‘ಪ್ರಯಾಣ’ ಸಣ್ಣಕತೆ – ರೇಶ್ಮಾ ಗುಳೇದಗುಡ್ಡಾಕರ್

ರೈಲಿನಲ್ಲಿ ಇಬ್ಬರು ಸಹ ಪ್ರಯಾಣಿಕರು, ಅರವಿಂದನ ಮನಸ್ಸು ಆಕೆಯನ್ನು ನೋಡಲು ಹಾತೊರೆಯುತ್ತಿದೆ. ಕಣ್ಣುಗಳು ಕದ್ದು ಕದ್ದು ನೋಡುತ್ತಿವೆ. ಅವಳಿಗೂ ಅವನು ನೋಡುವುದು ತಿಳಿದಿದೆ. ಮನಸ್ಸಲ್ಲೇ ಒಂದು ಸಂಚಲನ ಮೂಡಿದೆ. ಮುಂದೆ ರೈಲು ದಾರಿಯಲ್ಲಿ ಇಬ್ಬರು ಬಾಳಸಂಗಾತಿ ಆಗುವರೇ? …ತಪ್ಪದೆ ಓದಿ ಆಕೃತಿಕನ್ನಡದಲ್ಲಿ ಕಥೆಗಾರ್ತಿ ರೇಶ್ಮಾ ಗುಳೇದಗುಡ್ಡಾಕರ್ ಅವರ ಕಲ್ಪನೆಯಲ್ಲಿ ಮೂಡಿ ಬಂದ ‘ಪ್ರಯಾಣ’…

ಅರವಿಂದ ಸರ ಸರನೆ ಬಂದು ಹೋಗುತ್ತಿರುವ ಹುಬ್ಬಳ್ಳಿ ಜನಶತಾಬ್ದಿ ರೈಲ್ ಹತ್ತಲು ಭಾರಿ ಸಾಹಸವೇ ಮಾಡ ಬೇಕಾಯಿತು. ಎಷ್ಟು ಬೇಗ ಏಳಬೇಕು ಎಂದರು ಕಣ್ಣು ತರೆಯದು. ರಾತ್ರಿ ನಿದ್ದೆಯು ಬಾರದು. ಅಂತಹ ಬರಡಾದ ಸಿಂಗಲ್ ಬದುಕು ಅವನದು, ಹಾಗೆಂದು ಅವನದು ತಕ್ಷಣ ಕಣ್ಣಿಗೆ ಕಾಣುವಷ್ಟು ಬರಡು ಬದುಕಲ್ಲ. ಒಳ್ಳೆಯ ಕಾರ್ಪೊರೇಟ್ ಕೆಲಸ, ಕೈ ತುಂಬ ಸಂಪಾದನೆ, ಮನೆಯಲ್ಲಿ ಒಬ್ಬ ಅಣ್ಣ ಅವನು ಕೆಲಸಕ್ಕೆ ಸೇರಿ ವಿವಾಹವಾಗಿ ಮಕ್ಕಳು ಮರಿಗಳೊಂದಿಗೆ ಆರಾಮವಾಗಿದ್ದ.

ಇನ್ನು ಉಳಿದವ ಈ ಅರವಿಂದ ಸಣ್ಣವ ಮನೆಗೆ ಊರಿಗೂ ಸದಾ ಸಣ್ಣವ ಹೊಸ ವರ್ಷ ಆರಂಭ ತಾಯಿಯ ಒತ್ತಾಯಕ್ಕೆ ಮಣಿದು ವರ ಮಹಾಶಯನಾಗಿ ಸ್ವ-ಗ್ರಾಮ ಹುಬ್ಬಳ್ಳಿಗೆ ಪ್ರಯಾಣ ಬೆಳಸಿದ್ದ. ಲಗು ಬಗೆಯಲ್ಲಿ ಹತ್ತಿದವ ತನ್ನ ಬೋಗಿ ಯಾವುದು? ಎಂದು ಮತ್ತೆ ಮೊಬೈಲ್ ತೆಗೆದು ನೋಡಿದ. ತನ್ನ ಬೋಗಿ ಹಾಗೂ ಸೀಟ್ ನ್ನು ಹುಡುಕಿ ಕುಳಿತವರನ್ನು ಎಬ್ಬಿಸಿ ತನ್ನ ಬುಕ್ ಮಾಡಿದ ಸೀಟನ್ನು ತೋರಿಸಿ ಕಿಟಕಿಯ ಪಕ್ಕದ ಸೀಟಲ್ಲಿ ತಣ್ಣಗೆ ಕುಳಿತ ಬ್ಯಾಗನ್ನು ಪಕ್ಕದಲ್ಲಿರಿಸಿದ್ದ.

