ಕೊರೋನಾ ಶುದ್ಧ ಸುಳ್ಳು ಅಂತ ಮಾಸ್ಕ್ ಹಾಕದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ದರೇ ಏನಾಗುತ್ತೆ?…ಕಮಲಮ್ಮನ ಕಟ್ಟಿ ಕತಿ ಓದ್ರಿ . ನಿಮ್ಮ ಬೇಜವಾಬ್ದಾರಿತನ ಬೇರೆಯವರ ಜೀವಕ್ಕೆ ತುತ್ತಾಗಬಾರದು.ಮುಂದೆ ಓದಿ …
‘ಸುಶೀಲಾ… ಮೊನ್ನೆ ನನ್ನ ಕಾಕು ಮಗಳ engagement ಇತ್ತರೀ. ಈ ಕೊರೋನಾಕ್ಕ ನಮ್ಮ ಯಜಮಾನರು ಎಲ್ಲೂ ಹೋಗೋದು ಬೇಡ ಅಂತ ಹಠ ಹಿಡಿದ ಕೂತಿದ್ರು ರೀ…ಒಂದು ಮಾತ್ ಹೇಳಲೇನ್ರಿ, ಕರೋನ- ಗಿರೋಣ ಎಲ್ಲ ಈ ರಾಜಕೀಯ ಮಂದಿ ಹಬ್ಬಿಸಿರೋ ತಂತ್ರ ರೀ…ಕೊರೋನಾ ಇದ್ದಿದ್ರ ಎಲೆಕ್ಷನ್ ನಾಗ ಹಿಂಗ ಜನನ ಸೇರಸ್ತೀದ್ರಾ?…ಅವರಗೂ ಜೀವದ ಮೇಲೆ ಅಂಜಿಕೆ ಇರಲೇನು? ಎಲ್ಲಾ ನಾಟಕ ರೀ … ಅದಕ್ಕ ನನ್ನ ಗಂಡಗ ಸೊಚ್ಚಾಗಿ ಹೇಳಿದೆ… ನೀವು ಬರ್ಲಿಲ್ಲ ಅಂದ್ರ ಅಷ್ಟಕ್ಕ, ನಾನಂತೂ ಹೋಗಕೆ ಅಂದೆ. ಪಾಪ ನೋಡ್ರಿ… ಅಷ್ಟ ಹೇಳಿದ್ದೆ ತಡ, ಊಟದ ತ್ರಾಸ ಆಕೈತಿ ಅಲ್ಲ, ಅದಕ್ಕ ಅವರ ಆಫೀಸ್ ಗೆ ರಜಾ ಹಾಕೇಬಿಟ್ರು. ಇನ್ನ ವಯಸ್ಸಾದ ನಮ್ಮತ್ತಿನ ಎಲ್ಲಿ ಬಿಡೋದು? ಇರೋರು ಇವರ ಒಬ್ಬ ಮಗ, ಹಂಗೂ – ಹಿಂಗೂ ಹೇಳಿ ಅವರನ್ನು ರೆಡಿ ಮಾಡೇಬಿಟ್ಟೇ. ನನ್ನ ಮಗಳು ಮಮ್ಮಿ …ಕೊರೋನಾಕ್ಕ goverment ನನ್ನ exam cancel ಮಾಡೈತಿ. ಓದಿ.. ಓದಿ… ಸಾಕಾಗೈತಿ, ನಾನು ನನ್ನ ಫ್ರೆಂಡ್ಸ್ ಸೇರ್ಕೊಂಡು ಯಾವುದಾದ್ರೂ ರೆಸಾರ್ಟ್ ಹೋಗಬೇಕು ಅಂತ ಅನ್ಕೊಂಡೇವಿ. ನೀವೆಲ್ಲಾ ಹೋಗ್ಬರಿ ಅಂದ್ಲು. ವಯಸ್ಸಿನ ಹುಡುಗರ ಆಸೇನ ಬ್ಯಾರೆ ನೋಡ್ರಿ… ಅದಕ್ಕ ಅಕಿ ಪಾಡಿಗೆ ಆಕಿನ ಕಳುಹಿಸಿ , ನಮ್ಮ ಪಾಡಿಗೆ ನಾವು engagement ಕಡಿಗೆ ನಡದ್ವಿ.
