‘ಸಣ್ಣನಡುವು ಬೆಣ್ಣೆಮನವು ಕರಗಿಹೋದೆ ಪ್ರೇಯಸಿ’…ಪ್ರೀತಿಯ ಸಾಲುಗಳು ಕವಿಪ್ರಿಯರಿಗಾಗಿ ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರು ಬರೆದಿರುವ ಕವನ, ಮುಂದೆ ಓದಿ…
ನನ್ನೊಳಿಳಿದು ನನ್ನೊಳುಳಿದು
ಹರಿಸು ಪ್ರೀತಿ ಧಾರೆಯ
ನಿದ್ದೆಯಲ್ಲು ಮುದ್ದುಗರೆದು
ಸುರಿಸು ಒಲವ ಪ್ರೀತಿಯ
ವಿರಹವಿಳಿದು ಬೆರೆಯುತಿರಲು
ಸನಿಹ ಬಂದು ಕರೆವೆಯ
ತಡವದಂತೆ ನುಡಿಯುತಿರಲು
ಹೃದಯದಾಳ ತೆರೆವೆಯ
ನೋಟದೊಳಗೆ ಮಾಟವಿಹುದು
ಮಾರುಹೋದೆ ರೂಪಸಿ
ಸಣ್ಣನಡುವು ಬೆಣ್ಣೆಮನವು
ಕರಗಿಹೋದೆ ಪ್ರೇಯಸಿ
ಜೊತೆಯಲಿರುವೆ ಚಿತೆಯವರೆಗೆ
ಚಿಂತೆ ನಿನಗೆ ಏತಕೆ
ಸುಳಿದು ಬಾರೆ ಹೊಳೆವ ನೀರೆ
ಸೋತೆ ನಿನ್ನ ಮೋಹಕೆ
ಗೂಡಿನೊಳಗೆ ಬಾಡದಂತೆ
ಸುಖದ ಕೋಡಿ ಹರಿಸುವೆ
ನಡೆಯುವಾಗ ಎಡವದಂತೆ
ಕೈಯ ಹಿಡಿದು ನಡೆಸುವೆ
- ಚನ್ನಕೇಶವ ಜಿ ಲಾಳನಕಟ್ಟೆ (ಕವಿಗಳು, ಲೇಖಕರು) ಬೆಂಗಳೂರು