ಫೋಟೋ ಕೃಪೆ : prajavani

ಇನ್ನೇನು ಕಣ್ಣು ಮುಚ್ಚಬೇಕು ಆದರೆ ತನ್ನ ಸೀಟಿನ ಎದುರಿನ ನೇರಕ್ಕೆ ಕಾಣುವ ಕಿಟಕಿ ಪಕ್ಕದ ಸಿಂಗಲ್ ಎರಡು ಸೀಟಿನ ಒಂದರಲ್ಲಿ ಸಿಗ್ದ ಸುಂದರಿಯತ್ತ ಮನ ಪಕ್ಕನೆ ಹಾರಿತ್ತು. ಬೋಗಿಯ ಎಲ್ಲ ಸೀಟು ಬರ್ತಿಯಾಗಿದ್ದವು. ಎಲ್ಲರೂ ಕುಳಿತ ಕಾರಣ ಅವಳ ನೋಟಕ್ಕೆ ಅಡೆ ತಡೆ ಇರಲಿಲ್ಲ. ಒಮ್ಮೆ ನೋಡಿದರು ಬಿಡದೆ ಮತ್ತೆ ಮತ್ತೆ ನೋಡುವಂತೆ ಮನ ಹಟಮಾಡುತ್ತಿತ್ತು.

ರೈಲ್ ಚಲಿಸಿ ಅಗಲೇ ಗಂಟೆ ಕಳೆದರು ಅರವಿಂದನಿಗೆ ಇದ್ಯವುದರ ಪರಿವೇ ಇರಲಿಲ್ಲ. ಸರ ಸರನೆ ಸಾಗುವ ರೈಲಿನ ಜೊತೆ ಮನವು ಅವಳ ನೋಟಕ್ಕೆ ಹಾತೊರೆಯುತ್ತಿತ್ತು. ಅವಳ ಗಂಭೀರ ವದನ, ವಿಶಾಲ ಕಂಗಳು ಚಿತ್ತ ವಿಚಲಿತವಾಗದಂತೆ ಕಿಟಕಿಯ ಹೊರನೋಟಕ್ಕೆ ಕಣ್ಣು ಹಾಕಿ ಕುಳಿತ ಅವಳ ನಿಲುವು ಎಲ್ಲ ಮತ್ತೆ ಮತ್ತೆ ಕಾಡಿತ್ತು. ತಿದ್ದಿ ತೀಡದ ಆ ಹುಬ್ಬು, ಪಳಪಳಿಸದ ಸಾದಾ ಮೈ ಬಣ್ಣ ಸರಳ ರೂಪ ಅರವಿಂದನ ಮನದಲ್ಲಿ ಅನೂಹ್ಯ ತಲ್ಲಣವ ಸೃಷ್ಟಿಸಿತ್ತು. ಬೆಂಗಳೂರಿನ ಆಫೀಸಿನಲ್ಲಿ ಇವ “ಮೊಸ್ಟ ಬ್ಯಾಚುಲರ್ ಯಂಗ್ ಬಾಯ್ ” ಅದರೆ ಊರಿನ ಓಣಿಯಲ್ಲಿ ” ಹೆಣ್ಣು ಸಿಗದ ಒಂಟಿ ಗೊಳಿ ” ಎಂಬ ಬಿರುದುಗಳು ಸರಾಗವಾಗಿ ತಲೆಗೆ ಏರಿದ್ದವು!.

