ಅಪ್ಪನ ಸಣ್ಣ ಸಂಬಳದಲ್ಲಿ ಇಡೀ ಮನೆ ತೂಗಿಸಿಕೊಂಡು ಹೋಗಿದ್ದಲ್ಲದೆ, ಮಕ್ಕಳಿಗಾಗಿ ಆಸ್ತಿ ಅಂತ ಅಪ್ಪ ಮಾಡಿದ್ದರೆ ಅದು ಮಕ್ಕಳಿಗೆ ನೀಡಿದ ಶಿಕ್ಷಣ. ಅದೇ ಶಿಕ್ಷಣದಿಂದ ಮಕ್ಕಳು ತಮ್ಮ ಕಾಲುಗಳ ಮೇಲೆ ನಿಂತು ಅಪ್ಪನ ನಿವೃತ್ತಿಯ ಬದುಕಿಗೆ ಆಸರೆಯಾಗಿ ನಿಲ್ಲುತ್ತಾರೆ ಎಂದರೆ ಜೀವನದಲ್ಲಿ ಮತ್ತೇನು ಬೇಕು?…ಲೇಖಕ ಪ್ರವೀಣ ಮ ಹೊಸಮನಿ ಅವರ ಜೀವನಕ್ಕೊಂದು ಪಾಠ ಮುಂದೆ ಓದಿ…
ಸಂಕಷ್ಟದಲ್ಲಿದ್ದರೂ ಹೇಗೋ ತಮ್ಮ ಅಮೂಲ್ಯ ಘಟ್ಟ ‘ಶಿಕ್ಷಣ’ ವನ್ನ , ಉಸ್ ಪಾ!…ಇನ್ನೇನೂ ಎಲ್ಲ ವ್ಯಾಸಂಗ ಮುಗಿಯಿತು ಅನ್ನುವಷ್ಟರಲ್ಲಿ ಪ್ರತಿ ಹಂತದಲ್ಲೂ ಕಾಡುವ ಪರಿ ಏನೆಂದರೆ
ಮನೆಯ ಪರಸ್ಥಿತಿ ಅದಕ್ಕೆ ಮೂಲ ಕಾರಣ ‘ಉದ್ಯೋಗ’ ಅದರಲ್ಲೂ ಹೆಚ್ಚಿಗೆ ವಿದ್ಯಾವಂತ ಆಕಾಂಕ್ಷಿಗಳು ಬಯಸುವುದು ಸರಕಾರಿ ಉದ್ಯೋಗ.
ಸರಕಾರಿ ಹುದ್ದೆಗೆ ಸೇರುವ ಸನ್ಮಾರ್ಗವೇ ‘ಸ್ಪರ್ಧಾತ್ಮಕ ಯುಗ’. ಭಾವುಕ ಸಂಗತಿ ಎಂದರೆ, ಎಷ್ಟೋ ವಿದ್ಯಾರ್ಥಿಗಳು ತಾವೂ ಆಯ್ಕೆ ಮಾಡಿ ಕಲಿತು ಪದವಿಯನ್ನ ಹೊಂದಿದ್ದೆ ಬೇರೆ, ಅವರಾಸೆ ನೀರಾಸೆಯಾಗಿ ಮತ್ತೆ ಅವರೂ ಸಹ ಕಾಲಿಡುವುದು “ಸ್ಪರ್ಧಾತ್ಮಕ ಪರೀಕ್ಷೆ” ಗೆ ತಮ್ಮ ಆಸೆಯಂತೆ ಉದ್ಯೋಗ ಹೊಂದಿದವರು ಬೆರಳೆಣಿಕೆಯಷ್ಟು ಜನ ಮಾತ್ರ.
ನಾ ಕಂಡ ಸತ್ಯ ಉದಾಹರಣೆ ನಿಮ್ಮಲ್ಲಿ ಹಂಚಿಕೊಳ್ಳುಲು ಭಾವುಕ ಮನಸ್ಸು ಹೆಮ್ಮೆಯಿಂದ ತುಡಿತಿದೆ.
