ಅಭಿಜ್ಞಾ ಪಿ.ಎಂ. ಗೌಡ ಅವರು ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಜನಿಸಿದರು. ಪ್ರಬಂಧ, ಚರ್ಚಾಸ್ಪರ್ಧೆ, ಭಾಷಣ ಕಲೆಗಳಲ್ಲಿ ಸದಾ ಮುಂದಿದ್ದ ಅವರು ಕವನ, ಕತೆಗಳನ್ನು ಬರೆಯುತ್ತಾ ಸಾಹಿತ್ಯದಲ್ಲಿ ಪುಟ್ಟ ಪುಟ್ಟ ಹೆಜ್ಜೆಯನ್ನಿಡುತ್ತಾ ‘ಕಾನನದ ಅರಸಿ’ ಕವನ ಸಂಕಲನವನ್ನು ಹೊರಗೆ ತಂದಿದ್ದಾರೆ. ಅವರ ಸಾಹಿತ್ಯ ಪ್ರೇಮದ ಕುರಿತು ಕವಿ ನಾರಾಯಣಸ್ವಾಮಿ.ವಿ ಅವರು ಬರೆದು ಲೇಖಕಿ ಪರಿಚಯವನ್ನು ತಪ್ಪದೆ ಮುಂದೆ ಓದಿ…
ಒಬ್ಬ ಬರಹಗಾರನಾಗಲೂ ಅಥಾವ ಕವಿ/ಕವಯಿತ್ರಿಯಾಗಲು ಚಿಕ್ಕಂದಿನಿಂದಲೂ ಕನಸು ಕಾಣಬೇಕಿಲ್ಲ. ಒಂದಷ್ಟು ನೋವುಗಳು, ನೆನೆಪುಗಳು, ಅನುಭವಿಸಿದ ಬಡತನ, ಶೋಷಣೆ ಇವುಗಳನ್ನು ಅನುಭವಿಸಿದ ವ್ಯಕ್ತಿ ಆ ನೋವಿನಿಂದ, ಶೋಷಣೆಯಿಂದ ಇತರರನ್ನು ಜಾಗೃತಿಗೊಳಿಸಲು, ಇಲ್ಲ ತನ್ನ ಎದೆಯಾಳದ ನೋವನ್ನು ಹೊರಹಾಕಲು ಬಳಸಿಕೊಳ್ಳುವ ವಿಧಾನವೇ ಬರವಣಿಗೆ. ಬರವಣಿಗೆಯಲ್ಲಿ, ಓದುವಿಕೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಾಗ ಒಂದಷ್ಟು ನೋವು ಮರೆಯಬಹುದೇನೋ? ಒಂದಷ್ಟು ವಿಚಾರಗಳನ್ನು ಮಂಥನ ಮಾಡಬಹುದೇನೋ? ಆ ಬರವಣಿಗೆಯಲ್ಲಿ ಲೇಖಕನಿಗೆ ಸಿಗುವ ಖುಷಿ ಮತ್ಯಾವುದರಲ್ಲೂ ಸಿಗಲಾರದು. ಸಾಧನೆ ಮಾಡಲು ಮನಸ್ಸು ಮುಖ್ಯ ನಿರಂತರವಾದ ಕಲಿಕೆಯಿಂದ ಪಡೆದ ಯಶಸ್ಸು ನಮ್ಮನ್ನು ಜಗತ್ತಿಗೆ ಪರಿಚಯ ಮಾಡುತ್ತದೆ. ಇತ್ತೀಚೆಗೆ ಆಕಸ್ಮಿಕವಾಗಿ ಕನ್ನಡ ಸಾಹಿತ್ಯಲೋಕಕ್ಕೆ ಬಂದು ಒಂದೆರಡು ವರುಷಗಳಲ್ಲಿಯೇ ಕನ್ನಡದ ಎಲ್ಲಾ ಸಾಹಿತ್ಯ ಪ್ರಕಾರಗಳನ್ನು ಓದಿ, ಕಲಿತು, ವಿವಿಧ ಪ್ರಕಾರಗಳ ಸಾಹಿತ್ಯವನ್ನು ಬರೆದು ಕನ್ನಡ ಸಾಹಿತ್ಯಲೋಕದಲ್ಲಿ ಗುರುತಿಸಿಕೊಳ್ಳುತ್ತಿರುವ ಉದಯೋನ್ಮುಖ ಲೇಖಕಿಯೇ ಅಭಿಜ್ಞಾ ಪಿ ಎಮ್ ಗೌಡ ರವರು.
