‘ಕಾಲ ಕಳೆದು ಹೆಮ್ಮರವಾಗಿ ಬೆಳೆದು ಹಚ್ಚ ಹಸಿರಿನ ಮರವಾಗಿ’… ಸವಿತಾ ಮುದ್ಗಲ್ ಅವರ ಸುಂದರ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಎಲ್ಲೋ ಸಿಡಿದು ಬಿದ್ದ
ಬೀಜವೊಂದು ತುಳಿಯಲ್ಪಟ್ಟು
ಅಲ್ಲಿ ಇಲ್ಲಿ ಸಂದಿ ಗೊಂದಿಗೆ
ಜಾರಿ ಜಾರಿ ಸರಿದು ಹೋಗಿದೆ
ಮುಂದೆ ಜೋರಾದ ಗಾಳಿಗೆ
ಮತ್ತೆ ಮುಂದೆ ಅಲ್ಲೇ ನಡೆವ
ದಾರಿ ಮಧ್ಯೆ ಜನರ ಕಾಲಲಿ
ತುಳಿಯಲ್ಪಟ್ಟು ಬಿಸಿಲಲ್ಲಿ
ಬಿದ್ದೋಗಿದೆ
ಅಲ್ಲಿ ಕೂಡ ಸ್ಥಳವ ಪಡೆಯದೇ
ಮಣ್ಣು ಸಿಗದೇ ಸೀಳಿದ ಸಿಮೆಂಟ್
ರೋಡಲಿ ಒದ್ದಾಡಿ ಕುಳಿತಿದೆ
ಮಳೆ ಸುರಿದು ಹರಿವ
ನೀರಿಗೆ ಸಿಕ್ಕು ಹರಿದು
ನದಿಯ ದಡದಲ್ಲಿ ಸೇರಿದೆ
ತಂಪಿನ ವಾತಾವರಣಕೆ
ಮೊಳಕೆಯೊಡೆದು ಬೀಜವು
ಭೂಒಡಲಿಂದ ಸೆಟದು
ಜೀವ ಪಡೆದಿದೆ
ಕಾಲ ಕಳೆದು ಹೆಮ್ಮರವಾಗಿ
ಬೆಳೆದು ಹಚ್ಚ ಹಸಿರಿನ ಮರವಾಗಿ
ಕಂಗೊಳಿಸಿ ನಿಂತಿದೆ
ಮೂಕಹಕ್ಕಿಗಳಿಗೂ ತಾಣವಾಗಿ
ಬಣ್ಣಬಣ್ಣದ ಹೂ ಅರಳಿ ನಿಂತಿವೆ
ಪ್ರವಾಸಿಗರ ನೆಚ್ಚಿನ ಸ್ಥಳವಾಗಿ
ಕುಳಿತು ಉಣ್ಣಲು ನೆರಳಾಗಿದೆ
ಪರಿಪೂರ್ಣ ಬದುಕು ಇದುವೇ
ಇರಬಹುದು ಜಗದಲ್ಲಿ ಅಲ್ಲವೇ
ಎಲ್ಲೆ ಹುಟ್ಟಿ ಎಲ್ಲೆ ಬಿದ್ದು ಎದ್ದು
ನಡೆದರಷ್ಟೆ ಬದುಕು ಸಾರ್ಥಕವೆನಿಸುವುದು
- ಸವಿತಾ ಮುದ್ಗಲ್ – ಗಂಗಾವತಿ