ಅಬ್ಬಾ… ಏನ್ function ರೀ… ಒಬ್ಬಳ ಮಗಳು. ಎಲ್ ನೋಡ್ತಿ ಬಂಗಾರ, ಸೀರಿ, ಬಿಟ್ರ ಮತ್ತೇನು ಇಲ್ಲಾರೀ…ನಾನು ನಮ್ಮ ಯಜಮಾನ್ರಿಗೆ ಹೇಳೇಬಿಟ್ಟೀನಿ, ನನ್ನ ಮಗಳ engagement ಈ ತಾರಾ ಖಾಲಿಪೀಲಿ ಮಾಡೋಂಗಿಲ್ಲಾಂತ. ಅಂದಹಂಗ, ಅಷ್ಟು ದುಡ್ಡು ಇರೋರು engagement ಗೆ ಜನನ ಸೇರಿಸಿರಲಿಲ್ಲ, ಜನನ ಹೆಂಗ ಕಾಯ್ಕೊಂಡರೋ ಏನೋ …. ಸರ್ಕಾರ permission ಕೊಟ್ಟಷ್ಟ ಜನ ಸೇರಿತ ಬಿಡ್ರಿ. ಅದರ ಮೇಲೆ ಒಬ್ಬರೂ ಇಲ್ಲ ಮತ್… ನಮ್ಮ ಚಿನ್ನು engagement ಇದಿದ್ದರ, ಕೊರೋನಾ ಇರಲಿ ಬಿಡ್ಲಿ, ಊರ ಜನ ಸೇರಿಸಿ ಊಟ ಹಾಕ್ತಿದ್ದೆ ನೋಡ್ರಿ.. ದುಡ್ಡು ಇರೋರಿಗೆ ಈ ಕೊರೋನಾ ನೇವಾ ಆಗೈತಿ ರೀ… ಏನೋ ದೂರದ ಸಂಬಂಧಿಕರೆಲ್ಲ ಭೇಟಿ ಆದ್ರಂತ ಸಮಾಧಾನ ಆತು ಅಷ್ಟ ಮತ್ತ…. ಸರಿ ರೀ…ಅಡಗಿ ಮಾಡೋದೈತಿ. ಅತ್ತಿ ಕಾಲ್ ನೋವು ಅಂತಿದ್ರು , ಎಣ್ಣಿ ಹಚ್ಚಬೇಕು ಬರ್ತೀನಿ ರೀ…’
ಮಾರನೇಯ ದಿನ …
‘ಸುಶೀಲಾ…ಸುಶೀಲಾ… ಅಡುಗೆ ಆತೇನ್ರೀ ? ಬನ್ರೀ… ಸ್ವಲ್ಪತ್ತು… ಕಟ್ಟಿಗೆ ಕೂತು, ಮತ್ತ ಅಡುಗಿ ಮನಿಯತ್ತ ಹೋಗೋಣ. ಸುಶೀಲಾ …ನಮ್ಮ ರಸ್ತೆ ಆ ಕಡೆ ಒಂದು ಹೊಸ resturent open ಆಗೇತಿ ನೋಡೀರೇನು?. opening ದಿನ ನಾನು, ಚಿನ್ನು ಪಿಜ್ಜಾ ತಿನ್ನೋನು ಅಂತ ಹೊರಟಿದ್ವಿ. ಅಲ್ಲಿ ಜನ ಸೇರಿದ್ದು ನೋಡಿ, ಚಿನ್ನು ಗಾಡಿ ನಿಲ್ಲಿಸಿದ್ಲು. ಇಣುಕಿ ನೋಡಿದ್ರೆ ಅದರ opening ಗೆ ನಮ್ಮ ವಾರೇವಾಹ್ ಸ್ಟಾರ್ ರಾಮ್ ಬಂದಿದ್ದಾ ರೀ…ಏನು ಹುಬ್ಬು, ಏನು ಕಲರ್ ರೀ ಅವಂದು, ಫೋಟೋಗಂತ ಅವನು ಮಾಸ್ಕ್ ಹಾಕಿರಲಿಲ್ಲ. ಎಷ್ಟು ಚಂದ ಇದ್ದಾನ ರೀ…ಕರೋನ ಅನ್ನೋದು ಶುದ್ಧ ಸುಳ್ಳು ರೀ…ರಾಮ್, ಅಲ್ಲೇ …ಜನದ ಜಾತ್ರೆಯಲ್ಲೇ ದೋಸೆ ತಿಂದಾ ರಿ…
