ಬೂದಗುಂಬಳ ಅಮೃತ ಸಮಾನ, ಇದರ ಸಿಪ್ಪೆ, ಬೀಜ, ತಿರಳು, ರಸ, ಹೂವು ಮತ್ತು ಚಿಗುರು ಆಹಾರವಾಗಿ ಬಳಕೆ, ಇದರಲ್ಲಿರುವ ಔಷದ ಗುಣ ಪರಿಣಾಮಕಾರಿ, ವರ್ಷದಲ್ಲಿ ನಾಕಾರು ಬಾರಿಯಾದರೂ ಇದರ ರಸ ಸೇವನೆ ಮಾಡಬೇಕು.ಅರುಣ್ ಪ್ರಸಾದ್ ಅವರು ಬೂದಗುಂಬಳ ಕಾಯಿಯ ಮಹತ್ವವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ನನ್ನ ಡಿಪ್ಲೋಮೋ ಸಹಪಾಠಿ ಗೆಳೆಯರೊಬ್ಬರು ಸೊಯಾ೯ಸೀಸ್ ನಿಂದ ಬಳಲುತ್ತಿದ್ದರು, ದೇಹದ ಚರ್ಮದ ಕಾಯಿಲೆ, ಇದರಿಂದ ಅವರು ಜೀವನದಲ್ಲಿ ಜಿಗುಪ್ಸೆಗೆ ಒಳಗಾಗಿದ್ದರು, ಈ ಕಾಯಿಲೆಯಿಂದ ಊರು ಬಿಟ್ಟು ಬೆಂಗಳೂರು ಸೇರಿದ್ದರು, ಬಿಸಿಲಿಗೆ ಹೊರಗಡೆ ಹೋದರೆ ಇನ್ನೂ ಹೆಚ್ಚು ಇದಕ್ಕೆ ಅವರು ಮಾಡದ ಔಷದಿ ಇಲ್ಲ, ಆದರೆ ಪರಿಣಾಮ ಶೂನ್ಯ.
ಬೆಂಗಳೂರಿನ ಚಿಕ್ಕಪೇಟೆ ಪ್ರದೇಶದಲ್ಲಿ ಅವರು ಕೆಲಸ ಮಾಡುವ ಕಂಪನಿಯ ವಸೂಲಿಗೆ ಹೋದಾಗ ಅಲ್ಲೊಂದು ಸಣ್ಣ ಆಯುರ್ವೇದ ಚಿಕಿತ್ಸಾಲಯ ನೋಡಿ ಸುಮ್ಮನೆ ಒಳ ಹೋದಾಗ ಅಲ್ಲಿ ವೈದ್ಯರೋರ್ವರು ಯಾವುದೇ ರೋಗಿ ಇಲ್ಲದೆ ವಿರಾಮವಾಗಿ ಪೇಪರ್ ಓದುತ್ತಾ ಕುಳಿತಿದ್ದವರ ಹತ್ತಿರ ತಮ್ಮ ಸಮಸ್ಯೆ ಹೇಳಿಕೊಂಡಾಗ, ಆ ವೈದ್ಯರು ಹೇಳಿದ ಪರಿಹಾರ ಪ್ರತಿ ದಿನ ಒಂದು ಲೋಟ ಬೂದಗುಂಬಳ ತುರಿದು ಹಿಂಡಿ ರಸ ಕುಡಿಯಿರಿ, ಬೇರೆ ಯಾವ ಔಷಧಿಯೂ ಬೇಡ ಅಂದರಂತೆ. ಈ ವೈದ್ಯರು ಇಷ್ಟು ಸರಳವಾಗಿ ಹೇಳಿದರಲ್ಲ ಅಂತ ನನ್ನ ಗೆಳೆಯರು ನಿರ್ಲಕ್ಷ ಮಾಡಿದರಂತೆ.

ಊರಿಗೆ ಬಂದಾಗ ಪತ್ನಿ ಹತ್ತಿರ ಹೇಳಿದ್ದಾರೆ, ಇವರ ಪತ್ನಿ ದಿನಾ ಒತ್ತಾಯದಿಂದ ಬೂದಗುಂಬಳದ ನೀರು ಕುಡಿಸುತ್ತಾ ಬಂದಿದ್ದಾರೆ ಸ್ವಲ್ಪ ದಿನದ ನಂತರ ಇವರಿಗೆ ಅರಿವೆಗೆ ಬರದಂತೆ ಸೊರ್ಯಾಸೀಸ್ ಕಡಿಮೆ ಆಗಿದೆ! ನಂತರ ಸತತ ಈ ಚಿಕಿತ್ಸೆಯಿಂದ ಈಗ ಸಂಪೂರ್ಣ ಗುಣ ಆಗಿ ಊರಲ್ಲಿ ಅಡಿಕೆ ಕೃಷಿ ಮಾಡಿಕೊಂಡಿದ್ದಾರೆ.
