‘ಮದುವೆ ಎನ್ನುವುದು ಮೂರು ಗಂಟಿನಲ್ಲಿ ಮುಗಿಯುವುದಿಲ್ಲ. ಅಲ್ಲಿಂದಲೇ ಆರಂಭ. ಸಂಸಾರದ ನೌಕೆ ಸುಮುಧುರವಾಗಿ ಸಾಗಬೇಕು ಎಂದರೆ ಮದುವೆ ಮುಂಚೆಯೇ ನಿಮ್ಮ ಭಾವನೆಗಳನ್ನು ಅಪ್ಪ ಅಮ್ಮನಿಗೆ ಹೇಳಬೇಕು.ಪ್ರೀತಿಸಿದ್ದರೆ ಧೈರ್ಯವಾಗಿ ಹೇಳಿ ಅದರಲ್ಲಿ ತಪ್ಪಿಲ್ಲ’ – ನಟರಾಜು ಮೈದನಹಳ್ಳಿ ಅವರ ಲೇಖನಿಯಲ್ಲಿ ಮದುವೆ ಕುರಿತಾದ ಲೇಖನ,ತಪ್ಪದೆ ಓದಿ…
ನಿಮಗೆ ಈಗಲೇ ಮದುವೆಯಾಗಲು ಇಷ್ಟವಿಲ್ಲದಿದ್ದರೆ ಅಥವಾ ಯಾರನ್ನಾದರೂ ಲವ್ ಮಾಡುತ್ತಿದ್ದು ಅವರನ್ನೇ ಮದುವೆಯಾಗಬೇಕೆಂದು ತೀರ್ಮಾನಿಸಿದ್ದರೆ ಒಂದು ವಿನಂತಿ. ನಿಮ್ಮ ಅಪ್ಪ ಅಮ್ಮ ನಿಮಗೆ ಮದುವೆ ಮಾಡಲು ಗಂಡು ಅಥವಾ ಹೆಣ್ಣನ್ನು ಹುಡುಕುತ್ತಿದ್ದಾರೆ ಎಂದು ಗೊತ್ತಾದ ತಕ್ಷಣ ಧೈರ್ಯವಾಗಿ ಹೇಳಿ. “ನೀವು ನನಗೆ ಸಂಗಾತಿಯನ್ನು ಹುಡುಕುವುದು ಬೇಡ, ನನಗೆ ಈಗಲೇ ಮದುವೆಯಾಗುವುದು ಇಷ್ಟವಿಲ್ಲ ಅಥವಾ ನಾನು ಒಬ್ಬರನ್ನು ಲವ್ ಮಾಡುತ್ತಿದ್ದೇನೆ, ಅವರನ್ನೇ ಮದುವೆಯಾಗುವುದು ” ಅಂಥ. ಮದುವೆ ನಿಶ್ಚಯವಾದ ಮೇಲೆ ಅಥವಾ ಎಂಗೇಜ್ ಮೆಂಟ್ ಆದ ಮೇಲೆ ನೀವು “ನನಗೆ ಮದುವೆ ಇಷ್ಟವಿಲ್ಲ’ ಎಂದು ಖಡಾಖಂಡಿತವಾಗಿ ಹೇಳಿ ಮದುವೆ ಮುರಿದುಕೊಂಡರೆ, ನಿಮ್ಮ ತಂದೆ ತಾಯಿಯರಿಗೆ ಬಹಳ ನೋವು, ದುಃಖ, ಸಂಕಟ ಕೊಡುತ್ತೀರಿ.
ಸಂಬಂಧಿಕರು ಹಾಗೂ ಸಮಾಜದ ಜನರ ಬಾಯಿಗೆ ನೀವು ಅನಗತ್ಯವಾಗಿ ಸಿಕ್ಕಿ ಮನೆಯ ಮರ್ಯಾದೆ ಹೋಗುತ್ತದೆ. ಅದರ ಬದಲು ಮೊದಲೇ ಹೇಳಿದರೆ ಎಷ್ಟೋ ವಾಸಿ. ಈಗ ತಂದೆ ತಾಯಿಯರು ಬದಲಾಗಿದ್ದಾರೆ. ನೀವು ಲವ್ ಮಾಡುತ್ತಿದ್ದೀರ ಎಂದು ಗೊತ್ತಾದಾಗ ಸ್ವಲ್ಪ ಸಿಟ್ಟು, ಬೇಸರ ವ್ಯಕ್ತ ಪಡಿಸಿದರೂ ‘ ಮಕ್ಕಳ ಇಷ್ಟಕ್ಕೆ ನಾವ್ಯಾಕೆ ಅಡ್ಡಿ ಮಾಡುವುದು. ಮುಂದೆ ಬಾಳ ಬೇಕಾದವರು ಅವರೇ ತಾನೇ’ ಅಂಥ ಯೋಚಿಸಿ ಪ್ರೀತಿಸಿದವರ ಜೊತೆಯೇ ಮದುವೆ ಮಾಡುವಷ್ಟು ಲಿಬರಲ್ ಆಗಿದ್ದಾರೆ. ಅದರಲ್ಲಿಯೂ ಬೆಂಗಳೂರಿನಂತಹ ಸಿಟಿಗಳಲ್ಲಿ ಕೆಲಸ ಮಾಡುವ ಹುಡುಗ ಹುಡುಗಿಯರಲ್ಲಿ ಬಹು ಪಾಲು ಮಂದಿ ಮದುವೆಯಾಗುವ ಕೆಲವು ವರ್ಷಗಳ ಮೊದಲೇ ತಮಗೆ ಇಷ್ಟವಾದವರನ್ನು ಪ್ರೀತಿಸಿ ಮದುವೆಯಾಗಬೇಕೆಂದು ತೀರ್ಮಾನಿಸಿರುತ್ತಾರೆ. ಆದರೆ ಅವರ ಅಪ್ಪ ಅಮ್ಮಂದಿರಿಗೆ “ನಮ್ಮ ಮಕ್ಕಳು ಬೇರೆಯವರ ತರ ಅಲ್ಲ. ನಮ್ಮ ಮಾತನ್ನು ಮೀರುವುದಿಲ್ಲ. ನಾವು ತೋರಿಸಿದವರನ್ನೇ ಮದುವೆಯಾಗುತ್ತಾರೆ” ಎಂಬ ಭ್ರಮೆ ಇರುತ್ತದೆ. ಅದಕ್ಕಾಗಿ ಮಕ್ಕಳಿಗೆ ಸಂಗಾತಿ ಹುಡುಕಿ ಮದುವೆ ಮಾಡಲು ಹೊರಡುತ್ತಾರೆ. ಇನ್ನೇನು ಮದುವೆ ಫಿಕ್ಸ್ ಆಗಿ, ಮುಹೂರ್ತ ಹತ್ತಿರವಾದಾಗ ಮಕ್ಕಳು ಮದುವೆ ಮುರಿದು ಷಾಕ್ ಕೊಡುತ್ತಾರೆ. ಆಗ ಅಪ್ಪ-ಅಮ್ಮಂದಿರಿಗೆ ಚೇತರಿಸಿಕೊಳ್ಳಲು ತುಂಬಾ ಸಮಯ ಬೇಕಾಗುತ್ತದೆ. ಕೆಲವರಂತೂ ಅಪ್ಪ ಅಮ್ಮನ ಬಲವಂತಕ್ಕೆ ಇಷ್ಟವಿಲ್ಲದ ಮದುವೆಯಾಗಿ, ಮದುವೆಯಾದ ಮೇಲೆ ಸಂಗಾತಿಗೆ ಡಿವೋರ್ಸ್ ಕೊಟ್ಟು , ಲವರ್ ಜೊತೆ ಓಡಿ ಹೋಗುತ್ತಾರೆ. ಆಗ ಗಂಡು, ಹೆಣ್ಣು ಎರಡೂ ಮನೆಯವರಿಗೂ ದುಃಖ, ಚಿಂತೆ. ಮರ್ಯಾದೆ ಬೀದಿ ಪಾಲು. ಗಂಡ ಹೆಂಡತಿ ನಡುವೆ ಹೊಂದಾಣಿಕೆಯಾಗದೆ ಡಿವೋರ್ಸ್ ನೀಡಿದರೆ ಅದು ಬೇರೆ ವಿಷಯ. ಅದನ್ನು ಒಪ್ಪಬಹುದು. ಆದರೆ ಮೊದಲೇ ಡಿವೋರ್ಸ್ ಕೊಡಲು ನಿರ್ಧರಿಸಿ ಅಪ್ಪ ಅಮ್ಮನ ಬಲವಂತಕ್ಕೆ ಮದುವೆಯಾಗಲು ಹೊರಟಿದ್ದರೆ ಅದು ಅಕ್ಷಮ್ಯ .
