ಬರಹಗಾರನ ಮೌಲ್ಯ ಹೆಚ್ಚಾಗುವುದು ಅವರಿಗೆ ಪ್ರಶಸ್ತಿ ಬಂದಾಗ ಮಾತ್ರವೇ? ಇಂತಹದೊಂದು ಪ್ರಶ್ನೆ ಸಹಜವಾಗಿಯೇ ಎಲ್ಲರ ಮನದಲ್ಲೂ ಮೂಡಬಹುದು, ಈ ಕುರಿತು ಸಾಹಿತಿ ಡಾ. ಆನಂದ್ ಋಗ್ವೇದಿ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಓದಿ…
ಇದು ಈ ಹೊತ್ತು ದಶಕಗಳಿಂದ ಬರಹಗಾರರಾದ ನಮಗೆಲ್ಲಾ ಎದುರಾಗುತ್ತಿರುವ ಪ್ರಶ್ನೆ! ಈಗೀಗ ಬರಹದ ಮೌಲ್ಯ, ಬರಹಗಾರನ ನಿಜ ಮೌಲ್ಯ ಗಣಿಸಲಾಗುತ್ತಿರುವುದೇ ಈ ಪ್ರಶಸ್ತಿಗಳಿಂದ! ಹಾಗಾಗಿ ಈಗಂತೂ ಪ್ರಶಸ್ತಿಗಳಿಗೆ ತುರುಸಿನ ಸ್ಪರ್ದೆ, ಲಾಬಿ, ಸ್ವಜನ ಸ್ವಪ್ರದೇಶ ಅಭಿಮಾನದ ಪಕ್ಷಪಾತ. ಪ್ರಶಸ್ತಿ ಕುರಿತು ತಹತಹಿಸದ ಸಾಪೇಕ್ಷರಿಗೆ ಅವಗಣನೆಯೇ ಪ್ರಾಶಸ್ತ್ಯ, ಪ್ರಶಸ್ತಿ!
ಎರಡೂವರೆ ದಶಕದ ಕೆಳಗೆ ಬರಹ ಆರಂಭಿಸಿ, ಆರಂಭವನ್ನು ಸ್ಪರ್ಧೆಗಳ ಬಹುಮಾನದ ಮೂಲಕ ಸಂಭ್ರಮಿಸಿದ್ದ ನನ್ನ ಸಮಕಾಲೀನರು ಈಗೀಗ: ಇತ್ತ ಆರಂಭಿಕರಂತೆ ಪ್ರಶಸ್ತಿಗಳ ಸರಮಾಲೆ ಧರಿಸಿ ಕಂಗೊಳಿಸದೆ, ಅತ್ತ ತಾವೇ ನಿರ್ಣಾಯಕರಾಗಿ ಬೆನ್ನು ತಟ್ಟಿ ತಮ್ಮದೇ ಅಭಿಮಾನಿ(ನಿ) ಬಳಗ ಕಟ್ಟಿಕೊಳ್ಳಲಾಗದೇ ತ್ರಿಶಂಕು ಸ್ವರ್ಗದಲ್ಲಿದ್ದಾರೆ! ಅವರೆಲ್ಲರ ಕತೆ ಕವಿತೆ ಲೇಖನ ಪ್ರಬಂಧ ಕಾದಂಬರಿಗಳಿಗೆ ಪ್ರತ್ಯೇಕ ಮನ್ನಣೆ ಸಿಕ್ಕಿವೆ ನಿಜ. ಆದರೆ ಅವುಗಳಿಗಾಗಿ ಇವರು ವಿಶೇಷವಾಗಿ ಪ್ರಯತ್ನಿಸದೇ, ಕೆಲವು ವಯೋಮಿತಿ ನಿಗದಿಪಡಿಸಿದ ಪ್ರಶಸ್ತಿಗಳು ಇವರು ಆಗಷ್ಟೇ ಆ ವಯಸ್ಸಿನ ಗಡಿ ದಾಟಿದ್ದ ಪ್ರಯುಕ್ತ ಸಿಕ್ಕದೇ, ವಯೋಮಿತಿಯಲ್ಲೇ ಇದ್ದರೂ ಕೆಲವೊಮ್ಮೆ ಅಂತಹ ಪ್ರಶಸ್ತಿ ಈ ವರೆಗೆ ಇವರಿಗೆ ಸಿಕ್ಕಿಲ್ಲ ಎಂದು ಕೊಡುವವರಿಗೆ ಗೊತ್ತೇ ಆಗದೇ ಗಮನಾರ್ಹ ಪ್ರಶಸ್ತಿಗಳಿಂದ ವಂಚಿತರಾಗಿದ್ದಾರೆ!
ಬಿಡಿ, ಅಂತಹ ಪ್ರಶಸ್ತಿಗಳಿಂದ ಆಗುವುದಾದರೂ ಏನು? ಎಂದು ಕೇಳಿಬಿಡಬಹುದು. ಆದರೆ ಜ್ಞಾನಪೀಠ ಪ್ರಶಸ್ತಿ ಪಡೆದ ಆ ಎಂಟು ಸಾಹಿತಿಗಳು ಮಾತ್ರ ನಿತ್ಯ ಪೂಜೆಗೊಳ್ಳುತ್ತಿರುವಾಗ ಆ ಪ್ರಶಸ್ತಿ ಬಾರದ ನಮ್ಮ ಲಂಕೇಶ್, ಪೂಚಂತೇ, ಅಡಿಗರು, ನಾಡಿಗರು, ಪುತಿನ, ಕೆಎಸ್ ನ, ಗೊರೂರು, ಡಿವಿಜಿ, ಡಿ ಆರ್….. ಮೊದಲಾದವರ ಸಾಹಿತ್ಯಿಕ ಸಾಂಸ್ಕೃತಿಕ ಮಹತ್ವ ಬಹಳಷ್ಟು ಜನಕ್ಕೆ ಗೊತ್ತಿಲ್ಲ!
ನನ್ನ ಎರಡನೆಯ ಮುದ್ರಿತ ಪುಸ್ತಕ (ಮೊದಲ ನಾಟಕ) ‘ಉರ್ವಿ’ ಗೆ ೨೦೦೩ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ಬಂದಾಗ ನನಗೆ ಕೇವಲ ೨೯ ವರ್ಷ. ೧೮ ಕ್ಕೆ ಈ ಪುರಸ್ಕಾರ ಪಡೆದ ಜಯಂತ್ ಕಾಯ್ಕಿಣಿಯವರೇ ಈ ಪುರಸ್ಕಾರದ ಯಾದಿಯಲ್ಲಿ ಅತ್ಯಂತ ಕಿರಿಯರು. ತಮ್ಮ ೨೫ ರ ವಯಸ್ಸಿನಲ್ಲಿ ಈ ಪುರಸ್ಕಾರ ಪಡೆದ ರವಿ ಬೆಳಗೆರೆ ನಾನೇ ಎರಡನೆಯ ಕಿರಿಯ ಎಂದು ಕರೆದುಕೊಳ್ಳುತ್ತಿದ್ದರು. ಆನಂತರದ ಕಿರಿಯ ನಾನೇ ಇರಬಹುದಾ!!? ಗೊತ್ತಿಲ್ಲ.
ಆದರೆ ಎನಗಿಂತ ಕಿರಿಯರಿಲ್ಲ ಎಂಬುದಷ್ಟೇ ನನಗೆ ಗೊತ್ತು.
- ಡಾ. ಆನಂದ್ ಋಗ್ವೇದಿ – ಸಾಹಿತಿಗಳು