ಪ್ಯಾರಲಿಸಿಸ್ ಆದವರು ಪ್ರತಿ ದಿನ ಬೂದಗುಂಬಳದ ರಸ ಕುಡಿಯಬೇಕೆಂದು ನಮ್ಮ ಊರಲ್ಲಿ ಇದಕ್ಕೆ ಚಿಕಿತ್ಸೆ ನೀಡುತ್ತಿದ್ದ ನಮ್ಮ ತಂದೆಯ ಆಪ್ತ ಗೆಳೆಯರಾಗಿದ್ದ ಹಮೀದ್ ಸಾಹೇಬರು ಹೇಳುತ್ತಿದ್ದರು ಇವರ ಚಿಕಿತ್ಸೆಯಿಂದ ನಮ್ಮ ತಂದೆ ಚೇತರಿಸಿಕೊಂಡಿದ್ದರು. ನಾನು ವರ್ಷಕ್ಕೆ ನಾಕಾರು ಬಾರಿ ಬೂದ ಕುಂಬಳ ತುರಿದು ರಸ ಹಿಂಡಿ ನೀರು ಕುಡಿಯುವ ಅಭ್ಯಾಸ ಮಾಡಿಕೊಂಡಿದ್ದೆ ಆದರೆ ಇತ್ತೀಚೆಗೆ ಸೋಮಾರಿತನ, ಬೂದಗುಂಬಳ ತುರಿಯಲು (ಇದು ಸ್ವಲ್ಪ ಶ್ರಮದ ಕೆಲಸ) ಇವತ್ತು ಒಂದು ಬೂದಗುಂಬಳ ಕಾಯಿ ತುಂಡರಿಸಿ, ತಿರುಳು ಬೀಜ ತೆಗೆದು, ಸಿಪ್ಪೆ ತೆಗೆದು ಬೂದಗುಂಬಳದ ತುಂಡುಗಳನ್ನು ತುರಿಯದೇ ಮಿಕ್ಸಿ ಮಾಡಿ ರಸ ತೆಗೆದೆ ಇದು ಅತ್ಯಂತ ಸುಲಭ ಅನ್ನಿಸಿತು.
ನಾನು ನನ್ನ ಪತ್ನಿ ಮತ್ತು ಮಗನಿಗೆ ಆಗುವಷ್ಟು ಮೂರು ದೊಡ್ಡ ಗ್ಲಾಸ್ ರಸ ಸಿಕ್ಕಿತು. ಸಿಪ್ಪೆಗಳನ್ನು ಉದ್ದವಾಗಿ ತುಂಡರಿಸಿ ಉಪ್ಪು ಮತ್ತು ಮಜ್ಜಿಗೆಯಲ್ಲಿ ಸಂಡಿಗೆಗೆ ನೆನಸಿದೆ, ರಸ ಹಿಂಡಿದ ತುರಿಯನ್ನು ತುಪ್ಪ, ಬೆಲ್ಲ, ಏಲಕ್ಕಿ ಮಿಶ್ರಣದೊಂದಿಗೆ ಹಲ್ವಾ ಕೂಡ ಮಾಡಿದೆ.
ಬೀಜ ತೆಗೆದು ಒಣಗಿಸಿ ಮುಂದೆ ಅದರಿಂದ ಜ್ಯೂಸ್ ಮಾಡಬಹುದು (ಹೊಟ್ಟೆ ಹುಳ ನಿವಾರಣೆ ಮಾಡುತ್ತದೆ), ತಿರುಳಿನಿಂದ ತಂಬಳಿ- ಗೊಜ್ಜು ಮಾಡಬಹುದು, ಇದರ ಬಳ್ಳಿಯ ಚಿಗುರಿನಿಂದ ಪಲ್ಯ, ಹೂವಿನಿಂದ ತಂಬಳಿ ಸಾಸುವೆ ಮಾಡಬಹುದು ಅಂದರೆ ಬೂದ ಗುಂಬಳ ಸರ್ವ ರೀತಿಯ ಬಳಕೆ ಆಗುವ ಏಕೈಕ ತರಕಾರಿ ಅನ್ನಿಸುತ್ತೆ.
ಬೂದಗುಂಬಳ ಮೆಕ್ಸಿಕೊ ಮೂಲದಂತೆ, ನಾಲ್ಕು ಸಾವಿರ ವಷ೯ದಿಂದ ಬಳಕೆಯಲ್ಲಿದೆಯಂತೆ ಇದರಲ್ಲಿನ ಔಷದ ಗುಣ ಕೂಡ ವಿಶೇಷ,ಚರ್ಮದ ಕಾಯಿಲೆ, ಮೂತ್ರಕೋಶದ ಕಾಯಿಲೆ, ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವುದಕ್ಕೆ ರಾಮಬಾಣ. ವರ್ಷದಲ್ಲಿ ನಾಲ್ಕಾರು ಬಾರಿಯಾದರೂ ಇದರ ನೀರು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು.
ನೀವು ಬಳಸಿ ನೋಡಿ.
- ಅರುಣ್ ಪ್ರಸಾದ್ – ಹೋಟೆಲ್ ಉದ್ಯಮಿ, ಲೇಖಕರು
