‘ಕಣ್ತುಂಬಿಕೊಳುವುದಕೂ ಆಗದಂತೆ ಅನ್ನದ ಮೇಲೆ ಬಿದ್ದ ತುಪ್ಪದ ಹನಿಯಂತೆ ಜಿಪುಣತನದಲಿ ಮನವ ಕಾಡುತಿಹುದಲ್ಲ’…ನಿವೃತ್ತ ಶಿಕ್ಷಕಿ, ಕವಿಯತ್ರಿ, ಶಿವದೇವಿ ಅವನೀಶಚಂದ್ರ ಅವರ ಲೇಖನಿಯಲ್ಲಿ ಅರಳಿದ ಸುಂದರ ಸಾಲುಗಳನ್ನು ತಪ್ಪದೆ ಮುಂದೆ ಓದಿ…
ಮಳೆಯೀಗ ಜಗದ ಕರುಣೆಯಾಗುಳಿದಿಲ್ಲ
ತನ್ನ ಸಂತತಿಗೆ ಜೀವ ಚೈತನ್ಯ ಕರುಣಿಸಿ
ನೆಲವ ಪೊರೆಯುವ ಧಾರಣವ ಪಡೆದಿಲ್ಲ.
ಕಾತರಿಸುವ ಜೀವಕೆ ಸಾಂತ್ವನವಾಗಿಲ್ಲ
ನೀರ ಸೆಲೆಯ ಹುಟ್ಟಡಗಿಸಿ
ಜೀವ ಚೈತನ್ಯವನೇ ಕಬಳಿಸಿ
ಏಕಿಷ್ಟು ನಿಷ್ಠುರವಾಯಿತೋ
ಬದುಕ ಬೇಯಿಸಿ
ಕಣ್ತುಂಬಿಕೊಳುವುದಕೂ ಆಗದಂತೆ
ಅನ್ನದ ಮೇಲೆ ಬಿದ್ದ ತುಪ್ಪದ ಹನಿಯಂತೆ ಜಿಪುಣತನದಲಿ
ಮನವ ಕಾಡುತಿಹುದಲ್ಲ
ಅಂಗಳದಲಿ ಸಪ್ತವರ್ಣದ
ಬುದ್ಬುದಗಳೇಳುವ ಮುನ್ನವೇ
ಹೊನಲಿನೊಯ್ಯಾರವ
ಕಣ್ತುಂಬಿಕೊಳ್ಳುವ
ಮೊದಲೇ
ವಂಚಿಸಿಹುದಲ್ಲ.
ಮನುಜನೆದೆಯ ಬರಡುತನದಂತೆ
ನೋಟದ ಖುಷಿಯ
ಆಪೋಶನಗೊಂಡಿಹುದಲ್ಲ….
- ಶಿವದೇವಿ ಅವನೀಶಚಂದ್ರ – .ನಿವೃತ್ತ ಶಿಕ್ಷಕಿ, ಕವಿಯತ್ರಿ, ಕೊಡಗು.
