ಕೊಟ್ರೇಶ ಜವಳಿ ಅವರ ‘ಕಾವ್ಯ ಕಲ್ಪವಲ್ಲರಿ’ ಕೃತಿಯಲ್ಲಿ ಒಟ್ಟು 60 ಕವನಗಳಿದ್ದು, ಕವನದ ಸಾಲುಗಳನ್ನು ಓದುವಾಗ ಶಿಶುನಾಳ ಶರೀಫರು ತತ್ವಪದಗಳು ನೆನಪಿಗೆ ಬರುತ್ತದೆ.ಲೇಖಕಿ ಸವಿತಾ ಮುದ್ಗಲ್ ಅವರು ಕವನ ಸಂಕಲನದ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಕಾವ್ಯ ಕಲ್ಪವಲ್ಲರಿ
ಕವಿಗಳು : ಶ್ರೀ ಕೊಟ್ರೇಶ ಜವಳಿ
ಪ್ರಕಾರ : ಕವನ ಸಂಕಲನ
ಪ್ರಕಾಶಕರು : ಶೋಭಾ ಪ್ರಕಾಶನ, ಹೂವಿನ ಹಡಗಲಿ
ಮೊಬೈಲ್ ಸಂಖ್ಯೆ :997243963
ಮುಖಪುಟ ಮತ್ತು ವಾಟ್ಸಾಪ್ ಸಾಹಿತ್ಯದ ವಲಯದಲ್ಲಿ ಎಲ್ಲರು ನಿತ್ಯ ಭಾಗವಹಿಸಿ ತಮ್ಮದೇ ಆದ ಶೈಲಿಯ ಬರವಣಿಗೆಯಲ್ಲಿ ಗುರುತಿಸಿಕೊಂಡು ಬರೆಯುವವರ ಸಂಖ್ಯೆ ಗಣನೀಯವಾಗಿ ಕಾಣಬಹುದು. ಗದಗ ಜಿಲ್ಲೆಯ ಮುಂಡರಗಿ ತಾಲೂಕು ಹಿರೇವಡ್ಡಟ್ಟಿ ಶ್ರೀ ಕೊಟ್ರೇಶ ಜವಳಿಯವರು ಕೂಡ ಇತ್ತೀಚಿನ ವರ್ಷಗಳಲ್ಲಿ ತಮ್ಮ ಬರವಣಿಗೆ ಪ್ರಾರಂಭ ಮಾಡಿ ಸಾಹಿತ್ಯ ರಚನೆಯಲ್ಲಿ ಪಾಲ್ಗೊಂಡಿದ್ದಾರೆ. ನಮ್ಮ ಬರಹಗಳನ್ನು ಒಂದೆಡೆ ಕೂಡಿಸಿ ಮುದ್ರಿಸಿದರೆ ಅದಕ್ಕೊಂದು ಸಂತೋಷ.
“ಕಾವ್ಯ ಕಲ್ಪವಲ್ಲರಿ” ಇದು ಕೃತಿಯ ಹಾಗೆ ಎಲ್ಲಾ ಕವನ ರಚನೆಗಳು ಹಾಗೆಯೇ ಅರ್ಥಪೂರ್ಣವಾಗಿ ರಚಿತವಾಗಿವೆ ಮತ್ತು ಮುಖಪುಟದ ವಿನ್ಯಾಸ ನೋಡುಗರ ಮನ ಸೆಳೆಯುತ್ತದೆ.
ಈ ಕೃತಿಯಲ್ಲಿ ಒಟ್ಟು 60 ಕವನಗಳಿಂದ ಕೂಡಿದ್ದು ಇದರಲ್ಲಿ ಮಕ್ಕಳ ಕವಿತೆ, ಭಕ್ತಿ ಗೀತೆ, ದೇಶ ಭಕ್ತಿ, ತಾಯಿಯ ಮಮತೆ, ಪೌರಾಣಿಕ, ಕೃಷಿ, ಸಂಸಾರಕ್ಕೆ ಹೀಗೆ ಎಲ್ಲ ವಿವಿಧ ರೀತಿಯಲ್ಲಿ ಸಂಬಂಧಿಸಿದ ಕವನಗಳನ್ನು ನೋಡಬಹುದು.