ಫೋಟೋ ಕೃಪೆ : dreamstime
ತಂದೆ ವಿದ್ಯಾವಂತ ಆದರೂ ಬಡತನ ತಪ್ಪಿದ್ದಲ್ಲ. ಸುಮಾರು ೧೯೭೬-೭೭ ರಲ್ಲಿ ಆಗಿನ ಕಾಲಕ್ಕೆ ೭ ಹಾಗೂ ೧೦ ನೇ ತರಗತಿಯ ಮೇಲೆಯೇ ಸರಕಾರಿ ನೌಕರಿ ಪಡೆದ ಹಲವಾರು ಸಂಗತಿಗಳಿವೆ. ದೂರದ ಬಳ್ಳಾರಿ, ಹೊಸಪೇಟೆ, ಗೋವಾ, ಮಹಾರಾಷ್ಟ್ರಕ್ಕೆಂದು ಗುಳೆ ಕಟ್ಟಿಕೊಂಡು ಹೋಗಿ ರೈಲ್ ಹಳಿಯ ಕಾಮಗಾರಿ, ಗಾರೆ ಕೆಲಸ, ಹೀಗೆ ಅನೇಕ ಕೆಲಸಗಳನ್ನೂ ತಮ್ಮ ಹೊಟ್ಟೆಪಾಡಿಗೆಂದು ದುಡಿದಿರುವ ಜೀವಿಯೇ ಆ ತಂದೆ..ಹೀಗೆ ವಿದ್ಯಾವಂತ ತಂದೆಗೆ ದುರಾದೃಷ್ಟವಶಾತ ರೇಷ್ಮೆ ಇಲಾಖೆಯಲ್ಲಿ ಸಹಾಯಕನಾಗಿ ಕೆಲಸ ಸಿಕ್ಕಿತ್ತು ಅದರಲ್ಲೇ ತನ್ನ ಮಕ್ಕಳನ್ನ ಸಾಕಿ ಪ್ರೀತಿಯ ದಾಂಪತ್ಯ ಜೀವನ ಸಾಗುತ್ತಲ್ಲೆ ಇತ್ತು, ಹೆಂಡತಿ ಮನೆಗೆಲಸವನ್ನ ಮಕ್ಕಳನ್ನ ನೋಡಿಕೊಂಡು ತಮ್ಮ ದಾಂಪತ್ಯ ಜೀವನವನ್ನು ಸುಖವಾಗಿ ಇಂದಿಗೂ ಸಾಗುತ್ತಿದೆ. ಅವರಿಗೆ ೫ ಜನ ಮಕ್ಕಳು. ಇಬ್ಬರು ಗಂಡು ಮಕ್ಕಳು, ೩ ಜನ ಹೆಣ್ಮಕ್ಕಳು. ಕಾಲ ಬದಲಾದಂತೆ ರೇಷ್ಮೆ ಇಲಾಖೆಯಲ್ಲಿದ್ದ ಕೆಲಸದಿಂದ ಪ್ರೌಢಶಾಲೆಯಲ್ಲಿ ಸರಕಾರಿ ಜವಾನರಾಗಿ ಸೇರಿ ಕಾರ್ಯವನ್ನ ಮುಂದುವರೆಸಿದರು. ಜೊತೆ ಜೊತೆಗೆ ತಮ್ಮ ಎಲ್ಲ ಮಕ್ಕಳ ಶಿಕ್ಷಣವನ್ನೂ ಕೂಡಾ ತಮ್ಮ ಬಂದ ಕಿಂಚು ಸಂಭಾವನೆಯಲ್ಲಿಯೇ ಮಕ್ಕಳ ವಿದ್ಯಾಭ್ಯಾಸಕ್ಕೆ ಮೀಸಲಿಟ್ಟು, ಜೀವನ ಸಾಗಿಸಿದ ಸಹೃದಯಿ ಜೀವಿ ಆ ತಂದೆ. ಮುಂದೆ ಸರಕಾರಿ ಜವಾನ್ ಕೆಲಸದಿಂದ ಪದೋನ್ನತಿ ಹೊಂದಿ ಹೆಚ್ಚಿನ ಹುದ್ದೆಗೆ ಇನ್ನೊಂದು