‘ಪ್ರೀತಿಯಿದ್ದರೆ ತಾನೇ ಈ ಹೃದಯದಲಿ, ಅದು ಎಂದೋ ಮರುಭೂಮಿಯಾಗಿದೆ’…ಕವಿ ನಾರಾಯಣ ಸ್ವಾಮಿ ಅವರ ‘ಅದೊಂದು ಸುಂದರ ಮುಂಜಾನೆ’ ಕವನದ ಸುಂದರ ಸಾಲುಗಳು, ತಪ್ಪದೆ ಮುಂದೆ ಓದಿ…
ಅದೊಂದು ಸುಂದರ ಮುಂಜಾನೆ
ಅಗಸದಲಿ ಚಂದಿರನು ಮರೆಯಾಗಿ
ಕನಸುಗಳು ಮೂಡುವ ಸಮಯ
ಬೆಚ್ಚಿಬಿದ್ದು ದಿಗ್ಗನೆದ್ದು ದಾರಿಯುದ್ದಕ್ಕೂ
ಒಂಟಿಯಾಗಿ ನಡೆದೆ ಮೌನವಾಗಿ
ಬೆಳಕಾದರೆ ಬದುಕು ಬೆಳಗುವುದೇ ಎಂದು..
ರಾತ್ರಿ ಬೀಸಿದ ಆ ಬಿರುಗಾಳಿಗೆ
ಸುರಿದ ಜೋರು ಮಳೆಗೆ
ಮರಗಿಡಗಳು ಧರೆಗುರುಳಿವೆ
ಬಡವನ ಗುಡಿಸಲು ಗರಿಗಳೆಲ್ಲಾ
ಪಕ್ಕದ ಹೊಲದೊಳಗೆ ಬಿದ್ದಿವೆ
ಹರಕುಮುರುಕು ಪಾತ್ರೆಗಳು
ಮೋರಿಯಲಿ ತೇಲುತ್ತಾ ಹೋಗುತಿವೆ
ಆಗತಾನೆ ಸುರಿದ ಮಳೆಯು ನಿಂತು
ತಣ್ಣನೆಯ ಗಾಳಿ ಬೀಸುತಿದೆ
ಮನಸ್ಸಿನೊಳಗೆ ಮಾತ್ರ ಗರಿಗಳು
ಮರುಕು ಪಾತ್ರೆಗಳೆ ಬಂದು ಹೋಗುತಿವೆ
ನಡೆಯುತಲೆ ಇದ್ದೆ ದಾರಿಯುದ್ದಕ್ಕೂ
ಮಂಜಿನ ಹನಿಗಳಿಗೆ ಮೊಗ್ಗಾಗಿದ್ದ
ಹೂವುಗಳೆಲ್ಲಾ ಅರಳುತಿರುವೆ
ನಗುತ್ತಾ ಕಂಗೊಳಿಸಿ ಘಮವ ಸೂಸುತಿವೆ
ಅದರೆ ಯಾವ ಸುಮವು ನನ್ನದೆಯನು
ಸೆಳೆಯಲಿಲ್ಲ ತಾಕಲಿಲ್ಲ ಕೂಡ….
ಪ್ರೀತಿಯಿದ್ದರೆ ತಾನೇ ಈ ಹೃದಯದಲಿ
ಅದು ಎಂದೋ ಮರುಭೂಮಿಯಾಗಿದೆ
ಬಾಡಿ ಹೋದ ನನ್ನೆದೆಯಲಿ ಪ್ರೇಮವೆಂಬ
ಮಲ್ಲಿಗೆಯ ಗಿಡವ ನೆಟ್ಟು ಮರವನಾಗಿಸಲು
ಸಾಧ್ಯವೆ? ಇಲ್ಲ ….
- ನಾರಾಯಣ ಸ್ವಾಮಿ (ವೃತ್ತಿಯಲ್ಲಿ ವಕೀಲರು, ಹವ್ಯಾಸಿ ಬರಹಗಾರರು, ಕವಿಗಳು)