ಕವಿತೆಗಳ ರಚನೆಯು ಭಾವನೆಗಳು ಮೂಡಿದಾಗ, ಜೀವನದಲ್ಲಿ ಅನುಭವಿಸಿದ ನೋವು ನಲಿವಿನ ಸಮ್ಮಿಶ್ರಣವನ್ನು ಅಕ್ಷರ ರೂಪಕ್ಕೆ ತರುವುದರ ಜೊತೆಗೆ ಸರಿಯಾದ ಲಯ ಬದ್ಧವಾದ, ಕೆಲವೊಂದು ಕವನಗಳಿಗೆ ಪ್ರಾಸಬದ್ದವಾಗಿ ರಚನೆಯಾದರೆ ಅಲ್ಲಿ ಕವನಕ್ಕೊಂದು ಅರ್ಥ ರಚನೆಯಾಗುತ್ತದೆ. ಕವನ ಬರೆದಾಗ ಅದು ಅತೀ ಸರಳವಾಗಿ ರಚನೆಯಾದರೆ ಓದುಗರಿಗೆ ಇಷ್ಟವಾಗಿ ಮನಸ್ಸಿಗೆ ತುಂಬಾ ಹತ್ತಿರವಾಗುತ್ತದೆ. ಕವನ ಕಟ್ಟುವ ಕಲೆ ಎಲ್ಲರಲ್ಲೂ ಇದ್ದರು ಅದು ನಿರಂತರ ಭಾವದ ಜೊತೆಗೆ ಒಡನಾಡಿಯಾಗಿ ಬರೆಯುವವರೆಗೆ ನಮ್ಮನ್ನು ತಂದಿಡುತ್ತದೆ.
ಕೃತಿಗೆ ಮುನ್ನುಡಿಯನ್ನು ಶ್ರೀ ಹರಿನರಸಿಂಹ ಉಪಾಧ್ಯಾಯ ಸಾಹಿತಿಗಳು, ಶಂಭೂರು, ಬಂಟ್ವಾಳ ತಾಲೂಕು, ದ.ಕನ್ನಡ ಇವರಿಂದ, ಕಾವ್ಯ ಕಲ್ಪವಲ್ಲರಿಯಲ್ಲಿ ಎಲ್ಲಾ ಕವನ ವೈವಿದ್ಯಮಾಯವಾಗಿದ್ದು ಓದುತ್ತಿದ್ದಂತೆ ನಮ್ಮಲ್ಲಿ ಚಿಂತನೆಯ ಮೂಡುತ್ತದೆ ಎಂದು ತಿಳಿಸಿದ್ದಾರೆ.
“ನಿಲ್ಲು ಮನಸೇ ಸಿಗುವಂತೆ ಹಿಡಿತಕೆ
ಓಡದಿರು ಬಿಸುಲ್ಗುದುರೆಯಂತೆ
ಮಾಡು ಎನ್ನ ಹೃದಯ ಅರಳುವಂತೆ
ನಾನಿರುವ ಜಾಗ ಭವದ ಸಂತೆ”
ಈ ನಾಲ್ಕು ಸಾಲುಗಳಿಂದ ಕವನದ ಸಾರ ಅರಿತುಕೊಳ್ಳಲು ಸಾಧ್ಯವೆಂದು ಕವಿಯ ಬಗ್ಗೆ ಹೇಳಿದ್ದಾರೆ. ಇನ್ನು ಕೃತಿಗೆ ಬೆನ್ನುಡಿಯನ್ನು ಶ್ರೀ ಮತಿ ಶೋಭಾ ಪ್ರಕಾಶ್, ಮಲ್ಕಿ ಒಡೆಯರ್, ಲೇಖಕಿ, ಹೂವಿನ ಹಡಗಲಿಯವರು ಬರವಣಿಗೆಯಲ್ಲಿ ಪ್ರಭುದ್ದತೆ ಅಡಕವಾಗಿದೆ ಹಾಗೂ ಅವರು ಬದುಕನ್ನು ಸಾಕಷ್ಟು ಮಜಲುಗಳಲ್ಲಿ ಕಂಡಿರುವ ಕಾರಣ ರಚನೆಯಾಗಲು ಅಭಿವ್ಯಕ್ತ ಪಡಿಸಲು ಕಾರಣವೆಂದು ಸೊಗಸಾಗಿ ಬರೆದಿದ್ದಾರೆ.

