ಹಿರಿಯ ಸಾಹಿತಿ ಬಿಟ್ಟೀರ ಚೋಂದಮ್ಮ ಅವರ ಲೇಖನಿಯಲ್ಲಿ ಮೂಡಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಏನೊಂದು ಮರೆತಿಲ್ಲ
ಸಾನಂದ ಭಾವದೊಳ್
ನೀನಂದು ನನಗಾಗಿ ಬರೆದೆ ಗೀತೆ
ಆನಂದ ಶಿಖರದೊಳ್
ನೀನನ್ನನೇರಿಸಿದೆ
ಬಾನಾಡಿಯಂತಾಡಿ ನಲಿಯುವಂತೆ
ಸುರಗಿ ಸುರ ಹೊನ್ನೆ ಹೂ
ಸರಸದಿಂದಲೆ ಮುಡಿಸಿ
ಪರವಶವಗೊಳಿಸುತಲಿ ರಮಿಸುತಿದ್ದೆ
ಸುರಿದು ಸವಿಮಾತಿನೊಳು
ಹರಿಸಿ ಸುರಗಂಗೆಯನೆ
ಸರಿಸೆ ದುಗುಡವನು ಬಳಿಸಾರುತಿದ್ದೆ
ಒಲವ ಧಾರೆಯನೆರೆದು
ಬಲವ ತುಂಬುತಲಂದು
ಸಲಿಗೆಯಿಂದಲಿಯೆನ್ನ ಮನವಗೆದ್ದು
ನಲಿದು ನಲಿಸುತಲೆನ್ನ
ಸೆಳೆದೆ ಕಾಂತದ ಹಾಗೆ
ಗಳಿಗೆಯಗಲದ ಸೋಗು ಮುಸುಕ ಹೊದ್ದು
ಭಣಗುಡುವ ಭಾವದೊಳ್
ಘನಮಸಣದಂತಿರಲು
ಫಣಿರಾಯನಡಗಿರುವ ಹುತ್ತವಿಂದು
ಮನೆಯೊಳಾನೊಬ್ಬಳೇ
ಮನದೊಳಗು ನಾನೊಂಟಿ
ಕನವರಿಸುತಿಹೆ ಕೃಷ್ಣ ಬರುವೆಯೆಂದು
ದಹದಹಿಸುತಿರುವಗ್ನಿ
ಗಹನವಾಗಿಹುದಿಲ್ಲಿ
ಸಹಿಸಲಾರದ ನೋವಿನಾಳದಲ್ಲಿ
ಸಹನೆಯಿಲ್ಲದೆ ಕಾಯ
ದಹನವಾಗುತಲಿಹುದು
ಬಹುಳ ಬಿದಿಗೆಯ ಚಂದ್ರ ಬಾರದಿಲ್ಲಿ
- ಬಿಟ್ಟೀರ ಚೋಂದಮ್ಮ – ಬೆಂಗಳೂರು.
