ಸೋತಾಗ ಸಾಂತ್ವನ ಹೇಳುವವರಿಗಿಂತಲೂ ಸೋಲದಂತೆ ಮುನ್ನಡೆಸುವವರು ಬೇಕಾಗಿದ್ದಾರೆ !…ಹಿರಿಯ ಕನ್ನಡ ಉಪನ್ಯಾಸಕರಾದ ಪ್ರೊ. ಸಿದ್ದು ಸಾವಳಸಂಗ ಅವರ ಕವನವನ್ನು ತಪ್ಪದೆ ಮುಂದೆ ಓದಿ…
ಬಿದ್ದಾಗ ಎತ್ತಿ ಹಿಡಿಯುವವರಿಗಿಂತಲೂ
ಬೀಳದಂತೆ ಕೈ ಹಿಡಿದು ನಡೆಸುವವರು ಬೇಕಾಗಿದ್ದಾರೆ !
ಸೋತಾಗ ಸಾಂತ್ವನ ಹೇಳುವವರಿಗಿಂತಲೂ
ಸೋಲದಂತೆ ಮುನ್ನಡೆಸುವವರು ಬೇಕಾಗಿದ್ದಾರೆ !
ಜನರ ನಿಂದನೆ, ಅಪಮಾನಗಳಿಂದ ಕುಗ್ಗಿ ಹೋದಾಗ
ನಾನಿದ್ದೇನೆ ಅಂಜದಿರು ಎಂದು ಧೈರ್ಯ ತುಂಬುವ ಸ್ನೇಹಿತರು ಬೇಕಾಗಿದ್ದಾರೆ !
ಕೆಲಸದಲ್ಲಿ ಆಲಸಿಯಾದಾಗ
ನನ್ನನ್ನು ಹುರಿದುಂಬಿಸುವವರು ಬೇಕಾಗಿದ್ದಾರೆ !
ವಯಸ್ಸಾಗಿ ಕೆಲಸ ನೀಗದೆ ಕೈಚೆಲ್ಲಿ ಕುಳಿತಾಗ
ಬಳಲದಿರು ಮನವೇ ಎನ್ನುವವರು ಬೇಕಾಗಿದ್ದಾರೆ !
ಸಂಸಾರ ಭಾರ ಹೆಚ್ಚಾದಾಗ
ಸಕಲರನ್ನು ಸಲಹುವವನು ದೇವರಿದ್ದಾನೆ ಎನ್ನುವರು ಬೇಕಾಗಿದ್ದಾರೆ !
ಎಲ್ಲೆಡೆ ಕತ್ತಲೆ ತುಂಬಿದಾಗ
ಕೋಲ್ಮಿಂಚಿನಂತೆ ಬೆಳಕು ನೀಡುವವರು
ಬೇಕಾಗಿದ್ದಾರೆ !
ನನ್ನನ್ನು ದುರುಪಯೋಗ ಮಾಡಿಕೊಳ್ಳುವವರಿಗಿಂತಲೂ
ನಾನು ದುರುಪಯೋಗವಾಗದಂತೆ ತಡೆಯುವವರು ಬೇಕಾಗಿದ್ದಾರೆ !
ನನ್ನನ್ನು ಒವರ್ಟೇಕ್ ಮಾಡುವವಗಿಂತಲೂ
ನನ್ನೊಂದಿಗೆ ಸಮನಾಗಿ ಹೆಜ್ಜೆ ಹಾಕುವರು ಬೇಕಾಗಿದ್ದಾರೆ !
ಒಳಗೊಂದು ಹೊರಗೊಂದು ಮಾತನಾಡಿ
ಜಗಳ ಹಚ್ಚಿ ಮೋಜ ನೋಡುವವರಿಗಿಂತಲೂ
ಶುದ್ಧ ಹೃದಯವಂತರು ಬೇಕಾಗಿದ್ದಾರೆ !
- ಪ್ರೊ. ಸಿದ್ದು ಸಾವಳಸಂಗ, ತಾಜಪುರ – ಹಿರಿಯ ಕನ್ನಡ ಉಪನ್ಯಾಸಕರು, ಬಾಲಿಕೆಯರ ಸರಕಾರಿ ಪದವಿ ಪೂರ್ವ ಕಾಲೇಜು, ವಿಜಯಪುರ.
