ಒಂದು ಕಲ್ಲು ಶಿಲ್ಪಿಯ ಕೈಗೆ ಸಿಕ್ಕಾಗ ಸುಂದರ ಶಿಲ್ಪವಾಗುವುದು, ಮೇಸ್ತ್ರಿಯ ಕೈಗೆ ಸಿಕ್ಕಾಗ ಮನೆಯ ಅಡಿಪಾಯವಾಗುವುದು, ಗರ್ಭಗುಡಿಯಲ್ಲಿ ಇಟ್ಟಾಗ ದೇವರಾಗುವುದು ಆಹಾ… ಎಂತಹ ಸುಂದರ ಕಲ್ಪನೆ. ಓದಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ…
ಎತ್ತರದ ಮೇರು ಪರ್ವತಗಳ ತುದಿಯಿಂದ
ದಟ್ಟಕಾನನದ ನಡುವೆ ಹೊತ್ತು ತಂದರು
ಬಿಟ್ಟಿ ಸಿಕ್ಕಿದ ಬಂಡೆ ಎಂದು ಜರಿದರೆನ್ನ
ಬಂಡೆಗೂ ಬೆಲೆಯುಂಟು ಕೆತ್ತಿದರೆ ನಯವಾಗಿ
ಇಟ್ಟರೆ ಕಲ್ಲಾದೆ ಕುಟ್ಟಿದರೆ ಜಲ್ಲಿಯಾದೆ
ಕಟ್ಟಿದಾ ಮನೆಗೆ ಅಡಿಪಾಯವಾದೆ
ಮುತ್ತಿನ ಮಹಲಿನ ಗೋಡೆಯಾದೆ
ಮೆಟ್ಟಿಲಾಗಿಹೇ ಮನೆಯ ಮಹಡಿಗೆ
ತಂಗುದಾಣಗಳ ಸೋಪಾನವಾದೆ
ಕನಸುಗಳ ಬೆನ್ನೇರಿದರು ಕಾಲುಚಾಚಿ
ಕನಸೆಲ್ಲ ದಿಟವಾಗಿ ಏರಿದರು ಎತ್ತರೆತ್ತರ
ಹಿಂತಿರುಗಿ ನೋಡದೇ ಹತ್ತಿದರೇ ಬಾನೆತ್ತರ
ನೀ ನೇನೆಂದರಿಯಲೋ ಮನುಜ!?
ಉಳಿಯೇಟಿಗೂ ಮಿಸುಕಾಡಲಿಲ್ಲ
ತಿದ್ದಿದನು ತೀಡಿದನು ಶಿಲ್ಪಿಯವನು
ಅಂಕುಡೊಂಕುಗಳ ರೂಪವಿರಿಸುತ
ನಯವಾದ ಮೂರ್ತಿಯನೆ ಕೆತ್ತಿದನು
ಗರ್ಭ ಗುಡಿಯ ದೇವರೇ ನಾನಾದೆ
ಜೀವಂತ ಶಿಲೆಯಾದೆ ಒಳ ಹೊರಗೆ
ಪೂಜೆಗೈವರು ನಿತ್ಯ ಮಂತ್ರ ಪುಷ್ಪ
ಅರ್ಘ್ಯ ಪಾದ್ಯ ಪಂಚಾಮೃತ ಸ್ನಾನ
ಬೇಡುವಿರಿ ಬೇಕ್ಕಾದ್ದು ಭಕ್ತಿಯಲಿ ಮಿಂದು
ಎಲ್ಲಿಯದು ಈ ನಂಟು ನಿಮ್ಮೊಡನೆ ಇಂದು
ಸದ್ದು ಗದ್ದಲವಿಲ್ಲದೆ ಏಕಾಂಗಿಯಾಗಿದ್ದೆ
ಕಾಡು ಮೇಡಿನ ಭಯವೇನೆಂದರಿಯದೆ
ಮಳೆಗೆ ತೋಯಲಿಲ್ಲ ಬಿಸಿಲಿಗೆ ಬೇಯಲಿಲ್ಲ
ಹಿಮದ ಚಳಿ ಗಾಳಿಯು ಆವರಿಸಲಿಲ್ಲ
ದಿಟ್ಟತನದ ಹಾದಿಯಲಿ ಅತ್ತಿತ್ತ ಕದಲಿಲ್ಲ
ಭಕ್ತಿಯ ಹಾದಿಯಲಿ ಎನ್ನ ತಂದಿಟ್ಟಿರಲ್ಲ
ಕಷ್ಟಗಳ ಮಳೆ ಸುರಿಯೆ ಕಲ್ಲಾಗಿಬಿಡಿ
ಎಲ್ಲ ಸಹಿಸುವಿರಾಗ ನನ್ನಂತೆ ನೀವಿಲ್ಲಿ
ಸಿಹಿ ಕಹಿಯ ಸಮ ಬಾಳು ಬಾಳುವಿರಿ
ನೀನೇನೆಂದರಿಯಬಹುದೋ ಮನುಜ
- ಕಸುಜ (ಜಯಶ್ರೀ ಕಟ್ಟೆಪುರ ಸುಬ್ಬರಾವ್ )