ನಾನು, ಚಿನ್ನು ಪಿಜ್ಜಾ ಬಿಟ್ಟ್, ಜನದಾಗ ನುಗ್ಗಿ ದೋಸೆ ತಗೊಂಡು ತಿಂದ್ವಿ ರೀ… ಅಲ್ಲಿ ದೋಸೆ ಹಂಗ ಎಲ್ಲೂ ನಾ ತಿಂದಿಲ್ರಿ. ತುಪ್ಪದಾಗ ಮಾಡತ್ತಾರ್ ನೋಡ್ರಿ, ಏನ್ ರುಚಿ ರೀ. ನೀವು ತಿಂದ್ರ ಮುಗೀತು… ದಿನಾ ತಿನ್ನೋಕ ಹೋಗೋಣ ಅಂತ ಕರೀತಿ ರೀ ..ಅಷ್ಟು ಛಲೋ ಐತಿ. ನಮ್ಮ ಚಿನ್ನುಗಂತೂ ಅಲ್ಲಿ ಪಾನಿ- ಪುರಿ ಹುಚ್ಚ ಹಿಡಿಸೈತಿ. ದಿನ ಸಾಯಂಕಾಲ ಆತಂದ್ರ ಅಲ್ಲಿಂದ ಮನಿಗೆ ಪಾನಿ ಪುರಿ ಪಾರ್ಸೆಲ್ ಬರ್ತದ. ಅಕಿ ಜೊತೆ ನಾವು ಸ್ವಾಹಾ ಮಾಡತ್ತೀವಿ. ನೋಡ್ರಿ…
ಅಂದಹಾಗ್ ನಿನ್ನೆ ಯಾಕೋ ನಮ್ಮ ಯಜಮಾನ್ರು ಮೈಕೈ ನೋವು ಅಂತಿದ್ರು ರೀ…ರಾತ್ರೇಲ್ಲಾ ಮೈ ಒತ್ತೋದ ಆತು,ನಿದ್ದೇನೆ ಮಾಡಿಲ್ಲ ರೀ. ಅದಕ್ಕ ನಮ್ಮ ಚಿನ್ನು ಗೆ ಬೆಳಗ್ಗೆ ತಿಂಡಿಗೆ ಹೋಟೆಲ್ ನಿಂದ ಇಡ್ಲಿ,ದೋಸೆ ORDER ಮಾಡು ಅಂದೆ. ಅದ ತಿಂಡಿ ಆತು. ಅದರ ಸಾರು, ಸಾಗು ಉಳಿದೈತಿ. ಅದಕ್ಕ ಬಿಸಿ ಬಿಸಿ ಅನ್ನ ಮಾಡಿಕೊಂಡ್ರ ಮಧ್ಯಾಹ್ನದ ಊಟನು ಆತು.
ಅಯ್ಯೋ… ಯಾಕೋ ನಮ್ಮ ಯಜಮಾನ್ರು ಕರೀಲಿಕತ್ತಾರು, ಸಂಜಿ ಮ್ಯಾಗ್ ಬರ್ತೀನಿ.
ಎರಡು ದಿನ ಕಳೆದ್ರೂ ಕಮಲಮ್ಮ ಕಟ್ಟಿಗೆ ಕತೆ ಹೇಳೋಕೆ ಬರಲೇ ಇಲ್ಲ. ಮನೆಯಲ್ಲೂ ಕಾಣಲಿಲ್ಲ. ಮೂರನೇಯ ದಿನ ಸುಶೀಲಮ್ಮನ ಮೊಬೈಲ್ ಗೆ ಕಮಲಮ್ಮನ whats app massage ಬಂತು. massage ನಲ್ಲಿ ಹೀಗಿತ್ತು ‘ನನಗೆ ಮತ್ತು ನನ್ನ ಕುಟುಂಬಕ್ಕೆ ಕೊರೋನಾ ಸೋಂಕಿರುವುದರಿಂದ ನಮ್ಮ ಕುಟುಂಬ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದೆ.ನಮ್ಮ ಸಂಪರ್ಕದಲ್ಲಿದ್ದವರು ಕೊರೋನಾ TEST ಮಾಡಿಸಿಕೊಳ್ಳಿ. ಅಂದ ಹಂಗ ನಮ್ಮ ವಾರೆವಾಹ್ ಸ್ಟಾರ್ ರಾಮ್ ನಮ್ಮ ಆಸ್ಪತ್ರೆಗೆ ಬಂದಾನು ರೀ… ಅವಂಗೂ ಕೊರೋನಾ ಪಾಸಿಟಿವ್ ರೀ ‘ .
massage ಓದಿದ ಸುಶೀಲಮ್ಮನ ಮೈ ಬೆವರಿತು…
- ಶಾಲಿನಿ ಹೂಲಿ ಪ್ರದೀಪ್