ಆದರೆ ಅರವಿಂದನಿಗೆ ಇದರ ಬಗ್ಗೆ ಕಿಂಚಿತ್ತು ಬೇಸರವಿರಲಿಲ್ಲ. ಹೆಣ್ಣು ನೋಡಲು ಹೋದಾಗ ಪದವಿಯ ಹಂತದ ಪುಟ್ಟ ಪುಟ್ಟ ಕಂಗಳ ಬೆಡಗಿಯರ ಕಂಡು ತಬ್ಬಿಬ್ಬಾಗಿ ತಾಯಿಗೆ ಖಡಕ್ಕಾಗಿ ಹೇಳಿದ್ದ ” ಅಮ್ಮ, ಸಣ್ಣ ಸಣ್ಣ ಹುಡುಗಿಯರ ತಂದು ತೋರಿಸಬೇಡ. ಸ್ವಲ್ಪ ನನ್ನ ಅಲೋಚನೆಗಳಿಗೆ ಅನುಗುಣವಾಗಿ ನೋಡಿ ಆ ಪುಟ್ಟ ಬಾಲೆಯರು ನನಗೆ ಹೊಂದಿಕೆಯಲ್ಲ. ಹೀಗಾದರೆ ನಾ ಬರುವುದೇ ಇಲ್ಲ ಹೆಣ್ಣು ನೋಡುವ ಶಾಸ್ತ್ರಕ್ಕೆ” ಎಂದು ಅಬ್ಬರಿಸಿದ. ಇದ ಕೇಳಿದ ತಾಯಿ “ಅಲ್ವೂ… ಹುಡುಗಿ ಬೇಡಾ ಅಂದರೆ ಅವಳ ಅಜ್ಜಿನ ಮದುವೆ ಅಗುತ್ತಿಯಾ ?… ಎಲ್ಲರೂ ಹುಡುಗಿ, ಹುಡುಗಿ ಎಂದು ಜಪಿಸಿದರೆ ನಿನ್ನದು ಅತೀ ಆಯ್ತು ” ಎಂದಿದ್ದರು.

ಫೋಟೋ ಕೃಪೆ : prajavani

ಇವನೂ “ಅಲ್ಲಮ್ಮ… ನಾ ನಿನಗೆ ತ್ರಿಪುರ ಸುಂದರಿ ತಂದು ಮದುವೆ ಮಾಡು ಎಂದು ಹೇಳಿಲ್ಲ, ನನ್ನ ಮನಕ್ಕೆ ಚಿಂತನೆಗೆ ಹೊಂದಿಕೆಯಾಗ ಬೇಡವೇ?. ನಾನು ಪದವಿ ಮುಗಿಸಿ ಅದೆಷ್ಟು ಹುಡುಗಿಯರಿಗೆ ಪಾಠ ಮಾಡಿರುವೆ ಇದೇ ವಯಸ್ಸಿನ ಎಷ್ಟೋ ಹೆಣ್ಣು ಮಕ್ಕಳ ಬಳಿ ಅಗ ಮಾತು ಆಡಿರುವೆ ಹೀಗಿರುವಾಗ ಮತ್ತೆ ಅಂತಹ ವಯಸ್ಸಿನ ಪುಟ್ಟ ಹೆಣ್ಣು ಹೇಗೆ ಹೆಂಡತಿ ಎಂದು ಒಪ್ಪಿಕೊಳ್ಳಲಿ? ಎಂದು ವಾದ – ವಿವಾದ ತಾರಕ್ಕೆ ಏರಿ ಬೆಂಗಳೂರಿಗೆ ‌ಬಂದವನೆ ಊರಿಗೆ ತಲೆ ಹಾಕಿ ಮಲಗಿರಲಿಲ್ಲ.

ಇಗ ಬರೊಬ್ಬರಿ ಆರು ತಿಂಗಳ ಬಳಿಕ ಅಮ್ಮನ ಒತ್ತಾಯಕ್ಕೆ ಮಣಿದು ಊರಿಗೆ ಹೋರಟಿದ್ದ. ಅರವಿಂದ ಎಷ್ಟು ಹೀಡಿತ ಮಾಡಿದರು ಮನ ಕೇಳದೆ ಅವಳ ಬಳಿ ಹೋಗುತ್ತಿತ್ತು …ಅವಳೂ ನಿರಾಳವಾಗಿ ಬುದ್ದನಂತೆ ಧ್ಯಾನಕ್ಕೆ ಕುಳಿತವರಂತೆ ಎತ್ತಲೂ ನೋಡೆ ಕಿಟಕಿಯ ಕಡೆ ಕಣ್ಣು ಇಟ್ಟಿದ್ದಳು.