ಕನ್ನಡ ಸಾಹಿತ್ಯ ಲೋಕಕ್ಕೆ ಆಕಸ್ಮಿಕವಾಗಿ ಪಾದಾರ್ಪಣೆ ಮಾಡಿದರೂ ನನಗೆ ಬರೆಯಲು ಪ್ರೇರಣೆ ನನ್ನ ಮಗ… ಅವನ ಅಕಾಲಿಕ ಮರಣ, ಮರೆಯಲಾಗದ ಅವನ ನೆನಪುಗಳು, ನೋವುಗಳನ್ನು ಮರೆಯಲು, ಅವನ ನೆನೆಪುಗಳ ಚಾದರದಲ್ಲಿ ಬರೆಯುತ್ತಿರುವ ನಾನು ಪ್ರತಿ ಸಾಲಿನಲ್ಲು, ಪ್ರತಿ ಅಕ್ಷರಗಳಲ್ಲು ಅವನ ಬಿಂಬವನ್ನು ಕಾಣುತ್ತೇನೆ ಎಂದು ಹೇಳುತ್ತಾ, ಕನ್ನಡ ಸಾಹಿತ್ಯದ ಇತ್ತೀಚಿನ ಲೇಖಕಿಯರಲ್ಲಿ ಮುಂಚೂಣಿಯಲ್ಲಿರುವ ಹೆಸರೇ ಅಭಿಜ್ಞಾ ಪಿ ಎಮ್ ಗೌಡ ರವರದು.
ಶ್ರೀಮತಿ ಅಭಿಜ್ಞಾ ಪಿ.ಎಂ. ಗೌಡ ಇವರು ಮಂಡ್ಯ ಜಿಲ್ಲೆಯ ನಾಗಮಂಗಲದ ಶ್ರೀಮತಿ ಪುಟ್ಟಮ್ಮ ಹಾಗೂ ಶ್ರೀ ರಾಮೆಗೌಡ ದಂಪತಿಗಳ ಪುತ್ರಿಯಾಗಿ ಜನಿಸಿದರು. ಅಪ್ಪಟ ರೈತ ಕುಟುಂಬದಲ್ಲಿ ಜನಿಸಿದ ಇವರು, ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣವನ್ನು ತನ್ನ ಹುಟ್ಟೂರಾದ ನಾಗಮಂಗಲದಲ್ಲಿ ಪಡೆದರು. ನಂತರ ಪದವಿಪೂರ್ವ ಕಾಲೇಜು ಶಿಕ್ಷಣವನ್ನು ನಾಗಮಂಗಲ ಸಕಾ೯ರಿ ಕಾಲೇಜಿನಲ್ಲಿ ಮುಗಿಸಿದ ನಂತರ, ಬಿಎ ಪದವಿಯನ್ನು ಮಂಡ್ಯದ ಸಕಾ೯ರಿ ಪ್ರಥಮದಜೆ೯ ಕಾಲೇಜಿನಲ್ಲಿ ಪಡೆದರು. ನಂತರದಲ್ಲಿ ಶಿಕ್ಷಕರ ತರಬೇತಿ ಶಿಕ್ಷಣ (ಡಿ.ಎಡ್) ನ್ನು ನಾಗಮಂಗಲದಲ್ಲಿ ಮುಗಿಸಿದರು.
