ಮಾತು, ಹಣ ಮತ್ತು ಮನಸ್ಸಿನ ಭಾವನೆಗಳು ಇತಿಮಿತಿಯಲ್ಲಿರಲಿ, ಅತಿಯಾದರೆ ಅದು ವಿಷವಾಗುವುದು. ಮೀನಾಕ್ಷಿ ಮನೋಹರ ಅವರ ಒಂದು ಪುಟ್ಟ ಲೇಖನವನ್ನು ತಪ್ಪದೆ ಓದಿ…
ಅದೊಂದು ದಿನ ಹೀಗೆಯೇ ಮಾತನಾಡುತ್ತ ಎಲ್ಲವೂ ಮಿತಿಯಲ್ಲಿರಬೇಕು, ಉಳಿತಾಯ ಮಾಡಬೇಕು ಎಂದರು. ಯಾವಾಗ ಯಾವುದನ್ನು ಹೇಗೆ ಉಪಯೋಗಿಸಬೇಕು, ಎಲ್ಲಿ ಉಪಯೋಗಿಸಬೇಕು, ಎಷ್ಟು ಉಪಯೋಗಿಸ ಬೇಕು, ಅಷ್ಟಷ್ಟೇ ಉಪಯೋಗ ಮಾಡಬೇಕು ಎಂದರು. ಅದಕ್ಕೆ ಅಡುಗೆಗೆ ಉಪಯೋಗಿಸುವ ಇಂಗಿನ ಉದಾಹರಣೆ.
ಬೇಳೆಯ ಹಸಿ ಬಿಸಿ ಪದಾರ್ಥಗಳನ್ನು ಮಾಡುವಾಗ, ಸಾರು- ಸಾಂಬಾರುಗಳನ್ನು ಮಾಡುವಾಗ ಉಪಯೋಗಿಸಿದರೆ ಚೆನ್ನ. ಅದನ್ನು ಆ ಅಡಿಗೆಯ ಜೊತೆಯಲ್ಲಿ ಯಾವಾಗ ಸೇರಿಸಬೇಕೆಂಬುದೂ ಅಷ್ಟೇ ಮುಖ್ಯವಾಗುತ್ತದೆ.
ಬೇಳೆ ಬೇಯಿಸುವಾಗ ಸೇರಿಸಬಹುದು. ಸಾರಿಗೆ , ಸಾಂಬಾರಿಗೆ ಒಗ್ಗರಣೆ ಮಾಡುವಾಗ ಸೇರಿಸಬಹುದು. ಸಾರಿನಪುಡಿ, ಸಾಂಬಾರಿನ ಪುಡಿ ಮಾಡುವಾಗ ಸೇರಿಸಬಹುದು. ಬೇಳೆ ವಡೆಗೆ ಹಿಟ್ಟು ಮಾಡುವಾಗ ಹೀಗೆ….. ನೀರಿನಲ್ಲಿ ಕರಗಿಸಿ ಹಾಕಿದರೆ , ಸಮನಾಗಿ ಬೆರೆತುಕೊಳ್ಳುತ್ತದೆ. ಇಲ್ಲವಾದಲ್ಲಿ ಸರಿಯಾಗಿ ಕರಗದೇ , ಒಟ್ಟಿಗೇ ಸಿಕ್ಕಿ ಕಹಿ ರುಚಿ ನೀಡುತ್ತದೆ. ಹೆಚ್ಚಾಗಿ ಉಪಯೋಗಿಸದರೆ ಕಹಿ ರುಚಿಯ ಜೊತೆಗೆ ಒಗರು ವಾಸನೆಯನ್ನೂ ಕೊಡುತ್ತದೆ. ಒಂದು ರೀತಿಯ ಇರುಸು ಮುರುಸಿನ ರುಚಿಯ ಅನುಭವವಾಗುತ್ತದೆ.
ಅಂತೆಯೇ ಬಾಳಿನಲ್ಲೂ ಮೂರು ಪ್ರಕಾರಗಳ ಸಮಯೋಚಿತ ಉಪಯೋಗ ಮಾಡಬೇಕು. ಸರಿಯಾದ ಪ್ರಮಾಣದಲ್ಲಿ ಉಪಯೋಗಿಸಿದರೇ, ಉಳಿತಾಯವೂ ಆದೀತು.
