‘ಎತ್ತರದ ಗಾತ್ರಕೆ ಕಿರಿಯ ಉಗುರು ಚಿವುಟುತಿದೆ, ಯಾರ ಪ್ರೀತಿಗೆ ಯಾವ ಕಾವಲು?’…..ಡಾ. ಕೃಷ್ಣವೇಣಿ. ಆರ್. ಗೌಡ ಅವರ ಸುಂದರ ಕವನದ ಸಾಲುಗಳನ್ನು ತಪ್ಪದೆ ಮುಂದೆ ಓದಿ…
ಅನುರಾಗದ ಮಾಲೆಗೆ
ಮೌನ ಚಡಪಡಿಸುತಿದೆ.
ಬಿಸಿಲ ಬಾಯಾರಿಕೆಯ ಬರಕ್ಕೆ
ಕೆಂಪು ಗರಿಯು ತಾಳೆ ಹಾಕುತಿದೆ…..
ಸುತ್ತ ಕಿರಣಗಳ ಹಾವಳಿ
ಕಾಮನಬಿಲ್ಲ ಛಾಯೆ
ವಯಸ್ಸ ನೆರಳಿಗೆ
ಹಾದಿ ಹಾಸಿದೆ…..
ದೊಡ್ಡ ಮಹಲ ಛಾವಡಿಗೆ
ನೂರೆಂಟು ಕಿಟಕಿ ಬಾಗಿಲು
ಪೌಳಿ ಅಂಚಿನಿಂದ ಪ್ರೀತಿ
ಬಳ್ಳಿಗಳು ಕಣ್ಣಂಚಲ್ಲಿ
ಗಮನಿಸುತಿದೆ…..
ಒಂದೊಂದು ಮೆಟ್ಟಿಲಿಗೂ
ಒಂದೊಂದು ವಿಚಿತ್ರ ಕಥೆ
ಮನದ ಕಾದಂಬರಿಯ
ಕಣ್ಣ ಒರೆಸಿದೆ…..
ಕೆರೆಯ ಹಸಿರ ನೀರ ಮಧ್ಯೆ
ತಾವರೆಯ ಸೊಬಗು
ಜೀವನದ ಸಂಗ ಬೇಡುತಿದೆ
ಆದರೂ ತೆನೆಯ ಗರಿಕೆ ಹುಲ್ಲು
ತಲೆ ಬಾಗುತಿದೆ…..
ಎತ್ತರದ ಗಾತ್ರಕೆ ಕಿರಿಯ ಉಗುರು ಚಿವುಟುತಿದೆ
ಯಾರ ಪ್ರೀತಿಗೆ ಯಾವ ಕಾವಲು?…..
ಅಡಿಗೆ ಮನೆಯ ಗಾದಿಗೆ
ಬಲ ತೋಳ ಸೆಳೆತ
ಕೈಯ್ಯ ಚಾಚಿದೆ…
ಪಗಾರಾವೆಂಬ ಲೆಕ್ಕಾಚಾರದ ನಡುವೆ ಒಲವು
ತಲೆ ಎತ್ತಿ ಸಾಗರದ ಉಸುಗಲ್ಲಿ
ರಂಗೋಲಿ ಹಾಕಿದೆ….
ಗಂಟುಗಳ ಗುಟುಕಿನಲಿ ಹನಿಯ ಗಂಗಾಜಲ
ಮಲಿನವಿಲ್ಲದೆ ಆಸೆಯ
ಕಳಚುತಿದೆ….
ಆದರೂ ಬಿದಿರ ಮರದ
ಕರ್ಪೂರದಾರತಿ
ನವಜೀವನದ ನವ್ಯತೆಗೆ
ಸ್ವಾಗತಿಸುತಿದೆ.
- ಡಾ. ಕೃಷ್ಣವೇಣಿ. ಆರ್. ಗೌಡ