ಉನ್ನತ ವ್ಯಾಸಂಗವನ್ನು ಮುಂದುವರಿಸಿದ ಅಭಿಜ್ಞಾ ಪಿ ಎಮ್ ಗೌಡ ಇವರು ರಾಜ್ಯಶಾಸ್ತ್ರ ಮತ್ತು ಕನ್ನಡ ಎರಡು ವಿಷಯಗಳಲ್ಲೂ ಮೈಸೂರು ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದು ಬಿ ಎಡ್. ಶಿಕ್ಷಕರ ತರಬೇತಿಯನ್ನು ತುಮಕೂರಿನ ಕಾಲೇಜಿನಲ್ಲಿ ಮುಗಿಸಿದರು. ಈಗ ಇವರು ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಸಕಾ೯ರಿ ಶಾಲೆಯ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಶ್ರೀಮತಿ ಅಭಿಜ್ಞಾ ಪಿ ಎಂ ಗೌಡರವರು ಮಂಡ್ಯ ಜಿಲ್ಲೆಯವರೇ ಮಂಜುನಾಥ ಗೌಡರನ್ನು ಬಾಳಸಂಗಾತಿಯಾಗಿ ಸ್ವೀಕರಿಸಿ ಸಾಂಸಾರಿಕ ಜೀವನದತ್ತ ಪಯಣವನ್ನು ಆರಂಭಿಸಿ, ಮಗ ಮಾಸ್ಟರ್ ಕುಶಾಲ್ ಪಿ ಎಂ ಗೌಡ ರ ಜೊತೆಯಲ್ಲಿ ಇವರ ಕುಟುಂಬ ಈಗ ನಾಗಮಂಗಲದಲ್ಲಿ ವಾಸವಾಗಿದೆ.
ಶ್ರೀಮತಿ ಅಭಿಜ್ಞಾ ಪಿ ಎಂ ಗೌಡರವರು ವಿದ್ಯಾರ್ಥಿ ದೆಸೆಯಿಂದಲೇ. ಪ್ರಬಂಧ, ಚರ್ಚಾಸ್ಪರ್ಧೆ, ಭಾಷಣ ಕಲೆಗಳಲ್ಲಿ ಮುಂದಿದ್ದು ತಾಲ್ಲೂಕು ಜಿಲ್ಲಾಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಬಹುಮಾನಗಳನ್ನು ಸಹ ಪಡೆದುಕೊಂಡಿದ್ದಾರೆ.
ವೃತ್ತಿಯಿಂದ ಶಿಕ್ಷಕಿಯಾದರೂ ಕೂಡ ಕನ್ನಡ ಸಾಹಿತ್ಯವನ್ನು ಪ್ರವೃತ್ತಿಯಾಗಿಸಿಕೊಂಡು, ಅನೇಕ ಸಣ್ಣ ಕಥೆಗಳು, ಹಾಸ್ಯ ಕಥೆಗಳು, ಪ್ರಬಂಧಗಳು, ಲೇಖನ ವಿಮರ್ಶೆಗಳು ಕವಿತೆಗಳು, ಗಜಲ್ ಗಳು, ಚುಟುಕು, ಹನಿಗವನಗಳು, ರುಬಾಯಿ, ಟಂಕಾ, ಹಾಯ್ಕು, ಹೀಗೆ ಸಾಹಿತ್ಯದ ನಾನಾ ಪ್ರಕಾರಗಳ ಬರವಣಿಗೆಯನ್ನು ತೊಡಗಿದ್ದಾರೆ.
ಷಟ್ಪದಿಗಳು, ಚತುಶ್ರಯಲಯ, ಏಳೆ, ತ್ರಿವುಡೆ, ಅಕ್ಕರಿಕೆಗಳು, ರಗಳೆಗಳು, ಹಾಗೂ ವೃತ್ತಗಳಲ್ಲಿ ಸಾಕಷ್ಟು ಕವನಗಳನ್ನು ಬರೆದಿದ್ದಾರೆ. ಹಲವಾರು ಜಾನಪದ ಗೀತೆಗಳನ್ನು ಸಹ ತ್ರಿಪದಿಯಲ್ಲಿ ರಚಿಸಿದ್ದಾರೆ. ಅಲಂಕಾರಕ್ಕೆ ಸಂಬಂಧಿಸಿದಂತೆ ವೃತ್ತಾನುಪ್ರಾಸ, ಛೇಕಾನುಪ್ರಾಸ, ಚಿತ್ರಕವಿತ್ವ ಹಾಗೂ ಶ್ಲೇಷಾಲಂಕಾರಕ್ಕೂ ಸಂಬಂಧಿಸಿದಂತೆ ಅನೇಕ ಕವನಗಳನ್ನು ಬರೆದಿದ್ದಾರೆ. ಇದರ ಜೊತೆಗೆ ಸುಮಾರು ಎಂಭತ್ತು ಅಂಕಣ ಬರಹಗಳು, ಹಲವಾರು ಕೃತಿಗಳ ವಿಮರ್ಶೆಗಳು ಹಾಗು ಇತರ ಲೇಖಕರ ಕೃತಿಗಳಿಗೆ ಮುನ್ನುಡಿಯ ಬರಹಗಳನ್ನು ಬರೆದಿದ್ದಾರೆ.