- ಮಾತು
- ಹಣ
- ಮನಸ್ಸಿನ ಭಾವನೆಗಳು
ಮಾತು :
ಇದು self explanatory.. ಆಡುವ ಮಾತು ಮುತ್ತಿನಂತಿರಬೇಕು. ನೇರವಾಗಿರಬೇಕು, ಅರ್ಥವಾಗುವಂತಿರಬೇಕು. ಒಬ್ಬರ ಮನಸ್ಸಿಗೆ ನೋವುಂಟು ಮಾಡಬಾರದು. ಎಲ್ಲಕ್ಕಿಂತ ಮುಖ್ಯವಾಗಿ ಯಾವಾಗ ಮಾತನಾಡಬೇಕು, ಎಷ್ಟು ಮಾತನಾಡಬೇಕು ಹಾಗೂ ಯಾವಾಗ ಸುಮ್ಮನಿರಬೇಕು ಎಂಬುದು ಅಷ್ಟೇ ಮುಖ್ಯ. ಇಲ್ಲದಿದ್ದರೆ ವಾತಾವರಣವೇ ಕೆಟ್ಟುಹೋಗುತ್ತದೆ. ನಮಗೆ ನೋವಾಗುವಂತೆ ಇತರರು ಮಾತನಾಡಿದಾಗಲೂ, ಸಮಯ ಸಂದರ್ಭಗಳನ್ನು ಅರಿತು ಉತ್ತರ ಕೊಡುವುದು ಒಳಿತು.
ಕಲವರಿರುತ್ತಾರೆ ತಮಗೇ ಪ್ರಾಶಸ್ತ್ಯ ಸಿಗಬೇಕು ಎಂಬ ಮನೇಭಾವ. ತಾವೊಬ್ಬರೆ ಎಲ್ಲ ಮಾಡಬೇಕು ಹೆಸರು ತೆಗೆದುಕೊಳ್ಳಬೇಕು ಎಂಬುದೂ ಇರಬಹುದು. ಅಥವಾ ಅವರು ಕೆಲಸ ಮಾಡುವುದರಿಂದ, ಯಾರಿಗೋ ಕೃತಜ್ಞತೆ ತೋರುವ ರೀತಿಯೂ ಇರಬಹುದು. ಮನುಷ್ಯ ಸಂಘಜೀವಿ. ಅವನಿಗೆ ಬಹಳಷ್ಟುಜನರ ಸಖ್ಯವಿರುವುದು ಸಹಜ. ನಮ್ಮಂತೆಯೇ ಬೇರೆಯವರೂ ಸಹಾಯ ಮಾಡಲು ಬಯಸಿದಾಗ, ಮೂರನೆಯ ವ್ಯಕ್ತಿ ಮಧ್ಯೆ ಬಂದು ತಡೆಯುವುದು ಎಷ್ಟು ಸರಿ?. ಕೊಂಕು ನುಡಿಯುವುದು ಎಷ್ಟು ಸರಿ ?ಯೋಚಿಸ ಬೇಕಾದ ವಿಷಯವೇ ಇದು.
ಸರಿಯಾದ ಹದವಿದ್ದಲ್ಲಿ. ಸುಮಧುರ ವಾಸನೆಯ ,ರುಚಿಯಾದ ಆಹಾರ. ಹದಕೆಟ್ಟಲ್ಲಿ , ಒಗರು ಇರಿಸುಮುರಿಸು.
