ಸ್ವಾರ್ಥತತೆಯಲಿ ಮಿಂದು ಬಾಳಿ ಏನು ಸಾಧಿಸುವಿ…ಜಗಕೆ ನೋವ ನೀಡಿ ನಗು ಸೂಸಿ ಏನು ಗೆಲ್ಲುವಿ… ಕವಿಯತ್ರಿ ಶಾರದಾ ಶ್ರಾವಣಸಿಂಗ್ ರಜಪೂತ ಅವರ ಮನುಶ್ಯನ ಸ್ವಾರ್ಥ ಬದುಕಿನ ಕುರಿತು ಬರೆದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ತುಂಬಬೇಡವೋ ಮನುಜ ನೀನು ಮನದಿ
ಅಸತ್ಯ, ಅನೀತಿ, ಕುಟಿಲತೆ, ವಂಚನೆ ದರ್ಪದಿ
ಮೂಡಿ ಮುಳುಗುವ ದಿನನಿತ್ಯದ ರವಿಯಂದದಿ
ಬದುಕು ಕಾಣೋ ತಾತ್ಕಾಲಿಕ ಮೂರು ದಿನದಿ!!
ಸ್ವಾರ್ಥತತೆಯಲಿ ಮಿಂದು ಬಾಳಿ ಏನು ಸಾಧಿಸುವಿ
ಜಗಕೆ ನೋವ ನೀಡಿ ನಗು ಸೂಸಿ ಏನು ಗೆಲ್ಲುವಿ
ಬೆನ್ನಿಗೆ ಚೂರಿ ಎದುರಿಗೆ ಹೂವ ಕೈಯಲಿ ಹಿಡಿಯುವಿ
ನಿನ್ನತನಕೆ ಬೆಲೆಯಿದೆ ಎಂದು ನೀನು ತಿಳಿಯುವಿ!!
ಪರರ ಉಸಿರು ನಿಟ್ಟುಸಿರಾಗಿ ಬದಲಾಗಿಸುವೆಯಲ್ಲಾ
ಬಣ್ಣದ ಮಾತು ನುಡಿವ ನಿನಗೆ ಜನರು ಸೇರುವರಲ್ಲಾ
ಮುಖದ ಬಣ್ಣ ಬಿಳಿ ಹೃದಯ ಕಪ್ಪಾಗಿದೆಯಲ್ಲಾ
ನಿನ್ನ ನೀನು ಹೆಚ್ಚು ಎಂದು ಅರಿತು ಬಾಳುವೆಯಲ್ಲಾ!!
ಬರುವುದು ಮುಂದೆ ನಿನಗೆ ನಿಟ್ಟುಸಿರು ಶಾಪವಾಗಿ
ನೊಂದಮನವ ಕೊಂದ ಉಸಿರು ಹೊರಳಿ, ಉರುಳಾಗಿ
ಬೆಂದ ಅಂತರಂಗದ ತಳಮಳ ಸುಡುವ ಬೆಂಕಿಯಾಗಿ
ಉರಿಯಬೇಡ ಮನುಜ ಬದುಕು ನೀ ವಿಶ್ವಕೆ ಬೆಳಕಾಗಿ!!
- ಶಾರದಾ ಶ್ರಾವಣಸಿಂಗ್ ರಜಪೂತ.