ಶ್ರೀಮತಿ ಅಭಿಜ್ಞಾ ಪಿ ಎಂ ಗೌಡರವರು “ಕಾನನದ ಅರಸಿ” ಯೆಂಬ ಚೊಚ್ಚಲ ಕವನಸಂಕಲನವನ್ನು ಲೋಕಾರ್ಪಣೆ ಮಾಡುವುದರ ಮೂಲಕ ಕನ್ನಡ ಸಾಹಿತ್ಯಲೋಕದಲ್ಲಿ ಕವಯಿತ್ರಿಯಾಗಿ ಪಾದಾರ್ಪಣೆ ಮಾಡಿ, ನಂತರ “ನೆಲಸಿರಿಯ ಮಣಿಗಳು” (ಶಿಶು ಸಾಹಿತ್ಯ) ಕೃತಿಯನ್ನು ನಂತರದಲ್ಲಿ “ಅಭಿಭಾವನ”( ಭಾವಗೀತೆ ಸಂಕಲನ) ಎದೆಯ ತೇರಿನೊಳ್ (ಗಝಲ್ ಸಂಕಲನ) ವೆಂಬ ನಾಲ್ಕು ಕೃತಿಗಳನ್ನು ಬರೆದು ಲೋಕಾರ್ಪಣೆ ಮಾಡಿ ಕನ್ನಡಮ್ಮನ ಮಡಿಲಿಗೆ ಅಪಿ೯ಸಿದ್ದಾರೆ.
ಇವರ ಪ್ರತಿಭೆ ಮತ್ತು ಸಾಹಿತ್ಯದ ಮಜಲುಗಳನ್ನು ಗುರುತಿಸಿ ರಾಜ್ಯಮಟ್ಟದ ಹಲವಾರು ಸಂಘಸಂಸ್ಥೆಗಳು ಇವರಿಗೆ ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಗೌರವಿಸಿವೆ. ರಾಜ್ಯ ಬರಹಗಾರ ಬಳಗ(ರಿ) ಹೂವಿನಡಗಲಿ ಇವರಿಂದ ಸಾಹಿತ್ಯ “ಸಿಂಧು ಪ್ರಶಸ್ತಿ” ಯನ್ನು ಪಡೆದಿದ್ದಾರೆ. ಮತ್ತು 2021ನೇ ವರ್ಷದ ನಾಗಮಂಗಲ ತಾಲ್ಲೂಕು ಸಾಹಿತ್ಯ ಪರಿಷತ್ತು ಇವರ ಸಾಹಿತ್ಯದ ಬೆಳವಣಿಗೆಯನ್ನು ಕಂಡು ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ ಹಾಗೂ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಶಸ್ತಿಯೂ ಸಹ ಇವರಿಗೆ ದೊರೆತಿದೆ. ಮಾಣಿಕ್ಯ ಪ್ರಕಾಶನ ಹಾಸನ ವತಿಯಿಂದ ರಾಜ್ಯಮಟ್ಟದ “ಜನ್ನಕಾವ್ಯ ಪ್ರಶಸ್ತಿ”, ಕುವೆಂಪು ಜನ್ಮದಿನೋತ್ಸಹ ಪ್ರಯುಕ್ತರಾಜ್ಯ ಶಿಕ್ಷಕರ ಸಾಹಿತ್ಯ ಪರಿಷತ್ತು ವತಿಯಿಂದ ರಾಜ್ಯಮಟ್ಟದ “ಶತಶೃಂಗ ಪ್ರಶಸ್ತಿ”, ಮಹಾಲಿಂಗ ರಂಗ ಸಾಹಿತ್ಯ ಪ್ರಶಸ್ತಿ.” ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಸಮೃದ್ಧಿ ಚಾರಿಟಬಲ್ ಟ್ರಸ್ಟ್ ವತಿಯಿಂದ “ಮೈಸೂರು ಮಹಾರಾಣಿ ರಾಜಮಾತೆ ಕೆಂಪನಂಜಮಣ್ಣಿ ಪ್ರಶಸ್ತಿ” ಇನ್ನೂ ಪ್ರಶಸ್ತಿಗಳಿಗೆ ಅಭಿಜ್ಞಾ ಪಿ ಎಮ್ ಗೌಡ ಇವರು ಭಾಜನರಾಗಿದ್ದಾರೆ.
ಅಭಿಜ್ಞಾ ಪಿ ಎಮ್ ಗೌಡ ಇವರು ರಾಜ್ಯಮಟ್ಟದ ಹಲವಾರು ಕವಿಗೋಷ್ಠಿ ಮತ್ತು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮತ್ತು ಇವರ ಬರಹಗಳು ನಾಡಿನ ಹಲವಾರು ಖ್ಯಾತ ಪತ್ರಿಕೆಗಳಾದ ವಿನಯವಾಣಿ, ಜನ ಮಿಡಿತ, ಸಿಂಹಧ್ವನಿ ಮತ್ತು ಕ್ರಾಂತಿಧ್ವನಿ ಹಾಗೂ ಸಂಗಾತಿ ಅವಧಿ ಮ್ಯಾಗ್ಝಿನ್ ಗಳಲ್ಲಿ ಪ್ರಕಟಗೊಂಡಿವೆ.
ಇವರ ಸಾಹಿತ್ಯ ಕೃಷಿಯು ಹೀಗೆಯೇ ಸಾಗಲಿ, ಸಾಂಸ್ಕೃತಿಕ ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಕನ್ನಡ ಸಾಹಿತ್ಯಲೋಕಕ್ಕೆ ಬರಹದ ಮೂಲಕ ಇನ್ನಷ್ಟು ಸೇವೆಯನ್ನು ಸಲ್ಲಿಸಲಿ, ಮುಂಬರುವ ಸಾಹಿತ್ಯವು ನೊಂದ ಮಹಿಳೆಯರ, ಧಮನಿತರ ತಲ್ಲಣಗಳ ಬರಹಗಳನು ಬರೆಯಲಿ, ಇವರು ಲೇಖಕಿಯಾಗಿ ಕರುನಾಡಿನಲ್ಲಿ ಗುರುತಿಸಿಕೊಂಡು ಇನ್ನಷ್ಟು ಗೌರವ ಪುರಸ್ಕಾರಗಳು ಇವರಿಗೆ ಲಭಿಸಲಿ ಎಂದು ಆಶಿಸುತ್ತಾ ಪತ್ರಿಕೆಯ ಪರವಾಗಿ ಹಾಗೂ ವೈಯಕ್ತಿಕವಾಗಿ ಹಾರೈಸುತ್ತೇನೆ.
ಹಿಂದಿನ ಸಂಚಿಕೆಗಳು :
- ಕನ್ನಡ ಸಾಹಿತ್ಯ ಲೋಕದಲ್ಲಿ ಅರಳುತ್ತಿರುವ ಸುಮಾ
- ಮಾಲೂರಿನ ಉದಯೋನ್ಮುಖ ಲೇಖಕಿ ಸುಮಂಗಳ ಮೂರ್ತಿ
- ಭಾವನೆಗಳ ಮಹಾಪೂರವೇ ಮನೋವಾರಧಿ
- ಕನ್ನಡದ ಸಾಹಿತ್ಯಲೋಕದ ಭಾವಧಾರೆ ವಿದ್ಯಾ ಅರಮನೆ
- ವೃತ್ತಿಯಲ್ಲಿ ಶಿಕ್ಷಕಿ, ಲೇಖಕಿ, ಸಾಮಾಜಿಕ ಹೋರಾಟಗಾತಿ೯
- ನಾರಾಯಣಸ್ವಾಮಿ.ವಿ – ವಕೀಲರು ಮತ್ತು ಲೇಖಕರು, ಮಾಸ್ತಿ ಕೋಲಾರ ಜಿಲ್ಲೆ.