ಸರಕಾರಿ ಪ್ರೌಢ ಶಾಲೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಸೇವೆಯನ್ನ ಸಲ್ಲಿಸತೊಡಗಿದರು. ಮುಂದೆ ಸುಮಾರು ೨೦೧೫ರ ವೇಳೆಗೆ ನಿವೃತ್ತಿ ಹೊಂದಿ ಈಗ ಆರಾಮದಾಯಕ ಜೀವನ ಸಾಗುತ್ತಿದೆ. ನಿವೃತ್ತಿ ಹೊಂದುವ ಮುಂಚಿತವಾಗಿಯೇ ಹಿರಿಯ ಮಗ ಪೋಲಿಸ್ ಇಲಾಖೆಯಲ್ಲಿ ಪೋಲಿಸ್ ಆಗಿ ಸರಕಾರಿ ಸೇವೆಗೆಂದು ಬಂದ. ತಂದೆಯ ಮೇಲೆಯೇ ಮನೆಯ ಎಲ್ಲ ಜವಾಬ್ದಾರಿಯಿತ್ತು. ಇನ್ನಮುಂದೆ ಹೇಗೇ ಅನ್ನೋವಷ್ಟರಲ್ಲಿಯೇ ಸಾಕಷ್ಟು ಪರಿಶ್ರಮದಿಂದ ಸರಕಾರಿ ನೌಕರಿ ಪಡೆದ ಹಿರಿಯಮಗ.
ಹೀಗೆ ಹಿರಿಯ ಮಗ ಬಿ.ಎಸ್ಸಿ, ಡಿ.ಇಡ್ (ಟಿಸಿಎಚ್), ಬಿ.ಇಡ್ ಪದವಿಯನ್ನು ಹೊಂದಿದ್ದ. ಆತನಿಗೆ ಶಿಕ್ಷಕನಾಗುವ ಹಂಬಲ ಮನದಟ್ಟಾಗಿತ್ತು. ಆಸೆಯೂ ಕೂಡಾ ಉತ್ತಮ ಶಿಕ್ಷಕನಾಗುವದಿತ್ತು. ಆದರೆ ಮನೆಯ ಪರಸ್ಥಿತಿ ತಂಗಿಯರ ವಿದ್ಯಾಭ್ಯಾಸ ಹೀಗೆ ಹಲವಾರೂ ತೊಂದರೆಗಳು ಆತನ ಮನದಲ್ಲಿ, ಇನ್ನೇನೂ ತಂದೆಯು ನಿವೃತ್ತರಾದರೆ ಮುಂದಿನ ಜೀವನ ಎಂತೆಂದ ಅರಿತ ಮಗಾ, ತನ್ನಲ್ಲಿರುವ ಹಲವಾರು ಪ್ರತಿಭೆ, ಶಿಕ್ಷಕನಾಗುವ ಕನಸು ಇವೆಲ್ಲವನ್ನೂ ಇಟ್ಟುಕೊಂಡು ತಂದೆಯ ಜವಾಬ್ದಾರಿ ಇನ್ನಮೇಲೆ ಹಿರಿಯ ಮಗನ ಮೇಲೆ ಎಂತೆಂದು ತಿಳಿದು, ಸ್ಪರ್ಧಾತ್ಮಕ ಯುಗದಲ್ಲಿ ಹಲವಾರು ಪ್ರಯತ್ನ ಮಾಡಿದರೂ ಯಾವ ಒಂದೂ ಸರಕಾರಿ ಹುದ್ದೆನೂ ಸಿಗುತ್ತಿಲ್ಲವೆಂಬ ಚಿಂತೆ ಕಾಡ್ತಾಯಿತ್ತು. ಜೊತೆ ಜೊತೆಗೆ ಕೆಲವು ಸರಕಾರಿ ಹುದ್ದೆಗೆ ಅರ್ಜಿ ಹಾಕುವ ವಯೋಮಿತಿಯ ಅರ್ಹತೆಯೂ ಕೂಡಾ ಕಳೆದೋಗುವ ಭಯ. ಇನ್ನೇನೂ ಸಾಕಪ್ಪ ಯಾವೂದಾದರೂ ಒಂದು ಸರಕಾರಿ ನೌಕರಿ ಸಿಗಲಿ ನಮ್ಮ ಕುಟುಂಬವನ್ನ ನೋಡಕೊಂಡ ಅದರಲ್ಲೇ ಹೇಗೋ ಜೀವನ ಸಾಗಸಬಹುದು ಅನ್ನುವ ಮಟ್ಟಿಗೆ ಸ್ಪರ್ಧಾತ್ಮಕ ಆಕಾಂಕ್ಷಿಗಳ ಮನೋಬಲ ಕೆಲವೊಮ್ಮೆ ಪರಸ್ಥಿತಿಯಿಂದ ಜಾರಿ ಹೋಗಬಿಡುತ್ತೆ. ಹಾಗೋ – ಹೀಗೋ ಹಿರಿಯ ಮಗ ತನ್ನ ವಯೋಮಿತಿಯಲ್ಲಿಯೇ ‘ಪೋಲಿಸ್ ಪೇದೆ’ ಸರಕಾರಿ ನೌಕರಿಯನ್ನು ಗಿಟ್ಟಿಸಿಕೊಂಡ.
ಫೋಟೋ ಕೃಪೆ : ipleaders
ಮನೆಯಲ್ಲಿ ಎಲ್ಲಿಲ್ಲದ ಸಂತೋಷ “ಅಪ್ಪ ರೀಟೈರ್ಡ ಆಗಿದ್ಕೂ, ಮಗ್ಗ ನೌಕರಿ ಬಂದಿದ್ಕೂ ‘ಛಲೋ… ಆತ ಬಿಡಪಾ ” ಅಂತ ಅವ್ವಾ ಭಾವುಕದಿಂದ ತನ್ನ ಮಾತನ್ನ ಸ್ಪಷ್ಟ ಪಡಸ್ತಾಳೆ. ಹೀಗೆಯೇ ಸಂತೋಷದಿಂದ ತಮ್ಮ ಜೀವನಾ ಸಾಗ್ತಿರುವುದು. ಹೀಗೆ ಪೋಲಿಸ್ ಪೇದೆಯಿಂದ ಪೋಲಿಸ್ ಇಲಾಖೆಯಲ್ಲಿಯೇ ಪ್ರಸ್ತುತ ದೂರದ ಮಂಗಳೂರಿನಲ್ಲಿ ಬೆರಳಚ್ಚು ತಂತ್ರಜ್ಞರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮುಂದೆ ಮೂವರಲ್ಲಿ ಒಬ್ಳು ಹಿರಿ ಮಗಳ ಮದುವೆ ಆಗಿ ಅವಳು ಕೂಡಾ ದಾಂಪತ್ಯ ಜೀವನಕ್ಕೆ ಸಾಗ್ತಾಳೆ. ಅವಳಗಿಂತ ಚಿಕ್ಕವಳು, ಅವಳೂ ಕೂಡಾ ದೂರದ ಧಾರವಾಡದಲ್ಲಿ ‘ಗೃಹ ಶಿಕ್ಷಣ’ ಪದವಿಯನ್ನ ಮುಗಿಸಿ ವಿಜಯಪುರದ ಅಕ್ಕಮಹಾದೇವಿ ವಿಶ್ವ ವಿದ್ಯಾಲಯದಲ್ಲಿ ಎಂ.