ಫೋಟೋ ಕೃಪೆ :google
ಲವ್ ಮಾಡುವುದು ತಪ್ಪಲ್ಲ. ನಿಮ್ಮ ಜೀವನ ಸಂಗಾತಿಯನ್ನು ನೀವೇ ಹುಡುಕಿಕೊಳ್ಳವುದೂ ತಪ್ಪಲ್ಲ. ಆದರೆ ನಿಮಗೆ ಗಂಡು ಅಥವಾ ಹೆಣ್ಣನ್ನು ಹುಡುಕಲು ಅಪ್ಪ ಅಮ್ಮ ಪ್ರಯತ್ನಿಸುತ್ತಿದ್ದಾರೆ ಅಂಥ ಗೊತ್ತಾದಾಗ ತಕ್ಷಣ ಹೇಳದಿದ್ದರೆ ತಪ್ಪು. ಲವ್ ಮಾಡಿದ ಮೇಲೆ ಅಷ್ಟು ಮಾತ್ರದ ಧೈರ್ಯ ಇರಲೇಬೇಕು. ಎಷ್ಟೋ ಹುಡುಗಿಯರು ದೈಹಿಕ ಆಕರ್ಷಣೆಗೆ ಸಿಲುಕಿ, ಯಾರೋ ತಲೆ ಮಾಸಿದವನನ್ನು ಲವ್ ಮಾಡಿ, ಅಪ್ಪ ಅಮ್ಮ ಅರೇಂಜ್ ಮಾಡಿದ ಮದುವೆ ಮುರಿದು ಓಡಿ ಹೋಗಿ, ಪೇರೆಂಟ್ಸ್ ಗೂ ನೋವು ಕೊಟ್ಟು, ಸ್ವಲ್ಪ ದಿಗಳಲ್ಲಿ ಲವ್ವರ್ ನ ಜೊತೆಗೂ ಜಗಳ ಮಾಡಿಕೊಂಡು ಸಂಬಂಧ ಮುರಿದುಕೊಂಡು ವಾಪಸ್ ಬಂದು, ಕೌಟುಂಬಿಕ ಜೀವನ ಹಾಳು ಮಾಡಿಕೊಳ್ಳುವವರನ್ನು ನೋಡಿ, ಲವ್ ಮಾಡದವರು ಒಳ್ಳೆಯವರು ಎಂಬ ಅಭಿಪ್ರಾಯ ಸಮಾಜದಲ್ಲಿ ಮೂಡಿದೆ. ತಾನು ಮದುವೆಯಾಗಲು ಹೊರಟಿರುವ ಪ್ರೇಮಿ ನಿಜಕ್ಕೂ ಯೋಗ್ಯನಾ ಅಂಥ ವಿವೇಚಿಸಬೇಕು. ಲವ್ ಮಾಡಿದ ಮೇಲೆ ಮೊದಲೇ ಪೇರೆಂಟ್ಸ್ ಗೆ ಹೇಳಿ, ಅವರನ್ನು ಒಪ್ಪಿಸಿ ಮದುವೆಯಾಗಬೇಕು. ಅವರು ಒಪ್ಪದಿದ್ದರೆ ಓಡಿ ಹೋಗಿ ಮದುವೆಯಾಗುವುದು ಅಂಥಹ ತಪ್ಪೇನೂ ಅಲ್ಲ. ಆದರೆ ಲವರ್ ಜೊತೆ ಮದುವೆಯಾದ ಮೇಲೆ ಚೆನ್ನಾಗಿ ಬಾಳಬೇಕು. ಅಂತಹ ಲವರ್ ಗಳು ಖಂಡಿತ ಒಳ್ಳೆಯವರು. ಎಲ್ಲಕ್ಕಿಂತ ಮುಖ್ಯವಾಗಿ ನೀವು ಲವ್ ಮಾಡಿ ಮದುವೆಯಾದ ಮೇಲೆ ನೀವು ಒಬ್ಬರಿಗೊಬ್ಬರು ಹೊಂದಿಕೊಂಡು, ಸಮರಸದಿಂದ ಬಾಳಬೇಕು. ನಿಮ್ಮ ಅನುರೂಪ ದಾಂಪತ್ಯ ನೋಡಿ ಎಲ್ಲರೂ ಮೆಚ್ಚಬೇಕು. ಆಗ ನಿಮ್ಮ ನಿಮ್ಮ ಪೇರೆಂಟ್ಸ್ ಗೂ ಸಹ ಅಸಮಾಧಾನ, ಚಿಂತೆ ಹೋಗಿ ಖುಷಿಯಾಗುತ್ತದೆ .
ಕೊನೆಯ ಮಾತು. ಈಗಿನ ಕಾಲದಲ್ಲಿ ಬಹಳಷ್ಟು ಮಂದಿ- ತಮ್ಮ ಸಂಬಂಧಿಕರ ಅಥವಾ ಸ್ನೇಹಿತರ ಮಕ್ಕಳಿಗೆ ಯಾವುದಾದರೂ ಗೊತ್ತಿರುವ ಗಂಡು ಅಥವಾ ಹೆಣ್ಣನ್ನು ತೋರಿಸಲೇ ಭಯ ಪಡುತ್ತಾರೆ. ಏಕೆಂದರೆ ‘ಯಾವ ಹುತ್ತದಲ್ಲಿ ಯಾವ ಹಾವಿರುತ್ತದೋ’ ಗೊತ್ತಾಗುವುದಿಲ್ಲ. ಮುಂದೆ ಏನಾದರೂ ಅವಘಡ ಆದರೆ ” ಇವರೇ ಗಂಡು|ಹೆಣ್ಣು ಹುಡುಕಿಕೊಟ್ಟಿದ್ದು. ಎಂಥವರನ್ನು ತೋರಿಸಿ ನಮಗೆ ಗಂಟು ಹಾಕಿದ್ರಪ್ಪ ” ಅಂಥ ನಿಂದನೆಗೆ ಒಳಗಾಗುವ ಸಂದರ್ಭ ಜಾಸ್ತಿ ಇರುತ್ತದೆ.
- ನಟರಾಜು ಮೈದನಹಳ್ಳಿ