‘ವಜ್ರದಹಾರ’ ಕತೆ – ಸು.ಹಿ.ಮ

ಆ ಹುಡುಗ ವಜ್ರ ಮತ್ತು ರತ್ನಗಳನ್ನು ಪರೀಕ್ಷಿಸುವುದರಲ್ಲಿ ನಿಪುಣನಾದ. ಒಂದು ದಿನ ಅವನ ಚಿಕ್ಕಪ್ಪನ ಬಳಿ ತನ್ನ ತಾಯಿಯ ಹಾರವನ್ನು ಪರೀಕ್ಷಿಸಲು ಕೊಟ್ಟಾಗ ಆ ಹಾರ ನಕಲಿಯಾಗಿತ್ತು. ಮುಂದೆ ಓದಿ ಸು.ಹಿ.ಮ ಅವರ ಲೇಖನಿಯಲ್ಲಿ ಮೂಡಿ ಬಂದ ‘ವಜ್ರದಹಾರ’ ಕತೆ, ತಪ್ಪದೆ ಓದಿ…

ಒಬ್ಬ ವ್ಯಾಪಾರಿಯ ಮರಣದ ನಂತರ, ಅವರ ಕುಟುಂಬವು ತೀವ್ರ ತೊಂದರೆಗೆ ಒಳಗಾಯಿತು. ಊಟಕ್ಕೂ ಅವರ ಬಳಿ ಹಣವಿರಲಿಲ್ಲ. ಒಂದು ದಿನ ಆ ವ್ಯಾಪಾರಿಯ ಹೆಂಡತಿ ತನ್ನ ಮಗನಿಗೆ ಒಂದು ವಜ್ರದ ಹಾರವನ್ನು ಕೊಟ್ಟು, “ಮಗನೇ, ಪಕ್ಕದೂರಿನಲ್ಲಿರುವ ನಿನ್ನ ಚಿಕ್ಕಪ್ಪನ ಅಂಗಡಿಗೆ ಇದನ್ನು ತೆಗೆದುಕೊಂಡು ಹೋಗು, ಅದನ್ನು ಮಾರಿ ನಮಗೆ ಸ್ವಲ್ಪ ಹಣವನ್ನು ಕೊಡಲು ಕೇಳು” ಎಂದು ಹೇಳಿದಳು.

ಮಗ ಆ ಹಾರವನ್ನು ತೆಗೆದುಕೊಂಡು ತನ್ನ ಚಿಕ್ಕಪ್ಪನ ಅಂಗಡಿಯನ್ನು ತಲುಪಿದನು. ಚಿಕ್ಕಪ್ಪ ಹಾರವನ್ನು ಕೂಲಂಕಷವಾಗಿ ನೋಡಿ, “ಮಗನೇ, ಈಗ ಮಾರುಕಟ್ಟೆ ತುಂಬಾ ಮಂದವಾಗಿದೆ ಎಂದು ನಿಮ್ಮ ತಾಯಿಗೆ ಹೇಳು. ಸ್ವಲ್ಪ ಸಮಯದ ನಂತರ ಅದನ್ನು ಮಾರಿದರೆ ಒಳ್ಳೆಯ ಬೆಲೆ ಸಿಗುತ್ತದೆ. ತಗೋ ಈ ಸ್ವಲ್ಪ ಹಣವನ್ನು ನಿನ್ನ ತಾಯಿಗೆ ಕೊಡು ಮತ್ತು ನೀನು ನಾಳೆಯಿಂದ ನನ್ನೊಂದಿಗೆ ಅಂಗಡಿಗೆ ಬಂದು ಕುಳಿತುಕೋ” ಎಂದು ಹೇಳಿದರು.

ಮರುದಿನ ಹುಡುಗನು ಪ್ರತಿದಿನ ಅಂಗಡಿಗೆ ಹೋಗಲು ಪ್ರಾರಂಭಿಸಿದ ಮತ್ತು ಅಲ್ಲಿ ವಜ್ರ ಮತ್ತು ರತ್ನಗಳನ್ನು ಪರೀಕ್ಷಿಸುವುದನ್ನು ಕಲಿಯಲು ಪ್ರಾರಂಭಿಸಿದ. ಶೀಘ್ರದಲ್ಲೇ, ಅವನು ವಜ್ರಗಳನ್ನು ಪರಿಶೀಲಿಸುವ ಪ್ರಸಿದ್ಧ ತಜ್ಞನಾದ. ಜನರು ತಮ್ಮ ವಜ್ರಗಳನ್ನು ಪರೀಕ್ಷಿಸಲು ದೂರ ದೂರದಿಂದ ಬರಲು ಆರಂಭಿಸಿದರು.