ಕಾವ್ಯ ಕಲ್ಪವಲ್ಲರಿಯ ಒಂದು ರಚನೆ ಮುರುಕು ಜಂತಿಯ ಒಂದೆರಡು ಸಾಲುಗಳು…
ಮೈತುಂಬ ಗುಂಗಾಡಿ ಕೊರೆದು ಒಂಬತ್ತು ರಂಧ್ರ ಮಾಡೈತಿ /
ಸೋರುವ ನಾರುವ ತೂತು
ತನಗೆ ತಿಳಿದಿಲ್ಲ ತನ್ನ ಗತಿ/…
ಎಲ್ಲಾ ಭಾರ ನಾನೆ ಹೊತ್ತೀನಿ ಅಂತೈತಿ /
ಜಗ ಭಾರ ಹೊತ್ತ ಆದಿಶೇಷನ ವಂಶಸ್ತ ನಾನು ಅಂತೈತಿ /..
ಹೀಗೆ ಕವನದ ಸಾಲುಗಳನ್ನ ಓದಿದಾಗ ತತ್ವಪದಗಳ ರಚನೆಯಂತಿದ್ದರು ಇದನ್ ಓದುವಾಗ ಶಿಶುನಾಳ ಶರೀಫರು ನೆನೆಪು ಮೂಡುತ್ತದೆ. ನಾನು ಅನ್ನುವ ಅಹಂ ಏನೆಲ್ಲಾ ಹೇಳುತ್ತದೆ ಅನ್ನುವ ಈ ಮೇಲಿನ ಸಾಲುಗಳು ಅಕ್ಷರರೂಪದಲ್ಲಿ ರಚನೆ ಬಲು ಅರ್ಥಪೂರ್ಣವಾಗಿದೆ. ಮೊದಲ ಕವನ ಮಂಗಲ ಮೂರುತಿ ಅಯ್ಯಪ್ಪನ ಕುರಿತು, ಬೇಂದ್ರೆ ಅಜ್ಜನ ವ್ಯಕ್ತಿ ಚಿತ್ರಣದ ಕವಿತೆ,ದ್ರೌಪದಿ, ಶಾಸಕರಿಗೆ ಪತ್ರ, ರೈತರ ಬಗ್ಗೆ ಬರೆದ ಸಾಲ ಶೂಲದ ಕವಿತೆಗಳು ಹೀಗೆ ಒಂದಕ್ಕಿಂತ ಒಂದು ವೈವಿದ್ಯಮಯವಾಗಿ ರಚಿಸಿದ ಇದೊಂದು ಕನ್ನಡದ ಉದಯನೋನ್ಮುಖ ಬರಹಗಾರರ ಕೃತಿ ಸಂಕಲನವಾಗಿದೆ.
ಮತ್ತಷ್ಟು ಸ್ವಾರಸ್ವರತ ಕವನಗಳು ಇವರ ಲೇಖನಿ ಮೂಲಕ ಹೊರ ಹೊಮ್ಮಲಿ ಹಾಗೂ ಕನ್ನಡದ ಮನ ಮನೆಗಳೆಲ್ಲ ಸೇರಲಿ, ಸಾಹಿತ್ಯದ ಮೊದಲ ಹೆಜ್ಜೆಗೆ ಶುಭವಾಗಲಿ ಎನ್ನುತ್ತಾ ಕೃತಿಯ ಕಿರು ಪರಿಚಯವನ್ನು ಮುಕ್ತಾಯ ಮಾಡಿರುವೆ.
- ಸವಿತಾ ಮುದ್ಗಲ್ – ಬಳ್ಳಾರಿ
