ನೇರನುಡಿಗಳಿಂದ ಜಗಕ್ಕೆ ಬೆಳಕಾದ ಚಳುವಳಿಗಾರ ಹನ್ನೆರಡನೇ ಶತಮಾನದಿಂದ ವಿಶ್ವದಗುರು ಬಸವೇಶ್ವರ…ಪತ್ರಿಕೋದ್ಯಮದ ವಿದ್ಯಾರ್ಥಿ ಜಿ.ಎಸ್. ಶರಣು ಅವರ ರಚನೆಯ ಈ ಕವನವನ್ನು ತಪ್ಪದೆ ಮುಂದೆ ಓದಿ…
ಕನ್ನಡದ ಕ್ರಾಂತಿಕಾರಿ ಜಗಜ್ಯೋತಿ ವಚನಕಾರ
ದಯವೇ ಧರ್ಮದ ಮೂಲವೆಂದ ಬಂಡಾಯಗಾರ
ನೇರನುಡಿಗಳಿಂದ ಜಗಕ್ಕೆ ಬೆಳಕಾದ ಚಳುವಳಿಗಾರ
ಹನ್ನೆರಡನೇ ಶತಮಾನದಿಂದ ವಿಶ್ವದಗುರು ಬಸವೇಶ್ವರ
ಗುಡಿ ಗುಂಡಾರಗಳಲ್ಲಿ ದೇವರನ್ನು ಕಾಣಲಿಲ್ಲ
ಮನುಷ್ಯತ್ವದ ಅರಿವು ಮೂಡಿಸೋದು ನಿಲ್ಲಿಸಲಿಲ್ಲ
ಸಮಾನತೆಯ ಆಶಯ ಸಾರೋದು ಬಿಡಲಿಲ್ಲ
ಬದಲಾವಣೆಯ ಸಂಕೇತ ನೀನೆ ಬಸವೇಶ್ವರ
ಜಾತಿ-ಜಾತಿಗಳ ನಡುವೆ ಸಂಬಂಧ ಬೆಸೆಯಲು
ದ್ವೇಷ, ಅಸೂಯೆ ಸುಟ್ಟು ಪ್ರೀತಿ ಉಳಿಸಲು
ಅಸ್ಪೃಶ್ಯತೆಯ ವಿರುದ್ಧ ಚಳುವಳಿ ಕಟ್ಟಲು
ಸಾವಿರ ಶರಣರ ಒಗ್ಗೂಡಿಸಿದ ಶಕ್ತಿ ಬಸವೇಶ್ವರ
ಹೆಣ್ಣು-ಗಂಡು ನಡುವಣ ಲಿಂಗಭಾವ ಮರೆತು
ಮೇಲು-ಕೀಳುಗಳ ಮಧ್ಯದ ಬೇಧ ತೊರೆದು
ಜೀವನದೂದ್ದಕ್ಕೂ ನೊಂದ ಜೀವಗಳ ಕಣ್ಣೀರ ಒರೆಸುತ
ಇವನಾರವ ಎನ್ನದೇ ಇವನಮ್ಮವ ಎಂದೆ ಬಸವೇಶ್ವರ
ಸಾವಿರ ವರುಷ ಕಳೆದರು ನೆಲದ ಕ್ರಾಂತಿ ಬಸವೇಶ್ವರ
ಪ್ರೀತಿಯ ದಯೆ ಬಯಸಿದ ಮಹಾನ್ ಮಾನವತಾವದಿ
ವೈಚಾರಿಕತೆಯ ಪ್ರಜ್ಞೆ ಮೂಡಿಸಿದ ಜಗತ್ ವಿಜ್ಞಾನಿ
ಭಕ್ತಿ ಭಂಡಾರಿಗೆ ಕೋಟಿ ಶರಣು ಕೋಟಿ ಕೋಟಿ ಶರಣು
- – ಜಿ.ಎಸ್. ಶರಣು