ಒಂದು ದಿನ ಅವನ ಚಿಕ್ಕಪ್ಪ, “ಮಗು, ನಿಮ್ಮ ತಾಯಿಯಿಂದ ಆ ಹಾರವನ್ನು ತಗೆದುಕೊಂಡು ಬಾ. ಈಗ ಮಾರುಕಟ್ಟೆಯಲ್ಲಿ ಬೆಲೆ ಚೆನ್ನಾಗಿದೆ, ನಿಮಗೆ ಒಳ್ಳೆಯ ಬೆಲೆ ಸಿಗುತ್ತದೆ” ಎಂದು ಹೇಳಿದರು.ತನ್ನ ತಾಯಿಯಿಂದ ಹಾರವನ್ನು ತೆಗೆದುಕೊಂಡು ಬಂದು, ಸ್ವತಃ ಅವನೇ ಪರೀಕ್ಷಿಸಲಾಗಿ ಅದು ನಕಲಿ ಎಂದು ಕಂಡುಬಂದಿತು. ತನ್ನ ಚಿಕ್ಕಪ್ಪ ಎಷ್ಟು ಮಹಾನ್ ವಿದ್ವಾಂಸ, ಈ ವಿಷಯವನ್ನು ನನಗೇಕೆ ಅಂದೇ ತಿಳಿಸಲಿಲ್ಲ ಎಂದು ಆಶ್ಚರ್ಯವಾಯಿತು ಹುಡುಗನಿಗೆ!.

ಆ ಹಾರವನ್ನು ಮನೆಯಲ್ಲಿಯೇ ಇಟ್ಟು ಅಂಗಡಿಗೆ ಮರಳಿ ವಿನಮ್ರವಾಗಿ, “ಚಿಕ್ಕಪ್ಪ, ಅದು ಕೃತಕ ಹಾರವಾಗಿದೆ. ಆದರೆ ನೀವು ಆ ವಿಷಯವನ್ನು ನನಗೆ ಅಂದೇ ಏಕೆ ಹೇಳಲಿಲ್ಲ?” ಎಂದು ಕೇಳಿದನು.

ಆಗ ಅವನ ಚಿಕ್ಕಪ್ಪ, “ನೀನು ಮೊದಮೊದಲು ಹಾರವನ್ನು ತಂದಾಗ ಅದು ವಜ್ರವಲ್ಲ ಕೃತಕ ಎಂದು ಹೇಳಿದ್ದರೆ, ನೀನು ನನ್ನನ್ನು ನಂಬುತ್ತಿರಲಿಲ್ಲ. ನಿನ್ನ ತಾಯಿಗೂ ಅಸಮಾಧಾನವಾಗುತ್ತಿತ್ತು. ಅಲ್ಲದೇ ನಿನಗೂ ಅಂದು ಅದರ ನಿಜವಾದ ಜ್ಞಾನ ಇರಲಿಲ್ಲ. ಆದರೆ, ಇವತ್ತು ನಿನಗೆ ವಜ್ರದ ಬಗ್ಗೆ ಸಂಪೂರ್ಣ ಜ್ಞಾನ ಬಂದಿದೆ. ಅಂದಿನ ಆ ಸಮಯದಲ್ಲಿ ಸತ್ಯವನ್ನು ಹೇಳುವುದಕ್ಕಿಂತ ನನಗೆ ನಿಮ್ಮ‌ ಸಂಬಂಧವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿತ್ತು” ಎಂದು ಚಿಕ್ಕಪ್ಪ ಹೇಳಿದಾಗ ಹುಡುಗನ ಕಣ್ಣುಗಳು ಕೃತಜ್ಞತೆಯಿಂದ ತೇವವಾದವು.

ತನ್ನ ಶ್ರಮದಿಂದ ಕೆಲವೇ ವರ್ಷಗಳಲ್ಲಿ ಅದೇ ತರಹದ ವಜ್ರದ ಹಾರವನ್ನು ಮಾಡಿಸಿ, “ಅಪ್ಪನ ಈ ಕಾಣಿಕೆ ಎಂದೂ ನಿನ್ನ ಬಳಿ ಇರಲಿ” ಎಂದು ಅಮ್ಮನ ಕೈಗೆ ನೀಡಿದ!.


  • ಸು.ಹಿ.ಮ –  ಬೆರಳಚ್ಚುಗಾರ, ದಾವಣಗೆರೆ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW