ನಮ್ಮ ರಾಜಧಾನಿ ಬೆಂಗಳೂರಿನಲ್ಲಿ ವರ್ಷಕ್ಕೊಮ್ಮೆ ಜರುಗುವ ಚಿತ್ರಸಂತೆಯಲ್ಲಿ ನಮ್ಮ ರಾಜ್ಯದ ಕಲಾವಿದರಿಗಿಂತ ಹೊರರಾಜ್ಯದ ಕಲಾವಿದರಿಗೆ ಮೊದಲ ಆದ್ಯತೆ. ಅರ್ಜಿ ಹಾಕಿದರೂ ಪರಿಗಣಿಸುವುದಿಲ್ಲ. ಹಾಗಾಗಿಯೇ ಹೊಸ ದಾರಿಗಳನ್ನು ಹುಡುಕುತ್ತ ನೆರೆ ರಾಜ್ಯವಾದ ಗೋವಾದಲ್ಲಿ ಹತ್ತು ದಿನಗಳ ಕಾಲ ಸಮೂಹ ಚಿತ್ರಕಲಾ ಪ್ರದರ್ಶನಕ್ಕೆ ಸಜ್ಜಾಗಿದ್ದೇವೆ…
#V4_beyond_the_frame #ಚೌಕಟ್ಟಿನಾಚೆಗೆ #Goa
ಬಾಲ್ಯದಿಂದಲೂ ಚಿತ್ರಕಲಾವಿದನಾಗಬೇಕು ಎಂಬುದು ನನ್ನ ಕನಸಾಗಿತ್ತು, ಕನಸಷ್ಟೇ ಆಗಿತ್ತು. ಇನ್ನೂ ಅದು ಸಾಧ್ಯವಿಲ್ಲ ಎಂದು ಮನದಟ್ಟಾದಾಗಲೂ ಕಲೆಯ ನಂಟನ್ನು ಕಡಿದುಕೊಳ್ಳಲು ಕೊನೆಗೂ ಸಾಧ್ಯವಾಗಲೇ ಇಲ್ಲ. ಜಗದ ತಲ್ಲಣಗಳನ್ನು ಮರೆಸಲು ಚಿತ್ರಗಳನ್ನು ರಚಿಸುವುದು ಕೇವಲ ಹವ್ಯಾಸವಾಗಲ್ಲದೆ ಅದು ಒಂದು ಬಗೆಯ ಬಿಡುಗಡೆ ಹಾಗೂ ನೆಮ್ಮದಿಯನ್ನು ಕಂಡುಕೊಳ್ಳುವ ಕ್ರಮವಾಗಿ ಪರಿಣಮಿಸಿತ್ತು. ಅಂತೆಯೇ ನನ್ನ ಮಟ್ಟಿಗೆ ಸಾಹಿತ್ಯವೂ ಸಹ. ಅದರ ಪರಿಣಾಮ ಎಂಬಂತೆ ಇಂದು ಅಧಿಕೃತವಾಗಿ ಚಿತ್ರಕಲೆ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವುದರ ಮುಖೇನ ಬದುಕನ್ನು ಸಹ ಕಟ್ಟಿಕೊಂಡಿದ್ದೇನೆ.

ಬರಲಿರುವ ಹೊಸವರ್ಷದಲ್ಲಿ ಸಮಾನ ಮನಸ್ಕ ಸಹೃದಯಿ ಕಲಾವಿದ ಮಿತ್ರರಾದ ಎನ್. ಎಸ್. ಗುರು ರಾಘವೇಂದ್ರ, ಹಜರತ್ ಅಲಿ ಮತ್ತು ಪ್ರಶಾಂತ ದೇವಗಡ ಬಿ. ಅವರೊಂದಿಗೆ ಕೂಡಿ ಹೊಸ ಹೆಜ್ಜೆಯೊಂದನ್ನು ಇಡಲಿದ್ದೇನೆ. ನೆರೆ ರಾಜ್ಯವಾದ ಗೋವಾದಲ್ಲಿ ಹತ್ತು ದಿನಗಳ ಕಾಲ ಸಮೂಹ ಚಿತ್ರಕಲಾ ಪ್ರದರ್ಶನಕ್ಕೆ ಸಜ್ಜಾಗಿದ್ದೇವೆ. ಈ ವಿಚಾರವನ್ನು ತಿಳಿದ ಕೆಲವರು ಕಾಳಜಿಪೂರ್ವಕವಾಗಿ ಹೀಗೆ ಹೇಳಿದರು… “ನಿಮಗೇನಾದ್ರೂ ಹುಚ್ಚಾ….? ಅಲ್ಲ್ಯಾಕೆ ಮಾಡ್ತಿದ್ದೀರಿ, ಖರ್ಚ್ ವೆಚ್ಚ ತುಂಬಾ ದುಬಾರಿಯಾಗುತ್ತೆ. ಎಲ್ಲಿಯೂ ಸಹ ಕಲಾಕೃತಿಗಳು ಮಾರಾಟವಾಗುವ ಸಾಧ್ಯತೆಗಳೇ ವಿರಳಾತಿ ವಿರಳ. ಇಲ್ಲೇ ಪ್ರದರ್ಶನ ಮಾಡಬಹುದಲ್ಲ, ಚಿತ್ರಸಂತೆ ಜೋರಾಗಿಯೇ ಆಗುತ್ತಲ್ಲ” ಎಂದೆಲ್ಲಾ…

ಹೌದು, ನಾವು ಹುಚ್ಚರೆ! ಅಂತಹ ಒಂದು ಹುಚ್ಚು ಇಲ್ಲದಿದ್ದರೆ ಬದುಕಿನಲ್ಲಿ ಏನನ್ನೂ ಸಾಧಿಸಲು ಸಾಧ್ಯವಾಗುವುದಿಲ್ಲ. ಆದಲ್ಲದೆ ನಮ್ಮ ರಾಜಧಾನಿ ಬೆಂಗಳೂರಿನಲ್ಲಿ ವರ್ಷಕ್ಕೊಮ್ಮೆ ಜರುಗುವ ಚಿತ್ರಸಂತೆಯಲ್ಲಿ ನಮ್ಮ ರಾಜ್ಯದ ಕಲಾವಿದರಿಗಿಂತ ಹೊರರಾಜ್ಯದ ಕಲಾವಿದರಿಗೆ ಮೊದಲ ಆದ್ಯತೆ. ಅರ್ಜಿ ಹಾಕಿದರೂ ಪರಿಗಣಿಸುವುದಿಲ್ಲ. ಹಾಗಾಗಿಯೇ ಹೊಸ ದಾರಿಗಳನ್ನು ಹುಡುಕುತ್ತ ಗಮ್ಯ ಸೇರುವ ಹಂಬಲ; ಹಂಬಲವಷ್ಟೆ.
ಇದರಿಂದ ನಾವು ಏನನ್ನೋ ಸಾಧಿಸುತ್ತೇವೆ ಅಂತಲ್ಲ, ಬದಲಿಗೆ ಮುಂದೊಂದು ದಿನ ಬಾಳಿನ ಸಂಜೆಯಲ್ಲಿ ಕೂತು ನಾವು ಯೋಚಿಸುವಾಗ ಸೋಲು-ಗೆಲುವುಗಳನ್ನು ಪರಿಗಣಿಸದೆ ಕನಿಷ್ಟ ಪಕ್ಷ ನಾವು ಒಂದು ಪ್ರಯತ್ನವನ್ನಾದರೂ ಮಾಡಿದ್ವಿ, ಸುಮ್ಮನೆ ಕೈಕಟ್ಟಿ ಕೂರಲಿಲ್ಲ ಅನ್ನುವ ಪಾಪಪ್ರೆಗ್ನೆಗೆ ತುತ್ತಾಗದಿರಲಿ ಎಂದು.

ಕಲೆ ಮತ್ತು ಸಾಹಿತ್ಯವನ್ನು ಬೆಸೆಯುವ ದೃಷ್ಟಿಯಿಂದ ಪ್ರದರ್ಶನದ ಉದ್ಘಾಟನೆಯ ಜವಾಬ್ದಾರಿಯನ್ನು ಖ್ಯಾತ ಹಿರಿಯ ಕೊಂಕಣಿ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ವಿಜೇತರಾದ #ದಾಮೋದರ್_ಮಾವ್ಜೋ ನಿರ್ವಹಿಸಲಿದ್ದಾರೆ. ಉಳಿದಂತೆ ಗೋವಾ ರಾಜ್ಯದ ಹಿರಿಯ ಕಲಾವಿದರು ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿದ್ದಾರೆ.

ಈವೊಂದು ಮೊದಲ ಹೆಜ್ಜೆ ಹಲವಾಗಲಿ ಎಂಬ ಆಶಯದೊಂದಿಗೆ, ನಿಮ್ಮೆಲ್ಲರ ಪ್ರೋತ್ಸಾಹ ಹಾಗೂ ಹಾರೈಕೆ ಇರಲಿ.
- ಜಬೀವುಲ್ಲಾ ಎಂ. ಅಸದ್