ಎಸ್ಸಿ ಪದವಿಯನ್ನ ಮುಗಿಸಿ ಈಗ ಅವಳೂ ಕೂಡಾ ಉದ್ಯೋಗದಲ್ಲಿದ್ದು, ಇನ್ನೂ ಇವಳಗಿಂತ ಚಿಕ್ಕವಳು ಕೂಡಾ ಸರಕಾರಿ ಹುದ್ದೆಯಲ್ಲಿದ್ದು ಮತ್ತೆ ಉಳಿದಿರುವ ಮನೆಯ ಕಿರಿಯ ಮಗನೂ ಕೂಡಾ ತನ್ನ ವ್ಯಾಸಂಗವನ್ನು ಮುಗಿಸಿ ಸ್ಪರ್ಧಾತ್ಮಕದ ಕಡೆಗೆ ತೆವಳಿದ್ದಾನೆ.ಇದರಿಂದಾಗಿ ಆಸ್ತಿ-ಪಾಸ್ತಿಯನ್ನ ಸಂಪಾದಿಸದ ತಂದೆ ಮಕ್ಕಳಿಗೆ ಶಿಕ್ಷಣವೇ ಆಸ್ತಿಯಂತೆ ಮಾಡಿ ಇವತ್ತು ಹೆಮ್ಮೆಯಿಂದ ಆ ತಂದೆ-ತಾಯಿಯರು ಇದ್ದಾರೆ. ತಂದೆಯ ಸಣ್ಣ ಪ್ರಮಾಣದ ಸಂಭಾವನೆಯ ಮೇಲೆಯೇ ಇಷ್ಟೆಲ್ಲ ಶಿಕ್ಷಣ ಕಲಿಸಿ ಅವರಿಗೆ ನೌಕರಿ ಗಿಟ್ಟಿಸಿಕೊಂಡು ಸಂಸಾರವನ್ನು ಸಾಗಿಸುವದು ಸಾಮಾನ್ಯದ ಸಂಗತಿಯಲ್ಲ.
ಹೀಗೇಯೆ ಅನೇಕ ಪದವಿಗಳನ್ನು ಮುಗಿಸಿದ ತಂದೆಯ ಹಿರಿ ಮಗ ಉದ್ಯೋಗದ ಅವಶ್ಯಕತೆ, ಮನೆಯ ಜವಾಬ್ದಾರಿಯನ್ನು ಅರಿತು ಇದ್ದ ಆಸೆಗೆ ಪೂರ್ಣವಿರಾಮವಿಟ್ಟಂತೆ ಇದೆ. ಇದು ಇವರ ಕಥೆ ಅಷ್ಟೇ ಅಲ್ಲ ಇಂತಹ ಹಲವಾರೂ ಜನ ಪದವೀಧರರು ತಮ್ಮ ಆಸೆಯನ್ನೇ ಬದಿಗೊತ್ತಿ ಇದ್ದುದರಲ್ಲೆ ತೃಪ್ತಿಯಿಂದ ಜೀವನ ಸಾಗಸ್ತಾ ಇದ್ದಾರೆ.
ಬಡತನದಲ್ಲಿ ಸಾಗಿದ ಬಡ ಜೀವಿಗಳಿಗೆ ಗೊತ್ತಿರುತ್ತೆ ಬಡತನದ ಪರಸ್ಥಿತಿ ಎಂತೆಂದು. ಇಲ್ಲಿ “ತಂದೆ ಹಾಗೂ ತಾಯಿ”ಯ ಪಾತ್ರ ಬಹು ಮುಖ್ಯ . ಏಕೆಂದರೆ ನಿಮನ್ನ ಕರುಳದಿ ಕರುಣೆಯಿಂದ ಸಲಹುವ ಬೆಲೆ ಕಟ್ಟಲಾಗದ ಸಹೃದಯೀ ಸಾಂತ್ವನತೆಯಲ್ಲಿದ್ದ ಪ್ರೀತಿಯ ನಿಸ್ವಾರ್ಥದ ಜೀವಿಗಳು ಎನ್ನ “ತಂದೆ-ತಾಯಿ”ಯರು.
‘ಪ್ರಾಮಾಣಿಕ ಬದುಕಿಗೆ ಹರಿ ಎಂದಿಗೂ ಮುನಿಸಿಕೊಂಡವನಲ್ಲಂತೆ …
- ಪ್ರವೀಣ ಮ ಹೊಸಮನಿ (ಲೇಖನ,ಕತೆಗಾರರು) ನಾಗಠಾಣ, ವಿಜಯಪುರ ಜಿಲ್ಲೆ