ಹಣ :
ಹಣದ ವಿಚಾರವಂತೂ ಹೇಳುವುದೇ ಬೇಡ. ಹಣ ಎಲ್ಲ ಒಳ್ಳೆಯ ಗುಣಗಳನ್ನೂ ಮುಚ್ಚಿ ಹಾಕುತ್ತದೆ. ಪೆದ್ದನನ್ನು ಬುದ್ಧಿವಂತನನಾಗಿ ಮಾಡುತ್ತದೆ. ಸಮಾಜದಲ್ಲಿ ಪ್ತತಿಷ್ಠೆಯನ್ನು ತಂದುಕೊಡುತ್ತದೆ.ಎಲ್ಲಾ ಸುಖಸೌಲಭ್ಯಗಳನ್ನೂ ಕೊಂಡುಕೊಳ್ಳಬಹುದು.ನಿದ್ರೆ , ಮನಃಶಾಂತಿ ಬಿಟ್ಟು.ಅಹಂಕಾರ, ಹಣದ ಮತ್ತು , ಮನುಷ್ಯನನ್ನು ಬುದ್ಧಿಗೇಡಿಯನ್ನಾಗಿ ಮಾಡಬಹುದು.ಸಂಬಂಧಗಳನ್ನು ದೂರ ಮಾಡಬಹುದು. ಆದುದರಿಂದ ಹಣದ ಸದುಪಯೋಗ ಮಾಡಬೇಕು. ಕಡಿಮೆಯಾದಲ್ಲಿ ದಿನನಿತ್ಯದ ತೊಂದರೆ, ಹೆಚ್ಚಾದಲ್ಲಿ ಕಾಪಾಡಬೇಕಾದ ಹೊಣೆ. ಎರಡೂ ಅಶಾಂತಿಗೆ ದಾರಿ .ನಿದ್ರೆಯನ್ನು ಕಸಿಯುತ್ತವೆ. ಒಳ್ಳೆಯ ಮಾರ್ಗದಿಂದ ಸಂಪಾದನೆ, ನೆಮ್ಮದಿಯ ಜೀವನ. ಸಮಾಜಕ್ಕೂ ನಮ್ಮ ಋಣ ಸಲ್ಲಿಸಬಹುದು.
ಮನಸ್ಸಿನ ಭಾವನೆಗಳು:
ಮನಸ್ಸು ಕ್ಷಣ ಚಿತ್ತ ಕ್ಷಣ ಪಿತ್ತ. ಯಾವಾಗಲೂ ಚಂಚಲ. ಒಳ್ಳೆಯದನ್ನು ನೆನೆಸುವುದಕ್ಕಿಂತ, ಕೆಟ್ಟದ್ದೇ ನೆನಪಾಗುವುದು ಹೆಚ್ಚು.ದ್ವೇಷವೂ ಹುಟ್ಟಿ, ವಿಕೋಪಕ್ಕೆ ಹೋಗುವವು. ಇದು ಒಂದುರೀತಿಯ ವಿಪರೀತ ಖಾರ ಮತ್ತು ಉಪ್ಪಿನ ಸಹವಾಸ. ಎಷ್ಟು ನೀರು ಕುಡಿದರೂ ಇಂಗದ ಬಾಯಾರಿಕೆ. ಮತ್ತು ಜೀರ್ಣ ವಾಗದ ಆಹಾರ. ಮೊದಲು ಹಿತಮಿತವಾದ ಆಹಾರ ಸೇವನೆ, ಸುಲಭ ಜೀರ್ಣಕಾರಿ. ತೃಪ್ತಭಾವ. ಆನಂದಮಯ. ಮನಸ್ಸು ಶಾಂತ.
ಭಾವನೆಗಳ ವಿಕಾರ :
ನಿದ್ರಾನಾಶ, ಅಶಾಂತಿ, ಅಸಹನೆ. ಮುನ್ನಡೆಗೆ ತಡೆ. ಮಾತು ಬೆಳ್ಳಿಯಾದರೆ ಮೌನ ಬಂಗಾರ . ಬಂಗಾರ ಶುದ್ಧತೆಯ ಪ್ರತೀಕ. ಮಾತೇ ಮಿತವಾದಲ್ಲಿ., ಭಾವನೆಗಳ ಮೇಲೆ ಹತೋಟಿ ಸಾಧಿಸಬಗುದು ಎಂದು ಮಹಾಪೆರಿಯವರ ಅಂಬೋಣ . ಮಹಾಪೆರಿಯವರ ಮಹಿಮೆಗಳು, ಗಣೇಶ ಶರ್ಮ ರವರ ಪ್ರವಚನದಿಂದ
- ಮೀನಾಕ್ಷಿ ಮನೋಹರ