ಮಾದಕ ವಸ್ತುಗಳ ಬಳಕೆ ಹಾಗೂ ಅಕ್ರಮ ಸಾಗಣಿಕೆಯಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಸಲುವಾಗಿ, ವಿಶ್ವಸಂಸ್ಥೆಯು 1987 ಡಿಸೆಂಬರ್ 7ರಂದು ಸಾಮಾನ್ಯ ಸಭೆಯಲ್ಲಿ, ಜೂನ್ 26ನ್ನು ಅಂತರಾಷ್ಟ್ರೀಯ ಮಾದಕ ವಸ್ತುಗಳ ದುರುಪಯೋಗ ಮತ್ತು ಕಾನೂನುಬಾಹಿರ ಸಾಗಣಿ ವಿರೋಧಿ ದಿನ ಎಂದು ಘೋಷಿಸಿತು. ಈ ದಿನದ ಮಹತ್ವವವನ್ನು ಚೇತನ ಭಾರ್ಗವ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಇತ್ತೀಚಿನ ದಿನಗಳಲ್ಲಿ ಯುವ ಜನತೆಯ ಜೀವನಶೈಲಿ ಬದಲಾಗುತ್ತಿದೆ. ಮೋಜು, ಮಸ್ತಿ, ತಡರಾತ್ರಿ ಪಾರ್ಟಿ,ಡ್ರಗ್ಸ್ ಸೇವನೆ ಮುಂತಾದ ಮಾದಕ ವಸ್ತುಗಳಿಗೆ ದಾಸರಾಗುತ್ತಿದ್ದಾರೆ. ಇದರಿಂದಾಗಿ ಅವರ ದೈಹಿಕ ಹಾಗೂ ಮಾನಸಿಕ ಆರೋಗ್ಯವು ಹಾಳಾಗುತ್ತಿದೆ. ಕೆಲವು ಬಾರಿ ಜೀವವನ್ನೇ ಕಳೆದುಕೊಳ್ಳುವ ಪರಿಸ್ಥಿತಿಯು ಎದುರಾಗುತ್ತಿದೆ. ಅಲ್ಲದೆ ಈ ದುಶ್ಚಟಗಳ ದಾಸರಾಗಿರುವವರು ಆರ್ಥಿಕವಾಗಿಯೂ ದಿವಾಳಿಯಾಗುತ್ತಾರೆ. ಇದು ಸಮಾಜದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ.
ವಿಶ್ವದಾದ್ಯಂತ ಈ ದುಶ್ಚಟಗಳಿಗೆ ಮಕ್ಕಳು ಹಾಗೂ ಯುವಕರೇ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ಮಾದಕ ವಸ್ತುಗಳ ಸೇವನೆ ಮತ್ತು ಅದರ ಸಾಗಣಿಕೆ ಕಾನೂನು ಬಾಹಿರವೆಂದು ತಿಳಿದಿದ್ದರೂ ಕೂಡ ಇದರ ದಂಧೆ ಗಳು ಎಲ್ಲೆಡೆ ನಡೆಯುತ್ತಿದೆ. ಪ್ರತಿಯೊಬ್ಬ ನಾಗರಿಕನು ಮಾದಕ ವಸ್ತುಗಳ ಸೇವನೆ ಮತ್ತು ಅದರಿಂದಾಗುವ ಪರಿಣಾಮದ ಬಗ್ಗೆ ಜಾಗೃತಿ ಹೊಂದಿ, ವಿಶ್ವವನ್ನು ಮಾದಕ ವಸ್ತುಗಳಿಂದ ಮುಕ್ತವಾಗಿರುವ ಪಣವನ್ನು ತೊಡಬೇಕಾಗಿದೆ. ಮಕ್ಕಳಿಗೆ ಯುವಕರಿಗೆ ಇದರಿಂದಾಗುವ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸಬೇಕಾಗಿದೆ.

ಫೋಟೋ ಕೃಪೆ : ಅಂತರ್ಜಾಲ
ಮಾದಕ ವಸ್ತುಗಳ ಚಟವು ವ್ಯಕ್ತಿಯ ಮೆದುಳಿನ ಮೇಲೆ ದುಷ್ಪರಿಣಾಮ ಬೀರುತ್ತದೆ. ಮೊದಮೊದಲು ಮಿತಿಯಲ್ಲಿ ಮಾದಕ ವಸ್ತುಗಳ ಸೇವನೆ ಮಾಡಿದರೂ, ನಂತರದ ದಿನಗಳಲ್ಲಿ ಅದರ ಸೇವನೆಯ ತವಕ ಹೆಚ್ಚಾಗಿ, ಮಾದಕ ವಸ್ತುಗಳನ್ನು ಸೇವನೆ ಮಾಡದೆ ಬದುಕಲು ಸಾಧ್ಯವೇ ಇಲ್ಲ ಎನ್ನುವ ಮುಟ್ಟಕ್ಕೆ ತಲುಪುತ್ತಾರೆ. ಇದರಿಂದಾಗಿ ಹೆಚ್ಚಿನ ಜನರು ಖಿನ್ನತೆಗೆ ಜಾರುವ ಸಂಭವವಿದೆ.
ಮಾದಕ ವಸ್ತುಗಳ ಸೇವಿಸುವ ವ್ಯಕ್ತಿಯು ತನ್ನ ಜವಾಬ್ದಾರಿಗಳನ್ನು ನಿರ್ಲಕ್ಷಿಸಲಾರಂಭಿಸುತ್ತಾನೆ. ಮಾದಕ ವಸ್ತುವಿನ ಮತ್ತಿನಲ್ಲಿ ಅಪಾಯಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂಭವವಿರುತ್ತದೆ. ಇದರ ಅಮಲಿನಲ್ಲಿ ಅಪಘಾತ ಹಾಗೂ ಅಪರಾಧಗಳನ್ನು ಎಸಗಬಹುದು ಅಲ್ಲದೆ ಸಂಬಂಧಗಳಲ್ಲೂ ಬಿರುಕು ಉಂಟಾಗುತ್ತದೆ.
ಧ್ಯಾನ, ಯೋಗ ಮಾಡುವುದರಿಂದ, ಮಾನಸಿಕ ವಿಧಾನದಿಂದ ಚಿಕಿತ್ಸೆ ನೀಡಿ, ವ್ಯಸನದಿಂದ ಬಳಲುತ್ತಿರುವ ರೋಗಿಗಳನ್ನು ಪ್ರೀತಿ ಅಕ್ಕರೆಯಿಂದ ಕಾಣುವ ಮೂಲಕ ಮಾದಕ ವಸ್ತುಗಳ ಸೇವನೆಯನ್ನು ತಪ್ಪಿಸಬಹುದು.
ಮಾದಕ ವ್ಯಸನವು ವ್ಯಕ್ತಿಯನ್ನು ಕಲ್ಪನಾ ಲೋಕಕ್ಕೆ ಕರೆದೊಯ್ದು ಭ್ರಮೆಯನ್ನು ಹುಟ್ಟಿಸುತ್ತದೆ. ತನ್ಮೂಲಕ ವಾಸ್ತವ ಪ್ರಪಂಚದ ಅರಿವನ್ನು ಮರೆಸುತ್ತದೆ. ಇದು ಎಲ್ಲಕ್ಕಿಂತ ಅಪಾಯಕಾರಿ. ರಾಷ್ಟ್ರದ ಬೆನ್ನೆಲುಬಾದ ಯುವಕರೇ ಈ ಚಟದ ದಾಸರಾದರೆ ದೇಶವೇ ಮುಳುಗಿದಂತೆ. ಆದ್ದರಿಂದ ಜಾಗೃತಿಯು ಸಮಾಜದಲ್ಲೂ ಪ್ರತಿಯೊಬ್ಬರ ಮನೆ ಮನದಲ್ಲೂ ಅತ್ಯವಶ್ಯ. ಮಾದಕ ವಸ್ತು ನಿರ್ಮೂಲನ ದಿನದ ಶುಭ ಅವಸರದಲ್ಲಿ ನಮ್ಮೆಲ್ಲರ ನಿರ್ಧಾರ ಇದನ್ನು ಬಹಿಷ್ಕರಿಸುವ, ಇದರ ದುಷ್ಪರಿಣಾಮಗಳ ವಿರುದ್ಧ ಜಾಗೃತಿ ಮೂಡಿಸುವ ಅಭಿಯಾನದೊಂದಿಗೆ ಆರಂಭವಾಗಲಿ.
ಮಾದಕ ವಸ್ತುಗಳು ಎಂದಿಗೂ ಮಾರಕ ಯುವ ಜಾಗೃತಿಯೇ ಆಗಲಿ ಕಾಯಕ.
- ಚೇತನ ಭಾರ್ಗವ – ಅರಮನೆ ತೋಟ
