‘ನಮ್ಮಿಬ್ಬರ ಸಾಂಗತ್ಯ ಸಿಹಿಯಾದ ಸಕ್ಕರೆ, ಕಡಿಮೆಯಾಗದಿರಲೆಂದು ಅದರೊಳಗಣ ಅಕ್ಕರೆ’…ಕವಿಯತ್ರಿ ಅನುಸೂಯ ಯತೀಶ್ ಅವರು ಬರೆದ ಕವನದ ಸುಂದರ ಸಾಲುಗಳಿವು… ತಪ್ಪದೆ ಓದಿ…
ಹಾಡೋಣ ಬಾ ಗೆಳೆಯ ಪ್ರೇಮಾನುರಾಗ
ನೀಡುವೆ ನಿನಗೆ ಹೃದಯದಲಿ ಜಾಗ
ಕೇಳುತಿರು ನಿತ್ಯವೂ ಒಲವ ಮಿಡಿತ
ನಿನ್ನಾಗಮನಕಾಗಿ ನನ್ನೆದೆಯಾ ತುಡಿತ
ಸಾರಥಿಯಾಗುವೆಯಾ ನನ್ನ ಪ್ರೇಮರಥಕೆ
ಎಚ್ಚರದಿ ಕರೆದೊಯ್ಯುವೆಯಾ ಬಾಳ ದಡಕೆ
ಬೇಗ ಕೂಡಿ ಬರಲಿ ಒಂದಾಗುವ ಸುಯೋಗ
ಆ ಸುಂದರ ಕ್ಷಣಕ್ಕಾಗಿ ಮಾಡುತಿರುವೆ ನಾ ಯಾಗ
ಜಿನಗುತಿಹ ಅಧರಾಮೃತ ಕಾಯುತಿದೆ ನಿನಗಾಗಿ
ಹಾಲ್ನೊರೆಯ ಬೆಳದಿಂಗಳಲಿ ಬರೆಯಲೆ ಓಲೆ ಒಲವಿಗಾಗಿ
ಬಾ ಗರಿಬಿಚ್ಚಿ ಕುಣಿವ ಮನದಾಸೆಗಳ ನನಸಾಗಿಸು
ನೀಳವಾದ ಬಾಹುಗಳ ತೆಕ್ಕೆಯಲಿ ಎನ್ನ ಬಂಧಿಸು
ನಮ್ಮಿಬ್ಬರ ಸಾಂಗತ್ಯ ಸಿಹಿಯಾದ ಸಕ್ಕರೆ
ಕಡಿಮೆಯಾಗದಿರಲೆಂದು ಅದರೊಳಗಣ ಅಕ್ಕರೆ
ಕಾರಂಜಿಯಾಗಿರಲಿ ನಮ್ಮಿಬ್ಬರ ಪ್ರೀತಿಯ ಒರತೆ
ಮೂಡಗೊಡದಿರು ಗೆಳೆಯ ಯಾವುದೇ ಕೊರತೆ
- ಅನುಸೂಯ ಯತೀಶ್ (ಶಿಕ್ಷಕಿ, ಕವಯತ್ರಿ) ನೆಲಮಂಗಲ
