‘ವೀಲ್ ಚೇರ್ ರೋಮಿಯೊ’ ಸಿನಿಮಾದ ಬಗ್ಗೆ ಸಾಹಿತ್ಯ ರಚನಾಕಾರ ಜಗದೀಶ ನಡನಳ್ಳಿ ಅವರು ತಮ್ಮ ಅನಿಸಿಕೆಯನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ಸಿನಿಮಾದ ಬಗ್ಗೆ ಚಿಕ್ಕದಾಗಿ ಚೊಕ್ಕದಾಗಿ ಹೇಳಿದರೂ ಸಿನಿಮಾ ನೋಡಬೇಕು ಎನ್ನುವ ಕುತೂಹಲವನ್ನ ಓದುಗರಿಗೆ ಮೂಡಿಸಿದ್ದಾರೆ, ಸಾಧ್ಯವಾದರೆ ತಪ್ಪದೆ ಎಲ್ಲರೂ ಈ ಸಿನಿಮಾ ನೋಡಿ……
ಈಗತಾನೆ ವೀಲ್ ಚೇರ್ ರೋಮಿಯೊ ಸಿನಿಮಾ ನೋಡಕೊಂಡ ಬಂದೆ. ಸಿನಿಮಾ ನೋಡಿ ಹೊರಗ ಬಂದ ಮೇಲೂ ನನ್ನ ಕಿವಿಲಿ ಬರಿ ಸಿನಿಮಾದ ಡೈಲಾಗ್ ಗಳು ಲೂಪಲ್ಲಿ ಕೇಳ್ತಾ ಇದ್ದವು. ನಾನೂ ಒಬ್ಬ ಬರಹಗಾರನಾಗಿ ಸಿನಿಮಾ ತುಂಬ ಇಷ್ಟು ಒಳ್ಳೆ ಡೈಲಾಗ್ ಗಳನ್ನ ಬರಿಬಹುದು ಎಂದು ಯಾವತ್ತೂ ಅನ್ನಕೊಂಡಿರಲಿಲ್ಲ. ಗುರು ಅವರು ಬದುಕಿದ್ದಿದ್ರೆ ಅವರಿಗೆ ದೀರ್ಘದಂಡ ನಮಸ್ಕಾರ ಹಾಕ್ತಾ ಇದ್ದೆ. ಒಂದೂಂದು ಡೈಲಾಗ್ ಸಹ ತೂಕ ಮಾಡಿ ಅಳೆದು ಸುರಿದು ಬರೆದ ಹಾಗಿವೆ. ಬರವಣಿಗೆಯೆ ಈ ಚಿತ್ರದ ಜೀವಾಳ. ಗುರು ಕಶ್ಯಪ್ ಅವರೆ ಈ ಚಿತ್ರದ ನಾಯಕ.

(ಕನ್ನಡದ ಬಹುಬೇಡಿಕೆಯ ಬರಹಗಾರರಾಗಿದ್ದ ಗುರು ಕಶ್ಯಪ್)
ಇನ್ನು ಸಿನಿಮಾ ಕಥೆಗೆ ಬಂದ್ರೆ ಅದು ತುಂಬ ಸರಳ ಅನ್ನಿಸಿದ್ರೂ ಅಷ್ಟೇ ಸಂಕೀರ್ಣ ಹಾಗೂ ಸೂಕ್ಷ್ಮ. ಕಾಲಿಲ್ಲದ ನಾಯಕ ಹಾಗೂ ಕಣ್ಣಿಲ್ಲದ ನಾಯಕಿ ಅವರನ್ನ ಸೇರಿಸಲು ಒದ್ದಾಡುವ ಬೇರೆ ಪಾತ್ರಗಳು. ಎಲ್ಲ ಪಾತ್ರಕ್ಕೆ ಕಲಾವಿದರು ನ್ಯಾಯ ಸಲ್ಲಿಸಿದ್ದರೂ ರಂಗಾಯಣ ರಘು ಅವರ ಪಾತ್ರ ಎಲ್ಲರಿಗಿಂತ ಒಂದು ಕೈ ಮೇಲೆಯೆ ನಿಲ್ಲುತ್ತದೆ. ಮೊದಲಾರ್ಧ ಮಾತಿನಲ್ಲೆ ಎಲ್ಲರಿಗೂ ಮದುವೆ ಊಟ ಮಾಡಿಸಿದರೆ ದ್ವಿತಿಯಾರ್ಧ ನಾಯಕಿಯ ಹುಡುಕಾಟದಲ್ಲಿ ಅಲ್ಲಿ ಇಲ್ಲಿ ಎಡವಿದರೂ ಕೊನೆಗೆ ಮಾತಿನ ಮೂಲಕವೆ ಮನಸ್ಸಿಗೆ ಹತ್ತಿರವಾಗುತ್ತದೆ. ಹೀಗಾಗಿ ಮಾತೆ ಈ ಸಿನಿಮಾದ ಮೂಲ ಬಂಡವಾಳವೆಂದರೆ ತಪ್ಪಿಲ್ಲ.

ಇಂತಹ ಮಾತುಗಳನ್ನ ಬರೆದ ಬರಹಗಾರ ನಮ್ಮ ಜೊತೆ ಇಲ್ಲವಲ್ಲ ಎನ್ನುವುದೆ ಸಂಕಟದ ವಿಚಾರ.
ವಿಪರ್ಯಾಸವೆಂದರೆ ಒಬ್ಬ ನಾಯಕ ಮಡಿದರೆ ಅವನನ್ನು ಕೂನೆಯ ಸಾರಿ ನೋಡಲು ಹೋಗಿ ಕಳಪೆ ಸಿನಿಮಾವನ್ನ ಸೂಪರ್ ಹಿಟ್ ಮಾಡುವ ನಮ್ಮ ಜನ ಒಬ್ಬ ಬರಹಗಾರ ಸತ್ತಾಗ ಅವನ ಬರಹಕ್ಕೆ ಬೆಲೆ ಕೊಡಲು ಚಿತ್ರಮಂದಿರಕ್ಕೆ ಹೋಗುವುದಿಲ್ಲ. ನಾನು ಹೋದ ವಿರೇಶ್ ಚಿತ್ರಮಂದಿರದಲ್ಲಿ ಇದ್ದದ್ದು ಇಪ್ಪತ್ತೆ ಜನ.

ಜಗತ್ತಿನಲ್ಲಿ ಭೂಮಿ ಮೇಲೆ ಕಾಣುವ ಬಿಲ್ಡಿಂಗ್ ಗೆ ಇರುವ ಬೆಲೆ ಭೂಮಿ ಒಳಗೆ ಅದನ್ನು ಹೊತ್ತು ನಿಂತ ಅಡಿಪಾಯಕ್ಕೆ ಇರುವುದಿಲ್ಲ. ಇದು ಸರ್ವಕಾಲಿಕ ಸತ್ಯ.
- ಜಗದೀಶ ನಡನಳ್ಳಿ (ಬರಹಗಾರರು, ಸಾಹಿತ್ಯ ರಚನಾಕಾರರು, ಸಹ ನಿರ್ದೇಶಕರು ಕನ್ನಡ ಸಿನಿಮಾ)