ಯಾಕೆ ತನ್ನ ಮನ ಇಷ್ಟು ಹಟ ಮಾಡುತ್ತಿದೆ ಎಂದು ಅರವಿಂದನಿಗೆ ತಿಳಿಯಲಿಲ್ಲ. ಆಫೀಸರ್ ಅಲ್ಲಿ ನಿಕಿತಾ ಶರ್ಮಾ, ಆರೋಹಿ ಮಿಶ್ರ , ಚಂದನ ಕಾಮತ್ ಎಂಬ ಹಲವು ಯುವತಿಯರು ಇದ್ದರು “ಅವಿ” ಎಂದೂ ಹೀಗೆ ಪರಿತಪಿಸಿದವನಲ್ಲ. ಮೀಟಿಂಗ್, ಒಮ್ಮೊಮ್ಮೆ ಡ್ರಾಪ್ ಸಹ ನೀಡಿದ್ದ ಅವರುಗಳಿಗೆ, ಆದರೆ ಅ ಹೆಣ್ಣುಗಳ ಜೊತೆ ಹಲವಾರು ಬಾರಿ ಮಾತನಾಡಿ ಅವರ ಭಾವ ಬುದ್ದಿಯ ಬಗ್ಗೆ ತಿಳಿದು ಅಚ್ಚರಿಯಾಗುತಿತ್ತು. ಯಾವುದೇ ಸಮಸ್ಯೆಗೆ ತಕ್ಷಣ ಪರಿಹಾರ ಕಂಡು ಕೊಳ್ಳುವ ಸದಾ ಟೀಮ್ ನಲ್ಲಿ ಇತರರನ್ನು ಹುರಿದುಂಬಿಸುವ ನಿಕಿತಾ ಶರ್ಮ ಎಂಬ ಸೋಜಿಗಲ್ಲಿಗೆ ಹಲವಾರು ಆಫೀಸ್ ಪುರುಷ ಕುರಿಗಳು ಗಂಟು ಬಿದ್ದರು ಅವಳು ಯಾರನ್ನು ಪುರಸ್ಕರಿಸಿರಲಿಲ್ಲ.

ಆದರೆ ನಿಕಿತಾ ಯಾವ ವಿಚಾರವನ್ನು ಮರೆಮಾಚದೆ ಆರವಿಂದನ ಬಳಿ ಹೇಳಿಕೊಂಡು ನಿರಾಳವಾಗುತ್ತಿದ್ದಳು. ಅರವಿಂದ್ ತನಗೆ ತಿಳಿದಷ್ಟು ಸಮಾಧಾನ ಮಾಡುತ್ತಿದ್ದ .ಆದರೆ ಎಂದೂ ಅವನು ತನ್ನ ಮಿತಿಯನ್ನು ಮೀರಿ ಯಾರೂಂದಿಗೂ ಮಾತು ,ಹಾವ ಭಾವ ವ್ಯಕ್ತಪಿಡಿಸಿರಲಿಲ್ಲ. ಅದು ಅವನಿಗೇ ಬೇಕಾಗಿಯೂ ಇರಲಿಲ್ಲ. ಅದರೆ ಇಂದು ಈ ಜನಶತಾಬ್ದಿಯ ಜರ್ನಿಯಲ್ಲಿ ಮನ‌ಹಟಕ್ಕೆ ಬಿದ್ದಿತು .ಅದನ್ನು ಸಂತೈಸಲು ಬ್ಯಾಗಲ್ಲಿ ಯಾವುದಾರೂ ಕೃತಿ ಇರಬಹುದೇ ಎಂದು ತಡಕಾಡಿದನು, ಓದು ಅವನ ಮೆಚ್ಚಿನ ಹವ್ಯಾಸವಾಗಿತ್ತು. ಸಿಕ್ಕ ಸಿಕ್ಕ ಕೃತಿಗಳನ್ನು ಕೊಂಡು ಯಾವಾಗಲೂ ಬ್ಯಾಗಿನಲ್ಲಿ ಹಾಕಿಕೊಳ್ಳುವದು ಅವನ ರೂಢಿ .ಅಂತೇಯೇ ಕೃತಿಯೂ ದೊರಕಿತು. ” ನಿಗೂಢ ಭಾರತದಲ್ಲಿ ಹುಡುಕಾಟ ” ಹಾ…! ನನ್ನ ಕತೆಯೂ ಹಾಗೆ ಹಾಗಿದೆ ನಿಗೂಢ ಸುಂದರಿಯ ಬಗ್ಗೆ ಮನ ಹುಡುಗ ಕಾಟ ನಡೆಸಿದೆ. ಅಬ್ಬಾ… ಎನು” ಎತ್ತಣಿಂದ ಎತ್ತ ಸಂಬಂಧವಯ್ಯ ” …..ಎಂದು ಸಣ್ಣಗೆ ಉಸುರಿದ .

ಕೃತಿಯ ಕೆಲ ಪುಟವ ಓದಿ ದ ಮತ್ತೆ ಮನ ಆ ವನಿತೆಯ ನೋಡಲು ಕಾತರವಾಗಿತ್ತು ಕಂಗಳು ಮತ್ತೆ ಮತ್ತೆ ದಾಳಿ ಮಾಡುತ್ತಿದ್ದವು. ತಿಂಡಿ, ಚಹಾದ ಬಗ್ಗೆ ಗಮನ ಹೊರಡಲಿಲ್ಲ. ನೋಡ ನೀಡುತ್ತಲೇ ಟ್ರೈನ್ ಹಾವೇರಿ ದಾಟಿ ಹುಬ್ಬಳ್ಳಿಯತ್ತ ಸಾಗಿರುವಂತೆ ಇವನಿಗೆ ಭಾಸವಾಯುತು. ಈ ಹಾಳಾದ ಟ್ರೈನ್ ಇಂದೇಕೆ ಶರವೇಗದಿ ಓಡುತ್ತಿದೆ. ಎಲ್ಲಿಯಾದರೂ ಕೆಟ್ಟು ನಿಲ್ಲಬಾರದೆ, ತಾನೂ ಎಷ್ಟು ಬಾರಿ ಓಡಾಡಿದಾಗಲೂ ಎನಾದರೂ ತಡೆ ಉಂಟಾಗಿ ಹೆಣದಂತೆ ಕಾಯಬೇಕಿತ್ತು ಟ್ರೈನ್ ಒಳಗೆ, ಅದರೆ ಇಂದು ಎನಿದು ಶರವೇಗ ಎನಿಸಿತು ಅವನಿಗೆ. ಆ ಸುಂದರಿ ಯಾವ ನಿಲ್ದಾಣ ದಲ್ಲಿಯೂ ಇಳಿಯದೆ ಇದ್ದದ್ದು ಇವನಿಗೆ ಮತ್ತಷ್ಟು ಖುಷಿಯಾಗಿತ್ತು.

ಫೋಟೋ ಕೃಪೆ : google

ಹುಬ್ಬಳ್ಳಿ ನಿಲ್ದಾಣ ತಲುಪಿತು ಟ್ರೈನ್ ಜನರು ಮೊದಲೇ ಎದ್ದು ಇಳಿಯುವವರು ಸಿದ್ದರಾದರೂ ಈ ಸುಂದರಿ ಇಳಿಯುವದ ನೋಡಿ ಅರವಿಂದನಿಗೆ ಒಮ್ಮೆ ಲೇ ಎದೆಯ ಸಮುದ್ರ ಉಕ್ಕಿದಂತೆ ಮನವು ಹಾಲ್ಗಡಲಲ್ಲಿ ತೇಲುದಂತೆ ಭಾಸವಾಯುತು ….!?. ಅವಳು ನಿಧಾನವಾಗಿ ಒಬ್ಬ ಹಿರಿಯ ಮಹಿಳೆಯೊಂದಿಗೆ ಇಳಿಯುವ ಪ್ರಯತ್ನ ಮಾಡಿದಳು. ತಾನೊ ಮೊದಲು ಇಳಿದು ಆ ಹಿರಿಯ ಮಹಿಳೆಯನ್ನು ಇಳಿಸಿಕೊಂಡು ಒಂದು ಕಡೆ ಕೊರಿಸಿದಳು. ಅರವಿಂದ ಜನರಿಂದ ತೊರಿಕೊಂಡು ಕಿಟಕಿಯಲ್ಲಿ ಅವಳನ್ನು ನೋಡೂತ್ತಲೇ ಅವಸರಾವಸರವಾಗಿ ಇಳಿದು ಹೊರ‌ಬಂದ.

ಆ ಯುವತಿ ಮೊಬೈಲ್ ಹೀಡಿದು ನೋಡುತ್ತಾ ನಿಂತಿದ್ದಳು .ಅರವಿಂದ ಅವಳನ್ನು ಮಾತನಾಡಿಸುವ ಪ್ರಯತ್ನ ಮಾಡಲು ಮನ ಕೂಗಿತು.  ‌‌ತಡ ಮಾಡದೆ ಅವಳ ಬಳಿ ಸಾರಿದ ತನ್ನ ಬ್ಯಾಗ್ ತೆಗೆದುಕೊಂಡು ” ಹಲೋ ಮೇಡಂ ಎನಾದರೂ ಸಹಾಯ ಬೇಕಿತ್ತೆ ” ನಾನು ಅರವಿಂದ ಇದೇ ಊರಿನವ “ಎಂದ.

ಹುಡುಗಿ ತಲೆಯೆತ್ತಿ ನೋಡಿ ಮುಗ್ಳುನಕ್ಕು ” ಹಾಯ್ ಗೊತ್ತಾಯಿತು ನೀವು ನನ್ನ ರೈಲ್ ಸಹ ಪ್ರಯಾಣಿಕರು ಎಂದು , ನಮ್ಮದೂ ಇದೆ ಊರು ಧನ್ಯವಾದಗಳು ಸದ್ಯ ಯಾವ ಸಹಾಯವು ಬೇಡ” ಎಂದಳು‌.

ಅರವಿಂದನಿಗೆ ಅಚ್ಚರಿಯಾಯಿತು. ಓಕೆ ನಿಮ್ಮ ಹೆಸರು ಹೇಳಲಿಲ್ಲ ಎಂದು ತನ್ನ ಪೂರ್ತಿ ಪರಿಚಯವ ಹೇಳಿದ ಅವಳಿಗೆ ಯುವತಿ ನಗುತ್ತಾ . ” ನನ್ನ ಹೆಸರು ತಬ್ಸುಮ್ ಮೈಸೂರಿನ ಕಾಲೇಜು ಒಂದರಲ್ಲಿ ವಿಜ್ಞಾನ ವಿಭಾಗದಲ್ಲಿ ಉಪನ್ಯಾಸಕಿಯಾಗರುವೆ ಎಂದಳು. ಅರವಿಂದ ” ನೀವು ಇಷ್ಟು ಚನ್ನಾಗಿ ಕನ್ನಡ ಮಾತಾಡುತ್ತಿರುವಿರಿ ಎಂದನು ಖುಷಿಯಿಂದ. ಯುವತಿ ” ನಾ ಓದಿದ್ದು ಕನ್ನಡ ಮಾದ್ಯಮದಲ್ಲಿ ಈಗ ಮದುವೆಯ ಕಾರಣ ಕೆಲಸಕ್ಕೆ ರಾಜೀನಾಮೆ ನೀಡಿ ಬೆಂಗಳೂರಿನಲ್ಲಿ ಇದ್ದ ತಾಯಿಯನ್ನು ಕರೆದುಕೊಂಡು ಹುಬ್ಬಳ್ಳಿಗೆ ಅಗಮಿಸಿದೆ .ನಿಮ್ಮ ಪರಿಚಯವಾಗಿ ತುಂಬಾ ಖುಷಿಯಾಯಿತು ಮುಂದಿನ ತಿಂಗಳು ನನ್ನ ವಿವಾಹವಿದೆ ಖಂಡಿತಾ ಬನ್ನಿ “ಎಂದು ಹೇಳಿ ತಾಯಿಯನ್ನು ಕರೆದುಕೊಂಡು ಬುಕ್ ಮಾಡಿದ ಟ್ಯಾಕ್ಸಿ ಬಳಿ ತೆರಳಿದಳು.

ಟ್ಯಾಕ್ಸಿ ಒಳಗಿಂದ ಮತ್ತೆ ಅರವಿಂದನ ಕಡೆ ನೋಡಿ ನಗುತ್ತ ಕೈ ಬೀಸಿದಳು . ಅರವಿಂದ ಮನದಲ್ಲಿ ಬೆಳಕೊಂದು ಮೂಡಿತ್ತು …….


– ರೇಶ್ಮಾಗುಳೇದಗುಡ್ಡಾಕರ್

0 0 votes
Article Rating

Leave a Reply

1 Comment
Inline Feedbacks
View all comments

[…] ‘ಪ್ರಯಾಣ’ ಸಣ್ಣಕತೆ – ರೇಶ್ಮಾ ಗುಳೇದಗುಡ್ಡ… […]

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

1
0
Would love your thoughts, please comment.x
()
x
Aakruti Kannada

FREE
VIEW