ಭಗ್ನಪ್ರೇಮಿ ಸ್ನೇಹಿತ ತನ್ನ ದುಃಖವನ್ನು ತೋಡಿಕೊಂಡಾಗ ಕವಿಗಳಿಗೆ ಮೂಡಿದ ಭಾವವಿದು. ಈ ಕವಿಗಳಿಗೆ ಬರೆಯಲು ನಿರ್ದಿಷ್ಟವಾದ ವಿಷಯಬೇಕೆಂದೇನೂ ಇಲ್ಲ, ಎಲ್ಲೇ ಕೂರಿಸಿದರು ಸುಂದರ ಕವಿತೆ ಅವರ ಲೇಖನಿಯಲ್ಲಿ ಅರಳುತ್ತದೆ. ಮುಂದೆ ಓದಿ…
ಎದೆಯೊಳಗೆ ಸ್ಪುರಿಸಿ ಮೆರೆಯದೆ ತೊರೆದು
ಗಾಯವಾಗಿ ಹೋದೆಯಲ್ಲ ಒಲವೆ
ಮೆದು ನೆಲದೊಳಗೆ ಮೊಳೆತು ಕುಡಿಯಾಗದೆ
ಮಾಯವಾಗಿ ಹೋದೆಯಲ್ಲ ಒಲವೆ
ಬಾಳ ಪಥದಲ್ಲಿ ಜೊತೆ ನಡೆದು ಉಸಿರಾಗಿ
ಬೆರೆಯುವ ಮಾತಾಡಿದ್ದು ಸುಳ್ಳೆ
ಗೋಳನ್ನೆ ಉಳಿಸಿ ನೋವನ್ನೆ ನೆನೆಸಿ
ಹತವಾಗಿ ಹೋದೆಯಲ್ಲ ಒಲವೆ
ನದಿಯೊಳಗೆ ತೆಪ್ಪದಿ ಪಯಣಿಸುವಾಗ
ತಪ್ಪದೆ ಜೊತೆಗಿರುವ ಮಾತಾಡಿದ್ದೆ
ಬದಿ ತೀರ ಸಮೀಪಿಸಿದಾಗ ಉರಿದ
ಬೂದಿಯಾಗಿ ಹೋದೆಯಲ್ಲ ಒಲವೆ
ಕಡಲಿನೊಳಗೆ ಅದೆಷ್ಟು ಅಲೆಗಳಿದ್ದರು
ಮುತ್ತಿನ ರಾಶಿಯ ತರುವೆನೆಂದೆ
ಒಡಲಿನೊಳಗೆ ಉಳಿಯದೆ ಮತ್ತೆ ಬರದೆ
ಭಾವವಾಗಿ ಹೋದೆಯಲ್ಲ ಒಲವೆ
ಹೆಸರಾಗಿ ಹಸಿರಾಗಿ ಬೆಸೆದು ಚೆನ್ನನಿಗೆ
ಜೀವವಾದ ಗೆಳತಿಯೆ ನೀನಿಲ್ಲ
ಹೊಸ ಬರಹಗಳಿಗೆ ನನ್ನೊಳಗೆ ಅಚ್ಚಳಿದು
ಕಾವ್ಯವಾಗಿ ಹೋದೆಯಲ್ಲ ಒಲವೆ
- ಚನ್ನಕೇಶವ ಜಿ ಲಾಳನಕಟ್ಟೆ (ಕವಿಗಳು, ಲೇಖಕರು) ಬೆಂಗಳೂರು