇರುತ್ತದೆ. ಮುನ್ನೆಚ್ಚರಿಕೆ ಅವಶ್ಯ.
*ಧೌತಿ ಅಭ್ಯಾಸದ ನಂತದ ಉಪ್ಪು,ಹುಳಿ, ಖಾರ ರಹಿತ ಬೇಗ ಜೀರ್ಣವಾಗುವ ಸಾತ್ವಿಕ ಆಹಾರ ಸೇವಿಸಬೇಕು. ಇಲ್ಲವಾದಲ್ಲಿ ಅಜೀರ್ಣ ಸಮಸ್ಯೆಯಾಗುವುದು. ತುಪ್ಪದೊಂದಿಗೆ ಕಿಚಡಿಯಂಥ ಸ್ನಿಗ್ಧಾಹಾರ ಸೂಕ್ತ.

ಫೋಟೋ ಕೃಪೆ : oneindia
ವಮನ ಧೌತಿಯ ಪ್ರಯೋಜನಗಳು :
ವಮಾನ ಧೌತಿಯಿಂದ ಶ್ವಾಸಕೋಶಗಳು ಬಲಗೊಳ್ಳುವವು.
ಶ್ವಾಸಕೋಶದ ತೊಂದರೆಗಳಾದ ಕೆಮ್ಮು, ಅಸ್ಥಮಾ, ಬ್ರಾಂಕೈಟಿಸ್ ಮುಂತಾದ ಕಾಯಿಲೆಗಳು ಸಂಪೂರ್ಣ ಹತೋಟಿಗೆ ಬರುತ್ತವೆಂದು ಸಂಶೋಧನೆಗಳಿಂದ ದೃಢಪಟ್ಟಿದೆ.
ಯಕೃತ್ತಿನ ರೋಗಗಳು, ಚರ್ಮರೋಗ ಹಾಗೂ ಇಪ್ಪತ್ತು ಬಗೆಯ ಕಫರೋಗಗಳು ಧೌತಿಕರ್ಮದ ಪರಿಣಾಮದಿಂದ ನಾಶವಾಗುತ್ತವೆ.
ವಾರಕ್ಕೆ ಮೂರು ಬಾರಿ ಅಭ್ಯಾಸ ಮಾಡುವುದು ಅತೀ ಉತ್ತಮ. ಕಡಿಮೆಯೆಂದರೂ ವಾರಕ್ಕೊಮ್ಮೆ ಪ್ರಶಸ್ತ.
ಇದರಿಂದ ಅಸ್ತಮಾ, ಅಲರ್ಜಿ, ಅಸಿಡಿಟಿ, ಹುಳಿತೇಗು ದೂರವಾಗಿ ಜೀರ್ಣಶಕ್ತಿ ಉತ್ತಮಗೊಳ್ಳುವುದು.
ಹೊಟ್ಟೆಯ ಅಂಗಗಳು ಪ್ರಚೋದನೆಗೊಂಡು ಪಚನ ಕ್ರಿಯೆಯೂ ಉತ್ತಮಗೊಂಡು ಮಲಬದ್ಧತೆಯ ಸಮಸ್ಯೆ ದೂರವಾಗುವುದು.
ಮೈಗ್ರೇನ್ ತಲೆನೋವು ಇಲ್ಲವಾಗುವುದು.
ಬೆಳಗೆದ್ದ ತಕ್ಷಣ ಬಾಯಿಯಲ್ಲಿನ ಕಹಿ, ಹುಳಿ ಅನುಭವವಾಗುವ ಪಿತ್ತದ ಸಮಸ್ಯೆಗಳಿಗೆ “ಧೌತಿ ಕರ್ಮ” ಅತ್ಯುತ್ತಮ ಪರಿಹಾರ.
ಹೆಚ್ಚಿನ ಮಾಹಿತಿಗಾಗಿ ನ್ಯಾಚುರೋಪಥಿ ವೈದ್ಯರನ್ನು ಸಂಪರ್ಕಿಸಿ.
- ಡಾ. ಸೌಮ್ಯ ಬಿದ್ಕಲ್ಕಟ್ಟೆ
ವೈದ್ಯರು, ಸರ್ಕಾರಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರ ತೀರ್ಥಹಳ್ಳಿ. ತೀರ್ಥಹಳ್ಳಿ.
[ಕರ್ನಾಟಕ ಸರ್ಕಾರ ಮತ್ತು ಶಾಂತಿವನ ಟ್ರಸ್ಟ್ (ರಿ) ಶ್ರೀಕ್ಷೇತ್ರ ಧರ್ಮಸ್ಥಳದ ಆಡಳಿತಕ್ಕೊಳಪಟ್ಟಿದೆ]
