ಅಪ್ಪಾ…ಈ ಬಾಳ ಕಥೆಗೆಂದಿಗೂ ನೀ ಕಥಾನಾಯಕ…ಮಹಾಂತೇಶ ರಾಮಪ್ಪ ಕುಂಬಾರ (ಎಮ್ಮಾರ್ಕೆ) ಅವರ ಅಪ್ಪನ ಪ್ರೀತಿ, ವಾತ್ಸಲ್ಯದ ಕುರಿತು ಒಂದು ಕವನ, ತಪ್ಪದೆ ಮುಂದೆ ಓದಿ…
ಹೆಗಲ ಮೇಲೆ ಹೊತ್ತು
ಕುಣಿದ ಜೀವ,
ಹಗಲಿರುಳು ದುಡಿದು
ದಣಿದ ದೇಹ,
ಅಪ್ಪ …ಅಜರಾಮರ
ಬಾಳಬಂಡಿಯ ನೊಗ
ಹೊತ್ತು ನಡೆದ,
ತನ್ನ ಸುಖವ ಲೆಕ್ಕಿಸದೇ
ನಿತ್ಯವು ದುಡಿದ,
ಅಪ್ಪ…ಅದ್ಭುತಶಕ್ತಿ
ಮಡದಿ,ಮಕ್ಕಳುಗಳ
ಇಷ್ಟ ಪೂರೈಸುವ,
ಒಳ್ಳೆ ಭವಿಷ್ಯವ ನೀಡಿ
ಶುಭ ಹಾರೈಸುವ,
ಅಪ್ಪ…ಅಕ್ಷಯಪಾತ್ರೆ
ಅಮ್ಮನಂತೆ ಕಂಬನಿ
ಹರಿಸಿ ತಿಳಿದಿಲ್ಲ,
ಸುರಿದ ಬೆವರು ಹನಿ
ಹಣೆಯಿಂದಿಳಿದಿಲ್ಲ,
ಅಪ್ಪ…ಆದರಣೀಯ
ಈ ಬಾಳ ಕಥೆಗೆಂದಿಗೂ
ನೀ ಕಥಾನಾಯಕ,
ನಿನ್ನ ಋಣವ ತೀರಿಸಲು
ನಾ ನಿಸ್ಸಹಾಯಕ,
ಅಪ್ಪ…ಆಕಾಶದೀಪ
- ಮಹಾಂತೇಶ ರಾಮಪ್ಪ ಕುಂಬಾರ (ಎಮ್ಮಾರ್ಕೆ)
